Home / ಕವನ / ಕವಿತೆ / ಮೈಲಾರಲಿಂಗನ ಹೋಳೀಪದ

ಮೈಲಾರಲಿಂಗನ ಹೋಳೀಪದ

ಗುರುವೆ ನೀ ಗತಿಯೆಂದು ಹರುಷದಿ ಪೊಗಳುವೆ
ಸರಸ್ವತಿ ಕರಿಮುಖ ಉಭಯರನು ಬಹು-
ತರದಿ ಬೇಡುವೆ ದಿವ್ಯ ಅಭಯವನು ಮನ-
ವರಿತು ಪೇಳುವೆ ಪದ ಶುಭದಿ ನಾನು
ಧರಿನೇರುವೆ ನಾ ತೋರುತ ದಕ್ಷನಾ ಹರನೊರವಿನಾ
ಮಾರಹರನ ಶರಣ ಚನ್ನಬಸವನ ಉಳುವಿಗೆ
ಭರದಿ ಮೈಲಾರದಿಂದ ಹೊರಟು ಬಂದುದನಾ ||೧||

ಗುಣಯುತರಾಲಿಪುದೀ ಮಾತು ಲೋಕದಿ
ತೃಣಹಾ ಶ್ರೀ ಮಲಹರಿ ಮಹಾವೀರನು
ಬಂದು ಭುವನದಿ ಕೆಣಕಿದ ಅಸುರರನು
ಕೊಂದು ಮಣಿ ಮಲ್ಲಾಸುರನೆಂಬು ಹೆಸರವನು
ಹಣದಟ್ಟಲು ಕಣಕುಟ್ಟಲು ಕ್ಷಣ ತಟ್ಟಲು ತಾನು
ಮುಷ್ಟಿಯುದ್ಧವ ನೀಗಿ ಸೃಷ್ಟಿಪಾಲಕನಾಗಿ
ತಟ್ಟನೆ ಶಿವ ಶರಣರನೋಳ್ಪೆನೆಂದೆನುತಾ ||೨ ||

ಹೊರಡುವ ಸಮಯದಿ ಕರಸಿದ
ಕರಣಿಕ ಚಿಕ್ಕ ಹಿರಿಚಿಕ್ಕರೆಂಬುವರಾ
ಬರಸಿಡಿಲು ಗರ್ಜನಿ ಮೇಘ ಕೊಂಬುವರಾ
ಕರವಿಡಿದು ರಕ್ಕಸರನೆಲ್ಲಾ ಕೊಲ್ಲೆಂಬುವರಾ
ಆ ಕ್ಷಣದಲ್ಲಿ ಲಕ್ಷ್ಮಿಯ ಕಲಿಮೋಪೇಕ್ಷಿಸುತಲಿ
ಪರಮೋಕ್ಷ ಅಧಿಕಾರ ಈ ಕ್ಷತಿಪಾಲಕ
ಸಾಕ್ಷಾತ ಶಿವಶರಣ ಕಾಂಬೆನೆನುತಾ ||೩||

ಜಾವ ತಡವಾಗದೆಂದು ತವಕದಿ ಬರುವಾಗ
ಮಾಯ್ಕಾರ ಮಹಿಮನ ಕೆಲಬಲದಿ ನಿಂತು
ಕಾಯ್ಕೋಲು ದೀವಟಗಿ ಬೆಳಕು ನಿಧಿ
ಸಭಾಸೇವಕರು ಸಂಭ್ರಮ ಸರಸದಿ
ಅಲ್ಲೆ ಮೋಹನದಿ ಬಲು ಹವಣದಿ
ಗುಲ್ಲು ಗಮನದಿ ಸಲ್ಲುವಕೆಂದು
ಒದರುತ ನಾಯಿಗಳ ತೆರದಿಂದ
ಕಾಯಿ ಹಣ್ಣು ಡೋಣಿಗೆ ನೀಡೆಂಬುತಿಹರು ||೪||

