ಬೆಳ್ಳಿ ಚುಕ್ಕಿ

ಸಭಾದಾಗ ಕೂತುಕೊಂಡು ಇವರು
ನಮ್ಮ ಮೇಲೆ ಕಾನೂನು ಮಾಡ್ತಾರ,
ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು
ಓಟ ಕೇಳಲಿಕ್ಕೆ ಬರತಾರ.
ನಮ್ಮ ಉದ್ಧಾರವೇ ತಮ್ಮ ಧೈಯ
ಅಂತ ಹೇಳಿ ಘೋಷಣೆ ಕೊಡ್ತಾರ
ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ.
ನಾವು ಇವರಿಗೆ ಬ್ಯಾಡಂತ.
ನಮ್ಮ ಓಟ ಮಾತ್ರ ಬೇಕಂತ.
ಊರಾಗ ನಾವು ಇದ್ರ ಸರಿ
ಕಾಣೋದಿಲ್ಲಂತ ಬುಲ್ಡೊಜರ ಹಚ್ಚಿ
ನಮ್ಮ ಗುಡಿಸಲು ನೆಲಸಮ ಮಾಡ್ತಾರ.
ಆಗಾಗ ಅವಕ್ಕೆ ಬೆಂಕಿ ಇಟ್ಟು
ಹೋಳಿ ಆಡ್ತಾರ ಜೀವಂತ ಸುಡ್ತಾರ
ಆ ಪರದೇಶಿಗಳು ಬಂದಾಗ
ನಮ್ಮ ಜೋಪಡಿ ಅವರ ಕಣ್ಣಿಗೆ ಬೀಳದಂಗ
ಭಾಳ ಎಚ್ಚರಿಕೆ ವಹಿಸಿ,
ಅವರ ಜೊತೆಗೇನೆ ತಿರಗ್ತಾರ.
ಆಗಾಗ ನಮ್ಮ ಉದ್ಧಾರಕ್ಕೆ
ಸಭೆನೂ ಕರೀತಾರ
ಸನ್ಮಾನ ಮಾಡ್ಕೊತಾರ
ಎರ್‌ಕಂಡಿಷನ್ ಕಾರಿನ್ಯಾಗ ಕೂತು
ಹಾರ ಹಾಕ್ಕೋತಾರ.
ನಮ್ಮ ಉದ್ಧಾರಕ್ಕ ಹೊರಟಾರಿವರು.
ನಮ್ಮ ಮ್ಯಾಲೇನೇ ದೊಡ್ಡ ದೊಡ್ಡ
ಕಾನೂನಿನ ಪುಸ್ತಕನೂ ಬರ್‍ದಾರಿವರು
ಅಂದು ಗಾಂಧಿ ಮುದುಕ
ಅರ್ಧಕ್ಕೆ ಬಿಟ್ಟ ಕೆಲಸ ಪೂರ್ತಿ
ಮಾಡಾಕ ಹತ್ತಾರಂತ ಇವರು.
ಅವನ ಹೆಸರಿನ ಮಂತ್ರ
ಆಗ್ಯಾದ ಇವರ ರಾಜಕೀಯ ತಂತ್ರ
ಅವನ ಟೊಪ್ಪಿಗಿ ಹಾಕ್ಕೊಂಡು
ಓಟ ಕೇಳಲಿಕ್ಕೆ ಬರತಾರಿವರು.
ನಾವು ಹಸಿವಿನಿಂದ ಸಾಯ್ತಿದ್ದೀವಿ
ಹೊಟ್ಟೆ ಬಟ್ಟೆ ಕಟ್ಟಿ ಅಸಮತೆಯ
ತ್ಯಾಗ ಬೇಯಾಕತ್ತೀವಿ.
ತಣಯ ಕಾಲೀಗಿ ಬೂಟು ಮೆಟ್ಟು ಹೊಲಿದು
ಬರಿಗಾಲಿಂದು ತಿರುಗಾಕತ್ತೀವಿ
ನಮ್ಮ ಕೇಂಪನ್ನ ರಕ್ತ ಸುಟ್ಟು
ಕಪ್ಪನ ಹೊಗೆಯರಾಗಿ,
ಕಾರ್ಖಾನೆ ಕೊಳವೆಯಿಂದ
ಕರಿಮೋಡಾಗಿ ಹೊರಹೊಮ್ಮಲಿಕತ್ತ್ಯಾದ
ಸುತ್ತೆಲ್ಲಾ ಭೀಕರ ಕತ್ತಲ ಮುತ್ತ್ಯಾದ
ಅಲ್ಲಿ ನೋಡು ಮೋಡದಲ್ಲಿ.
ಬೆಳ್ಳಿಚುಕ್ಕಿಯೊಂದು ಹೊಳಿಲಿಕತ್ತ್ಯಾದ
ಅದರ ಬೆಳಕಿನ್ಯಾಗ
ಮುಂದಕ್ಕ ಸಾಗೋಣ ನಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣಲೆಂದು ನಿಂದಲ್ಲೇ ನಿಂದರೇನು ಬಂತು?
Next post ನಿಮಗ್ಯಾಕೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…