Home / ಕವನ / ಕವಿತೆ / ತವರು ಮನೆ

ತವರು ಮನೆ

ಕಡಗವಿಲ್ಲದ ಕೈಯು, ದಿಡಗವಿಲ್ಲದ ಹೊಳೆಯು
ಹಡದವ್ವ ಇಲ್ಲದ ತವರಿ‌ಽಗೆ | ಹೋದಽರ
ನಡುದಾರ್ಯಾಗ ವಸ್ತಿ ಹೋದ್ಹಾಂಗ ||

ಮಳೆಯು ಬಂದರು ಬರಲಿ, ಮರದಽ ಮೇಲಿರುವೆ
ಮಳೆ ನಿಂತ್ರು ಮರದ ಹನಿ ಬಿಡದ | ಹಡದವ್ವ
ನೀಬಿಟ್ರ ನಿನ್ನ ಮನ ಬಿಡದ ||

ಕಾಸಿಗೆ ಹೋಗುದಕ, ಏಸುದಿನ ಬೇಕವ್ವ
ತಾಸ್ಹೊತ್ತಿನ ಹಾದಿ ತವರಿಽಗೆ | ಹೋದಽರ
ಕಾಸಿ ಅದಾಳ ಹಡದವ್ವ ||

ಹಡದವ್ವದಾಳೆಂದು, ಬಡಬಡ ಒಳಗ್ಹೋದೆ
ಒಳಗ ಹಡದವ್ನ ಸೊಸ್ತೆಽರ | ಸಪ್ಪಳಕ
ತುದಿಗಟ್ಟಿತಳಗ ತಿರುಗೇನ ||

ಬಡವರು ಬಗ್ಗರು, ಹೆಡಗಿ ಬುಟ್ಟಿಯವರು
ಹೋಗರಿ ನನ್ನ ತವರಿಗೆ | ಅಣ್ಣಯ್ಯ
ದರುಮದ ಹಗೆಯ ತಗೆದಾನ ||

ಹಾಲುಂಡ ತವರೀಗೆ, ಏನೆಂದು ಹಾಡಲೆ
ಹೊಳೆದಂಡೆಲಿರುವ ಕರಕೀಯ | ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ ||

ಒಳ್ಳಸುತ್ತಲಕ್ಕಿ, ಕಲ್ಲಸುತ್ತಲಿ ಜೋಳ
ನಾಲಗೆ ಸುತ್ತಲು ಸುಲಿಹಲ್ಲು | ತಾಯವ್ವ
ನಾರಿ ನಿನಸುತ್ತ ಸರುಬಳಗ |

ಅಕ್ಕಿ ಕಿಚಡಿ ಮಾಡಿ, ತುಪ್ಪ ಬೆಚ್ಚಗೆ ಮಾಡಿ
ಸುತ್ತೇಳು ನಿರಿಗೆ ಮರೆಮಾಡಿ | ಉಣಿಸುವ
ಹೆತ್ತವ್ವನಿಲ್ಲ ಮನೆಯಾಗ ||

ಉಂಡೇನ ಉಟ್ಟೇನೆ, ತಂದೆಯ ಪುಣ್ಯೇವ
ಉಂಡೀನೆ ತಾಯಿ ಮೊಲೆಹಾಲ | ಅದರ್ಹಂಗ
ಗಂಡ ಮಗನೇನ-ಗಳೆಯಾಕ ||

ಕಣ್ಣು ಕಾಣುವತನಕ, ಬೆನ್ನು ಬಾಗುವತನಕ
ತಾಯಿಯಿರಲಿ ನನಗ ತವರಿರಲಿ | ನನ್ನವ್ವ
ಅಣ್ಣಯ್ಯರಿರಲಿ ಕರಿಸಾಕ ||

ತಂಗಾಳಿ ನೆನದಽರ ತಂಗಳು ಬಿಸಿಯಾದೆ
ತಿಂಗಳದ ತಲೆಯು ಮಡಿನಾದೆ | ತಾಯವ್ವ
ಗಂಗಾದೇವಿಯ ನೆನೆದಾಗ ||

ಯಾರು ಇದ್ದರು ನನ್ನ, ತಾಯವ್ನ ಹೋಲಾರ
ಸಾವಿರದಕೊಳ್ಳಿ ಒಲಿಮುಂದ | ಇದ್ದರ
ದೀವಿಽಗೆ ನಿನ್ನ ಹೋಲಾವ ||