ಬಂಡಾರದ ಭರಣಿ ಹಿಡಿದು ಬೆತ್ತ ಕೈಯೊಳು
ಗೊಂಡೇದ ಜೋಳಗಿ ಬಗಲೊಳಗೆ ಬೆಳ್ಳಿ
ದುಂಡುಕಾವಿನ ಚವರಿ ಹೆಗಲ ಮೇಲೆ
ತುಂಡ ಕಪನಿ ಟೊಪ್ಪಿಗೆ ಕೋರಿ ತಲಿಗೆ ಮೈಗೆ
ಹಿಂಡು ಗೊರವರು ಗಂಡಸನರಿಯರು
ದಂಡು ನೆರೆದರು ಮಿಂಡಿ ಹೆಂಗಸರು ಮುಸಲರು ಬುಬ್ಬೇರು
ಮುಸುಕಿನೊಳು ವೀಳ್ಯವ ಮಡಿಚಿಡುತಿಹರು
||೫||

ಕರಿಯ ಕಂಬಳಿ ಅಂಗಿ ಜರತಾರಿ ಮುಂಡಾಸ
ಕರದೊಳು ಡಮರುಗ ಬಾರಿಸುತ
ಚಿನಿಕಾಳಿ ನಪೂರಿ ಕೈಬಾರಿಸುತಾ ತೋರಿ
ಪಾರೇದ ಗೊರವರು ಪರಾಕೆನ್ನುತಾ
ಕಂಚಿಕಾರರು ಮಿಂಚಿಮೀರಿದರು ಹಂಚಿಗಾರರು
ಸಂಚಿತಾರ್ಥ ವಿಷಯ ಬಿಟ್ಟು ಶರಣರ
ಸಮ್ಮುಖದೊಳು ಮುಂಚೆ ಪಾವಡವ ಮೆರಿಸಬೇಕೆನುತಾ ||೬||

ಮುದದಿ ಮಹಿಮರೂಪ ಇದರಿಗ ಬಂದಾರು
ಕುದುರಿಕಾರರು ಕಾಲ ಕೆದರುತಲಿ ಬಂದು
ವಿಧದಿ ತಮ್ಮೊಳು ತಾವು ಸದರಿನಲಿ ಹೊಂದಿ
ಒದಗಿ ಒಬ್ಬರಿಗೊಬ್ಬರು ಹೊಡೆಗಿದಲಿ ನೆಲಾ
ಅದರಿಪರು ಸ್ಥಳಾ ದಣಿಸಿದರು ಕಾಲ
ನೋದುವ ನರ್ತಕೆ ಮೆಚ್ಚುತ
ಸುರಲೋಕದೊಳು ನಜರಿಟ್ಟು ಇಂದ್ರಾದಿಸುರರು ನೋಡಿದರು ||೭||

ತೆಗ್ಗಿನೊಳು ಅಡಗಿರ್ಪ ಉಳವಿಯ ಲೋಕಕ್ಕೆ ಸ್ವರ್ಗದ ಬಾಗಿಲ ಶ್ರೀವನಕೆ ಹೋಗಿ
ಒಗ್ಗಿಲೆ ಗಣಸಮೂಹದ ಘನಕೆ ಬ್ಯಾಗ
ಬಗ್ಗಿ ಭಜಿಸಿ ಭಕ್ತಿ ಸಂಧಾನಕೆ
ಕೂಡಬೇಕೆಂದು ನೋಡಲೈತಂದು ಗಡ ಬಾಯೆಂದು ತನ್ನ
ಅಗ್ಗದಿ ಬೀಗ ಪ್ರಧಾನಿ ಹೆಗ್ಗನ ಮುಂದೆ
ಹಿಗ್ಗುತ ಮಾತಾಡಿ ಕುಳಿತು ಮೌನದಲಿ ||೮||

