Home / ಕವನ / ಕವಿತೆ / ಹಿರಿಯ ದಾನಿ

ಹಿರಿಯ ದಾನಿ

ಕುರುಡನೊಬ್ಬ ಕೋಲನೂರಿ
ಮರದ ಕೆಳಗೆ ನಿಂದಿರುತ್ತ
ಕರವ ನೀಡಿ ಬೇಡುತಿದ್ದ
ಪುರದ ಜನರನು,

“ಹುಟ್ಟು ಕುರುಡ ಕಾಸನೀಡಿ
ಹೊಟ್ಟೆಗಿಲ್ಲ ದಯವ ತೋರಿ
ಬಟ್ಟೆಯೆಂಬುದರಿಯೆ” ಎಂದು
ಪಟ್ಟಣಿಗರನು.

ಬೇಡುತಿದ್ದ ದೈನ್ಯದಿಂದ
ಆಡುತಿದ್ದ ಶಿವನ ಮಾತ
“ಮಾಡಿರಯ್ಯ ಧರ್ಮವನ್ನು
ನೋಡಿ ಹೋಗದೆ.”

ಬಂದರಲ್ಲಿ ಪುರದ ಜನರು
ಮಂದಿಯೆನಿತೊ ಲೆಕ್ಕವಿಲ್ಲ
ಒಂದು ಕಾಸು ಕೊಡದೆಯವಗೆ
ಮುಂದೆ ನಡೆದರು.

ದೊಡ್ಡ ನಾಮ ದೊಡ್ಡ ಮುದ್ರೆ
ಅಡ್ಡಬೂದಿ ನಡೆದುವೆಷ್ಟೊ
ಗೊಡ್ಡು ತತ್ವ ಹೇಳಿಕೊಂಡು
ಜಡ್ಡು ಹಿಡಿದವು.

ಹಿರಿದು ಸರಿಗೆ ಹಿರಿದು ಪೇಟ
ಸರಿದು ನಡೆದ ಸಾಹುಕಾರ
ಕುರುಡನಾರೊ ತಿಳಿದು ಹೇಳಿ
ಅರಿಯ ಬಲ್ಲಡೆ.

ಚಲನ ಚಿತ್ರ ನೋಡಲೆಂದು
ಕಲೆಯ ತಿರುಳ ನೋಡಲೆಂದು
ಮಲಿನಮನರು ಹೋದರೆಷ್ಟೊ
ನಲಿಯುತಲ್ಲಿಗೆ.

ಎನಿತು ಜನರು ಬಂದರೇನು
ಎನಿತು ಜನರು ಹೋದರೇನು
ನೆನೆದರಿಲ್ಲ ಕುರುಡನಿರವ
ಮನದ ರಂಗದಿ.

“ಇವನ ಕೂಗು ಕಿವಿಗೆ ಅಲಗು
ಇವನ ರೂಪು ಕಣ್ಗೆ ಘೋರ
ಜವನ ಪುರಕೆ ಹೋಗದೇಕೆ
ಇವನು ನಿಂತನು.

ಪಾಪಮಾಡಿ ಕುರುಡನಾಗಿ
ತಾಪಬಡುತ ಕೊರಗಿ ಸೊರಗಿ
ಈ ಪುರದಲಿ ಬಂದು ನಿಂದು
ರೂಪುಗೆಡಿಪನು.”

ಹೀಗೆ ಜನರು ಕೆಲರು ಆಡಿ
ಹೋಗುತಿರಲು ಬೀದಿಯಲ್ಲಿ
ಕೂಗಿ ಕೂಗಿ ಕುರುಡನವನು
ಬಾಗಿ ನಿಂದನು.

ಕಾಲುಗಂಜಿಗಳಲಿ ತೊಳಲಿ
ಕೂಲಿಮಾಡಿ ಉಂಬ ಹೆಣ್ಣು
ಆಲಿಸುತ್ತ ಅವನ ಕೂಗ
ಸೋತು ಬಂದಳು.

ಹಣ್ಣು ಮಡಲಲಿಟ್ಟುಕೊಂಡು
ಹೆಣ್ಣು ಮಗಳು ಬಂದಳವಳು,
ಕಣ್ಣು ಅರಳೆ ನೋಡಿಯವನ
“ಅಣ್ಣ!” ಎಂದಳು.

