ಒಮ್ಮೆ ಶ್ರೀರಾಮಚಂದ್ರನು ಸಿಂಹಾಸನಾರೂಢನಾಗಿರಲು ಅವನ ಸೇವಕರು ಒಬ್ಬನನ್ನು ಹಿಡಿದು ತಂದೊಪ್ಪಿಸಿ ಬಿನ್ನವಿಸಿದರು. “ಪ್ರಭೂ, ಈ ಪ್ರಾಣಿಯು ಒಂದು ಮರಕ್ಕೆ ಹಗ್ಗ ಕಟ್ಟಿ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದನು. ನಾವು ಕಂಡು ಹಿಡಿದು ತಂದಿದ್ದೇವೆ. ಆತ್ಮಹತ್ಯೆಯಂಥ ಘೋರ ಪಾಪವನ್ನೆಸಗಲು ಉದ್ಯುಕ್ತನಾದ ಈ ದುಷ್ಟನಿಗೆ ದೇವರು ಯೋಗ್ಯ ಶಿಕ್ಷೆ ವಿಧಿಸಬೇಕು.”
ಇದನ್ನು ಕೇಳಿ ಶ್ರೀರಘುರಾಮನು ದುಃಖಿತನಾಗಿ “ಹೌದೇ ನೀನು ಆತ್ಮಹತ್ಯೆಗೆ ಯತ್ನಿಸಿದ್ದು?” ಎಂದು ಕರುಣೆಯಿಂದ ಅವನನ್ನು ಕೇಳಿದನು. ಆತನು “ಹೌದು” ಅಂದನು.
ರಘುಕುಲ ತಿಲಕನು ತೀರ್ಪು ಕೊಟ್ಟನು : “ಆತ್ಮಹತ್ಯೆಯು ಮಹಾಪರಾಧವು. ನೀನು ಅಂದರೆ ನೀನಲ್ಲ. ನಿನ್ನೊಳಗೆ ಆತ್ಮವೊಂದಿದೆ. ನೀನು ಎನ್ನುವ ಈ ದೇಹದಲ್ಲಿ ಅದು ವಾಸಿಸುತ್ತಿದೆ. ಆ ಆತ್ಮವು ನನ್ನ ಪ್ರಜೆ, ನನ್ನ ಪ್ರೀತಿಯ ಪ್ರಜೆಯ ವಾಸಸ್ಥಾನವಾದ ನಿನ್ನ ಈ ದೇಹವನ್ನು ನೀನು ನಾಶಮಾಡಲು ಯತ್ನಿಸಿದಿ. ಆದ್ದರಿಂದ ನಿನಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ.
ಅಪರಾಧಿಗೆ ನಗು ತಡೆಯಲಾಗಲಿಲ್ಲ. ಆದರೆ ಸೇವಕರು ಬಂದು ಅವನನ್ನು ಎಳೆದುಕೊಂಡು ಹೋದರು.
ಸಾಯುವ ಮುಂಚೆ ಸಹ ತನ್ನ ಪ್ರಜೆಯು ನಕ್ಕನೆಂದು ಶ್ರೀರಾಮ ಚಂದ್ರನು ಒಳಗೊಳಗೇ ಹಿಗ್ಗಿದನು.
ಈ ಸಂಗತಿಯನ್ನು ಕೇಳಿ ಪ್ರಜೆಗಳೆಲ್ಲ ಏನೇನೋ ಗುಜು ಗುಜುಗುಡ ಹತ್ತಿದರು. ಒಬ್ಬ ಅಗಸನು ಮಾತ್ರ ತನ್ನ ಕತ್ತೆಯ ಮೇಲೆ ಕುಳಿತು ಅರಮನೆಗೆ ಬಂದು ಶ್ರೀರಾಮಚಂದ್ರನನ್ನು ಕಂಡು “ಆತ್ಮಹತ್ಯೆಗೆ ಯತ್ನಿಸಿದ ತಾವು ದೇಹಾಂತ ಶಿಕ್ಷೆ ವಿಧಿಸಿದ-ಆ ಪಾಪಿಗೆ ಆತ್ಮಹತ್ಯೆಯನ್ನೇಕೆ ಮಾಡಿಕೊಳ್ಳಲೆಳಸಿದಿ?” ಎಂದು ಪ್ರಭುಗಳು ಕೇಳಿದಿರಾ? ಎಂದು ಧೈರ್ಯದಿಂದ ಪ್ರಶ್ನಿಸಿ ಹೊರಟು ಹೋದನು.