ಇಂದಿಗೆ ಪರಿವಾರ ನೆರವಿದೆ ಇದರೊಳು
ಸುಂದರ ಹೊನಕೇರಿ ಮಲ್ಲಭೂಪಾ ಅವ
ನೊಂದಿಗಿರುವನು ಚಂದಯ್ಯ ನೃಪಾ ನಮ್ಮ
ಚಂದಿಗಳವನೆನ್ನಾ ಮೇಲೆ ಕೃಪಾ
ಚಿಂದಾಸುರನ ಕೊಂದ ವೀರನು ಬಲು
ಬಂಧುರನು ಅವರೊಂದಿಗೆ ಕರೆದೊಯ್ಯಬೇಕೆಂಬ ಸಮಯದಿ
ಬಂದು ನಿಂತಾರು ನಿಜ ಮಂದಿರದೊಳಗೆ ||೯||

ಕೇಳಯ್ಯಾ ಮಲಹರಿ ನಿನ್ನೊಳಿರುವ ಪರಿ
ನಮ್ಮೊಳರಿತು ನಾವೀರ್ವರಿಗೆ
ಬಹು ಸಮ್ಮತವಾದಿತು ಸರ್ವರಿಗೆ
ಬಹು ರಮ್ಯವಾಗಿಹುದು ಉಳವಿ ಇಳೆಗೆ ಶರಣರಸ್ಥಲ
ಕರುಣೆ ಬಲಾ ಧರಣಿಗೆ ಫಲಾ
ದೇವ ಬಾಳಲೋಚನ ಭಜಿಸೋ ಗಣಾದಿಗಳ
ಆಲಯಕ್ಹೋಗುವದಕೆ ಆಲಸ್ಯವ್ಯಾಕೋ || ೧೦ ||

ಹೊಡಿಸೋ ನಗಾರಿ ತಮ್ಮಟ ಭೇರಿಕಹಳಿಗಳ
ನಡಿಸೋ ಮುಂದಕೆ ಸೇನೆ ಪೊರಮಡಿಸಿ ಗಡ
ಹೊಡಿಸೋ ಡಂಗುರಾ ನೌಬತ್ತು ಜೋಡಿ ರಥ
ಹಿಡಿಸೋ ಮಾರ್ಗದಿ ತೇಜಿಗಳ ಹೂಡಿಸಿ
ನಡಿ ನೋಡದೆ ಮನಬಾರದೆ ಜಾಡಿಹಾಸಿ ಕ್ಷಣದಿ
ಡಂಕೆಡಮರುಗುವನು ಕೂಡಿಸಿ ಜನರ ಕೈಯಲ್ಲಿ ಕಪ್ಪವ ನೀಡಿಸಿ || ೧೧ ||

ಕೇಳಿದಾಕ್ಷಣ ತಡವಿಲ್ಲದೆ ಗೊರವರು
ಪಾಳ್ಯಸಹಿತ ಪ್ರಭುವಿನ ಸ್ಥಳಕೆ ಹೋಗುವ
ವ್ಯಾಳೆ ಸಾಧಿಸಿತೆಂದು ತಿಳಿ ಮನಕೆ ಗಂಗಿ-
ಮಾಳಿ ಕರಿಸಿಕೊಂಡನಾಕ್ಷಣಕೇ ಹೇಳಿ ರಾಗದಿ
ಪಾಳ್ಯ ಸಾಗದೀ ಬಲು ವೇಗದಿ ಬಂದು
ಗಾಳಿ ಮಂಟಪ ಹತ್ತಿ ಏಳುಕೋಟಿ ಏಂದು
ನಾಲಿಗೆಯಲ್ಲಿಯೆ ನುಡಿಯಬೇಕೆನುತಾ || ೧೨ ||

ಬಾಳ ವಿಲಾಸದಿಂದಲಿ ಮೇಳ್ಗೊಂಡು ನಡೆದರು
ಮೇಲಗೈ ಯಲ್ಲಾಪುರಕ ವಸ್ತಿಮಾಡಿ ಮುಂದೆ
ಕಾಲ್ಬಲಕೂಡಿ ಕಾನನದಿ ಕವಿದು
ಅಲ್ಲೆ ಸಾಲ್‍ಗ್ರಾಮ ಗಿಡದೊಳು ತಾನೆ ಕೂಡಿ
ಸುತ್ತ ಸುಳಿದಾರೊ ಮತ್ತೆ ಹುಳೇದಾರೊ
ಗೊತ್ತು ತಿಳಿದಾರೊ ಪ್ಪಥ್ವಿಪಾಲ ಚನ್ನಬಸವನ
ಹತ್ತರ ಗಡಿದಾಟಿ ಮತ್ತೆ ಗಣೇಶನ ಘಟ್ಟಕಿಳಿದಾರು || ೧೩ ||

