Home / ಬಾಲ ಚಿಲುಮೆ / ಕವಿತೆ / ದಶಾವತಾರ ಮತ್ತು ಜೀವ ವಿಕಾಸ

ದಶಾವತಾರ ಮತ್ತು ಜೀವ ವಿಕಾಸ

ದೇವರ ದೇವನು ಮಹಾವಿಷ್ಣುವು
ದಶಾವತಾರವ ತಾಳಿದನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಲೋಕಕಲ್ಯಾಣವ ಮಾಡಿದನು-
ಹಿಂದಿನಿಂದಲೂ ಕೇಳುತಲಿರುವೆವು
ದಶಾವತಾರದ ಕಥೆಯನ್ನು
ಇಂದು ಬೇರೆಯೇ ರೀತಿಯೊಳರಿಯುವ
ಕಥೆಯಲಿ ಅಡಗಿದ ತತ್ವವನು!

ಮೊದಲಿಗೆ ಪ್ರಳಯವು ಘಟಿಸಿದ ಸಮಯದಿ
‘ಮತ್ಸ್ಯಾ’ವತಾರವ ತಾಳಿದ್ದು
ಸಮುದ್ರ ಮಥನವು ನಡೆಯುವ ವೇಳೆ
‘ಕೂರ್ಮಾ’ವತಾರವ ತಳೆದದ್ದು
ರಕ್ಕಸನಿಂದಲಿ ಭೂಮಿಯ ರಕ್ಷಿಸೆ
‘ವರಾಹ’ ರೂಪವ ಹೊಂದಿದ್ದು
ವಿಷ್ಣುಭಕ್ತ ಪ್ರಹ್ಲಾದನ ಉಳಿಸಲು
‘ನರಸಿಂಹ’ನು ತಾನಾಗಿದ್ದು
ಬಲಿಯನು ಪಾತಾಳದ ಕಡೆ ತುಳಿಯಲು
’ವಾಮನ’ ರೂಪವ ಧರಿಸಿದ್ದು

ಕಾರ್ತವೀರ್ಯನ ಮದವನು ಅಡಗಿಸಿ
‘ಪರಶುರಾಮ’ ತಾನೆನಿಸಿದ್ದು
ಪಿತೃವಾಕ್ಯ ಪರಿಪಾಲನೆ ಮಾಡಲು
‘ರಾಮ’ನಾಗಿ ಅವತರಿಸಿದ್ದು
ಕುರುಪಾಂಡವ ಸಂಗ್ರಾಮವ ನಡೆಸಿದ
‘ಕೃಷ್ಣ’ಪರಮಾತ್ಮನಾಗಿದ್ದು
ಆಸೆಯು ದುಃಖಕೆ ಮೂಲವು ಎನ್ನುತ
ತಿಳಿಸಲು ’ಬುದ್ಧ’ನು ಜನಿಸಿದ್ದು
ಅಧರ್ಮ ಅಳಿಸುತ ಧರ್ಮವ ಉಳಿಸಲು
‘ಕಲ್ಕಿ’ಯಾಗಿ ಅವತರಿಸುವುದು

ಹೀಗೆ ಹತ್ತು ಅವತಾರವು ಇರುವುವು
ಪುರಾಣದಲ್ಲಿನ ಕಥೆಗಳಲಿ
ಭಕ್ತಿಯಿಂದ ಮನೆಮಾಡಿಕೊಂಡಿಹವು
ನಂಬಿಕೊಂಡವರ ಎದೆಯಲ್ಲಿ!
ಮತ್ಸ್ಯ ನೀರಿನಲಿ ಮಾತ್ರ ಬದುಕುವುದು
ಮೊದಲ ಜೀವಿ ಈ ಸೃಷ್ಟಿಯಲಿ
ಕೂರ್ಮ ನೀರಿನಲಿ ಮತ್ತು ನೆಲದಲ್ಲಿ
ಬದುಕುವುದೆರಡೂ ಕಡೆಯಲ್ಲಿ
ವರಾಹ ನೆಲದಲಿ ಮಾತ್ರ ಬದುಕುವುದು
ಉಳಿಯಲಾರದದು ನೀರಿನಲಿ
ಅರ್ಧ ಪ್ರಾಣಿ ಇನ್ನರ್ಧ ಮಾನವನ
ರೂಪ ನರಸಿಂಹ ಕಂಭದಲಿ
ವಾಮನನೆಂದರೆ ಕುಬ್ಜ ದೇಹದವ
ಪೂರ್ಣ ಬೆಳೆದಿರದ ಮಾನವನು
ಪರಶುರಾಮನವ ಪೂರ್ಣನಾದರೂ
ರಾಗದ್ವೇಷದಲಿ ಉಳಿದವನು
ಮರ್ಯಾದಾಪುರುಷೋತ್ತಮನೆನಿಸಿದ
ರಾಮ ಪರಿಪೂರ್ಣನಾದವನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಕೃಷ್ಣಪರಮಾತ್ಮನೆನಿಸಿದನು
ಮಾನವನಾಸೆಗೆ ದುರಾಸೆ ಮನಸಿಗೆ
ಬುದ್ಧನು ಅಂತ್ಯವ ಹಾಡಿದನು
ಕುದುರೆಯೇರಿ ಖಡ್ಗವ ಝಳಪಿಸುತಲಿ
ಬರುವನೆನ್ನುವರು ಕಲ್ಕಿಯನು!

ಹತ್ತು ಅವತಾರ ಕ್ರಮದಲಿ ನೋಡಲು ಜೀವಿಕಾಸವು ಕಾಣುವುದು
ಜೀವಿ ನೀರಿನಲಿ ಹುಟ್ಟಿದ ನಂತರ ಬೆಳೆದು ಬಂದುದನು ತಿಳಿಸುವುದು
ಮೊದಲಿಗೆ ಜೀವಿಯು ನೀರಲಿ ಹುಟ್ಟಿತು
ನಂತರ ನೆಲದೆಡೆ ಬಂದಿತ್ತು
ಪ್ರಾಣಿ ಹಂತದಿಂದೇರುತ ಬಂದಿತು
ಮಾನವ ರೂಪವ ಹೊಂದಿತ್ತು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...