Home / ಕವನ / ಕವಿತೆ / ಅಂದು-ಇಂದು

ಅಂದು-ಇಂದು

ನನ್ನ ನಿನ್ನ ನಡುವೆಯೇಕೊ
ಏನೊ ವಿರಸ ಸುಳಿಯಿತು,
ಮನದ ಕಣ್ಣಿಗದುವು ರಂಗು-
ಗಾಜ ತೊಡಿಸಿಬಿಟ್ಟತು!

ತಿಳಿಯ ನೀರು ಹೊಳೆವ ನಿನ್ನ
ಕಣ್ಣ ತಂಗೊಳದಲಿ
ಕಂಡೆನಯ್ಯೊ ಕ್ರೂರ ನ-
ಕ್ರಾಳಿಗಳನು ಭಯದಲಿ.

ಮಿಂಚಿನಂತೆ ಚಂಚಲಿಸುವ-
ಪಾಂಗ ಗರ್ಭದಾಳದಿ
ಬಂಡೆಯೆದೆಯ ಒಡೆವ ಸಿಡಿಲ-
ಮರಿಗಳೆಸಿತೊ ಕಂಡೆನು!

ಕೆಂಪು ತಂಪುಗಳನು ಸುರಿವ
ನಿನ್ನ ತುಟಿಯ ದಳದಲಿ
ಬಂಡುಣಿಯುಣಿ `ಡ್ರಾಸಿರ*’ದ
ರುದ್ರ ಕಾಂತಿ ಕಾಂಬೆನು!

ದಂತದಾಡಿಮವು ಕರೆವ
ನಗೆಯ ಮಧುರ ರಸದಲಿ
ಕೃತ್ರಿಮದ ವಿಷವು ಅಡಗಿ
ಕೂತ ಪರಿಯನರಿವೆನು!
ನಿನ್ನನೊಲಿವ ಮುನ್ನ ಬುದ್ಧಿ
`ನೀ ಕುರೂಪಿ’ ಯೆಂದಿತು

ಅದನು ನಕ್ಕು ಭಾವ ನಿನ್ನ
ಕೊರತೆಗಳನೆ ಮೆಚ್ಚಿತು.

ಹೆಚ್ಚು ನುಡಿಯಲೇಕೆ? ನಿನ್ನ
ಒಂದೊಂದು ಹಾವವೂ
ಅಂದು ಕಣ್ಗೆ, ಹಬ್ಬವೆನಿಸೆ,
ರಂಗುಗಾಜ ತೊಡಿಸಿತು.

ಬುದ್ಧಿ-ಭಾವ ಯುದ್ಧದಲ್ಲಿ
ಭಾವವಿಂತು ಗೆದ್ದಿತು.
ಸುಪ್ತ ಚಿತ್ತಗೋರಿಯೊಳಗೆ
ಬುದ್ಧಿಯನ್ನು ಹೂಳಿತು.

ಭಾವದ ಮೊನೆಯನ್ನು ನಿನ್ನ
ಕ್ರೌರ್ಯ ಮೊಂಡುಮಾಡಿತು
ಪ್ರೇತದಂತೆ ಬುದ್ಧಿಯೆದ್ದು
ಅದನೇಳಸಿ ಕಾಡಿತು.

ಹಿಂದೆ ತನಗೆ ಬಂದ ಸೋಲ
ನೆನೆದು ಬುದ್ಧಿ ಸೇಡೊಳು
ವಿಧ ವಿಧ ವಿಧ ಭೂತಗನ್ನ-
ಡಿಗಳ ಕಣ್ಗೆ ಕಟ್ಟಿತು!
* * *
ಹೃದಯಪಾತ್ರೆಯನ್ನು ತುಂಬಿ
ತುಳುಕುತಿದ್ದ ದುಗುಡವು
ಮಾಯವಾಯ್ತು, ದಿಟವು ಆದ-
ರದನು ಶೂನ್ಯ ತುಂಬಿದೆ.

ಶೂನ್ಯದ ಹರಹನ್ನು ಕಂಡು
ಮನವು ಬೆಚ್ಚಿ ನಡುಗಿದೆ
ಅದನು ತುಂಬೆ, ಮತ್ತೆ ಮತ್ತೆ
ಅಳಲನೇ ಕರೆದಿದೆ.

ಅಳಲು ಕೂಡ ಇಲ್ಲವೆಂಬ
ಅಳಲು ಅದನು ಕಾಡಿದೆ!
ಈ ವಿಚಿತ್ರ ತಾಪದಲ್ಲಿ
ಒಂದೆ ಸಮನೆ ಬಾಡಿದೆ!

ನನ್ನ ನಿನ್ನ ನಡುವಯೇಕೊ
ಏನೊ ವಿರಸ ಹುಟ್ಟಿತು!
ಮನದ ಕಣ್ಣಿಗದುವು ರಂಗು-
ಗಾಜ ತೊಡಿಸಿಬಿಟ್ಟತು!
*****
* ನೊಣಗಳನ್ನು ಆಕರ್ಷಿಸುವ, ಅನಂತರ ಅವುಗಳನ್ನು ಕಬಳಿಸುವ ಒಂದು ಮಾಂಸಾಹಾರಿ ಪುಷ್ಪ.

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...