ಸಧ್ಯಕ್ಕೆ ಶರಣರ ಕಾಣಬೇಕನುತಲಿ
ರುದ್ರಾಕ್ಷಿ ಮಠವ ದಾಟಿ ಬಂದು ನಮ-
ಗುದ್ದರಿಸು ಮಾತಾಡಿ ನಿ೦ದು
ಲೋಕರಾದಿಗೆ ಕಾಯ ಕರ್ಪುರವ ತಂದು
ಬುದ್ಧಿ ಮೌನದಿ ಸಿದ್ಧ ಜ್ಞಾನದಿ ಎದ್ದು ಹವಣಿಸಿದಿ
ತಿದ್ದಿ ಮಂತ್ರವ ಜಪಿಸುತ ಮಹೇಶ ಮಂಡಲದೇವ-
ರಿದ್ದ ಸ್ಥಳಕ್ಕೆ ಹೋಗಿ ಮಧ್ಯಾನ್ಹಕೆರಗಿ ||೧೪ ||

ಥಳಥಳಿಸುವ ಉಳವಿಯ ಘನ ಕಾನನ ಅರ-
ಗಿಳಿಗಳು ಸ್ವರಪಾಡುವದಕೆ
ಕೇಳಿ ಮನಕೆ ವಿಲಾಸವ ಬೇಡುವದಕೆ
ಅಲ್ಲೇ ಚಲುವಾದ ಸ್ಥಳ ಒಂದೇ ನೋಡುವದಕೆ
ಬಂದು ಇಳಿದಾರು ಹೊಂದಿ ಸುಳಿದಾರು
ನಿಂದು ತಿಳಿದಾರು ಅಂದು ಚೆನ್ನಾಗಿ ಬಂದು
ಕಿನ್ನರಿ ಬ್ರಹ್ಮನ ಹೊಳಿಯೊಳು ಮುಳುಗಿ
ಸ್ನಾನಮಾಡಿ ಉಣಬಡಿಸಿದರು || ೧೫ ||
ಲಾಲಿಪುದೀ ಮಾತು ಕಾಲಜ್ಞಾನದ ಸೂಚು
ತಾಳಿಕೊಂಡ್ಹೇಳುವ ಕಲಿಗೆ ತಿಳಿ
ಸತ್ಯ ಕೈಲಾಸಪತಿಯೆಂದು ಬಿರುದಾವಳಿ
ಸುತ್ತಿ ಸೂಳಯಿಸಿ ಗೊರವನು ಸಾರುತಲಿ
ಹಾಲು ಹಣ್ಣುಗಳು ತುಂಬಿ ಡೋಣಿಯೊಳು ಉಂಡು ಪ್ರಾಣಿಗಳು
ಹೀಂಗ ಸಾಲ್ಗೊಂಡು ವಗ್ಗರು ಸವಿದುಂಡು
ಹಿಗ್ಗುತ ಸಲ್ಲ್ಗೊಮ್ಮೆ ಏಳುಕೋಟೆಯಂಬುತಿಹರು || ೧೬ ||

