Home / ಕವನ / ಕವಿತೆ / ಕುರ್ಚಿ

ಕುರ್ಚಿ

ಹಗಲಲ್ಲೇ ಮುಗಿಲು ಕಪ್ಪಾಗಿ
ಕತ್ತಲಾವರಿಸಿದ ಹಾಗೆ ಈ ಕುರ್ಚಿ
ಸಿಕ್ಕಿದವರಿಗೆ ಸೀರುಂಡೆಯಾದಾಗ
ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ
ಜನರ ಮೇಲೆ ಝಳಪಿಸುವ
ಕುರುಡು ಕತ್ತಿ.

ಕೆಲವರು-
ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು
ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು
ಕರುಳಲ್ಲಿ ಮುರಿದ ಮುಳ್ಳುಗಳ ನೋಡದ
ರಾಜ ಸುಖ ಆದೀತು ಹೇಗೆ
ನಿಜದ ಸುಖ?

ಇನ್ನು ಕೆಲವರು-
ತೆಂಗಿನಕಾಯಿ ಧೂಪ ದೀಪ ಧುರೀಣರು
ದಕ್ಕದೆ ಹೋದಾಗ ಹುಳಿದ್ರಾಕ್ಷಿ ನರಿರಾಯರು
ಸರ್ವಸಂಗ ಪರಿತ್ಯಾಗಿಯ ಫೋಜಿನಲ್ಲೇ
ಹೊಟ್ಟೆಯೊಳಗಿನ ಉರಿ ಬಾಯಿಗೆ ತರುತ್ತಾರೆ;
ಸಿನಿಕ ಸಾಮ್ರಾಜ್ಯದ ಸಿಂಹಾಸನದಲ್ಲಿ ಕೂತು
ಕ್ಷಣಿಕ ತತ್ವದ ವಿರಾಗಿಯಾಗುತ್ತಾರೆ;

ಕುರ್ಚಿಯೆಂದರೆ ಕಿರೀಟವಲ್ಲ ಒಳತೋಟಿ
ಬಟ್ಟೆಗೆ ಬೇಕಾದ ನೂಲಿನ ರಾಟಿ
ಚಿಟ್ಟೆ ಚಿತ್ತಾರ ಬಿಡಿಸುವ ಬದಲು
ಹಾವಿನ ಬಾಯ ಕಪ್ಪೆಯಾದರೆ
ಹುಣ್ಣಿಮಯೇ ಅಮಾವಾಸ್ಯೆ.

ಕಾಣಬೇಕು ಕುರ್ಚಿಯ ಕಣ್ಣಿಗೆ-
ರೆಕ್ಕೆಸುಟ್ಟ ಕನಸುಗಳಲ್ಲಿ
ಸೀದ ರೊಟ್ಟಿಯ ಬದುಕು;
ಹೂಬಿಟ್ಟ ಮೂಳೆಗಳಲ್ಲಿ ಧಗ್ಗನೆ
ಹಬ್ಬಿದ ಕಾಳ್ಗಿಚ್ಚು;
ಬೂದಿಯಲ್ಲಿ ಬಿದ್ದ ದಳಗಳು
ನಡುಗುತ್ತಿರುವ ನಾಳೆಗಳು.

ಆಗಬಾರದು ಕುರ್ಚಿಯಲ್ಲಿ ಕೂತವರು
ಕುರ್ಚಿಗಿಂತ ಕುಬ್ಜರು.
ಕೂತರೂ ಕೂರದಂತೆ
ಅತ್ತಿತ್ತ ಹಾರದಂತೆ
ತಳದ ತಳಮಳಕ್ಕೆ ತಣ್ಣೀರು ಎರಚದಂತೆ
ಕಣ್ಣೀರು ಒರೆಸುವ ಕರುಳಾದರೆ
ಕುರ್ಚಿಯಾಗುತ್ತದೆ ಹೃದಯ
ಪ್ರಜಾಪ್ರಭುತ್ವಕ್ಕೆ ಅಭಯ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...