ಬಲ್ಲೆ ನಿನ್ನ ಮನಸ ಸಖೀ
ಬಲ್ಲೆ ನಿನ್ನ ಕನಸ
ಇಲ್ಲಿದ್ದೂ ಎಲ್ಲೋ ಮನ
ಏನೋ ಶಂಕೆ ಹರುಷ
ಅವನ ಕಂಡ ಗಳಿಗೆಯೇ
ಹರಣ ಹಾರಿ ನಿಂತೆಯೇ
ಉರಿವ ದೀಪ ನಿನ್ನ ನೇತ್ರ
ಬರೆಯುತಿಹವು ಕತೆಯನೇ
ಹೋದಲ್ಲಿಗೆ ಒಯ್ಯುತಿರುವೆ
ಅವನ ಸ್ಮರಣೆ ಬಿಂಬ
ಗಾಳಿಗೆ ಮರ ತೂಗುತಿರುವೆ
ಧ್ಯಾನ ಮನದ ತುಂಬ
ಎಲ್ಲಿರುವನೊ ಬಲ್ಲೆಯೇನೆ
ಹೃದಯವಾಯ್ತು ಹೋಳು
ನಿನ್ನೊಳಿರುವ ಇಡಿಯಾಗಿ
ಸುಳ್ಳೋ ನಿಜವೋ ಹೇಳು!
*****
ಪುಸ್ತಕ: ನಿನಗಾಗೇ ಈ ಹಾಡುಗಳು
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.