Home / ಕವನ / ಕವಿತೆ / ಅಂಗರಕ್ಷಕ

ಅಂಗರಕ್ಷಕ

ರಾಜಮಹಾರಾಜರ, ಚಕ್ರವರ್ತಿ ಬಾದಶಹರ
ಜೀವ ಕಾಪಾಡಲು, ನೆರಳಂಬಂತೆ
ಹಿಂದಿದ್ದೆ, ಮುಂದಿದ್ದೆ, ಜೊತೆಗಿದ್ದೆ.
ಗೆಳೆಯನಾಗಿ, ಭಂಟನಾಗಿ, ಸಲಹೆಗಾರನಾಗಿ,
ಚರಣದಾಸನಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ.
ನನ್ನ ಜೀವ ತೆತ್ತು ಅವನ ಜೀವ ರಕ್ಷಿಸಿದ್ದೆ.
ನಾನಿಲ್ಲ ಅವನಿಲ್ಲ… ಆಗ,
ಅವನಿಲ್ಲ, ನಾನಿದ್ದೇನೆ… ಈಗ.

ಈಗ ನಾನು ಅಂಗರಕ್ಷಕನಲ್ಲ – ಬಾಡಿಗಾರ್ಡ್.
ದೇಶದ ಅಧ್ಯಕ್ಷರ, ಉಪಾಧ್ಯಕ್ಷರ ಮಂತ್ರಿಗಳ
ಹಿಂದೆ ಮಾತ್ರ ಇರುವೆ – ಜೊತೆಗಿಲ್ಲ.
ಕಟ್ಟುಮಸ್ತಾದ ಸಿಪಾಯಿ ನಾನು
ಶಿಸ್ತಾಗಿ ನಿಲ್ಲುವೆ ಸಮವಸ್ತ್ರ ಧರಿಸಿ.
ಕೆಲವೊಮ್ಮೆ ಮಫ್ತಿಯಲ್ಲಿ
ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ.
ನನ್ನ ಮುಂದಿರುವ ರಾಜಕೀಯ ಪುಢಾರಿ
ಯಾರಿರಲಿ, ಹೇಗಿರಲಿ, ಏನು ಮಾಡುತ್ತಿರಲಿ
ಏನೇ ಮಾತಾಡುತ್ತಿರಲಿ, ಯಾರ ಜತೆಗಿರಲಿ
ಎಲ್ಲಾ ನೋಡುತ್ತಿದ್ದರೂ, ನಾ ಕುರುಡ
ಎಲ್ಲಾ ಕೇಳುತ್ತಿದ್ದರೂ, ನಾ ಕಿವುಡ
ಎಂದೂ ಏನೂ ಮಾತನಾಡದ ಮೂಗ.
ನನ್ನ ಮುಂದೆ ನಿಂತು ಸಹಸ್ರ ಸಹಸ್ರ
ಜನಸ್ತೋಮವನ್ನು ಮೋಡಿ ಮಾಡಿ
ನಗೆಗಡಲಲ್ಲಿ ಮುಳುಗಿಸಿ,
ಕರುಣೆಯಿಂದ ಕಂಬನಿ ಬರಿಸಿ,
ಬೇರೆಯವರ ಮೇಲೆ ಎತ್ತಿಕಟ್ಟಿ
ತನ್ನೆಡೆಗೆ ಸೆಳೆದುಕೊಳ್ಳುವ ಆಟ
ಎಲ್ಲ ನಾಟಕ ನೋಡುವುದೆನಗೆ ಕಾಟ!

ನಾನು ನಗುವುದಿಲ್ಲ, ಅಳುವುದಿಲ್ಲ.
ನಿರ್ಲಿಪ್ತರಲ್ಲಿ ನಿರ್ಲಿಪ್ತ. ನನಗೆ
ಎಲ್ಲ ಭಾಷೆ ಗೊತ್ತು, ಭಾವ ಗೊತ್ತು
ಎಲ್ಲರ ಕಥೆಗಳೂ ಚೆನ್ನಾಗಿ ಗೊತ್ತು
ಯಾರನ್ನು ಬೇಕಾದರೂ ಬ್ಲ್ಯಾಕ್‌ಮೈಲ್
ಮಾಡಬಲ್ಲೆ, ಮುಳುಗಿಸಲೂ ಬಲ್ಲೆ.
ಆದರೆ ನಾನು ಮಾತನಾಡುವಂತಿಲ್ಲ
ನಗುವಂತಿಲ್ಲ, ಅಳುವಂತಿಲ್ಲ!
ನಾನು ಕೇವಲ ನೆರಳು ಗೊಂಬೆ.
ನೀವೆಲ್ಲಾ ನನ್ನ ನೋಡುವಿರಿ ಪ್ರತಿ ದಿನ
ಟಿ.ವಿ.ಯಲ್ಲಿ, ಬಹಿರಂಗ ಸಭೆಯಲ್ಲಿ.
ನನ್ನ ಮುಖ ಚಿರಪರಿಚಿತ
ಆದರೆ ನಾನಾರಿಗೂ ಗೊತ್ತಿಲ್ಲ
ನನಗೊಂದು ಹೆಸರಿಲ್ಲ, ಬಾಳಿಲ್ಲ
ನಾನು ಒಬ್ಬ ಸರ್ಕಾರಿ ನೌಕರ
ಆದರೂ ನಾನು ಜೀತದ ಜೀವ.
ದೊಡ್ಡವರ ಹಿಂದಿದ್ದರೂ ನನಗಾವ
ಪ್ರಭಾವವಿಲ್ಲ. ಈಗಲೂ ನಾನು
ಜೀವಕ್ಕೆ ಜೀವ ಕೊಡುತ್ತೇನೆ
ನಾನು ಎಂದೆಂದಿಗೂ ಅಂಗರಕ್ಷಕ.
*****
೧೨-೦೬-೧೯೮೭

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...