Home / ಕವನ / ಕವಿತೆ / ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ

ಏಸೂರು ತಿರಿಗಿದರು ಬೀಸೋಣಾ ಬಿಡದವ್ವಾ
ಬೀಸೋಣ ಬರ್ರೆವ್ವ ಹಾಡ್ಯಾಡಿ ||ಪ||

ಹಸ್ತಿನಿ ಚತ್ತಿನಿ ಶಂಖಿನಿ ಪದ್ಮಿನಿ
ಕರಿತಾರೆ ಬರ್ರೆವ್ವ ಕೂಡಿ ||ಅ.ಪ.||

ದೇಹವೆಂಬುವ ಬೀಸುಕಲ್ಲು ಶಿವಪುರದಾಗ
ಉಪ್ಪಾರನ ಕೈಲೆ ಹೊಡಿಸಿ
ಮೇಲೆ ಗಂಟಲು ಮ್ಯಾಗಿನ ಪಾಳಿಗೆ
ನಡುಮಧ್ಯದಿ ಬಾಯಿ ತೆಗಸಿ
ಕೆಳಗಿನ ಪಾಳಿಗೆ ಮಲಮೂತ್ರ ಬಿಡುತಿಹ
ಅಸವಲ್ಲದೊಂದ ತೂತ ತಗಸಿ
ತಕ್ಕಂಥ ಗೂಟವು ಕಾಯ ಮರದ ಮ್ಯಾಗ
ಸಾಗವಾನಿಯ ಕಟಗಿಯ ತರಿಸಿ
ಸವ್ವಾನೂರು ವರ್ಷ ಬಾಳುವ ಗೂಟಕ್ಕೆ
ಮೇಲೊಂದ ಅಣಸನು ಜಡಿಸಿ
ನಾನು ಬೇಕಾಗಿ ಬೀಸೇನೇ ಕಲ್ಲು ತರಿಸಿದ್ದೆನೇ
ಸೂತ್ರ ಎಂಬುವ ಚಿತ್ರ ತೆಗಸಿದ್ದೇನೇ
ವಾಯು ದೇಹವೆಂಬುವ ಪಿರಿಕಿ ಹಾಕಿದ್ದೇನೇ
ಇಂಥಾ ಕಲ್ಲು ಸಮತೋಲು ನಿಜಮನವೆಂಬ ಜಾಗದಾಗ ನಡಸಿದ್ದೆನೇ
ನಾರಿ ಕರಿಯುವನೇ ನಾರೇರು ಎಲ್ಲಾರು ಬರ್ರೆವ್ವ ಭದ್ರ್ಯಾರು ಕೂಡಿ ||೧||

ಅಬ್ಬರೆಂಬುವ ಗೋದಿ ಕಡಲಿಯ ತಂದು
ತನುವೆಂಬಂತಸ್ತದಿ ತೋಯಿಸಿ
ಮನದ ಮೈಲಿಗೆಯೆಂಬ ಮ್ಯಾಗಿನ ತೌಡು
ಅನುವಿಂದ ಒಳ್ಳಾಗ ಕುಟ್ಟಿಸಿ ತೆಗದು
ಸುಜ್ಞಾನವೆಂಬುವ ಧೂಳವ ಕೇರಿಸಿ
ಬುದ್ಧಿಯೆಂಬುವ ಬುಟ್ಟಿಯನು ತುಂಬಿಸಿ
ಧರ್ಮಯೆಂಬುವಂಥಾ ಬಲಗೈಲೆ
ಒಂದೊಂದು ಹಿಡಿ ಹಿಡಿ ಮುಕ್ಕನೆ ನಾ ಹಾಕಿಸಿ
ಕರ್ಮವೆಂಬುವಂಥಾ ಎಡಗೈಲೆ
ತಿರುತಿರುವಿ ಸಣ್ಣಾಗಿ ಮುಕ್ಕನುರಿಸಿ
ತ್ರಿಗುಣೆಂಬ ಹಿಟ್ಟನು ಗೂಡಿಸಿದ್ದೆನೇ
ಒಂಬತ್ತು ತೂತಿನ ಸಾಣಿಗೀಲೆ ಸಾಣಿಸಿದ್ದೆನೇ
ಇಂಥಾ ಹಿಟ್ಟು ಬಚ್ಚಿಟ್ಟು
ಆತ್ಮವೆಂಬುವ ಅಮೃತದ ಗಡಿಗಿ ತುಂಬಿಸಿದ್ದೆನೇ
ತಾಯಿ ಮಾಯಿ ತಾಯವ್ವನ ಕರಕೊಂಡು ನಡಿರೆವ್ವ ಅಡಗೀಯ ಮಾಡೀ ||೨||

ಅನುಭವ ತನುಭವ ಚಿನುಮಯವೆಂಬುವ ಮೂರು ಒಲಿಯ ಗುಂಡು ಹೂಡಿ
ಕಾಮಕ್ರೋಧವೆಂಬ ಕಾಡಕಟ್ಟಿಗಿ ಸುಟ್ಟು ಬೇಗ ಒಲಿಯ ಪುಟಮಾಡಿ
ಪಂಚತತ್ವದಿಂದ ಪಕ್ವಾನ್ನ ಮಾಡಿ
ಗಡಿಗೆ ಇಳುವಿದ್ದೇನ್ರೇ ಪಟ್ಟಿ ತೀಡೀದ್ದೇನ್ರೇ
ಸಪ್ತಭೂತಂಗಳಿಗೆ ಗುಪ್ತ ಅಡಗಿಯ ಮಾಡಿ
ಹೊತ್ತಿದ್ದನ್ನವನು ನೀಡಿ
ಅನ್ನವು ತೀರಿತು ಗಡಿಗೆಯು ಒಡದೀತು
ಒಲಿಗುಂಡು ಬಿತ್ತ್ರೆವ್ವ ಒಂದು ಕಡಿ
ಕಾಳು ಕಡಿಗಾಯಿತು ಕಲ್ಲು ಇಲ್ಲುಳದಿತು
ಇನ್ನೆಲ್ಲಿ ಬಂದೀತು ಭೂಮಿ ಮೂಡಿ ನಾನು
ಕಾಳು ಹೋದಿಂದೆ ಮ್ಯಾಳ ಮುರಿದು ಗೀಳಾದೆ
ಸಾಧು ಸಾಧಕರೊಳು ವ್ಯಾಳಗಳದೆ
ಸುಳ್ಳೇ ಸಂಸಾರದೊಳು ಬಿದ್ದೆ ಪಾಪ ಹೊದ್ದೆ
ಪೊಡವಿಪ ಶಿಶುನಾಳಧೀಶನ ದಯದಿಂದ
ಕಡೆಗೆ ನಾ ಮುಕ್ತಿಯ ಕಂಡೇ ||೩||
*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...