ಕುಂಬಳ ಸೊಟ್ಟೀಕೈಯೊಳು ಪಿಡಿದು ನಡುವಿಗೆ ಲಂಗುಟಪಟ್ಟಿಯ ಬಿಗಿದು|
ಕುಂಬಳರಾಜನ ಪಟ್ಟಣದೊಳಗೆ ನಡೆದನು ತಾಜೋಗಿ || ೧||
ಉಂಬಳಿ ತನಗೆ ಮೂಜಗವಾಗೆ ತಿಂಬುವ ಅನ್ನದ ಕೊರೆತೆಯನೀಗಿ |
ತುಂಬಿದ ಊರೊಳು ಜನಮನ ಪರಿಕಿಸೆ ನಡೆದನು ತಾಜೋಗಿ || ೨||
ಭಿಕ್ಷೆಯ ಬೇಡಲು ಬಂದಿಹೆನಮ್ಮಾ ಮತ್ಸರಿವಿರದಿರೆ ಭಿಕ್ಷೆಯ ನೀಡು |
ತುಚ್ಛರ ಮನೆಯ ಭಿಕ್ಷೆಯ ನೆಂದಿಗೂ ಗ್ರಹಿಸೆನು ನಾನಿಂದೂ || ೩ ||
ಮನೆಯಜಮಾನನು ಮೈಮುರಿ ದುಡಿದು ಹೊಲದೊಳು ಧಾನ್ಯವ ಬೆಳೆದಿರೆ ನೀ |
ನನುನಯದಿಂದಲಿ ನೀಡಲು ಭಿಕ್ಷೆಯ ಗ್ರಹಿಸುವೆ ಪ್ರೇಮದಲ್ಲಿ || ೪ ||
ಮಾನಸ ಶ್ರಮವನು ಮಾಡುತೆ ನಿನ್ನಯ ಪ್ರೇಮದಪತಿ ಧನಗಳಿಸುತಿರೆ |
ದಾನವ ಭಕುತಿಲಿ ಮಾಡಿದೊಡದನನು ಸಾನಂದದಿನಾಂ ಕೊಳ್ಳುವೆನೂ ||೫||
ಅನ್ನದ ವಸ್ತ್ರದ ಕೊರೆತೆಯನರಿಯೆನು ನನ್ನಯಗೆಳೆಯವ ಧನಪತಿಯು |
ಚಿನ್ನ ಮನದಿನೀ ನೆನ್ನೊಳು ನೀಡುವ ಭಕುತಿಯ ಭಿಕ್ಷೆಯ ಕೊಳ್ಳುವೆನು ||೬||
ಜಾತಿ ವಿಜಾತಿಯ ಭೇಧವ ನೆರಿಯೆನು ಪ್ರೀತಿಯಿಂದೆ ನೀಭಿಕ್ಷೆಯನೀಡಲು |
ಓತುಹರಿಸುವೆ ನಖಂಡಸು ಮಂಗಲೆಯಾಗುತೆ ನೀ ಪೊಳೆಯೆಂದೂ || ೭||
ಪೆಣ್ಣನು ಪೊರೆವೆನು ಪತಿರೂಪದಿ ನಾಧನ್ಯ ಸದಾಶಿವ ಮೂರುತಿಯು |
ಇನ್ನು ಜನಗಳ ಪಾಲಿಪೆ ತಂದೆಯ ರೂಪದಿ ಶ್ರೀಹರಿ ವಿಶ್ವಾತ್ಮಾ || ೮ ||
ಸಂಣಮಕ್ಕಳರೂಪದಿ ಪೊರೆವಳು ಎನ್ನಯಸತಿಜಗದಂಬೆ |
ನಿನ್ನಯ ಅತಿಥಿಯ ರೂಪದಿ ಬಂದಿಹೆ ಜಗದೊಳು ನಾನಿಂದೂ || ೯ ||
ಸನ್ನುತ ಬಿಜ್ಜೆಯ ವಿತರಣ ಕಾರ್ಯವ ಸರಸತಿರೂಪದಿ ಮಾಡುವೆನೂ |
ಇನ್ನುನಾನು ಮಾಡದ ಕಾಯಕವದು ಜಗದೊಳಗೇನುಂಟು || ೧೦||
ಕಪ್ಪು ಸಂತೆಯಿಂ ಜನಗಳು ದುಡ್ಡನು ಗಳಿಸುವರೆಂಬ ದೂರನುಕೇಳುತೆ |
ತಪ್ಪನು ತಿದ್ದಲು ಜಗದಲಿ ಬಂದಿಹೆ ಜೋಗಿಯ ವೇಷದಲಿ || ೧೧ ||
ವಕ್ಕಲಿಗರು ತಾ ರೊಕ್ಕದ ಆಶಿಲಿ ಹೊಲಬೀಳ್ಗೆಡಹುತೆ ಪೀಡಿಪರೊಡೆಯ ನ|
ಚೊಕ್ಕು ಭೂಮಿಯನು ಮಾಡುತೆ ಬೆಳೆಯಲು ಬುದ್ಧಿಯ ಹೇಳುವೆನೂ || ೧೨ ||
ಚಿಕ್ಕಮಕ್ಕಳು ಬಸವಮೋಹನರು ಜಗದಿ ಮಾಡಿದ ಬೋಧೆಗಳಾ |
ಚೊಕ್ಕಮನದಿ ಜನ ತಿಳಿದು ನಡೆದೊಡೆನಾನಲಿನೆನು ಸಂತಸದಿ || ೧೩||
ಶಿವಾ ಮಾದೇವಾ ನಾನೇ ಶಿವಾ ನೀತಿಗೆಟ್ಟವಗೆ ಎಲ್ಲಿ ಶಿವಾ||
*****

















