Home / ಕವನ / ಕವಿತೆ / ಕುರ್ಚಿ

ಕುರ್ಚಿ

ಹಗಲಲ್ಲೇ ಮುಗಿಲು ಕಪ್ಪಾಗಿ
ಕತ್ತಲಾವರಿಸಿದ ಹಾಗೆ ಈ ಕುರ್ಚಿ
ಸಿಕ್ಕಿದವರಿಗೆ ಸೀರುಂಡೆಯಾದಾಗ
ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ
ಜನರ ಮೇಲೆ ಝಳಪಿಸುವ
ಕುರುಡು ಕತ್ತಿ.

ಕೆಲವರು-
ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು
ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು
ಕರುಳಲ್ಲಿ ಮುರಿದ ಮುಳ್ಳುಗಳ ನೋಡದ
ರಾಜ ಸುಖ ಆದೀತು ಹೇಗೆ
ನಿಜದ ಸುಖ?

ಇನ್ನು ಕೆಲವರು-
ತೆಂಗಿನಕಾಯಿ ಧೂಪ ದೀಪ ಧುರೀಣರು
ದಕ್ಕದೆ ಹೋದಾಗ ಹುಳಿದ್ರಾಕ್ಷಿ ನರಿರಾಯರು
ಸರ್ವಸಂಗ ಪರಿತ್ಯಾಗಿಯ ಫೋಜಿನಲ್ಲೇ
ಹೊಟ್ಟೆಯೊಳಗಿನ ಉರಿ ಬಾಯಿಗೆ ತರುತ್ತಾರೆ;
ಸಿನಿಕ ಸಾಮ್ರಾಜ್ಯದ ಸಿಂಹಾಸನದಲ್ಲಿ ಕೂತು
ಕ್ಷಣಿಕ ತತ್ವದ ವಿರಾಗಿಯಾಗುತ್ತಾರೆ;

ಕುರ್ಚಿಯೆಂದರೆ ಕಿರೀಟವಲ್ಲ ಒಳತೋಟಿ
ಬಟ್ಟೆಗೆ ಬೇಕಾದ ನೂಲಿನ ರಾಟಿ
ಚಿಟ್ಟೆ ಚಿತ್ತಾರ ಬಿಡಿಸುವ ಬದಲು
ಹಾವಿನ ಬಾಯ ಕಪ್ಪೆಯಾದರೆ
ಹುಣ್ಣಿಮಯೇ ಅಮಾವಾಸ್ಯೆ.

ಕಾಣಬೇಕು ಕುರ್ಚಿಯ ಕಣ್ಣಿಗೆ-
ರೆಕ್ಕೆಸುಟ್ಟ ಕನಸುಗಳಲ್ಲಿ
ಸೀದ ರೊಟ್ಟಿಯ ಬದುಕು;
ಹೂಬಿಟ್ಟ ಮೂಳೆಗಳಲ್ಲಿ ಧಗ್ಗನೆ
ಹಬ್ಬಿದ ಕಾಳ್ಗಿಚ್ಚು;
ಬೂದಿಯಲ್ಲಿ ಬಿದ್ದ ದಳಗಳು
ನಡುಗುತ್ತಿರುವ ನಾಳೆಗಳು.

ಆಗಬಾರದು ಕುರ್ಚಿಯಲ್ಲಿ ಕೂತವರು
ಕುರ್ಚಿಗಿಂತ ಕುಬ್ಜರು.
ಕೂತರೂ ಕೂರದಂತೆ
ಅತ್ತಿತ್ತ ಹಾರದಂತೆ
ತಳದ ತಳಮಳಕ್ಕೆ ತಣ್ಣೀರು ಎರಚದಂತೆ
ಕಣ್ಣೀರು ಒರೆಸುವ ಕರುಳಾದರೆ
ಕುರ್ಚಿಯಾಗುತ್ತದೆ ಹೃದಯ
ಪ್ರಜಾಪ್ರಭುತ್ವಕ್ಕೆ ಅಭಯ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...