ಸುಡು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು!
ಪಯಣವಿಲ್ಲದೆ ನರನು ಬಾಳಿದರೆ-ತಪ್ಪೇನಿತ್ತು?
ನಿರ್ಮಿಸಿಹನೀಗ ನರಕವನ್ನು ನರಪ್ರಾಣಿಗಳಿಗೆ,
ಒಬ್ಬನ ಸುಖಕಾಗಿ ಇನ್ನೊಬ್ಬರಿಗೆ ದುಃಖ:
ಒರ್ವನ ಸ್ವರ್ಗಕ್ಕಾಗಿ ಇನ್ನೊರ್ವನಿಗೆ ರವರವ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
ಬಿಳಿಯನಿಗಿದೆ ಮಂಜುಗಡ್ಡೆಯ ತಿನುವಾಸೆ;
ಅದಕೆ ನಂಜಿನಂಥ ಶೆಡ್ಡಿನಲ್ಲಿ ನಿಲ್ಲುವನು ಕರಿಯ.
ಬಿಳಿಯನಿಗೆ ಬೇಕು ಕೈಜೋಡಿಸಿದ ಸೇವೆ,-
ಆದಕೆ ಕರಿಯನಾದ ನಿತ್ಯಸೇವಕ!
ಇವ ಬಿಳಿಯ ಅವ ಕರಿಯ, ಇವ ಹಾರುವ ಅವ ಹೊಲೆಯ,
ಇವ ಸೇವ್ಯ ಅವ ಸೇವಕ, ಇವ ಗಾಣಿಗ ಅವ ಗಾಣ,-
ಅವ ತ್ರಾಣ-ಅವ ನಿತ್ರಾಣ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
ಮಾನವಜಾತಿಯನ್ನು ಮಣ್ಣುಮುಕ್ಕಿಸುವ ರೀತಿಯ ನೋಡಿರೆ!
ಪಶುವಿಗಿಂತ ಕಡೆ,-ಪಕ್ಷಿಗಿಂತ ಕೀಳು ಮಾನವನಿಲ್ಲಿ!
ತಲೆಗೆ ಎಣ್ಣೆಯಿಲ್ಲ, ಮೈಗೆ ಬಟ್ಟೆಯಿಲ್ಲ-
ಮೈಯಲ್ಲಿಯ ಎಣ್ಣೆ ಮುಗಿಯುವ ತನಕ-
ಕಣ್ಣೆದುರಿನ ಬಟ್ಟೆ ಕಾಣುವ ತನಕ-
ದುಡಿಯಬೇಕು ಮಡಿಯಬೇಕಿಲ್ಲಿ ಮಾನವನು!
ಅಡಿಯಾಳಾಗಿ ನಡೆಯಬೇಕು!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
ದಾಸ್ಯದಲ್ಲಿ ಸಿಲುಕಿ ಗಾಸಿಗೊಂಡ ತಾಯ್ನಾಡೆ!
ಭಾರತದೇವಿ!
ಈ ಬವಣಿ ಮಾತ್ರ ಬರದಿರಲಿ ನಿನಗೆ.
ಪಾರತಂತ್ರ್ಯದಲ್ಲಿ ಬಿದ್ದು ಪಾರಗಾಣದಿರಬಹುದು,-
ಬಡತನ, -ಒಡಕುತನ,-ಎಲ್ಲ ಬರಬಹುದು.
ಆದರೆ ಈ ಮದೋನ್ಮತ್ತತೆಯ ಅಂಧತೆ ಬೇಡ!
ಒಡೆತನದ ನರಕ ಬೇಡ!
ಬಂಡಿವಾಳದ ಬಂಡು ಬೇಡ!
ಅದು ಪರಮ ದಾಸ್ಯ! ದುಃಸ್ಸಹ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
*****


















