Home / ಕವನ / ಕವಿತೆ / ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಕತೆಯಾ ಕೇಳಿರಣ್ಣ
ಕಲ್ಲು ಮನಸಿನ
ಮುಳ್ಳು ಜನಗಳು
ಹೂವು ಕೊಲ್ಲುವಂಥ ||

ಅಲ್ಪನ ಐಶ್ವರ್ಯ
ಮಾಡುವ ಆಶ್ಚರ್ಯ
ಎತ್ತ ನೋಡಿದರೂ
ಕೊಲ್ಲುವ ಕೊಲ್ಲುವ ||

ಬದುಕೆಲ್ಲ ಬಂಡೆಯು
ಹಸಿವು ರಕ್ಕಸಿಯು
ಎಣಿಸಿದ ದುಡ್ಡೆಲ್ಲ
ಬೆವರಿನ ಹನಿಯು ||

ಹಾಡು – ೨

ಜೀತದ ತೊಟ್ಟಿಲಲಿ
ಸಾವಿನ ಜೋಕಾಲಿ
ತೂಗು ನಿಲ್ಲಿಸುವ
ಧೀರರ್‍ಯಾರಿಹರೊ ||

ಹುಟ್ಟಿದ ದಿನ ಬಂತು
ಬದುಕುವುದೆಂಗಣ್ಣ
ಸಾಲದ ಈ ಬಾಧೆ
ಬಿಡಿಸುವುದೆಂಗಣ್ಣ ||

ಸುತ್ತಲು ಭರವಸೆ
ಭಾಷಣಗಳಲಿ
ಮುತ್ತಿದೆ ಬಂಧನ
ಸಾಲದ ಹೆಸರಲಿ ||

ಹಾಡು – ೩

ದೇಶೋದ್ಧಾರದ ಮಾತು
ನಮ್ಮನೆಲ್ಲಾ ಮರೆತು
ಧರ್ಮದ ಚರ್ಪು ಹಂಚಿ
ಕಾಲ ಸರಿಯಿತು ಮಿಂಚಿ ||

ನಿಮ್ಮ ಪಾಪದ ಬೆಳೆಯು
ನಮ್ಮನ್ನೀಗೆ ಸಾಕಿದೆ
ಮಿಗಿಲು ನಿಮಗೂ ಕೂಡ
ನಮ್ಮಂಥವರೆ ಬೇಕಿದೆ ||

ಎಲ್ಲಿ ಹೋಯಿತಣ್ಣ
ದಯೆಯಾ ನಿಮ್ಮ ಧರ್ಮ
ಎಲ್ಲಿ ಹೂತಿರಣ್ಣ
ಗಯೆಯಾ ನಿಮ್ಮ ಧಮ್ಮ ||

ಹಾಡು – ೪

ಅಟ್ಟಹಾಸವೊ ಅಣ್ಣ
ದುಡ್ಡುಳ್ಳೋರ ಬಣ್ಣ
ಯಡ್ಡರ ಮಾಡಿ ಬಡವರ
ಬಿದ್ದೆದ್ದು ನಗುತಾರಲ್ಲೊ ||

ಹಸಿವೀನ ನೋವಿಗೆ
ಅಪಹಾಸ್ಯ ಮಾಡುತಾರೊ
ತಿನ್ನೊ ಅನ್ನಕೆ ಬದಲು
ಮಾತು ಪೋಣಿಸುತಾರೊ ||

ದುಡ್ಡು ಗಂಟಿನ ಮಹಿಮೆ
ಕೆಟ್ಟದ್ದೊ ಬದುಕಿಗೆ
ಬಡವರ ಜೀವಾವ
ಸುಲಿತೈತೊ ತಣ್ಣಾಗೆ ||

ಹಾಡು – ೫

ದಡ್ಡರು ದುಡಿತಾರೆ
ಕೇಳಣ್ಣಾ ಕೇಳೊ
ಬುದ್ದಿವಂತರೆಲ್ಲಾ
ದುಡ್ಡು ಎಣಿಸುತ್ತಾರೆ ||

ನಿನ್ನ ಬೆವರು ರಕ್ತ ಬಸಿದು
ಮಹಲು ಕಟ್ಟಿ ಮೆರೆದು
ನಾಯಿ ಸಾಕ್ತಾರೆ ಮೋಜಿಗೆ
ಹಿಡಿ ಅನ್ನ ಕೊಡದ ನೀಚರು ||

ದುಡಿದುಡಿದು ಸತ್ತೆ ನೀನು
ನಿನ್ನ ಸಮಾಧಿ ಮೇಲೆ
ಗುಲಾಬಿಯನ್ನ ಬೆಳಿತಾರೆ
ಮತ್ತೆ ಮೂಸಿ ನೋಡುತಾರೆ ||

