Home / ಕವನ / ಕವಿತೆ / ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಕತೆಯಾ ಕೇಳಿರಣ್ಣ
ಕಲ್ಲು ಮನಸಿನ
ಮುಳ್ಳು ಜನಗಳು
ಹೂವು ಕೊಲ್ಲುವಂಥ ||

ಅಲ್ಪನ ಐಶ್ವರ್ಯ
ಮಾಡುವ ಆಶ್ಚರ್ಯ
ಎತ್ತ ನೋಡಿದರೂ
ಕೊಲ್ಲುವ ಕೊಲ್ಲುವ ||

ಬದುಕೆಲ್ಲ ಬಂಡೆಯು
ಹಸಿವು ರಕ್ಕಸಿಯು
ಎಣಿಸಿದ ದುಡ್ಡೆಲ್ಲ
ಬೆವರಿನ ಹನಿಯು ||

ಹಾಡು – ೨

ಜೀತದ ತೊಟ್ಟಿಲಲಿ
ಸಾವಿನ ಜೋಕಾಲಿ
ತೂಗು ನಿಲ್ಲಿಸುವ
ಧೀರರ್‍ಯಾರಿಹರೊ ||

ಹುಟ್ಟಿದ ದಿನ ಬಂತು
ಬದುಕುವುದೆಂಗಣ್ಣ
ಸಾಲದ ಈ ಬಾಧೆ
ಬಿಡಿಸುವುದೆಂಗಣ್ಣ ||

ಸುತ್ತಲು ಭರವಸೆ
ಭಾಷಣಗಳಲಿ
ಮುತ್ತಿದೆ ಬಂಧನ
ಸಾಲದ ಹೆಸರಲಿ ||

ಹಾಡು – ೩

ದೇಶೋದ್ಧಾರದ ಮಾತು
ನಮ್ಮನೆಲ್ಲಾ ಮರೆತು
ಧರ್ಮದ ಚರ್ಪು ಹಂಚಿ
ಕಾಲ ಸರಿಯಿತು ಮಿಂಚಿ ||

ನಿಮ್ಮ ಪಾಪದ ಬೆಳೆಯು
ನಮ್ಮನ್ನೀಗೆ ಸಾಕಿದೆ
ಮಿಗಿಲು ನಿಮಗೂ ಕೂಡ
ನಮ್ಮಂಥವರೆ ಬೇಕಿದೆ ||

ಎಲ್ಲಿ ಹೋಯಿತಣ್ಣ
ದಯೆಯಾ ನಿಮ್ಮ ಧರ್ಮ
ಎಲ್ಲಿ ಹೂತಿರಣ್ಣ
ಗಯೆಯಾ ನಿಮ್ಮ ಧಮ್ಮ ||

ಹಾಡು – ೪

ಅಟ್ಟಹಾಸವೊ ಅಣ್ಣ
ದುಡ್ಡುಳ್ಳೋರ ಬಣ್ಣ
ಯಡ್ಡರ ಮಾಡಿ ಬಡವರ
ಬಿದ್ದೆದ್ದು ನಗುತಾರಲ್ಲೊ ||

ಹಸಿವೀನ ನೋವಿಗೆ
ಅಪಹಾಸ್ಯ ಮಾಡುತಾರೊ
ತಿನ್ನೊ ಅನ್ನಕೆ ಬದಲು
ಮಾತು ಪೋಣಿಸುತಾರೊ ||

ದುಡ್ಡು ಗಂಟಿನ ಮಹಿಮೆ
ಕೆಟ್ಟದ್ದೊ ಬದುಕಿಗೆ
ಬಡವರ ಜೀವಾವ
ಸುಲಿತೈತೊ ತಣ್ಣಾಗೆ ||

ಹಾಡು – ೫

ದಡ್ಡರು ದುಡಿತಾರೆ
ಕೇಳಣ್ಣಾ ಕೇಳೊ
ಬುದ್ದಿವಂತರೆಲ್ಲಾ
ದುಡ್ಡು ಎಣಿಸುತ್ತಾರೆ ||

ನಿನ್ನ ಬೆವರು ರಕ್ತ ಬಸಿದು
ಮಹಲು ಕಟ್ಟಿ ಮೆರೆದು
ನಾಯಿ ಸಾಕ್ತಾರೆ ಮೋಜಿಗೆ
ಹಿಡಿ ಅನ್ನ ಕೊಡದ ನೀಚರು ||

ದುಡಿದುಡಿದು ಸತ್ತೆ ನೀನು
ನಿನ್ನ ಸಮಾಧಿ ಮೇಲೆ
ಗುಲಾಬಿಯನ್ನ ಬೆಳಿತಾರೆ
ಮತ್ತೆ ಮೂಸಿ ನೋಡುತಾರೆ ||

