Home / ಕಥೆ / ಕಿರು ಕಥೆ / ನಕ್ಕಾಂವ ಗೆದ್ದಾಂವ

ನಕ್ಕಾಂವ ಗೆದ್ದಾಂವ

ಪತ್ರಕರ್ತನೊಬ್ಬ ಆ ಕಲಾವಿದನನ್ನು ಸಂದರ್ಶಿಸಲು ಬಂದ. ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ತನ್ನ ಹಾಸ್ಯ ನಟನೆಯಿಂದ ಪ್ರಖ್ಯಾತಿ ಪಡೆದ ಕಲಾವಿದನ ಎದುರು ಕುಳಿತು ನೇರವಾಗಿ ಮಾತಿಗಿಳಿದ:

“ನಿಮಗೆ ನಗಿಸುವ ಕಲೆ ಹೇಗೆ ಕರಗತವಾಯಿತು?”

“ದುಃಖದ ಕಡಲಲ್ಲಿ ಮುಳುಮುಳುಗಿ ಎದ್ದಿದ್ದರಿಂದ” ಕಲಾವಿದ ಉತ್ತರಿಸಿದ.

“ನೀವು ಅಳುವ ಪಾತ್ರಗಳನ್ನು ಮಾಡಲೇ ಇಲ್ಲ.”

“ಅಳುವವರನ್ನು ಈ ಜಗತ್ತು ಇಷ್ಟ ಪಡುವುದಿಲ್ಲ.”

“ನಿಮ್ಮ ನಗೆಯ ಹಿಂದೆ ನೋವು ಅಡಗಿರುವುದೆಂದು ಅನುಮಾನ ನನಗೆ.”

“ಆ ನೋವು ನನ್ನದು. ಅದು ನನ್ನೊಂದಿಗೆ ಕೊನೆಯಾಗುವುದು.”

“ದುಃಖವನ್ನು ಪ್ರಪಂಚದೊಂದಿಗೆ ಹಂಚಿಕೊಂಡರೆ ನೆಮ್ಮದಿ ಅನಿಸುವುದು.”

“ಜನರು ಯಾವಾಗಲೂ ಸಂತೋಷದ ಸಂಗತಿಗಳನ್ನು ಬಯಸುತ್ತಾರೆ. ಅವರೆದೆಗೆ ಸಂಕಟದ ಕಣ್ಣೀರು ಬಸಿದು ತಳಮಳಿಸುವ ಇಚ್ಛೆ ಇಲ್ಲ.”

“ನಿಮ್ಮ ಮಗನೊಬ್ಬ ಕಾರು ಅಪಘಾತದಲ್ಲಿ ತೀರಿಕೊಂಡನೆಂದು ಕೇಳಿದೆ.”

“ವಯಸ್ಸಿಗೆ ಬಂದ ಒಬ್ಬನೇ ಮಗನಿಗೆ ಕಿಚ್ಚು ಇಟ್ಟೆ. ಒಬ್ಬ ಮಗಳು ಅಳಿಯನಿಂದ ಸುಡಿಸಿಕೊಂಡು ಬೂದಿಯಾದಳು. ಎರಡನೆಯ ಮಗಳು ಕಾರು ಡ್ರೈವರ್‌ನೊಂದಿಗೆ ಓಡಿಹೋದಳು. ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ಸತ್ತಳು. ನನ್ನನ್ನೇ ಪ್ರೀಮಿಸುವ ನಾಟಕವಾಡಿ ಬಂದ ಸತಿ ಶಿರೋಮಣಿ ನನ್ನ ಸಂಪತ್ತು ದೋಚಿಕೊಂಡು ಪರಾರಿಯಾದಳು. ಕೆಲವು ನಿರ್ಮಾಪಕರು ನನಗೆ ಹಣ ಕೊಡದೆ ವಂಚಿಸಿದರು. ಆದರೂ ದೇವರು ನನ್ನನ್ನು ಉಳಿಸಿದ್ದಾನೆ. ಬಹುಶಃ ಲೋಕದ ದುಃಖಿತರನ್ನು ನಗಿಸಲೆಂದೇ ಇರಬೇಕು” ಪಕಪಕನೆ ನಕ್ಕ ಕಲಾವಿದ.

“ನಿಮ್ಮ ಸಹನೆ ಅದ್ಭುತ”

“ಬದುಕಿನ ಪ್ರೀತಿ ಇದ್ದವರಿಗೆ ಸಮಾಧಾನವೂ ಇರಬೇಕು. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರಂಗಭೂಮಿಯಲ್ಲಿ ದುಡಿದಿದ್ದೇನೆ. ಜನರು ನನ್ನ ನಗೆಯಿಂದ ಸಂತೋಷ ಪಡುತ್ತಾರೆ. ಅವರಿಂದ ನನಗೆ ತೃಪ್ತಿಯಿದೆ”.

“ಕೊನೆಗೊಂದು ಪ್ರಶ್ನೆ. ನಾಡಿಗೆ ನಿಮ್ಮ ಸಂದೇಶವೇನು?”

“ನಾನು ಮಹಾತ್ಮನಲ್ಲ, ಪವಾಡಪುರುಷನೂ ಅಲ್ಲ, ದೇವರು ನನಗೆ ನಗಿಸುವ ಕಲೆ ಕೊಟ್ಟಿದ್ದಾನೆ. ಈ ಜೀವ ಇರುವತನಕ ಅಳುವವರನ್ನು ನಾನು ನಗಿಸುತ್ತಲೇ ಇರುತ್ತೇನೆ. ಕವಿಯೊಬ್ಬರು ಹೇಳಿದ್ದಾರೆ ನಕ್ಕಾವ ಗೆದ್ದಾಂವ ಅಂತ. ಅಳುವವರಿಗೆ ಇಲ್ಲಿ ಬದುಕಿಲ್ಲ” ಮತ್ತೆ ನಕ್ಕ ಕಲಾವಿದ.

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...