ಸೊಗದ ಮಾತು ಸುಧೆಯ ಮಾತು
ಬಗೆಯ ಹಿಡಿವ ನಲ್ಮೆವಾತು
ಪುಗಲು ಕಿವಿಯ “ಶಿವನೆ!” ಎಂದು
ಮೊಗವನೆತ್ತಿದ.

“ಕಾಸ ನೀಡಿ ಧರ್ಮದವರು
ಲೇಸನೀವ ಶಿವನು ನಿಮಗೆ
ಹೇಸಬೇಡಿ ಕುರುಡನೆಂದು
ಘಾಸಿಪಟ್ಟೆನು.”

“ಕಾಸು ಎನ್ನ ಬಳಿಯೊಳಿಲ್ಲ
ಕಾಸು ಕೊಟ್ಟು ಕೊಂಡೆ ಹಣ್ಣ
ಆಸೆಪಟ್ಟು ತಿನ್ನಲೆಂದು
ಈಸು ನಿನಗಿದೆ.”

ಮಡಲಲಿದ್ದ ಹಣ್ಣ ತೆಗೆದು
ಎಡದ ಕೈಯಲದನು ಹಿಡಿದು
ನಡುವ ಮರೆಯ ಚೂರಿಯಿಂದ
ಒಡನೆ ಕೊಯ್ದಳು.

ಹಣ್ಣಿನೊಳಗೆ ರಸದ ಮಾವು
ಬಣ್ಣತೀವಿ ಬೆಳೆದ ಮಾವು
“ಅಣ್ಣ ಕೊಳೊ” ಎಂದು ಕೈಗೆ
ಉಣ್ಣಲಿತ್ತಳು.

“ಶಿವನೆ!” ಎಂದು ಕಣ್ಗೆ ಒತ್ತಿ
“ಶಿವನೆ!” ಎಂದು ಎದೆಗೆ ಒತ್ತಿ
ಶಿವನ ಮಾತಿನೊಡನೆ ಹಣ್ಣ
ಸವಿಯು ಹೆಚ್ಚಲು,

ತಿಂದು ಕುರುಡ ಕೈಯ ಮುಗಿದ
ಇಂದುಧರನು ಮೆಚ್ಚುತಿರಲು
ನಿಂದ ಮಗಳು ಧರೆಗೆ ಬಗ್ಗಿ
ವಂದಿಸೆದ್ದಳು.

ಅವಳ ಕಣ್ಗೆ ಕುರುಡನಲ್ಲ
ಶಿವನೆ ಎಂದು ತಿಳಿದಳವಳು
ಅವನ ಮನಕೆ ಹೆಣ್ಣದಲ್ಲ
ಶಿವನ ಕಂಡನು.

ಕಣ್ಣು ಇದ್ದು ಕುರುಡರೆಷ್ಟೊ
ಮಣ್ಣು ಹಿಡಿವ ಕಲ್ಲು ಹಿಡಿವ
ಬಣ್ಣ ಬಳೆವ ಬೀಗಿ ಮೆರೆವ
ಸಣ್ಣ ಮನುಜರು.

ಮೇಲು ಜಾತಿ ಕೀಳು ಜಾತಿ
ನೂಲು ಜಾತಿ ಎನಲು ಬೇಡ
ಶೂಲಿಯೊಲಿದ ಜಾತಿಯಲ್ಲಿ
ಶೀಲ ದೊಡ್ಡದು.

ದೀನನಲ್ಲಿ ದೇವನಿಹನು
ದಾನಿಯಲ್ಲಿ ದೇವನಿಹನು
ದೀನ ದಾನಿಯಲ್ಲದವರ
ಶ್ವಾನ ಎಂಬುದು.

ಕುರುಡ ಕುಂಟ ಹೆಳವರಲ್ಲಿ
ಮರುಕಗೊಂಡು ಬೋನವಿಕ್ಕು
ಹರನು ಮೆಚ್ಚಿ ತೇಗಿ ತಾನು
ಹರಸಿ ಪೊರೆವನು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...