Home / ಕವನ / ಕವಿತೆ / ಹಿಂದಿನ ಕಾಲದ ಒಂದು ಚಿತ್ರ

ಹಿಂದಿನ ಕಾಲದ ಒಂದು ಚಿತ್ರ

(ಕಥಾ ಕವನ)


ಏಳಲಿಕಾರದೆ, ಮರಣದ ಶಯ್ಯೆಯೊ-
ಳೊರಗಿಹನೋರ್ವನು ಹಳೆ ಮುದುಕ
ಕಳೆದಿದೆ ಪ್ರಾಯದೊಳೆಪ್ಪತ್ತರ ಗಡಿ
ಸಾಯುವ ಸಮಯವು ಸನಿಯಕಿದೆ.
ಬಳಿಕಾ ಮುದುಕನು ಒಂದು ದಿನ
ಅಳಿಯಲು, ಬರಡಾಯಿತು ಪ್ರಾಣ


ಒಂದರ ಮೇಲೊಂದಾಗುತ ನಾಲುಕು
ಸ೦ದಿವೆ ಮುದುಕಗೆ ಮದುವೆಗಳು
ಪೂಂದಿರೆ ಮರಣವ ನಾಲ್ಕನೆ ಹೆಂಡತಿ,
ಮುಂದಕೆ ಮದುವೆಯ ನಿಶ್ಚೈಸಿ,
ಎಂಟೇ ವರ್ಷದ ಹುಡುಗಿಯನು
ಮುದುಕನು ಮುದದಲಿ ವರಿಸಿಹನು


ಮುದುಕನ ಸಾವಿನ ಸಮಯದಿ ಹುಡುಗಿಯು
ಬೀದಿಯೊಳೋರಗೆಯವರೊಡನೆ
ಮುದದಲಿ ಮಣ್ಣಿನೊಳಾಟವನಾಡುತ-
ಲಿದ್ದಳು ಚಿಂತೆಗಳಿಲ್ಲದೆಯೆ!
ಆಗಲೆ ಅಲ್ಲಿಗೆ ಅವಳ ಪಿತ
ಬೇಗನೆ ಬಂದನು ದುಃಖಿಸುತ


ಅಂಧಾಚಾರವನೆಲ್ಲವ ತಪ್ಪದೆ
ತನ್ನಯ ನಿಯಮಾವಳಿಗಳಲಿ
ಒಂದಿಸಿಯಾಚರಿಸುವ ಕರ್ಮಿಷ್ಟ
ಶ್ರೋತ್ರಿಯ ಬ್ರಾಹ್ಮಣನವಳ ಪಿತ.
ಅದರಿಂದಾ ಎಳೆ ಹುಡುಗಿಯನು
ಬಾಲ್ಯ ವಿವಾಹಕೆ ತೆತ್ತಿಹನು


ಗಂಡನು ಸತ್ತರು, ಕ೦ಬನಿ ಕರೆಯಲು
ತಿಳಿಯದ ತನ್ನ ಕುಮಾರಿಯನು
ಕಂಡನು ತಂದೆಯು ಬಳಿಕವಳೊಡನೆ
ಹೇಳಿದನಾಗಲೆ ನಯ ನುಡಿಯ.
ತಂದೆಯ ಮಾತನು ಕಿವಿಗೊಟ್ಟು,
ಕೇಳಿದಳವಳಾಟವ ಬಿಟ್ಟು!


“ಮಗಳೇ! ನೀನೊಂದತಿ ಶುಭ ಕಾರ್ಯವ-
ನಿಂದೆಸಗಲೆ ಬೇಕದರಿಂದ
ಸೊಗದಲಿ ನಿನ್ನಯ ಪತಿಯೊಂದಿಗೆ ನೀ-
ನತಿಹಿತದಲಿ ಬಾಳಲು ಬಹುದು.
ಅಲ್ಲದೆ ನಿನ್ನಿ೦ದೇಳುತಲೆ-
ಯವರನು ನೀನುದ್ಧರಿಸುವೆಲೆ! ”


ಎ೦ದುದ ಕೇಳುತಲೊಪ್ಪುತ ಹುಡುಗಿಯು
ಬ೦ದಳು ಮುದದಲಿ ಮನೆಯೆಡೆಗೆ
ಅಂದವಳನು ಬಳಿಕಂದದಿ ಮೀಯಿಸಿ,
ಹೊಸ ಹೊಸ ಉಡುಗೆಯನುಡಿಸುತ್ತ,-
ಬಗೆವಗೆಯಾಭರಣಾದಿಗಳ
ತೊಡಿಸುತ, ಸಿಂಗರಿಸಿದರವಳ


ಬಂಧುಗಳೊಂದಿಗೆ ಮೆರವಣಿಗೆಯಲಿ
ಮುದುಕನ ಶವವನು ಮಸಣದೆಡೆ
ತಂದರು; ಆಗಲೆ ತಂದೆಯು ಹುಡುಗಿಯ-
ನಲ್ಲಿಗೆ ಕರೆಯುತ ಕೊಂಡೊಯ್ದ.
ಏನೂ ಅರಿಯದ ಆ ಕನ್ನೆ
ನಡೆದಳು ದಿಬ್ಬಣವೆಂದೊಡನೆ.


