Home / ಕವನ / ಕವಿತೆ / ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಕತೆಯಾ ಕೇಳಿರಣ್ಣ
ಕಲ್ಲು ಮನಸಿನ
ಮುಳ್ಳು ಜನಗಳು
ಹೂವು ಕೊಲ್ಲುವಂಥ ||

ಅಲ್ಪನ ಐಶ್ವರ್ಯ
ಮಾಡುವ ಆಶ್ಚರ್ಯ
ಎತ್ತ ನೋಡಿದರೂ
ಕೊಲ್ಲುವ ಕೊಲ್ಲುವ ||

ಬದುಕೆಲ್ಲ ಬಂಡೆಯು
ಹಸಿವು ರಕ್ಕಸಿಯು
ಎಣಿಸಿದ ದುಡ್ಡೆಲ್ಲ
ಬೆವರಿನ ಹನಿಯು ||

ಹಾಡು – ೨

ಜೀತದ ತೊಟ್ಟಿಲಲಿ
ಸಾವಿನ ಜೋಕಾಲಿ
ತೂಗು ನಿಲ್ಲಿಸುವ
ಧೀರರ್‍ಯಾರಿಹರೊ ||

ಹುಟ್ಟಿದ ದಿನ ಬಂತು
ಬದುಕುವುದೆಂಗಣ್ಣ
ಸಾಲದ ಈ ಬಾಧೆ
ಬಿಡಿಸುವುದೆಂಗಣ್ಣ ||

ಸುತ್ತಲು ಭರವಸೆ
ಭಾಷಣಗಳಲಿ
ಮುತ್ತಿದೆ ಬಂಧನ
ಸಾಲದ ಹೆಸರಲಿ ||

ಹಾಡು – ೩

ದೇಶೋದ್ಧಾರದ ಮಾತು
ನಮ್ಮನೆಲ್ಲಾ ಮರೆತು
ಧರ್ಮದ ಚರ್ಪು ಹಂಚಿ
ಕಾಲ ಸರಿಯಿತು ಮಿಂಚಿ ||

ನಿಮ್ಮ ಪಾಪದ ಬೆಳೆಯು
ನಮ್ಮನ್ನೀಗೆ ಸಾಕಿದೆ
ಮಿಗಿಲು ನಿಮಗೂ ಕೂಡ
ನಮ್ಮಂಥವರೆ ಬೇಕಿದೆ ||

ಎಲ್ಲಿ ಹೋಯಿತಣ್ಣ
ದಯೆಯಾ ನಿಮ್ಮ ಧರ್ಮ
ಎಲ್ಲಿ ಹೂತಿರಣ್ಣ
ಗಯೆಯಾ ನಿಮ್ಮ ಧಮ್ಮ ||

ಹಾಡು – ೪

ಅಟ್ಟಹಾಸವೊ ಅಣ್ಣ
ದುಡ್ಡುಳ್ಳೋರ ಬಣ್ಣ
ಯಡ್ಡರ ಮಾಡಿ ಬಡವರ
ಬಿದ್ದೆದ್ದು ನಗುತಾರಲ್ಲೊ ||

ಹಸಿವೀನ ನೋವಿಗೆ
ಅಪಹಾಸ್ಯ ಮಾಡುತಾರೊ
ತಿನ್ನೊ ಅನ್ನಕೆ ಬದಲು
ಮಾತು ಪೋಣಿಸುತಾರೊ ||

ದುಡ್ಡು ಗಂಟಿನ ಮಹಿಮೆ
ಕೆಟ್ಟದ್ದೊ ಬದುಕಿಗೆ
ಬಡವರ ಜೀವಾವ
ಸುಲಿತೈತೊ ತಣ್ಣಾಗೆ ||

ಹಾಡು – ೫

ದಡ್ಡರು ದುಡಿತಾರೆ
ಕೇಳಣ್ಣಾ ಕೇಳೊ
ಬುದ್ದಿವಂತರೆಲ್ಲಾ
ದುಡ್ಡು ಎಣಿಸುತ್ತಾರೆ ||

ನಿನ್ನ ಬೆವರು ರಕ್ತ ಬಸಿದು
ಮಹಲು ಕಟ್ಟಿ ಮೆರೆದು
ನಾಯಿ ಸಾಕ್ತಾರೆ ಮೋಜಿಗೆ
ಹಿಡಿ ಅನ್ನ ಕೊಡದ ನೀಚರು ||

ದುಡಿದುಡಿದು ಸತ್ತೆ ನೀನು
ನಿನ್ನ ಸಮಾಧಿ ಮೇಲೆ
ಗುಲಾಬಿಯನ್ನ ಬೆಳಿತಾರೆ
ಮತ್ತೆ ಮೂಸಿ ನೋಡುತಾರೆ ||

