Home / ಕವನ / ಕವಿತೆ / ಹಿಂದಿನ ಕಾಲದ ಒಂದು ಚಿತ್ರ

ಹಿಂದಿನ ಕಾಲದ ಒಂದು ಚಿತ್ರ

(ಕಥಾ ಕವನ)


ಏಳಲಿಕಾರದೆ, ಮರಣದ ಶಯ್ಯೆಯೊ-
ಳೊರಗಿಹನೋರ್ವನು ಹಳೆ ಮುದುಕ
ಕಳೆದಿದೆ ಪ್ರಾಯದೊಳೆಪ್ಪತ್ತರ ಗಡಿ
ಸಾಯುವ ಸಮಯವು ಸನಿಯಕಿದೆ.
ಬಳಿಕಾ ಮುದುಕನು ಒಂದು ದಿನ
ಅಳಿಯಲು, ಬರಡಾಯಿತು ಪ್ರಾಣ


ಒಂದರ ಮೇಲೊಂದಾಗುತ ನಾಲುಕು
ಸ೦ದಿವೆ ಮುದುಕಗೆ ಮದುವೆಗಳು
ಪೂಂದಿರೆ ಮರಣವ ನಾಲ್ಕನೆ ಹೆಂಡತಿ,
ಮುಂದಕೆ ಮದುವೆಯ ನಿಶ್ಚೈಸಿ,
ಎಂಟೇ ವರ್ಷದ ಹುಡುಗಿಯನು
ಮುದುಕನು ಮುದದಲಿ ವರಿಸಿಹನು


ಮುದುಕನ ಸಾವಿನ ಸಮಯದಿ ಹುಡುಗಿಯು
ಬೀದಿಯೊಳೋರಗೆಯವರೊಡನೆ
ಮುದದಲಿ ಮಣ್ಣಿನೊಳಾಟವನಾಡುತ-
ಲಿದ್ದಳು ಚಿಂತೆಗಳಿಲ್ಲದೆಯೆ!
ಆಗಲೆ ಅಲ್ಲಿಗೆ ಅವಳ ಪಿತ
ಬೇಗನೆ ಬಂದನು ದುಃಖಿಸುತ


ಅಂಧಾಚಾರವನೆಲ್ಲವ ತಪ್ಪದೆ
ತನ್ನಯ ನಿಯಮಾವಳಿಗಳಲಿ
ಒಂದಿಸಿಯಾಚರಿಸುವ ಕರ್ಮಿಷ್ಟ
ಶ್ರೋತ್ರಿಯ ಬ್ರಾಹ್ಮಣನವಳ ಪಿತ.
ಅದರಿಂದಾ ಎಳೆ ಹುಡುಗಿಯನು
ಬಾಲ್ಯ ವಿವಾಹಕೆ ತೆತ್ತಿಹನು


ಗಂಡನು ಸತ್ತರು, ಕ೦ಬನಿ ಕರೆಯಲು
ತಿಳಿಯದ ತನ್ನ ಕುಮಾರಿಯನು
ಕಂಡನು ತಂದೆಯು ಬಳಿಕವಳೊಡನೆ
ಹೇಳಿದನಾಗಲೆ ನಯ ನುಡಿಯ.
ತಂದೆಯ ಮಾತನು ಕಿವಿಗೊಟ್ಟು,
ಕೇಳಿದಳವಳಾಟವ ಬಿಟ್ಟು!


“ಮಗಳೇ! ನೀನೊಂದತಿ ಶುಭ ಕಾರ್ಯವ-
ನಿಂದೆಸಗಲೆ ಬೇಕದರಿಂದ
ಸೊಗದಲಿ ನಿನ್ನಯ ಪತಿಯೊಂದಿಗೆ ನೀ-
ನತಿಹಿತದಲಿ ಬಾಳಲು ಬಹುದು.
ಅಲ್ಲದೆ ನಿನ್ನಿ೦ದೇಳುತಲೆ-
ಯವರನು ನೀನುದ್ಧರಿಸುವೆಲೆ! ”


ಎ೦ದುದ ಕೇಳುತಲೊಪ್ಪುತ ಹುಡುಗಿಯು
ಬ೦ದಳು ಮುದದಲಿ ಮನೆಯೆಡೆಗೆ
ಅಂದವಳನು ಬಳಿಕಂದದಿ ಮೀಯಿಸಿ,
ಹೊಸ ಹೊಸ ಉಡುಗೆಯನುಡಿಸುತ್ತ,-
ಬಗೆವಗೆಯಾಭರಣಾದಿಗಳ
ತೊಡಿಸುತ, ಸಿಂಗರಿಸಿದರವಳ


ಬಂಧುಗಳೊಂದಿಗೆ ಮೆರವಣಿಗೆಯಲಿ
ಮುದುಕನ ಶವವನು ಮಸಣದೆಡೆ
ತಂದರು; ಆಗಲೆ ತಂದೆಯು ಹುಡುಗಿಯ-
ನಲ್ಲಿಗೆ ಕರೆಯುತ ಕೊಂಡೊಯ್ದ.
ಏನೂ ಅರಿಯದ ಆ ಕನ್ನೆ
ನಡೆದಳು ದಿಬ್ಬಣವೆಂದೊಡನೆ.