ಹಾಡು – ೬

ಒಂದೆಡೆ ಆದರೆ ಗಾಯ
ಮನಸಿಗೆಲ್ಲ ನೋವು
ಯೋಗ್ಯ ದುಡಿಮೆ ಇಲ್ಲದಿರೆ
ಬದುಕೆಲ್ಲ ಸಾವು ||

ಬಡತನದ ಬಸಿರಿಗೆ
ಕೋಟಿಗಟ್ಟಲೆ ತತ್ತಿಗಳು
ಒಂದಕೊಂದು ಬೆಳೆದು
ನೆಮ್ಮದಿಯ ಕೊಂದವು ||

ಕೊರೆವ ಚಳಿಯಲ್ಲಿ
ಚಿಂದಿ ಹೊದ್ದಂತೆ
ಬಡತನದ ದುಡಿಮೆ
ಏನಿದು ನಿನ್ನ ಮಹಿಮೆ ||

ಹಾಡು – ೭

ದುಡ್ಡುಳ್ಳ ಧಿಮಾಕು
ಮಾಡುತ್ತೆ ಶೋಕಿ
ಎಲ್ಲದನು ತಿನ್ನಬೇಕು
ಯಾವುದಿಲ್ಲ ಬಾಕಿ ||

ಹಣ್ಣೆಂದು ತಿಳಿದರೊ
ಹೆಣ್ಣುಗಳನೆಲ್ಲ
ಹೊನ್ನೆಂದು ತಿಳಿದರೊ
ಅಣ್ಣ ಮಣ್ಣನೆಲ್ಲ ||

ಅಪ್ಪನ ಪಾಪದ ಶಾಪ
ಮಗನ ತಲೆಗೆ
ಇಬ್ಬರೂ ನಿಂಥರಲ್ಲ
ಬದುಕಾ ಕೊಲೆಗೆ ||

ಹಾಡು – ೮

ಎಲ್ಲಿ ಕೊನೆಯಣ್ಣ
ಜೀತದ ಹಿಡಿತಕ್ಕೆ
ಎಲ್ಲಿ ನೆಲೆಯಣ್ಣ
ಬಂಧಿತ ಜೀವಕ್ಕೆ ||

ಹೊಡೆದೊಡೆದು ಬಳಲಿದರೂ
ಬಂಡೆ ಸವೆಯಲಿಲ್ಲ
ಯುಗಯುಗ ಕಳೆದರೂ
ಹೊಟ್ಟೆಯು ತುಂಬಲಿಲ್ಲ ||

ನರಕವಲ್ಲವೆ ಇದುವೆ
ನಿತ್ಯಾದ ಹಿಂಸೆ
ಜೀವನವೆ ಬೇಡೆಂದು
ಹಾರಿತು ಹಂಸೆ ||

ಮಂಗಳದ ಈ ಸುದಿನ
ಮದುರವಾಗಲಿ
ನಿಮ್ಮೊಲುಮೆ ಈ ಮನೆಗೆ
ನಂದಾ ದೀಪವಾಗಲಿ ||

ಹಾಡು – ೯

ಕಾಲಿಗೆ ಹಾಕಿ ಬೇಡಿಗಳಾ
ಕಲ್ಲು ಹೊಡಿಸೊ ಹನುಮಣ್ಣ
ಮಾಡಿದ ಸಾಲಕೆ ಜೀತದಲಿ
ದಿನವೂ ನರಳುವ ತಮ್ಮಣ್ಣ ||

ಕೊಟ್ಟ ದುಡ್ಡಿಗೆ ಬಡ್ಡಿ ಬೆಳೆದು
ಬಿಡುಗಡೆ ಆಸೆಯ ತೊರೆದು
ಹೊಡೆದೇ ಹೊಡೆಯುತಾರೊ
ಕಲ್ಲು ಕಲ್ಲಿಗೆ ಸುತ್ತಿಗೆಯಿಂದ ||

ಪುಡಿಯಾಗುತೈತಿ ಅಣ್ಣಾ ಬದುಕು
ಹಿಡಿಗಲ್ಲು ಬೇಬಿ ಜಲ್ಲಿಯಂತೆ
ಬೆವರ ಕುಡಿದು ನಲಿಯುತಾರೆ
ಮದದಿ ಮೋಜು ಮಾಡುತಾರೆ ||

ಹಾಡು – ೧೦

ಜೀತದ ತೊಟ್ಟಿಲಲಿ
ನರಕುರಿಗಳ ಬಲಿ
ಸುಖ ಜೋಕಾಲಿಯಲಿ
ನರಕ ಹಿಂಸಾ ಬಲೆ ||

*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...