ಮುಗಿಲ ಮುತ್ತಿಡುವ ಗಿರಿ ಶಿಖರಗಳಲಿ
ತೊರೆ, ನದಿಗಳ ಹಿಮದ ಜಾರುಂಡೆಗಳಲಿ
ಕಾಳಕೂಟ ರೂಪದ ಕಾರ್ಗಿಲ್ ಕಣಿವೆಯಲ್ಲಿ
ನರ್ತನ ಗೈಯ್ಯುತಿದ್ದವು ಸಾವು ನೋವುಗಳು
ತಾಂಡವ ರೂಪದ ವೀರಯೋಧರು
ಭಾರತಾಂಬೆಯ ಹೆಮ್ಮೆ ಕುವರರು
ಚಳಿಗಾಳಿ ಹಸಿವೆನ್ನದೆ
ಜೈಹಿಂದ್ ಎನ್ನುತಲಿ ಎದೆಯೊಡ್ಡಿ ನಡೆದರು
ಅಜೇಯ, ಅಹುಜ, ಸೌರವ, ಕಾಲಿಯಾ
ವಿಕ್ರಮ ಬಾತ್ರಾ, ಕರ್ನಲ ವಿಶ್ವನಾಥ
ವಿನೋದ ಪಾಂಡೆ, ಮೇಜರ ಶರವಣನ್
ವಿವೇಕ ಗುಪ್ತ, ಯಶವೀರಂತರನೇಕ
ವೀರಯೋಧ ಸೇನಾನಿ ಅಮರರಾದರು
ತ್ರಿವರ್ಣ ಧ್ವಜ ಹಾರಿಸುತಲಿ
ಕಾರ್ಗಿಲ್ ಕಣಿವೆ ಕಾರ್ಗತ್ತಲಲಿ
ಕಲಿಗಳಾಗಿ ಕಾದಾಡಿದ ವೀರರು
ಕನ್ನಡಾಂಬೆಯ ಕುಡಿಗಳು ಧೊಂಡಿಬಾ, ವೆಂಕಟ,
ಗುರುಬಸಯ್ಯಾ, ದಾವಲಸಾಬ, ಕಾವೇರಪ್ಪ, ಪೋತರಾಜ,
ಸಿದ್ದನಗೌಡ, ಯಶವಂತ, ಮಡಿವಾಳಪ್ಪ, ಮೋಹಿಲನ್,
ಕಾರ್ಗಿಲ್ ವಿಜಯ ಕಾರ್ಯಾಚರಣೆಯ
ಚಿರತೆಗಳಾಗಿ ಸಿಂಹ ಗರ್ಜನೆಗೈದರು
ಕಾರ್ಗಿಲ್, ಕಕ್ಸರ್, ಡ್ರಾಸ, ಮುಸ್ಕೋಹಾ
ಬಟಾಲಕ, ಟೋಲೋರಿಂಗ್, ಟೈಗರ ಶಿಖರಗಳಪ್ಪಿದರು
ಶ್ವೇತ ವಸ್ತ್ರಾಧಾರಿ, ಪ್ರಶಾಂತ…
ಶಿಖರಗಳಲ್ಲೆಡೆ ಕಾಲಿಟ್ಟಡಗಿದ ಕಪಿಗಳ
ರಕ್ಕಸ, ರಕ್ತ ಪಿಪಾಶೆಯ ವೈರಿ
ಮುಜಾಹಿದ್ದಿನ, ಜೆಹಾದ ಬಾಡಿಗೆ ಪಡೆ
ಕಾರುವ ಶೆಲ್ ಗುಂಡಿನ ದಾಳಿಗೆ
ಮೈಯೊಡ್ಡುತ ಎದೆ ಸೀಳಿದರು…
ವೈರಿಪಡೆಯ ರಕ್ತ ಚೆಲ್ಲುತ ವೀರಯೋಧರು
ಮಾತೃಭೂಮಿಯ ಮಡಿಲಲಿ ಮಡಿದರು
ಅಮರರಾದರು ವೀರ ಸಹೋದರರು
ಮಾತೃಭೂಮಿಯ ಋಣ ತೀರಿಸುತಲಿ
ತ್ಯಾಗ ಬಲಿದಾನಗಳಿಗೆ ಸಾಟಿಯಿರದೆ
ಪ್ರತಿ ಭಾರತೀಯನ ಮನದಲಿ ಉಳಿದರು
ದೇಶದ ಹೆಮ್ಮೆಯ ವೀರಚೇತನರು
ಕಾರ್ಗಿಲ್ದ ವೀರಮರಣದ
ವೀರಯೋಧರು ಹೆಮ್ಮೆಯ ಕುವರರು.
***