ಚಿತೆಯನು ವಿರಚಿಸಿ, ಮುದುಕನ ಶವವನು
ಮಲಗಿಸಿ ಬಿಟ್ಟರು ಅದರಲ್ಲಿ
ಜೊತೆಯಲಿ ಹಡುಗಿಯನೊಡನೆಯೆ ಮಲಗುವ
ತೆರದೊಳಗೆಸಗಿ ಪುರೋಹಿತರು,
ಮಂತ್ರಗಳೇನನೊ ಹೇಳಿದರು.
ತಂತ್ರದಿ ಕ್ರಿಯೆಗಳ ಮಾಡಿದರು.

೧೦
ಬಳಿಕಾ ಹುಡುಗಿಯ ತಂದೆಯೆ ಕಲ್ಮನ-
ದಿಂದಲಿ ತನ್ನಯ ಕೈಮುಟ್ಟಿ,
ಜ್ವಲಿಸಿದನಾಗಳೆ ಕಾಷ್ಠದ ನಾಲುಕು
ಮೂಲೆಗಳಾಪರಿಯೇನೆಂಬೆ!
ಬೆಂಕಿಯು ಮೈಯನು ಮುದ್ದಿಸಲು
ಕನ್ನೆಯು ಕಿಟ್ಟನೆ ಕಿರಿಚಿದಳು!

೧೧
ಹುಡುಗಿಯು ಚಿತೆಯಿಂ ದುಮುಕುತಲೋಡಲು.
ಬಾಂಧವರವಳನು ಬೆದರಿಸುತ,
ಹಿಡಿದಾ ಕಾಷ್ಠಕೆ ದೂಡಿದರಾಗಲೆ
ಒಡನೆ ಪುರೋಹಿತ ಶೀಘ್ರದಲಿ-
ಪ್ರಾಯಶ್ಚಿತ್ತವ ಮಾಡಿದನು.
ಬೆಂಕಿಯ ಬಿರುಸಾಗುರಿಸಿದನು

೧೨
ಬಾಲೆಯು ಬೆಂಕಿಯ ಬೇಗೆಯ ಸಹಿಸಲಿ-
ಕಾಗದೆ ಕೂಗುತಲಿರುತಿರಲು,
ಆಲಿಸಿ, ರೋದಿಪ ದನಿಯದು ಕೇಳದ
ತೆರದಲಿ ಡೋಲು-ನಗಾರಿಯನು-
ಕಿವಿ ಕಿವುಡಾಗುವ ರೀತಿಯಲಿ
ಮೊಳಗಿಸಿ ಬಿಟ್ಟರು ಬೇಗದಲಿ

೧೩
ತಿರುಗಾ ಬಾಲಿಕೆ ಬಾರದ ತೆರದಲಿ
ಬಿದಿರಿನ ಉದ್ದದ ಕೋಲಿನಲಿ
ಉರಿಯುವ ಕಿಚ್ಚಿಗೆ ದೂಡುತಲೊತ್ತಿ,
ಹಿಡಿದರು ಕೆಲವರು ಬಂಧುಗಳು
ಹುಡುಗಿಯ ಮೆಲ್ಲೊಡಲಗ್ನಿಯಲಿ
ಐಕ್ಯವದಾಯಿತು ಶೀಘ್ರದಲಿ

೧೪
ಆ ಸುಡುಗಾಡಿನ ಸುತ್ತಿನೊಳೆಲ್ಲಿಯು
ನಟ್ಟಿರುಳಿನ ನೀರವತೆಯಲಿ,
ಬೀಸುವ ಗಾಳಿಯ ಹೊಯ್ಲಿನೊಳೀಗಲು
ಕೇಳಿಸುತಿರುವುದು ಕೀರುದನಿ!
ಕನ್ಯೆ ಪಿಶಾಚಿಯ ರೂಪಾಂತು
ತಿರುಗುವಳೆಂದೊರೆಯುವರಿಂತು!
*****
೧೯೩೭

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...