Home / ಕವನ / ಕವಿತೆ / ಪಥಿಕ

ಪಥಿಕ

ಮೇಲುನದಿ ದಂಡೆಯಲಿ ನಡೆದಿದ್ದ ನಾಮನುಜ,
ಮುಂಜಾವಿನಲಿ ಒಬ್ಬನೊಬ್ಬ;
ಮೂಡಿತ್ತು ಮಂದಾನಿಲ, ನೇರದಲಿ ಆದರದಿ;
ವೃಕ್ಷದಲಿ ಉಲಿಉಲಿವ ಹಕ್ಕಿಗಳ ಕೂಡಿ.
ಮೆಲುನುಡಿಯ ಗಾನಕ್ಕೆ, ಮೀಸಲಾಗಿರುವಂತೆ;
ಹಾಡಿದವು ಮಾಮರವನೇರಿರುವ ಹಕ್ಕಿ.
ಹಣ್ಣು ಹೂವ್ಗಳತಾಕಿ ಮಂಡಲದಿ ನಾದದಲಿ
ಕೊರಲಿಂಪು ಗಾನದಲಿ ಸವಿಯನುಣಿಸಿ,
ಮೇಲುನದಿ ದಂಡೆಯಲಿ ನೆರೆದಿತ್ತು-
ಮಂದಹಾಸ- ಅಖಿಲ ಸಮೂಹದ ಕೋಶ.
ದಂಡೆಹಾದಿಯ ಹಿಡಿದು, ಮುಂಜಾವಿನಲಿ;
ಹಾಯುವವ ಮನುಜನಿವನಾರು?
ಹಣ್ಣು ಹೂವ್ಗಳತಾಕಿ ಮಂಡಲದಿ ನಾದದಲಿ
ಕೊರಲಿಂಪು ಗಾನದಲಿ ಬೆರೆಸಿರುವ
ಹಕ್ಕಿಗಳ ಜತೆಗೂಡಿ ಮೇಳದಲಿ
ಹಾಯುವವ ಪಥಿಕನೊ ಏನೊ?
ಸೃಷ್ಟಿ ಮಿಳಿತದಲಿ, ಮೌನನಿಧಿಯಲಿ
ಮುಳುಗಬಂದಿಹನೊ ಏನೊ?
ಚಲುವ ನಲುವಿನ ಲತೆಯ ಮುಡಿಯಲ್ಲಿ ಬಾಳಿ
ಹೊರಳಿ ಬಿರಿದೊಡೆದು ಪರಿಮಳವ ಬೀರುವಾ
ಮುಗುಳ ಮಲ್ಲಿಗೆಗೆ ಮನವ ಮೋಹಿಸಿದನವನು.
ಮುಂಜಾವಿನಲಿ, ಮೇಲುನದಿ ದಂಡೆಮಾರ್ಗದಲಿ;
ಆ ಪಥಿಕ, ತತ್ವೋಪಾಸಕನ ನೇರದಲಿ ಸುತ್ತಲಲಿ
ಮೆರೆದಿತ್ತು ಪ್ರಕೃತಿ ಪ್ರವಾಹ – ಮುಂಜಾವಿನಲಿ
ಪಥಿಕಶ್ರೇಷ್ಟನ ಮಾರ್ಗ ಪೂರ್ಣಕೂಡಿ.
ನಡೆದಿದ್ದನಾಮನುಜ ಮೌನದಲಿ ಎತ್ತಲೋ?
ದಂಡೆಮಾರ್ಗವಬಿಟ್ಟು ನಿಜನಸ್ಥಾನಕೆ ತಾನು.
***
ಮೇಲುನದಿ ದಂಡೆಯಲಿ ಮೂಡಿತ್ತು ಕಿರಣ,
ಪಥಿಕಶ್ರೇಷ್ಠನ ಮಾರ್ಗಕ್ರಮಣ ಹಿಡಿದು;
ಮನದಲ್ಲಿ ನೆಲೆದಿತ್ತು ಗಾಢಭಾವ,
ತತ್ವೋಪಾಸಕನ ಅತ್ಯ೦ತದಾಹ;
ಮೆಲ್ಲನೆಯ ಮನದಲ್ಲಿ ಅಂದಿದ್ದ ರಾಗ,
ಕೊನೆಯಮುಟ್ಟಿತು ಖೇದಕೂಡಿ;
ಗಾಢಭಾವವು ಸ್ಮೃತಿಗೆ ಬಂದು,
ಪಥಿಕಶ್ರೇಷ್ಠನ ಶಾಂತತೆಗೆ ತೊಡರವಿಟ್ಟು.
ಮನದೊಳಗೆ ಚಿಂತಿಸುತ ನೆನೆದಿದ್ದ ಆ ಮೌನಿ,
“ಪ್ರಕೃತಿಯಲಿ ಎಲ್ಲವೆಲ್ಲವು ಗೆಲುವಬೀರಿರಲು
ಜಗವೇಕೆ? ಕಾರ್ಮುಗಿಲ ಭ್ರಾಂತಿಗೆ ಎಳೆಯುತಿದೆಯೆಂದು?
ಸೃಷ್ಟಿ ತೆರೆ ಮಂದಹಾಸದಲಿ ನಾ-ಮೆರೆಯುತಿರಲು
ನೂರಾರು ಜೀವಗಳ ಜೀವಾಳ ಕುಂದಿ ಏಕೆ
ಸವೆಯುತಿದೆಯೆಂದು?
ಜಗದ ಮನದಲಿ ಅನ್ನೋನ್ಯ ಏಕೆ? ನೆಲೆಯಿಸಲಿಲ್ಲ
ಎಂಬ ಚಿ೦ತಾಗ್ನಿ ಉದಯಿಸಿತು ಅವನಲ್ಲಿ,
ಮಧುರವಾಸ – ಆ ಮೇಲುನದಿ ದಂಡೆಯಲ್ಲಿ
ದಹಿಸಿತವನನ್ನು, ಕ್ರೂರಾವೇಶಕ್ರೋಶ.
ಪೃಥ್ವಿಯಲಿ ತಮ್ಮಗಳ ಮೇಲೆ ಮರೆತು
ಮಲಗಿರುವ ಈ ಜನವೇಕೆ? – ಸರಿಪಡಿಸಲೊಲ್ಲರು
ತಮ್ಮಗಳ ಒಳಜಗಳ,” ಎಂದು ಮರುಗಿದನವನು
ಮೌನಿ-ವೀರಸೇನಾನಿ.
ಮುಗಿದಿತ್ತು ಈದೊಂದುಳಿಯ ಪೀಡಾವಿವರಣೆ
ಮೌನಾವಲಂಬಿಯ ಅಭಯ ಯೋಜನೆಯಿಂದ
ವೃಕ್ಷದಲೆ ಉಲಿಉಲಿದಿತ್ತು ಹಕ್ಕಿಗಳು ಕೂಡಿ
ಮೌನಿ ಬೆರೆಸಿದನು ಆ ಕೊರಲಿಂಪು ಗಾನದಲಿ
ಒಮ್ಮೆಯೇ ಖೇದ ಮರೆತು.
ಪ್ರಕೃತಿ ಆರಾಧನೆಗೆ – ತದೇಕಧ್ಯಾನಕ್ಕೆ ಹಿಂದಿರುಗಿ
ಬೇಡಿದನು, ಈಶನಲಿ – ತತ್ವೋಪಾಸಕ, ವೀರಪಥಿಕ.
ಶಾಂತಿಸಮ್ಮತ ಮೂಲಕಾಂತಿ.
*****
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...