Home / ಕವನ / ಕವಿತೆ / ಕುರ್ಚಿ

ಕುರ್ಚಿ

ಹಗಲಲ್ಲೇ ಮುಗಿಲು ಕಪ್ಪಾಗಿ
ಕತ್ತಲಾವರಿಸಿದ ಹಾಗೆ ಈ ಕುರ್ಚಿ
ಸಿಕ್ಕಿದವರಿಗೆ ಸೀರುಂಡೆಯಾದಾಗ
ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ
ಜನರ ಮೇಲೆ ಝಳಪಿಸುವ
ಕುರುಡು ಕತ್ತಿ.

ಕೆಲವರು-
ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು
ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು
ಕರುಳಲ್ಲಿ ಮುರಿದ ಮುಳ್ಳುಗಳ ನೋಡದ
ರಾಜ ಸುಖ ಆದೀತು ಹೇಗೆ
ನಿಜದ ಸುಖ?

ಇನ್ನು ಕೆಲವರು-
ತೆಂಗಿನಕಾಯಿ ಧೂಪ ದೀಪ ಧುರೀಣರು
ದಕ್ಕದೆ ಹೋದಾಗ ಹುಳಿದ್ರಾಕ್ಷಿ ನರಿರಾಯರು
ಸರ್ವಸಂಗ ಪರಿತ್ಯಾಗಿಯ ಫೋಜಿನಲ್ಲೇ
ಹೊಟ್ಟೆಯೊಳಗಿನ ಉರಿ ಬಾಯಿಗೆ ತರುತ್ತಾರೆ;
ಸಿನಿಕ ಸಾಮ್ರಾಜ್ಯದ ಸಿಂಹಾಸನದಲ್ಲಿ ಕೂತು
ಕ್ಷಣಿಕ ತತ್ವದ ವಿರಾಗಿಯಾಗುತ್ತಾರೆ;

ಕುರ್ಚಿಯೆಂದರೆ ಕಿರೀಟವಲ್ಲ ಒಳತೋಟಿ
ಬಟ್ಟೆಗೆ ಬೇಕಾದ ನೂಲಿನ ರಾಟಿ
ಚಿಟ್ಟೆ ಚಿತ್ತಾರ ಬಿಡಿಸುವ ಬದಲು
ಹಾವಿನ ಬಾಯ ಕಪ್ಪೆಯಾದರೆ
ಹುಣ್ಣಿಮಯೇ ಅಮಾವಾಸ್ಯೆ.

ಕಾಣಬೇಕು ಕುರ್ಚಿಯ ಕಣ್ಣಿಗೆ-
ರೆಕ್ಕೆಸುಟ್ಟ ಕನಸುಗಳಲ್ಲಿ
ಸೀದ ರೊಟ್ಟಿಯ ಬದುಕು;
ಹೂಬಿಟ್ಟ ಮೂಳೆಗಳಲ್ಲಿ ಧಗ್ಗನೆ
ಹಬ್ಬಿದ ಕಾಳ್ಗಿಚ್ಚು;
ಬೂದಿಯಲ್ಲಿ ಬಿದ್ದ ದಳಗಳು
ನಡುಗುತ್ತಿರುವ ನಾಳೆಗಳು.

ಆಗಬಾರದು ಕುರ್ಚಿಯಲ್ಲಿ ಕೂತವರು
ಕುರ್ಚಿಗಿಂತ ಕುಬ್ಜರು.
ಕೂತರೂ ಕೂರದಂತೆ
ಅತ್ತಿತ್ತ ಹಾರದಂತೆ
ತಳದ ತಳಮಳಕ್ಕೆ ತಣ್ಣೀರು ಎರಚದಂತೆ
ಕಣ್ಣೀರು ಒರೆಸುವ ಕರುಳಾದರೆ
ಕುರ್ಚಿಯಾಗುತ್ತದೆ ಹೃದಯ
ಪ್ರಜಾಪ್ರಭುತ್ವಕ್ಕೆ ಅಭಯ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...