Home / ಕಥೆ / ಕಿರು ಕಥೆ / ನಕ್ಕಾಂವ ಗೆದ್ದಾಂವ

ನಕ್ಕಾಂವ ಗೆದ್ದಾಂವ

ಪತ್ರಕರ್ತನೊಬ್ಬ ಆ ಕಲಾವಿದನನ್ನು ಸಂದರ್ಶಿಸಲು ಬಂದ. ರಂಗಭೂಮಿ ಮತ್ತು ಸಿನಿಮಾ ಎರಡರಲ್ಲೂ ತನ್ನ ಹಾಸ್ಯ ನಟನೆಯಿಂದ ಪ್ರಖ್ಯಾತಿ ಪಡೆದ ಕಲಾವಿದನ ಎದುರು ಕುಳಿತು ನೇರವಾಗಿ ಮಾತಿಗಿಳಿದ:

“ನಿಮಗೆ ನಗಿಸುವ ಕಲೆ ಹೇಗೆ ಕರಗತವಾಯಿತು?”

“ದುಃಖದ ಕಡಲಲ್ಲಿ ಮುಳುಮುಳುಗಿ ಎದ್ದಿದ್ದರಿಂದ” ಕಲಾವಿದ ಉತ್ತರಿಸಿದ.

“ನೀವು ಅಳುವ ಪಾತ್ರಗಳನ್ನು ಮಾಡಲೇ ಇಲ್ಲ.”

“ಅಳುವವರನ್ನು ಈ ಜಗತ್ತು ಇಷ್ಟ ಪಡುವುದಿಲ್ಲ.”

“ನಿಮ್ಮ ನಗೆಯ ಹಿಂದೆ ನೋವು ಅಡಗಿರುವುದೆಂದು ಅನುಮಾನ ನನಗೆ.”

“ಆ ನೋವು ನನ್ನದು. ಅದು ನನ್ನೊಂದಿಗೆ ಕೊನೆಯಾಗುವುದು.”

“ದುಃಖವನ್ನು ಪ್ರಪಂಚದೊಂದಿಗೆ ಹಂಚಿಕೊಂಡರೆ ನೆಮ್ಮದಿ ಅನಿಸುವುದು.”

“ಜನರು ಯಾವಾಗಲೂ ಸಂತೋಷದ ಸಂಗತಿಗಳನ್ನು ಬಯಸುತ್ತಾರೆ. ಅವರೆದೆಗೆ ಸಂಕಟದ ಕಣ್ಣೀರು ಬಸಿದು ತಳಮಳಿಸುವ ಇಚ್ಛೆ ಇಲ್ಲ.”

“ನಿಮ್ಮ ಮಗನೊಬ್ಬ ಕಾರು ಅಪಘಾತದಲ್ಲಿ ತೀರಿಕೊಂಡನೆಂದು ಕೇಳಿದೆ.”

“ವಯಸ್ಸಿಗೆ ಬಂದ ಒಬ್ಬನೇ ಮಗನಿಗೆ ಕಿಚ್ಚು ಇಟ್ಟೆ. ಒಬ್ಬ ಮಗಳು ಅಳಿಯನಿಂದ ಸುಡಿಸಿಕೊಂಡು ಬೂದಿಯಾದಳು. ಎರಡನೆಯ ಮಗಳು ಕಾರು ಡ್ರೈವರ್‌ನೊಂದಿಗೆ ಓಡಿಹೋದಳು. ಮೊದಲ ಹೆಂಡತಿ ಕ್ಯಾನ್ಸರ್‌ನಿಂದ ಸತ್ತಳು. ನನ್ನನ್ನೇ ಪ್ರೀಮಿಸುವ ನಾಟಕವಾಡಿ ಬಂದ ಸತಿ ಶಿರೋಮಣಿ ನನ್ನ ಸಂಪತ್ತು ದೋಚಿಕೊಂಡು ಪರಾರಿಯಾದಳು. ಕೆಲವು ನಿರ್ಮಾಪಕರು ನನಗೆ ಹಣ ಕೊಡದೆ ವಂಚಿಸಿದರು. ಆದರೂ ದೇವರು ನನ್ನನ್ನು ಉಳಿಸಿದ್ದಾನೆ. ಬಹುಶಃ ಲೋಕದ ದುಃಖಿತರನ್ನು ನಗಿಸಲೆಂದೇ ಇರಬೇಕು” ಪಕಪಕನೆ ನಕ್ಕ ಕಲಾವಿದ.

“ನಿಮ್ಮ ಸಹನೆ ಅದ್ಭುತ”

“ಬದುಕಿನ ಪ್ರೀತಿ ಇದ್ದವರಿಗೆ ಸಮಾಧಾನವೂ ಇರಬೇಕು. ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರಂಗಭೂಮಿಯಲ್ಲಿ ದುಡಿದಿದ್ದೇನೆ. ಜನರು ನನ್ನ ನಗೆಯಿಂದ ಸಂತೋಷ ಪಡುತ್ತಾರೆ. ಅವರಿಂದ ನನಗೆ ತೃಪ್ತಿಯಿದೆ”.

“ಕೊನೆಗೊಂದು ಪ್ರಶ್ನೆ. ನಾಡಿಗೆ ನಿಮ್ಮ ಸಂದೇಶವೇನು?”

“ನಾನು ಮಹಾತ್ಮನಲ್ಲ, ಪವಾಡಪುರುಷನೂ ಅಲ್ಲ, ದೇವರು ನನಗೆ ನಗಿಸುವ ಕಲೆ ಕೊಟ್ಟಿದ್ದಾನೆ. ಈ ಜೀವ ಇರುವತನಕ ಅಳುವವರನ್ನು ನಾನು ನಗಿಸುತ್ತಲೇ ಇರುತ್ತೇನೆ. ಕವಿಯೊಬ್ಬರು ಹೇಳಿದ್ದಾರೆ ನಕ್ಕಾವ ಗೆದ್ದಾಂವ ಅಂತ. ಅಳುವವರಿಗೆ ಇಲ್ಲಿ ಬದುಕಿಲ್ಲ” ಮತ್ತೆ ನಕ್ಕ ಕಲಾವಿದ.

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...