ಈ ಕಾಲದವರ ಆರ್ಭಟಕ್ಕೆ ಶರಣರು
ಆಕಳ ಗವಿಯೊಳಡಗಿದರೂ ಬಹು
ಕಾದೆದ್ದು ಮನಿ ಮನಿ ತೊಡಗಿದರು
ಇಂಥ ಭೀಕರಕಂಜುತ ನಡುಗಿದರು
ಲೋಕ ಸಾಕೆಂದು ಯಾಕೆ ಬೇಕೆಂದು
ಗುಲ್ಲು ಯಾಕೆಂದು ಕಲ್ಲು ಹಾಕಿ ಬಾಗಿಲು ಮುಚ್ಚಿ
ವಿಭೂತಿಯ ಕಣಜದ ವರಿಯೊಳು ಹೊಕ್ಕು ಮರದೊರಗಿದರು || ೧೭ ||

ಕೊಂಗಿ ವಗ್ಗರು ಮಹಾರಂಗು ರಭಸ ಕಂಡು
ಜಂಗಮರೆಲ್ಲರು ಬೆದರುತಿರೆ ಅಲ್ಲೆ
ಜಂಗು ಜೋಳಿಗೆ ಬಿಟ್ಟು ಹೆದರುತಿರೆ
ಇದಕ್ಹಾಂಗಂದು ಮನದೊಳು ಕುದಿಯುತಿರೆ
ಚಿತ್ತ ಬೆದರಿತಲ್ಲ ಹುತ್ತ ಬೆಳದರಿಲ್ಲ
ಗೊತ್ತು ಗೆಡಸಿತಲ್ಲ ಮತ್ತೆ ಲಂಗೋಟಿ
ವಿರಕ್ತರ‍್ಹೆಂಗಾಗಿ ಶಿವಪೂಜಿ ಹಂಗುದೊರೆದು ನಿಂತು
ಹಳುವದೋಳ್ ಹೊಕ್ಕು || ೧೮ ||

ಪೊಡವಿಪರಿವರು ಮೂವರು ಕೂಡಿ
ನಡೆವರು ಬಿಡದೆ ಆ ಕಾಡೊಳು ದುಡುಕುತಲಿ ಬಿದ್ದು
ಧಾತ್ರಿಯೊಳು ನಾಡಜಾತ್ರಿಯೊಳು ಆಡಿ ಪತ್ರದೊಳು
ಗಡಿಬಂದು ಗುಡಿಹೊಕ್ಕು ನೋಡುತಿರೆ ಒಂದು
ಕೂಡಿ ಶಿಲಾಮೂರ್ತಿ ಕಂಡೆರಗಿದರು ||೧೯||

ಶ್ರೀ ಚನ್ನಬಸವ ಕರುಣದಿಂದ
ಮೂವರಿಗಾ ಸಮಯದಿ ಮಾಯ ದರುಶನದಿ
ಬಂದು ವಾಸನಾದವನು ಮಹೇಶ್ವರ ನೆನದು
ಸುವಿಲಾಸದಿ ಮಾತಾಡಿ ವರುಷಾವಧಿ
ಮಾಘಮಾಸದಿ ರಾಗ ಲೇಸದಿ
ಕೂಗಿ ತೋಷದಿ ಮತ್ತೆ ಸುಮತಿಗೆ
ನಾವು ಬರುವದರೊಳು ಮುಂಚೆ ವಾಸಿಸುತಿಹ ಕಲಿಸೂಚನಿಕರು ||೨೦||

ಹೀಗೆಂದು ವರವ ಪಾಲಿಸಿದಾ ಸದ್ಗುರುವರ
ಸಾಗೆಂದು ಶಿರದೊಳು ಕರವನಿಟ್ಟು ಭೋಗಿ
ಆಗೆಂದು ಸ್ಥಿರಭಾಗ್ಯ ಆಗಲೆಂದು
ಬಹುರಾಗದಿ ಅಭಯನಿತ್ತು ಕುರುಹನಿತ್ತು
ಗಣ ಶರಣರು ಮಹಾಕರುಣಿಗಳು ಹರನೊಡವಿನೊಳು
ಮಹಾಯೋಗೀಂದ್ರ ಶಿಶುನಾಳಧೀಶನ ಪಾದಕ್ಕೆ
ಬೇಗನೆ ಏಳುಕೋಟಿ ದ್ರವ್ಯ ನೀಡೆನುತ || ೨೧ ||
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...