ತಾಯಗಲಿ ಬಂದೀನಿ, ತಾಳಲಾರೆನು ಬಿಸಲ
ಬೇಗ ಹಾಸಣ್ಣ ಹರಗೋಲ | ಗಂಗವ್ವ
ನಿನ್ನಂಥ ತಾಯಿ ಅಗಲೇನ ||

ಊರ ಮುಂದಣ ಗಾಳಿ, ಏನಂತ ಬೀಸ್ಯಾವ
ಆಲೀಸಿ ಕೇಳ ಹಡದವ್ವ | ನಿನ ಮಗ
ಹಾಡ್ಯಾಡಿ ಹಂತಿ ಹೊಡದಾನ ||

ಲಿಂಬಿಹಣ್ಣಿನ್ಹಾಂಗ, ತುಂಬೇತಿ ನನ ಬಳಗ
ಹಂಗೂಸಿ ರಾಯ ಬೈಬ್ಯಾಡ | ತವರೂರ
ಹಿಂಡಿನನ್ನಾಕಿ ಅಗಲೇನ ||

ನೀರ್ಹೊಳಿ ದಾರ್ಯಾಗ, ತಾಯವ್ನ ಕಂಡೀರೆ
ಯಾರಂತಾಕಿ ನನ್ನ ಹಡದವ್ವ | ಮೂಗುತಿ
ಹರಳಿನಂತ್ಹಾಕಿ ತಾಯವ್ವ ||

ಹುಗ್ಗಿ ಹೂರಣಗಡುಬು, ಮಗ್ಗಿ ತಾಳಲಗಾಯಿ
ಒಗ್ಗರಣಿ ಸೋರಿ ಹದಿನಾರು | ಹಡದವ್ನ
ಒಡ್ಡೀನ ಹೊಲದ ಚೆರಗಾವ ||

ಬಂಡಿ ಬಂಡೀಯವರು, ಬಂಡಿಸಾಗರದವರು
ಹಿಂಡೆತ್ತಿನವರು ತವರವರು | ಬರುವಾಗ
ಒಂದೆತ್ತಿನಣ್ಣ ಬದಿಗಾಗೊ ||

ಅಣ್ಣನ ಆರೆತ್ತು, ತಮ್ಮನ ಮೂರೆತ್ತು
ನಮ್ಮಪ್ಪನೆತ್ತು ಹದಿನಾರು | ಬರುವಾಗ
ನನ್ನೂರ ಭೂಮಿ ನಡುಗ್ಯಾವ ||

ತಂದೆ ನನ್ಹಡದವ್ವ, ಒಂದು ಬಳುವಲಿ ಕಳಿಸು
ಅಂಗಳ ತುಂಬ ಎಳೆಗಽರ | ತವರೂರ
ಜಂಗೂಳಿ ಬಂದ್ರ ಕರೆಯಾಕ ||

ತಾಯಿ ಕಟ್ಟಿದ ಬುತ್ತಿ, ತರತರಕ ಯಾಲಕ್ಕಿ
ತಾಯಿ ನನ್ನವ್ವ ಗರತಿಽಯ | ಕಟ್ಟೀದ
ಬುತ್ತಿ ಬಿಚ್ಚೇನ ಹೊಳಿಯಾಗ ||

ದಾಸ್ಯಾಳ ಹೂವೀಲೆ, ನೇಸ್ಯಾಳ ಕುಂಚೀಗಿ
ದೇಶಕ ಹಡದವ್ವ ಕಳುಹ್ಯಾಳ | ನನ್ನೂರ
ದೇಸಾಯಿ ಕಂಡು ಬೆರಗಾದ ||

ಬೇದಂತ ಬೇಗಳ, ಬೆನ್ಹತ್ತಿ ಬಾರಽವ
ಕೋದಂತ ಕುಸುಬಿ ಚಿಗಿಯಽವ | ಹಡದವ್ನ
ಬೇದವರ ವಂಶ ಹುರಿಯಽಲೆ ||

ಲಿಂಬಿಯ ಗಿಡ ಹುಟ್ಟಿ, ಲಿಂಗಕ ನೆರಳಾಗಿ
ನೆಂಬಿಗಿ ಬಕುತ ನನ ತಮ್ಮ | ಮನಿಯಾಗ
ಜಂಗಮರುಣ್ಣುದು ಕಡೆಯಿಲ್ಲ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...