ಹಾಡು – ೬

ಒಂದೆಡೆ ಆದರೆ ಗಾಯ
ಮನಸಿಗೆಲ್ಲ ನೋವು
ಯೋಗ್ಯ ದುಡಿಮೆ ಇಲ್ಲದಿರೆ
ಬದುಕೆಲ್ಲ ಸಾವು ||

ಬಡತನದ ಬಸಿರಿಗೆ
ಕೋಟಿಗಟ್ಟಲೆ ತತ್ತಿಗಳು
ಒಂದಕೊಂದು ಬೆಳೆದು
ನೆಮ್ಮದಿಯ ಕೊಂದವು ||

ಕೊರೆವ ಚಳಿಯಲ್ಲಿ
ಚಿಂದಿ ಹೊದ್ದಂತೆ
ಬಡತನದ ದುಡಿಮೆ
ಏನಿದು ನಿನ್ನ ಮಹಿಮೆ ||

ಹಾಡು – ೭

ದುಡ್ಡುಳ್ಳ ಧಿಮಾಕು
ಮಾಡುತ್ತೆ ಶೋಕಿ
ಎಲ್ಲದನು ತಿನ್ನಬೇಕು
ಯಾವುದಿಲ್ಲ ಬಾಕಿ ||

ಹಣ್ಣೆಂದು ತಿಳಿದರೊ
ಹೆಣ್ಣುಗಳನೆಲ್ಲ
ಹೊನ್ನೆಂದು ತಿಳಿದರೊ
ಅಣ್ಣ ಮಣ್ಣನೆಲ್ಲ ||

ಅಪ್ಪನ ಪಾಪದ ಶಾಪ
ಮಗನ ತಲೆಗೆ
ಇಬ್ಬರೂ ನಿಂಥರಲ್ಲ
ಬದುಕಾ ಕೊಲೆಗೆ ||

ಹಾಡು – ೮

ಎಲ್ಲಿ ಕೊನೆಯಣ್ಣ
ಜೀತದ ಹಿಡಿತಕ್ಕೆ
ಎಲ್ಲಿ ನೆಲೆಯಣ್ಣ
ಬಂಧಿತ ಜೀವಕ್ಕೆ ||

ಹೊಡೆದೊಡೆದು ಬಳಲಿದರೂ
ಬಂಡೆ ಸವೆಯಲಿಲ್ಲ
ಯುಗಯುಗ ಕಳೆದರೂ
ಹೊಟ್ಟೆಯು ತುಂಬಲಿಲ್ಲ ||

ನರಕವಲ್ಲವೆ ಇದುವೆ
ನಿತ್ಯಾದ ಹಿಂಸೆ
ಜೀವನವೆ ಬೇಡೆಂದು
ಹಾರಿತು ಹಂಸೆ ||

ಮಂಗಳದ ಈ ಸುದಿನ
ಮದುರವಾಗಲಿ
ನಿಮ್ಮೊಲುಮೆ ಈ ಮನೆಗೆ
ನಂದಾ ದೀಪವಾಗಲಿ ||

ಹಾಡು – ೯

ಕಾಲಿಗೆ ಹಾಕಿ ಬೇಡಿಗಳಾ
ಕಲ್ಲು ಹೊಡಿಸೊ ಹನುಮಣ್ಣ
ಮಾಡಿದ ಸಾಲಕೆ ಜೀತದಲಿ
ದಿನವೂ ನರಳುವ ತಮ್ಮಣ್ಣ ||

ಕೊಟ್ಟ ದುಡ್ಡಿಗೆ ಬಡ್ಡಿ ಬೆಳೆದು
ಬಿಡುಗಡೆ ಆಸೆಯ ತೊರೆದು
ಹೊಡೆದೇ ಹೊಡೆಯುತಾರೊ
ಕಲ್ಲು ಕಲ್ಲಿಗೆ ಸುತ್ತಿಗೆಯಿಂದ ||

ಪುಡಿಯಾಗುತೈತಿ ಅಣ್ಣಾ ಬದುಕು
ಹಿಡಿಗಲ್ಲು ಬೇಬಿ ಜಲ್ಲಿಯಂತೆ
ಬೆವರ ಕುಡಿದು ನಲಿಯುತಾರೆ
ಮದದಿ ಮೋಜು ಮಾಡುತಾರೆ ||

ಹಾಡು – ೧೦

ಜೀತದ ತೊಟ್ಟಿಲಲಿ
ನರಕುರಿಗಳ ಬಲಿ
ಸುಖ ಜೋಕಾಲಿಯಲಿ
ನರಕ ಹಿಂಸಾ ಬಲೆ ||

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...