ಹೆಂಗಸರು ಎಷ್ಟೇ ಒಳ್ಳೆಯವರಿದ್ದರೂ ಕೆಲವು ವಿಷಯಗಳು ನಾಲಿಗೆಯ ಮೇಲೆ ನಲಿಯತೊಡಗಿದವೆಂದರೆ ಕೊಂಚ ಮಟ್ಟಿಗಾದರೂ ಅವರು ಚಂಡಿ-ಚಾಮುಂಡಿಯರಾಗುತ್ತಾರೆ.
ಪಂಚಕನ್ಯೆಯರಲ್ಲಿ ಒಬ್ಬಳೆಂದು ಖ್ಯಾತಿಪಡೆದ ಸೀತಾದೇವಿಗೂ ಯಾವ ಕವಿಯಿಂದಲೂ ಹೊಗಳಿಸಿಕೊಳ್ಳದ (ಲಕ್ಷ್ಮಣನ ಮಡದಿ) ಊರ್ಮಿಳೆಗೂ ಹೇಗೋ ಮಾತಿಗೆ ಮಾತು ಹತ್ತಿತು. ಗಂಡಸರೆಲ್ಲ ಬೇಟೆಗೆ ಹೋದ ಸಮಯವಾಗಿತ್ತು.
“ಹದಿನಾಲ್ಕು ವರ್ಷ ನಿಮ್ಮ ಸೇವೆಗೆಂದು ನಿಮ್ಮ ಜತೆಗೆ ಅಡವಿಗೆ ಕಳುಹಿಸಿದ ನನ್ನ ಪತಿಯಿಂದ ಅಗಲಿ ನವೆದದ್ದು ಇಷ್ಟೆಲ್ಲ ಅನ್ನಿಸಿಕೊಳ್ಳಲಿಕ್ಕಾಯಿತೇ ಅಕ್ಕಾ?”
“ನಮ್ಮ ಸೇವೆಗಾಗಿ ನಿನ್ನ ಪತಿಯನ್ನು ಕಳುಹಿಸಿದೆಯಾ? ವ್ಹ! ನನ್ನ ಹಾಗೇ ಹಟ ಹಿಡಿದಿದ್ದರೆ ನೀನೂ ಗಂಡನ ಜತೆಗೆ ಬರುತ್ತಿದ್ದಿಯಲ್ಲ. ನಾವೇ ನಿಮ್ಮ ಸೇವೆ ಮಾಡುತ್ತಿದ್ದೆವು.
“ಪತಿಯು ಬೇಡವೆಂದರೂ ಕೇಳದೆ ಅವನ ಬೆನ್ನು ಹತ್ತುವ ಹಟಗಾರ್ತಿ ನಾನಲ್ಲ ಅಕ್ಕಾ.”
“ನಾನು ಹಟಗಾರ್ತಿಯೆಂದು ನಿನ್ನ ಅಭಿಪ್ರಾಯವೋ?! ಒಂದಲ್ಲ ಎರಡಲ್ಲ, ಹದಿನಾಲ್ಕು ವರ್ಷ ನಮ್ಮಿಂದ ದೂರ ಉಳಿಯುವ ಸಂದರ್ಭದಲ್ಲಿ ಗಂಡಸರು ಏನೆಲ್ಲ ಕಾರಭಾರ ಮಾಡಿಯಾರೆಂಬ ಕಲ್ಪನೆ ನಿನಗಿದ್ದರೆ ನೀನೂ ಹಟಮಾರಿಯಾಗುತ್ತಿದ್ದಿ! ಪಾಪ, ಎಲ್ಲ ಹಲ್ಲೂ ಇನ್ನೂ ಸರಿಯಾಗಿ ಮೊಳೆತಿರದ ನಿನಗೆ ಇದೆಲ್ಲ ಹೇಗೆ ತಿಳಿಯಬೇಕು? ಶೂರ್ಪನಖಿಯ ಬದಲು ಇನ್ನಾವ ಕಾನ್ ಚೆಲುವೆಯಾದರೂ ನಿನ್ನ ಪತಿಗೆ ಗಂಟು ಬಿದ್ದಿದ್ದರೆ ನಿನ್ನ ಫಜೀತಿಯಾಗುತ್ತಿತ್ತು”
“ನನ್ನ ಪತಿಯಲ್ಲಿ ನನಗೆ ಪೂರ್ಣ ವಿಶ್ವಾಸವಿದೆ”
“ಎಲ್ಲರಿಗೂ ಹಾಗೇ. ಆದರೆ ಗಂಡಸಿನ ಒಲವು ಸ್ವಾಭಾವಿಕವಾಗಿ ಬಹುಪತ್ನಿತ್ವದ ಕಡೆಗೆ ಎಂಬುದು ನಿನಗೆಲ್ಲಿ ತಿಳಿಯಬೇಕು? ನಿಜವಾದ ಪತಿವ್ರತೆಯು ಇಂಥ ಸೂಕ್ಷ್ಮಗಳನ್ನೆಲ್ಲ ತಿಳಕೊಂಡು ವರ್ತಿಸಬೇಕು. ಸುಮ್ಮನೆ ಬೆಪ್ಪತಕಡಿಯಂತೆ ಕುಳಿತು ಗಂಡ ಅಂದುದಕ್ಕೆಲ್ಲ ಹುಂಗುಟ್ಟಿದರಾಗಲಿಲ್ಲ. ದಾಂಪತ್ಯಕ್ಕೆ ಎಳ್ಳಷ್ಟು ಅಡೆ-ತಡೆ ಬರುತ್ತದೆಂದು ಕಂಡುಬಂದರೆ ಪತಿಯ ಮನಸ್ಸಿನ ವಿರುದ್ಧ ನಡೆದಾದರೂ ಇಬ್ಬರ ಒಳಿತನ್ನು ಸಾಧಿಸಬೇಕು. ತನ್ನ ಪತಿಯು ಜಗದ್ವಂದ್ಯನೇ ಇದ್ದರೂ ಇಂಥ ಸಂದರ್ಭದಲ್ಲಿ ಪತಿವ್ರತಾ ಶಿರೋಮಣಿಯಾದವಳು ಹಿಂಜರಿಯಬೇಕಾಗಿಲ್ಲ. ಗಂಡಸಿನ ಬುದ್ಧಿಗೆ ನಿಲುಕದ ಎಷ್ಟೋ ವಿಷಯಗಳು ಹೆಂಗಸಿನ ಹೃದಯಕ್ಕೆ ಗೋಚರವಾಗುವದುಂಟು….”
ಅಕ್ಕನ ಅನುಭವಾಮೃತದಿಂದ ಪುನೀತಳಾದ ಊರ್ಮಿಳೆಯು ‘ನಾನು ಅಂದುದಕ್ಕೆ ಕ್ಷಮಿಸವ್ವಾ’ ಎಂದು ಸಾಷ್ಟಾಂಗ ಪ್ರಣಾಮಗೈದಳು.
“ಶ್ರೀರಾಮ ಪತ್ನಿಯ ನುಡಿಯಲ್ಲಿ ಕುಂದಿಲ್ಲವೆಂಬುದನ್ನು ನಂಬಿರು” ಅ೦ದಳು ಸೀತಾದೇವಿ.
*****








