Home / ಲೇಖನ / ಇತರೆ / ಕವಿ, ಪ್ರೇಮಿ, ಹುಚ್ಚ

ಕವಿ, ಪ್ರೇಮಿ, ಹುಚ್ಚ

ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್
ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್

ಪ್ರಿಯ ಸಖಿ,
ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು  ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು ಅರಳಿಸುವ ಶಕ್ತಿ, ಪ್ರತಿಭೆ ಹೊರಹಾಕುವ ಒಂದು ಮಾರ್ಗ, ಬೌದ್ಧಿಕ ಆಟ, ಹಣ ಹೆಸರು ಮಾಡುವ ಒಂದು ದಾರಿ, ಆತ್ಮಸಂತೋಷ ನೀಡುವ ಸಾಧನ… ಹೀಗೆ ಒಬ್ಬೊಬ್ಬರದು ಒಂದೊಂದು ಉತ್ತರ. ಹಾಗೆ ನೋಡಿದರೆ ಕವಿತೆಯೊಂದು ಹೀಗೆ ಇರಬೇಕು. ಇಷ್ಟು ಸಾಲುಗಳು ಇಂತದೇ ರೂಪದಲ್ಲಿರಬೇಕು ಎಂದು ಯಾರೂ ಚೌಕಟ್ಟು ಹಾಕುವಂತಿಲ್ಲ. ಏಕೆಂದರೆ ಕಾವ್ಯ ಸೃಷ್ಟಿಯೆಂಬುದು ಅತ್ಯಂತ ವೈಯಕ್ತಿಕವಾದ ಸೃಜನಶೀಲ ಸೃಷ್ಠಿಕ್ರಿಯೆ. ಎಲ್ಲ ಚೌಕಟ್ಟುಗಳನ್ನು ಮೀರಿ ಕಾವ್ಯ ರಚಿಸುವುದೇ ಹೊಸ ಕಾವ್ಯದ ಸೃಷ್ಠಿಗೆ ಕಾರಣವಾಗುತ್ತದೆ!

ಎಷ್ಟೋ ಬಾರಿ ಕವನಗಳು ಓದುಗರಿಗೆ ಅರ್ಥವಾಗದೇ ಇರುವುದೂ ಉಂಟು. ಕವಿಯ ಭಾವೋತ್ಕಟತೆಯ ಹಂತವಮ್ನ ಮುಟ್ಟದೇ ಕಾವ್ಯದೊಳಗೆ ಪರಕಾಯ ಪ್ರವೇಶವನ್ನು ಮಾಡದ ಹೊರತು ಸಹೃದಯನಿಗೆ ಕವಿತೆ ಅರ್ಥವಾಗುವುದು ಸಾಧ್ಯವಿಲ್ಲ. ಹೀಗೆಂದೇ ಕವಿತೆಯೊಂದರ ಓದು ಬೇರೆ ಪ್ರಕಾರಗಳ ಸಾಹಿತ್ಯದ ಓದಿಗಿಂತಾ ಹೆಚ್ಚಿನ ಏಕಾಗ್ರತೆಯನ್ನು, ಏಕಾಂತವನ್ನು, ನಿರ್ಮಲ ಪ್ರಶಾಂತ ಮನಸ್ಥಿತಿಯನ್ನು ಅರ್ಥೈಸುವಿಕೆಯ ನಿಟ್ಟಿನಲ್ಲಿ ದೀರ್ಘಸಮಯವನ್ನು ಬಯಸುತ್ತದೆ.

