Home / ಕವನ / ಕವಿತೆ / ಇಂದು ನಿನ್ನೆಯಂತಿಲ್ಲ

ಇಂದು ನಿನ್ನೆಯಂತಿಲ್ಲ

ಗೆಳೆಯ ರಹೀಮನ ಮನೆಯಲ್ಲಿ
ಕುಟ್ಟಿದ ಮೆಹಂದಿಗೆ ಹಪಾಹಪಿಸಿ
ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ.
ಕೈಬಣ್ಣ ಕೆಂಪಗಾದಷ್ಟು
ಗುಲಾಬಿ ಅರಳುತ್ತಿತ್ತು ಮನದಲ್ಲಿ.

ಪತ್ರ ಹೊತ್ತು ತರುವ ಇಸೂಬಸಾಬ್
ಬಂದಾಗಲೆಲ್ಲಾ ಚಾ ಕುಡಿದೇ
ಹೋಗುತ್ತಿದ್ದ..
ಅಂಗಳದ ತುಂಬೆಲ್ಲಾ
ಅತ್ತರಿನ ಪರಿಮಳ ಬಿಟ್ಟು.

ರಮಜಾನ್ ದಿನದ ಸಿರ್‍ಕುರಮಾ
ಘಮಘಮಲು ನಮ್ಮನೆಯಲ್ಲೂ
ತುಂಬಿಕೊಳ್ಳುತ್ತಿತ್ತು.
ಬಂಡಿಹಬ್ಬದ ಬೆಂಡು ಬತ್ತಾಸು,
ಕಜ್ಜಾಯಗಳೆಲ್ಲ
ಅವರ ತಿಂಡಿಡಬ್ಬ ತುಂಬಿಕೊಳ್ಳುತ್ತಿತ್ತು.
ದೊಡ್ಡವರಾದೆವು ನೋಡಿ
ಮನೆ ಜೋಪಡಿಗಳಿಲ್ಲ ಈಗ
ಬರಿಯ ಬಂಗೆಲೆಗಳೆದ್ದಿವೆ.
ಮನೆಮುಂದಿನ ಗಿಡಮರಗಳಲ್ಲಿ
ಹೆಣಗಳು ನೇತಾಡುತ್ತಿವೆ
ಹಿತ್ತಲ ಕೆರೆಯಲ್ಲಿ ಕೊಳೆತ ಶವದ
ವಾಸನೆಗೆ ನೈದಿಲೆಗಳು ಕಮರಿವೆ.

ನಿತ್ಯ ಹುಟ್ಟುವ ಸೂರ್ಯ ಇಂದು
ಪೂರ್ವಕ್ಕೆ ಏಳುತ್ತಾನೆ
ಆಂಜನೇಯನಿಗೆ ಅಡ್ಡ ಬಿದ್ದರೆ
ಆಯಸ್ಸು ಮಿಗುತ್ತದೆ.
ಅಮ್ಮ ಚಿಕ್ಕಂದಿನಲ್ಲಿ ಹೇಳಿದ್ದು
ಸುಳ್ಳಾಗುತ್ತಿದೆ-
ಬತ್ತಿ ಬೆಳಗಲು ಹೋದವ ಹೆಣವಾದದ್ದು ಕೇಳಿ.
ಗಂಟೆ ಜಾಗಟೆ, ಜಾ ನಮಾಜ್ ಎಲ್ಲೆಂದರಲ್ಲಿ
ಉರಿದು ಹೋದವು. ಕೆಂಡ ಇಂಗಳವಾದವು
ಆ ಕೈಗಳೆಲ್ಲ
ಈಗ ಕತ್ತಿ ತಲವಾರಗಳನ್ನೆ ತೊಟ್ಟಿವೆ.

ರಹೀಮನ ಮನೆಯ ಸಿರಕುರಮಾ
ನಮ್ಮನೆಯ ಬೆಂಡು ಬತ್ತಾಸು ಪರಸ್ಪರ
ಮಾತು ಬಿಟ್ಟಿವೆ, ತಪಶೀಲು ಜಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...