Home / ಕವನ / ಕವಿತೆ / ಬಿಡಬೇಡ ಬಾಲಿ ಬಿಡಬೇಡ

ಬಿಡಬೇಡ ಬಾಲಿ ಬಿಡಬೇಡ

ಬಿಡಬೇಡ ಬಾಲಿ ಬಿಡಬೇಡ
ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ||

ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ
ನನಕೂಟ ಸುಸ್ತಿಲ್ಲ ಬಾಬಾರ
ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ
ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧||

ಕಲಸೋರು ಕೌಹಕ್ಕಿ ಕಲಿಯೋರು ಕೂಹಕ್ಕಿ
ಯಾತಕ್ಕ ನೀ ಪುಕ್ಕಿ ನಿಲಬಾರ
ಸ್ಯಾಣ್ಯಾರು ಅಂಬೋರು ಸೆಗಣೀಯ ತಿಂಬೋರು
ಧಡ್ಡರು ಧಡೆಬೆಲ್ಲ ತಿಂದಾರ ||೨||

ನಾಕೋಟ್ರ ಉಡತೀದಿ ನಾಬಿಟ್ರ ಸಾಯ್ತಿದಿ
ನೀನನಗ ಉದ್ರೆಲ್ಲಾ ಗಡಬಾರ
ನನಗಿಲ್ಲ ದರಕಾರ ನಿನಗಿಲ್ಲ ಸರಕಾರ
ನಾ ನಿನ್ನ ಸರದಾರ ಸರಬಾರ ||೩||

ಈ ಸಾಲಿ ಬೇಸಾಲಿ ಮಸಾಲಿ ಪಡಸಾಲಿ
ಲಂಚಾವ ಕೊಟ್ಟೋರು ಕಲಿಸ್ಯಾರ
ಕೌವ್ವಂದ್ರ ಕ ಇಲ್ಲ ಹೌವ್ವಂದ್ರ ಹ ಇಲ್ಲ
ಸಾಲ್ಯಾಗ ಏನೈತಿ ಹೆಣಭಾರ ||೪||

ಮಾಸ್ತರ ಮ್ಯಾಲೀನ ಸಾಹೇಬಾ ಸತ್ತಿಲ್ಲ
ತಂಬಾಕು ಪಟ್ಟೀಯ ತಿಂದಾನ
ಪಿರಿಪಿರಿ ಮಕ್ಕಳಾ ಕೊರಿಚುಟ್ಟ ಮಾಡ್ಯಾನ
ಭುಸುಭುಸು ಸಿಗರೇಟು ಸೇದ್ಯಾನ ||೫||
*****
ಬಾಲಿ = ಆತ್ಮ
ಸಾಲಿ = ಸಂಸಾರ
ಮಾಸ್ತರ = ಜ್ಞಾನ ನೀಡಿದ ಗುರು
ನಾನು = ಮಾಯೆ (ಇಡೀ ಪದ್ಯದಲ್ಲಿ ಮಾಯೆ ಆತ್ಮಕ್ಕೆ ಹೇಳುತ್ತದೆ)
ಸಾಹೇಬ = ಭಗವಂತ
ತಂಬಾಕಿ ಪಟ್ಟಿ = ಮಾಯಾಮದ
ಸಿಗರೇಟು ಸೇದು = ಜ್ಞಾನಾಗ್ನಿಯಿಂದ ಸುಡು
ಪಿರಿಪಿರಿ ಮಕ್ಕಳು = ಸರ್ವ ಆತ್ಮರು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...