ಅಂಗರಕ್ಷಕ

ರಾಜಮಹಾರಾಜರ, ಚಕ್ರವರ್ತಿ ಬಾದಶಹರ
ಜೀವ ಕಾಪಾಡಲು, ನೆರಳಂಬಂತೆ
ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ.
ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ,
ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.
ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ.
ನಾನಿಲ್ಲ ಅವನಿಲ್ಲ… ಆಗ,
ಅವನಿಲ್ಲ, ನಾನಿದ್ದೇನೆ… ಈಗ.

ಈಗ ನಾನು ಅಂಗರಕ್ಷಕನಲ್ಲ – ಬಾಡಿಗಾರ್ಡ್.
ದೇಶದ ಅಧ್ಯಕ್ಷರ, ಉಪಾಧ್ಯಕ್ಷರ ಮಂತ್ರಿಗಳ
ಹಿಂದೆ ಮಾತ್ರ ಇರುವೆ – ಜೊತೆಗಿಲ್ಲ.
ಕಟ್ಟುಮಸ್ತಾದ ಸಿಪಾಯಿ ನಾನು
ಶಿಸ್ತಾಗಿ ನಿಲ್ಲುವೆ ಸಮವಸ್ತ್ರ ಧರಿಸಿ.
ಕೆಲವೊಮ್ಮೆ ಮಫ್ತಿಯಲ್ಲಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ.
ನನ್ನ ಮುಂದಿರುವ ರಾಜಕೀಯ ಪುಢಾರಿ
ಯಾರಿರಲಿ, ಹೇಗಿರಲಿ, ಏನು ಮಾಡುತ್ತಿರಲಿ
ಏನೇ ಮಾತಾಡುತ್ತಿರಲಿ, ಯಾರ ಜತೆಗಿರಲಿ
ಎಲ್ಲಾ ನೋಡುತ್ತಿದ್ದರೂ, ನಾ ಕುರುಡ
ಎಲ್ಲಾ ಕೇಳುತ್ತಿದ್ದರೂ, ನಾ ಕಿವುಡ
ಎಂದೂ ಏನೂ ಮಾತನಾಡದ ಮೂಗ.
ನನ್ನ ಮುಂದೆ ನಿಂತು ಸಹಸ್ರ ಸಹಸ್ರ
ಜನಸ್ತೋಮವನ್ನು ಮೋಡಿ ಮಾಡಿ
ನಗೆಗಡಲಲ್ಲಿ ಮುಳುಗಿಸಿ,
ಕರುಣೆಯಿಂದ ಕಂಬನಿ ಬರಿಸಿ,
ಬೇರೆಯವರ ಮೇಲೆ ಎತ್ತಿಕಟ್ಟಿ
ತನ್ನೆಡೆಗೆ ಸೆಳೆದುಕೊಳ್ಳುವ ಆಟ
ಎಲ್ಲ ನಾಟಕ ನೋಡುವುದೆನಗೆ ಕಾಟ!

ನಾನು ನಗುವುದಿಲ್ಲ, ಅಳುವುದಿಲ್ಲ.
ನಿರ್ಲಿಪ್ತರಲ್ಲಿ ನಿರ್ಲಿಪ್ತ. ನನಗೆ
ಎಲ್ಲ ಭಾಷೆ ಗೊತ್ತು, ಭಾವ ಗೊತ್ತು
ಎಲ್ಲರ ಕಥೆಗಳೂ ಚೆನ್ನಾಗಿ ಗೊತ್ತು
ಯಾರನ್ನು ಬೇಕಾದರೂ ಬ್ಲ್ಯಾಕ್‌ಮೈಲ್
ಮಾಡಬಲ್ಲೆ, ಮುಳುಗಿಸಲೂ ಬಲ್ಲೆ.
ಆದರೆ ನಾನು ಮಾತನಾಡುವಂತಿಲ್ಲ
ನಗುವಂತಿಲ್ಲ, ಅಳುವಂತಿಲ್ಲ!
ನಾನು ಕೇವಲ ನೆರಳು ಗೊಂಬೆ.
ನೀವೆಲ್ಲಾ ನನ್ನ ನೋಡುವಿರಿ ಪ್ರತಿ ದಿನ
ಟಿ.ವಿ.ಯಲ್ಲಿ, ಬಹಿರಂಗ ಸಭೆಯಲ್ಲಿ.
ನನ್ನ ಮುಖ ಚಿರಪರಿಚಿತ
ಆದರೆ ನಾನಾರಿಗೂ ಗೊತ್ತಿಲ್ಲ
ನನಗೊಂದು ಹೆಸರಿಲ್ಲ, ಬಾಳಿಲ್ಲ
ನಾನು ಒಬ್ಬ ಸರ್ಕಾರಿ ನೌಕರ
ಆದರೂ ನಾನು ಜೀತದ ಜೀವ.
ದೊಡ್ಡವರ ಹಿಂದಿದ್ದರೂ ನನಗಾವ
ಪ್ರಭಾವವಿಲ್ಲ. ಈಗಲೂ ನಾನು
ಜೀವಕ್ಕೆ ಜೀವ ಕೊಡುತ್ತೇನೆ
ನಾನು ಎಂದೆಂದಿಗೂ ಅಂಗರಕ್ಷಕ.
*****
೧೨-೦೬-೧೯೮೭

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ೨೦೦೯ರ ಲೋಕಸಭಾ ಚುನಾವಣೆಯ ಫಲಿತಾಂಶ : ಒಂದು ನೋಟ
Next post ಬತ್ತಿದ ಆಸೆ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…