೧
ನಶ್ವರವು ಜಗದಲ್ಲಿ ನರನ ಬಾಳದರಿಂದ
ಇರುವಲ್ಪದಿನಗಳಲಿ ವ್ಯಥೆ-ಚೆ೦ತೆಯೇಕೆ?
ಮತ್ಯುವೊ೦ದತಿಸತ್ಯವಾಗಿರಲು ನಾವಿಂದು
ಸುಖ ಹೀರಬೇಕು; ನಾಳೆಯನೆಣಿಸಬೇಕೇ?
೨
ಸತ್ತ ಮೇಲೇನೆಂದು ತಿಳಿದವರು ಯಾರಿಲ್ಲ.
ಎಷ್ಟೊ ಜನ ಹೋಗಿಹರು, ಬಂದವರ ಕಾಣೆ.
ಸೊಗವಡುವುದೇ ನಾಕವಳಲುವುದೆ ದಿಟ ನರಕ.
ಸತ್ತ ಮೇಲೆಲ್ಲರೂ ಒ೦ದು ಹಿಡಿ ಮಣ್ಣೇ.
೩
ವಿಧಿಯದೃಷ್ಟದ ಬಲುಮೆ ನರನ ಕುಣಿಸುವುದಿಲ್ಲಿ.
ಬಂದುದನ್ನನುಭವಿಸಬೇಕು. ಕೊರಗುವುದೇ?
ಹಿರಿಯಾಸೆ ಬೇಡ, ಮಿತ ಸರಳತೆಯೆ ಸಾಕೆಮಗೆ.
ಇಹ ಸುಖವು ಶೂನ್ಯವೆನೆ ಪರವು ದಿಟವಿಹುದೇ?
೪
ಪ್ರೇಮವೆಂಬುದೆ ಮುಖ್ಯ, ದ್ರಾಕ್ಷಾಸವವೆ ಸೌಖ್ಯ,
ನಲ್ಲೆಯುಗುರಿನ ಸಿತಾರದ ಮಿಡಿತದಿಂಪು,
ಮನದನ್ನೆ ತುಟಿಯೊತ್ತು, ನಲ್ಗಬ್ಬ ಬಳಿಯಿರವು,
ಇಷ್ಟಿರಲು ರೊಟ್ಟಿಯಿರೆ ಅದೆ ಸಗ್ಗ ಸೊಂಪು
೫
ಸತ್ಯವಾವುದೊ ಏನೊ, ಒಬ್ಬೊಬ್ಬರೂಂದೊಂದು
ನುಡಿಯುವರು: ಹೇಳಿಕೆಯೊಳಲ್ಲವೊಮ್ಮತವು
ಆಯುಸ್ಸು ಮಿತವಿಹುದು, ಚಿ೦ತಿಯಮಿತವದಿರಲು
ಬೇಕು ದೊರೆತಷ್ಟು ಸುಖವುಲ್ಲಾಸದಿರವು
೬
ಪುಣ್ಯವೋ ಪಾಪವೋ ಮಸಣದೊಳಗೊಂದೆ ತೆರ
ನಮ್ಮ ಮೈ ಮಣ್ಣಾಗಿ ಘಟವಾಗಬಹುದು.
ಇಂದು ಮನವನು ಸೂರೆಗೊಂಡ ಸೊಬಗೇ ನಾಳೆ
ದೂಳಿನಲಿ ದೂಳಾಗಿ, ತಿರುಗಿ ಹೂವಹುದು
೭
ಎಷ್ಟು ಸುಖ ಪಡೆದಷ್ಟು ಲಾಭವೇ ನಮಗಹುದು.
ನಶ್ವರದ ಲೋಕದಲಿ ತಡದಿರವು ಸಲ್ಲ
ಬಾ ಹೀರು ಮಧುವನ್ನು ತಡವೇಕೆ? ತಡೆಯೇಕೆ?
ಉಮರ ಸಂದೇಶವಿದು. ಆಲಿಸೀ ಸೊಲ್ಲ
*****
ಶ್ರೀ.ಡಿ.ವಿ.ಗು೦ಡಪ್ಪನವರ ‘ಉಮರನ ಒಸಗೆ’ ಯನ್ನು ಓದಿದ ಮೇಲೆ ಬರೆದುದು.
೧೯೪೫