ಚಿತೆಯನು ವಿರಚಿಸಿ, ಮುದುಕನ ಶವವನು
ಮಲಗಿಸಿ ಬಿಟ್ಟರು ಅದರಲ್ಲಿ
ಜೊತೆಯಲಿ ಹಡುಗಿಯನೊಡನೆಯೆ ಮಲಗುವ
ತೆರದೊಳಗೆಸಗಿ ಪುರೋಹಿತರು,
ಮಂತ್ರಗಳೇನನೊ ಹೇಳಿದರು.
ತಂತ್ರದಿ ಕ್ರಿಯೆಗಳ ಮಾಡಿದರು.

೧೦
ಬಳಿಕಾ ಹುಡುಗಿಯ ತಂದೆಯೆ ಕಲ್ಮನ-
ದಿಂದಲಿ ತನ್ನಯ ಕೈಮುಟ್ಟಿ,
ಜ್ವಲಿಸಿದನಾಗಳೆ ಕಾಷ್ಠದ ನಾಲುಕು
ಮೂಲೆಗಳಾಪರಿಯೇನೆಂಬೆ!
ಬೆಂಕಿಯು ಮೈಯನು ಮುದ್ದಿಸಲು
ಕನ್ನೆಯು ಕಿಟ್ಟನೆ ಕಿರಿಚಿದಳು!

೧೧
ಹುಡುಗಿಯು ಚಿತೆಯಿಂ ದುಮುಕುತಲೋಡಲು.
ಬಾಂಧವರವಳನು ಬೆದರಿಸುತ,
ಹಿಡಿದಾ ಕಾಷ್ಠಕೆ ದೂಡಿದರಾಗಲೆ
ಒಡನೆ ಪುರೋಹಿತ ಶೀಘ್ರದಲಿ-
ಪ್ರಾಯಶ್ಚಿತ್ತವ ಮಾಡಿದನು.
ಬೆಂಕಿಯ ಬಿರುಸಾಗುರಿಸಿದನು

೧೨
ಬಾಲೆಯು ಬೆಂಕಿಯ ಬೇಗೆಯ ಸಹಿಸಲಿ-
ಕಾಗದೆ ಕೂಗುತಲಿರುತಿರಲು,
ಆಲಿಸಿ, ರೋದಿಪ ದನಿಯದು ಕೇಳದ
ತೆರದಲಿ ಡೋಲು-ನಗಾರಿಯನು-
ಕಿವಿ ಕಿವುಡಾಗುವ ರೀತಿಯಲಿ
ಮೊಳಗಿಸಿ ಬಿಟ್ಟರು ಬೇಗದಲಿ

೧೩
ತಿರುಗಾ ಬಾಲಿಕೆ ಬಾರದ ತೆರದಲಿ
ಬಿದಿರಿನ ಉದ್ದದ ಕೋಲಿನಲಿ
ಉರಿಯುವ ಕಿಚ್ಚಿಗೆ ದೂಡುತಲೊತ್ತಿ,
ಹಿಡಿದರು ಕೆಲವರು ಬಂಧುಗಳು
ಹುಡುಗಿಯ ಮೆಲ್ಲೊಡಲಗ್ನಿಯಲಿ
ಐಕ್ಯವದಾಯಿತು ಶೀಘ್ರದಲಿ

೧೪
ಆ ಸುಡುಗಾಡಿನ ಸುತ್ತಿನೊಳೆಲ್ಲಿಯು
ನಟ್ಟಿರುಳಿನ ನೀರವತೆಯಲಿ,
ಬೀಸುವ ಗಾಳಿಯ ಹೊಯ್ಲಿನೊಳೀಗಲು
ಕೇಳಿಸುತಿರುವುದು ಕೀರುದನಿ!
ಕನ್ಯೆ ಪಿಶಾಚಿಯ ರೂಪಾಂತು
ತಿರುಗುವಳೆಂದೊರೆಯುವರಿಂತು!
*****
೧೯೩೭

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...