Home / ಲೇಖನ / ಇತರೆ / ನಿಂತ ನೀರ ಕಲಕಬೇಡಿ

ನಿಂತ ನೀರ ಕಲಕಬೇಡಿ

ಪ್ರಿಯ ಸಖಿ,
ಕೆಲವರಿಗೆ ಅನ್ಯರ ಖಾಸಗಿ ಬದುಕಿನ ಒಳ-ಹೊರಗನ್ನು ಕೆದಕುವುದೆಂದರೆ ಬಹುಪ್ರಿಯ. ತಮ್ಮ ಬದುಕಿನ ಬಟ್ಟೆ ಚಿಂದಿಚಿಂದಿಯಾಗಿದ್ದರೂ ಅನ್ಯರ ಬದುಕಿನ ಬಟ್ಟೆಯ ಸಣ್ಣ ತೂತಿನಲ್ಲಿ ಕೈಯಾಡಿಸುವುದು. ಅದನ್ನು ಮತ್ತಷ್ಟು ಹರಿಯುವುದು ಇಂತಹಾ ಕೀಳು ಅಭಿರುಚಿ. ಇದನ್ನು ಕಂಡ ಕವಿ ಎನ್. ಎಸ್. ಲಕ್ಷ್ಮೀನಾರಾಯಣಭಟ್ಟರು ತಮ್ಮ ‘ನಿಂತ ನೀರ ಕಲಕಬೇಡಿ” ಎಂಬ ಕವನದಲ್ಲಿ
ನಿಂತ ನೀರ ಕಲಕಬೇಡಿ ಕಲ್ಲುಗಳೇ
ಹೂದಳಗಳ ಇರಿಯಬೇಡಿ ಮುಳ್ಳುಗಳೇ
ಏನಿದೆಯೋ ನೋವು ಅದಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೇ
ಎನ್ನುತ್ತಾರೆ. ಎಷ್ಟೊಂದು ಮಾರ್ಮಿಕವಾದ ಮಾತಲ್ಲವೇ ಸಖಿ? ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಗಿ ಬದುಕೊಂದು ಇದ್ದೇ ಇರುತ್ತದೆ. ಅಲ್ಲಿ ನೋವು,
ದುಃಖ, ದುಮ್ಮಾನ, ಹೇಳಲಾಗದ ಅನೇಕ ಭಾವಗಳು ಮಡುಗಟ್ಟಿ ನಿಂತಿರುತ್ತವೆ. ಅದನ್ನು ಕಲಕಲು, ಕೆದಕಲು, ಯಾರಿಗೂ ಅಧಿಕಾರ ಇರುವುದಿಲ್ಲ. ಆದರೆ ಕೆಲವು ಅಧಿಕಪ್ರಸಂಗಿಗಳು ಅನ್ಯರ ಖಾಸಗಿ ಬದುಕಿನಲ್ಲಿ ಮೂಗು ತೂರಿಸಿ ಅವರಿಗೆ ಹಿಂಸೆ ನೀಡಿ ತಾವು ವಿಚಿತ್ರ ಸುಖವನ್ನು ಅನುಭವಿಸುತ್ತಾರೆ. ಕವನದ ಕೊನೆಯಲ್ಲಿ ಇಂತಹವರಿಗೆ ಕವಿ
ಯಾವ ಜೀವ ಯಾವ ನೋವಿಗೀಡೋ
ಯಾವ ಭಾವ ನೆಮ್ಮಿ ಅದರ ಪಾಡೋ
ಮಾಡಲು ಬಿಡಿ ತನ್ನ ಯಾತ್ರೆ ತಾನು
ನೀಡಲು ಬಿಡಿ ತನ್ನೊಳಗಿನ ಜೇನು
ಎಂದು ಹೇಳುತ್ತಾರೆ. ಯಾವ ಜೀವಿಗೆ ಅವನ ಅಂತರಾಳದಲ್ಲಿ ಯಾವ ನೋವಿದೆಯೋ? ಯಾವ ಭಾರ್ವೊತ್ಕರ್ಷದಲ್ಲಿ ಅವನು ಬೇಯುತ್ತಿದ್ದಾನೋ ಅವನ ನೋವನ್ನು ಅವನೇ ಅನುಭವಿಸಬೇಕು. ಅದನ್ನು ಕೆದಕಿ ಮತ್ತಷ್ಟು ನೋವು ಕೊಡುವುದರ ಬದಲು ಅವನು ಏಕಾಂತದಲ್ಲಿ ತಾನೇ ನೋವನನುಭವಿಸಿ ಅದರಲ್ಲೇ ಮಾಗಿ ಪರಿಪಕ್ವವಾಗಿ
ನೋವೆಲ್ಲವ ನುಂಗಿ ಸಿಹಿಯಾದ ಜೇನನ್ನು ಕೊಡುವವರೆಗೂ ಕಾಯೋಣ ಎನ್ನುತ್ತಾರೆ ಕವಿ. ನಿಜಕ್ಕೂ ಇದೇ ಸರಿಯಾದ ಮಾರ್ಗವೂ ಅಲ್ಲವೇ ಸಖಿ?
*****

Tagged:

One Comment

  • ರಾಮಚಂದ್ರ ಕುಲಕರ್ಣಿ.
    Reply

    ಭಾವಗೀತೆಯ ಭಾವ ಅರ್ಥ ತುಂಬಾ ಸೊಗಸಾಗಿದೆ. ಪ್ರತಿಯೊಂದು ಶಬ್ದ ಕೂಡ ಅರ್ಥ ಕೊಡುತ್ತ ಸಾಗುತ್ತೆ. ಹಾಡತ ಇರೋಣ ಅನಿಸುತ್ತೆ. ಲಕ್ಷ್ಮೀನಾರಾಯಣ ಭಟ್ಟರಿಗೆ ಅನಂತ ಧನ್ಯವಾದಗಳು.🙏🙏🙏

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...