ಕವಿ, ಪ್ರೇಮಿ, ಹುಚ್ಚ ಇವರು ಮೂವರು ಹೆಚ್ಚು ಕಡಿಮೆ ಒಂದೇ ಮನಸ್ಥಿತಿಯವರೆಂದು ಹಿಂದಿನಿಂದ ಹೇಳುತ್ತಾ ಬಂದಿದ್ದಾರೆ. ಹುಚ್ಚನ ಮನೋವ್ಯಾಪಾರ ಸಾಮಾನ್ಯರಿಗೆ ನಿಲುಕುವಂತಹದ್ದಲ್ಲ. ಅವನು ಭಾವೋತ್ಕರ್ಷದಲ್ಲಿ ಮಾತನಾಡುವಾಗ ಎದುರಿನವರಿಗೆ ಅದರ ಹಿನ್ನೆಲೆ, ತಲೆಬುಡ ಒಂದೂ ತಿಳಿಯುವುದಿಲ್ಲ. ಪ್ರೇಮಿಯೊಬ್ಬನ ಸ್ಥಿತಿಯೂ ಇಂತಹುದೇ ಉತ್ಕಟ ಪ್ರೇಮದ ಅಮಲಿನಲ್ಲಿರುವವನಿಗೆ/ಳಿಗೆ, ಪ್ರಪಂಚದ ತುಂಬೆಲ್ಲಾ ತನ್ನ ಪ್ರೇಮಿಯ ಪ್ರತಿರೂಪವೇ ಕಾಣುತ್ತಿರುತ್ತದೆ. ಹಗಲುಗನಸು ಕಾಣುತ್ತಾ ಲೋಕವನ್ನೇ ಮರೆತು ತಮ್ಮಷ್ಟಕ್ಕೆ ನಗುತ್ತಿರುವುದು ಪ್ರೇಮ ತೀವ್ರತೆಯಲ್ಲಿ ನಡೆಸುವ ಹುಚ್ಚಾಟಗಳು, ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಸಹಜವಾಗಿ ಅದವರಿಗೆ ಒಂದು ರೀತಿಯ ಹುಚ್ಚು ಎನ್ನಿಸುತ್ತದೆ. ಹಾಗೇ ಕವಿ ಕೂಡ. ಭಾವಜೀವಿಯಾದ ತನ್ನ ಭಾವತೀವ್ರತೆಯಲ್ಲಿ ಉಕ್ಕಿದ ಭಾವನೆಗಳನ್ನು ಕವನವಾಗಿಸುವ ಅವನ ಮನಸ್ಥಿತಿಯೂ ಎಲ್ಲರಿಗೂ ಅರ್ಥವಾಗುವಂತಹುದಲ್ಲ.

ಉಕ್ಕುವ ಕಡಲಾಗಿಬಿಟ್ಟೆ
ಬಯಲಿನ ಒಡಲಾಗಿಬಿಟ್ಟೆ
ಈ ಜಗದ ತಾಯಾಗಿಬಿಟ್ಟೆ!
ಎಂಬ ಸಾಲುಗಳನ್ನು ಓದಿದಾಗ ಹೀಗಾಗಲು ವಾಸ್ತವದಲ್ಲಿ ಎಂದಾದರೂ ಸಾಧ್ಯವೇ? ಎನಿಸಿ ಬಿಡುತ್ತದೆ. ಆದರೆ ಕವಿಯ ಭಾವ ಲೋಕದ ತೀವ್ರ ಸ್ಪಂದನೆಯಲ್ಲಿ ಎಲ್ಲವೂ ಸಾಧ್ಯ. ಈ ನಿಟ್ಟಿನಲ್ಲಿ ಕವಿಯೂ ಕೂಡ ಅರ್ಥವಾಗದವನೇ ! ಅವನನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಹೀಗಿರಬಹುದು, ಹಾಗಿರಬಹುದು ಎಂದು ಆರೋಪಿಸಿಕೊಂಡು ಕವನವನ್ನು ಓದುವವರೇ, ಅರ್ಥೈಸಿಕೊಳ್ಳುವವರೇ ಬಹುಮಂದಿ!

ಸಖಿ, ಕವಿ, ಹುಚ್ಚ, ಪ್ರೇಮಿಗಳು ಅರ್ಥವಾಗಲು ಅವರಂತದೇ ಸೂಕ್ಷ್ಮ ಸಂವೇದನೆಗಳುಳ್ಳ ಸಹೃದಯರಿಗೆ ಮಾತ್ರ ಸಾಧ್ಯ ಅಲ್ಲವೇ ? ಅಂತಹ ಸಹೃದಯರು ಇರಲಿ ಬಿಡಲಿ ಕವಿ, ಪ್ರೇಮಿಗಳು ಮಾತ್ರ ಎಲ್ಲ ಕಾಲದಲ್ಲೂ ಇರುತ್ತಾರೆ. ತಮ್ಮ ಸಂವೇವನೆಗಳನ್ನು ತಮ್ಮದೇ ಭಾವಲೋಕದ ಭಾಷೆಯಲ್ಲಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲವೇ ಸಖಿ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...