ದಶಾವತಾರ ಮತ್ತು ಜೀವ ವಿಕಾಸ

ದೇವರ ದೇವನು ಮಹಾವಿಷ್ಣುವು
ದಶಾವತಾರವ ತಾಳಿದನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಲೋಕಕಲ್ಯಾಣವ ಮಾಡಿದನು-
ಹಿಂದಿನಿಂದಲೂ ಕೇಳುತಲಿರುವೆವು
ದಶಾವತಾರದ ಕಥೆಯನ್ನು
ಇಂದು ಬೇರೆಯೇ ರೀತಿಯೊಳರಿಯುವ
ಕಥೆಯಲಿ ಅಡಗಿದ ತತ್ವವನು!

ಮೊದಲಿಗೆ ಪ್ರಳಯವು ಘಟಿಸಿದ ಸಮಯದಿ
‘ಮತ್ಸ್ಯಾ’ವತಾರವ ತಾಳಿದ್ದು
ಸಮುದ್ರ ಮಥನವು ನಡೆಯುವ ವೇಳೆ
‘ಕೂರ್ಮಾ’ವತಾರವ ತಳೆದದ್ದು
ರಕ್ಕಸನಿಂದಲಿ ಭೂಮಿಯ ರಕ್ಷಿಸೆ
‘ವರಾಹ’ ರೂಪವ ಹೊಂದಿದ್ದು
ವಿಷ್ಣುಭಕ್ತ ಪ್ರಹ್ಲಾದನ ಉಳಿಸಲು
‘ನರಸಿಂಹ’ನು ತಾನಾಗಿದ್ದು
ಬಲಿಯನು ಪಾತಾಳದ ಕಡೆ ತುಳಿಯಲು
’ವಾಮನ’ ರೂಪವ ಧರಿಸಿದ್ದು

ಕಾರ್ತವೀರ್ಯನ ಮದವನು ಅಡಗಿಸಿ
‘ಪರಶುರಾಮ’ ತಾನೆನಿಸಿದ್ದು
ಪಿತೃವಾಕ್ಯ ಪರಿಪಾಲನೆ ಮಾಡಲು
‘ರಾಮ’ನಾಗಿ ಅವತರಿಸಿದ್ದು
ಕುರುಪಾಂಡವ ಸಂಗ್ರಾಮವ ನಡೆಸಿದ
‘ಕೃಷ್ಣ’ಪರಮಾತ್ಮನಾಗಿದ್ದು
ಆಸೆಯು ದುಃಖಕೆ ಮೂಲವು ಎನ್ನುತ
ತಿಳಿಸಲು ’ಬುದ್ಧ’ನು ಜನಿಸಿದ್ದು
ಅಧರ್ಮ ಅಳಿಸುತ ಧರ್ಮವ ಉಳಿಸಲು
‘ಕಲ್ಕಿ’ಯಾಗಿ ಅವತರಿಸುವುದು

ಹೀಗೆ ಹತ್ತು ಅವತಾರವು ಇರುವುವು
ಪುರಾಣದಲ್ಲಿನ ಕಥೆಗಳಲಿ
ಭಕ್ತಿಯಿಂದ ಮನೆಮಾಡಿಕೊಂಡಿಹವು
ನಂಬಿಕೊಂಡವರ ಎದೆಯಲ್ಲಿ!
ಮತ್ಸ್ಯ ನೀರಿನಲಿ ಮಾತ್ರ ಬದುಕುವುದು
ಮೊದಲ ಜೀವಿ ಈ ಸೃಷ್ಟಿಯಲಿ
ಕೂರ್ಮ ನೀರಿನಲಿ ಮತ್ತು ನೆಲದಲ್ಲಿ
ಬದುಕುವುದೆರಡೂ ಕಡೆಯಲ್ಲಿ
ವರಾಹ ನೆಲದಲಿ ಮಾತ್ರ ಬದುಕುವುದು
ಉಳಿಯಲಾರದದು ನೀರಿನಲಿ
ಅರ್ಧ ಪ್ರಾಣಿ ಇನ್ನರ್ಧ ಮಾನವನ
ರೂಪ ನರಸಿಂಹ ಕಂಭದಲಿ
ವಾಮನನೆಂದರೆ ಕುಬ್ಜ ದೇಹದವ
ಪೂರ್ಣ ಬೆಳೆದಿರದ ಮಾನವನು
ಪರಶುರಾಮನವ ಪೂರ್ಣನಾದರೂ
ರಾಗದ್ವೇಷದಲಿ ಉಳಿದವನು
ಮರ್ಯಾದಾಪುರುಷೋತ್ತಮನೆನಿಸಿದ
ರಾಮ ಪರಿಪೂರ್ಣನಾದವನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಕೃಷ್ಣಪರಮಾತ್ಮನೆನಿಸಿದನು
ಮಾನವನಾಸೆಗೆ ದುರಾಸೆ ಮನಸಿಗೆ
ಬುದ್ಧನು ಅಂತ್ಯವ ಹಾಡಿದನು
ಕುದುರೆಯೇರಿ ಖಡ್ಗವ ಝಳಪಿಸುತಲಿ
ಬರುವನೆನ್ನುವರು ಕಲ್ಕಿಯನು!

ಹತ್ತು ಅವತಾರ ಕ್ರಮದಲಿ ನೋಡಲು ಜೀವಿಕಾಸವು ಕಾಣುವುದು
ಜೀವಿ ನೀರಿನಲಿ ಹುಟ್ಟಿದ ನಂತರ ಬೆಳೆದು ಬಂದುದನು ತಿಳಿಸುವುದು
ಮೊದಲಿಗೆ ಜೀವಿಯು ನೀರಲಿ ಹುಟ್ಟಿತು
ನಂತರ ನೆಲದೆಡೆ ಬಂದಿತ್ತು
ಪ್ರಾಣಿ ಹಂತದಿಂದೇರುತ ಬಂದಿತು
ಮಾನವ ರೂಪವ ಹೊಂದಿತ್ತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೆನ್ನೆಯರಿಗೆ ನೀಡಿ ಚೆನ್ನೆಮಣೆ
Next post ವಿಚಾರ ಸಾಹಿತ್ಯ : ಇವತ್ತಿನ ಮುನ್ನೋಟ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…