ಶ್ರೀರಾಮಚಂದ್ರನ ತಲೆಯಲ್ಲಿ ವಿದ್ಯುತ್ ಸಂಚಾರವಾದಂತಾಗಿ ಅವನು ಬೆರಳಿನ ಮೇಲೆ ಮೂಗು ಹೇರಿದನು. “ಆತ್ಮಹತ್ಯೆ ಅಪರಾಧ-ಆತ್ಮ-ಪ್ರಜೆ- ಈ ವಿಚಾರದಲ್ಲಿ ಸಿಲುಕಿದ ನನಗೆ ‘ಆತ್ಮಹತ್ಯವೇಕೆ?’ ಎಂದು ಕೇಳುವ….”
ಸಿಂಹಾಸನದಿಂದಿಳಿದು ಕತ್ತೆ ಸಹಿತ ಆ ಅಗಸನನ್ನು ಒಳಗೆ ಕರೆಯಿಸಿ ಕೈ ಕೈ ಕುಲುಕಿ “ಸಾಮ್ರಾಜ್ಯವನ್ನು ತೂಗಿಸಿಕೊಂಡು ಹೋಗುವಾಗ ಎಷ್ಟೋ ಸೂಕ್ಷ್ಮ ವಿಚಾರಗಳು ಹೊಳೆಯದೆ ಹೋಗಿ ಅನ್ಯಾಯವಾಗುವದುಂಟು. ಆಗ ಪ್ರಜೆಯು-ನಿಜವಾದ ಪ್ರಜೆಯು-ಸಂಕೋಚಪಟ್ಟುಕೊಳ್ಳದೆ, ರಾಜರು ಏನೆಂದಾರೋ ಎಂದು ಹೆದರದೆ ನಿನ್ನಂತೆ ಧೈರ್ಯದಿಂದ ಬಂದು ನುಡಿಯಬೇಕು. ನನ್ನ ರಾಜ್ಯವನ್ನು ಒಂದು ಆದರ್ಶ ರಾಜ್ಯವನ್ನಾಗಿ ಮಾಡಬೇಕೆಂಬ ಹಂಬಲವಿದೆ. ಇದಕ್ಕಾಗಿ ನಿನ್ನಂಥ ಪ್ರಜೆಯ ಅಭಿಪ್ರಾಯ ನನಗೆ ಅಗತ್ಯ. ನಾನು ಕೇಳದೆಯೇ ಅದು ಬರಬೇಕು. ನೀನು ನನ್ನ ಪ್ರಥಮ ಪ್ರಜೆ… ಇರಲಿ ನಿನ್ನ ಹೆಸರು?”
” …. …. …. …. ….”
“ಓಹೋ! ಸೀತಾದೇವಿಯ ಸತೀತ್ವದ ಅಗ್ನಿ ಪರೀಕ್ಷಕನೇ ನೀನೋ!! (ನೀನಿಲ್ಲದಿದ್ದರೆ ಅವಳ ಕೀರ್ತಿ ಇಷ್ಟು ಹಬ್ಬುತ್ತಿದ್ದಿಲ್ಲ) ಇಂದಿನಿಂದ ನೀನು ಇಲ್ಲೇ ಇರು. ನಿನ್ನ ಈ ವಾಹನವು ಅಶ್ವಸಾಲೆಯಲ್ಲಿರಲಿ.”
*****








