Home / ಕವನ / ಕವಿತೆ / ಏಡನ್‌

ಏಡನ್‌

ಮುಗಿಲುದ್ದ ನಿಗಿನಿಗಿ ಕೆಂಡದಂಥ ನೆಲದೊಳಗಿಂದ ನೆಗೆಯುತಿವೆ ನೋಡು,-
ಗುಡ್ಡ ದಿನ್ನೆಗಳು, ಪರ್ವತಗಳು, ಪರ್ವತಾವಳಿಗಳು!
ಭೂಮಿತಿಯ ನೆನೆದು ದೇವನಿಟ್ಟ ತ್ರಿಕೋಣಾಕೃತಿಗಳಂತೆ,-
ಉಸುಬಿನರಣ್ಯದಿ ಕಾವಲು ನಿಂತ ಹಿರಣ್ಯಕಶ್ಯಪನಂತೆ!
ಗಿಡವಿಲ್ಲ ಬಳ್ಳಿಯಿಲ್ಲ, ಹಾಳು ಹಾಳು! ಬೀಳು ಬೀಳು!
ವೃಕ್ಷವಿಲ್ಲ! ರುಕ್ಷ! ರುಕ್ಷ! ಹೊಗಿ! ಹೊಗಿ! ನಿಗಿ ನಿಗಿ!
ಹಸಿರ ಹೆಸರಿಲ್ಲ, ತಣ್ಣುಸಿರು ತಣ್ಣೆಳಲಿಲ್ಲ, ತೊಯ್ದ ಮಳಲಿಲ್ಲ,-
ನೀರಡಿಸಿ ಚಾಚಿದ ನಾಲಗೆಯಿದು! ಏಡನ್ನು!

ಮುನ್ನೀರ ಹತ್ತಿರ ನಿಂತು ಇಷ್ಟು ನೀರಡಿಸಿತೇ ನೆಲವು?
ಇಲ್ಲಿ ನೀರೆಲ್ಲಿ? ಉಪ್ಪಿನರಣ್ಯವಿದು!
ನೀರಡವಿಯ ಬದಿಗೆ ಉಸುಬಿನ ಬಯಲ ಹೊಯಲು!
ಇಲ್ಲಿಯ ಕೆರೆ ಬರಿದು! ಬಾವಿ ಬರಿದು! ಕುಂಡ ತೆರವು! ಹೊಂಡ ತೆರವು!
ಹನಿಹನಿ ನೀರನರಸಿ ಅಂಡಲೆಯುತಿದೆ ನೋಡು, ಜನದನದ ಜಂಗುಳಿಯು!
ಅತ್ತಕಡೆ ಬಿದ್ದರೆ ಕೆಂಡದಂಥುಸುಬು! ಇತ್ತ ಜಲಸಮಾಧಿ!
ಅರಣ್ಯದ ಹಡಗವೇ ಪಶುವಿಲ್ಲಿ-ಒಂಟಿಯಾದ ಒಂಟಿ!
ಅದೇ ಎತ್ತು! ಅದೇ ಕರು! ಅದೇ ಎಮ್ಮೆ! ಅದೇ ಆಕಳು!
ಅಲ್ಲಿಯ ನರಪ್ರಾಣಿ ಸಹ ಒಂಟಿಯಂತೆ ಗೋಣೆತ್ತಿ ನೋಡುವನು.
ಪರಿಧಾನದಿ ಮೃಗಜಲವ ಕಂಡು ಬೆನ್ನಟ್ಟಿ ಬಿಸುಸುಯ್ಯುವನು.
ಎಂಥ ಭಯಂಕರ ತಾಪ! ಎಂಥ ಭಯಂಕರ ಶಾಪ!!

ಏಡಿಯಂತೆ ಏಡನ್ನನು ಹಿಡಿದ ಗುಡ್ಡದ ಕೆಳಗೆ
ಗಿಡ್ಡದಾಗಿ ನಿಂತಿದೆ ನೋಡು,-ಬ್ರಿಟನ್ನಿನ ಬ೦ದರ! ಕಡ್ಡಿಯ ಹಂದರ!
ಸಾಮ್ರಾಜ್ಯವೈಭವವೇ! ಮಣ್ಣು ಮುಕ್ಕಿಲ್ಲಿ ಬಂದು.
ಉಸುಬಿನ ಕಣಗಳನ್ನೆಣಿನು! ಮರಣದ ಪಾಠವನ್ನು ಕಲಿ!
ಹೋಲಿಸು ನಿನ್ನ ಸಂಪತ್ತನ್ನು ಈ ಹಾಳಿನೈಸಿರಿಯೊಡನೆ.
ಇದರ ಸಂಯಮ ನಿನಗೆ ಸಂಧಿಸೀತೆ?
ಇದರ ತಾಳ್ಮೆಯ ಗುಟ್ಟು ನಿನಗೆ ತುಸುವಾದರೂ ತಿಳಿದೀತೆ?
ಈ ಗುಡ್ಡದಡಿಗೆ ನಿನ್ನ ಮನೆಗಳು ಗುಬ್ಬಿಮನೆಗಿಂತ ಕಡೆ!
ಸುಡು ಅವುಗಳನು! ಬೆಂಕಿ ಹಚ್ಚು! ಅರಣ್ಯದಲಿ ತಿರುಗು ಅರಬನಂತೆ!
ಇಲ್ಲಿ ಬೇಡ ನಿನ್ನ ಸೊಕ್ಕು. ನಿನ್ನ ಸೆಡವಿಗೆ ಎಡೆಯಿಲ್ಲಿಲ್ಲಿ.
ಕಿತ್ತು ನಿನ್ನ೦ಗಡಿಯ! ಹದ್ದುಪಾರಾಗು ಬಿಟ್ಟೀ ಗಡಿಯ!
ನಿನ್ನ ಗರ್ವಭಂಗಕ್ಕೆ ಹೆಚ್ಚೇನು ಬೇಕು? ಏಡನ್ನಿನ ಗುಡ್ಡವೊಂದು ಸಾಕು!

ಈ ಉಸುಬಿನ ಬೈಲಿಗೆ ಹೊಸಬನಾದ ನನಗೆ ಹೂಳೆಯುವದು ಅರ್ಥವೊಂದು.
ನೀರಿಲ್ಲದ ಬೆಟ್ಟಗಳ ನಡುವೆ ಬೇರೂರಿ ಬೆಳೆದ ಆಲವ ನೋಡು!
ಸಾವಿರ ವರುಷ ಸೂರ್ಯನಡಿಗೆ ನೀರಡಿಸಿ ಮಲಗಿತ್ತು ಅರಬ್ಬಿ ದೇಶ!
ಆಗ ತಣಿಸಿದನದರುದರವನು ಪೈಗಂಬರನು ಹುಟ್ಟಿ.
ಆಂದು ಅರಬ್ಬಿಯು ಕುಡಿದ ನೀರಿಗೆ ಸಮುದ್ರಗಳು ಬತ್ತಿದವು,
ಆರಬು ಹಿಂಗಿತ್ತು, ಭೂಮಿಗಿಳಿದಿದ್ದ ಚಂದ್ರ!
ಜಗದ ನಂದನವನಗಳೆಲ್ಲ ಅರಬರ ಕೈವಶವಾದವಂದು!
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...