ಹಾಡು – ೬

ಒಂದೆಡೆ ಆದರೆ ಗಾಯ
ಮನಸಿಗೆಲ್ಲ ನೋವು
ಯೋಗ್ಯ ದುಡಿಮೆ ಇಲ್ಲದಿರೆ
ಬದುಕೆಲ್ಲ ಸಾವು ||

ಬಡತನದ ಬಸಿರಿಗೆ
ಕೋಟಿಗಟ್ಟಲೆ ತತ್ತಿಗಳು
ಒಂದಕೊಂದು ಬೆಳೆದು
ನೆಮ್ಮದಿಯ ಕೊಂದವು ||

ಕೊರೆವ ಚಳಿಯಲ್ಲಿ
ಚಿಂದಿ ಹೊದ್ದಂತೆ
ಬಡತನದ ದುಡಿಮೆ
ಏನಿದು ನಿನ್ನ ಮಹಿಮೆ ||

ಹಾಡು – ೭

ದುಡ್ಡುಳ್ಳ ಧಿಮಾಕು
ಮಾಡುತ್ತೆ ಶೋಕಿ
ಎಲ್ಲದನು ತಿನ್ನಬೇಕು
ಯಾವುದಿಲ್ಲ ಬಾಕಿ ||

ಹಣ್ಣೆಂದು ತಿಳಿದರೊ
ಹೆಣ್ಣುಗಳನೆಲ್ಲ
ಹೊನ್ನೆಂದು ತಿಳಿದರೊ
ಅಣ್ಣ ಮಣ್ಣನೆಲ್ಲ ||

ಅಪ್ಪನ ಪಾಪದ ಶಾಪ
ಮಗನ ತಲೆಗೆ
ಇಬ್ಬರೂ ನಿಂಥರಲ್ಲ
ಬದುಕಾ ಕೊಲೆಗೆ ||

ಹಾಡು – ೮

ಎಲ್ಲಿ ಕೊನೆಯಣ್ಣ
ಜೀತದ ಹಿಡಿತಕ್ಕೆ
ಎಲ್ಲಿ ನೆಲೆಯಣ್ಣ
ಬಂಧಿತ ಜೀವಕ್ಕೆ ||

ಹೊಡೆದೊಡೆದು ಬಳಲಿದರೂ
ಬಂಡೆ ಸವೆಯಲಿಲ್ಲ
ಯುಗಯುಗ ಕಳೆದರೂ
ಹೊಟ್ಟೆಯು ತುಂಬಲಿಲ್ಲ ||

ನರಕವಲ್ಲವೆ ಇದುವೆ
ನಿತ್ಯಾದ ಹಿಂಸೆ
ಜೀವನವೆ ಬೇಡೆಂದು
ಹಾರಿತು ಹಂಸೆ ||

ಮಂಗಳದ ಈ ಸುದಿನ
ಮದುರವಾಗಲಿ
ನಿಮ್ಮೊಲುಮೆ ಈ ಮನೆಗೆ
ನಂದಾ ದೀಪವಾಗಲಿ ||

ಹಾಡು – ೯

ಕಾಲಿಗೆ ಹಾಕಿ ಬೇಡಿಗಳಾ
ಕಲ್ಲು ಹೊಡಿಸೊ ಹನುಮಣ್ಣ
ಮಾಡಿದ ಸಾಲಕೆ ಜೀತದಲಿ
ದಿನವೂ ನರಳುವ ತಮ್ಮಣ್ಣ ||

ಕೊಟ್ಟ ದುಡ್ಡಿಗೆ ಬಡ್ಡಿ ಬೆಳೆದು
ಬಿಡುಗಡೆ ಆಸೆಯ ತೊರೆದು
ಹೊಡೆದೇ ಹೊಡೆಯುತಾರೊ
ಕಲ್ಲು ಕಲ್ಲಿಗೆ ಸುತ್ತಿಗೆಯಿಂದ ||

ಪುಡಿಯಾಗುತೈತಿ ಅಣ್ಣಾ ಬದುಕು
ಹಿಡಿಗಲ್ಲು ಬೇಬಿ ಜಲ್ಲಿಯಂತೆ
ಬೆವರ ಕುಡಿದು ನಲಿಯುತಾರೆ
ಮದದಿ ಮೋಜು ಮಾಡುತಾರೆ ||

ಹಾಡು – ೧೦

ಜೀತದ ತೊಟ್ಟಿಲಲಿ
ನರಕುರಿಗಳ ಬಲಿ
ಸುಖ ಜೋಕಾಲಿಯಲಿ
ನರಕ ಹಿಂಸಾ ಬಲೆ ||

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...