Home / ಕವನ / ಅನುವಾದ / ರಾವುತರ ದಾಳಿ

ರಾವುತರ ದಾಳಿ

ಹರಿದಾರಿ, ಹರಿದಾರಿ,
ಹರಿದಾರಿ ಮುಂದೆ,
ಮೃತ್ಯುವಿನ ಪಂಜರಕೆ
ನುಗ್ಗಿದರು ಮುಂದೆ.
“ನುಗ್ಗಿ ಮುಂದಕೆ, ಕುದುರೆ!
ಕೊಚ್ಚಿ ಗುಂಡನು!” ಎಂದ
ಆರ್ನೂರು ರಾವುತರು
ಮೃತ್ಯುವಿನ ಪಂಜರಕೆ
ನುಗ್ಗಿದರು ಮುಂದೆ.
“ನುಗ್ಗಿ ಮುಂದಕೆ, ಕುದುರೆ!”
ಕುಗ್ಗಿದವನೊಬ್ಬುಂಟೆ?
ಯಾರೊ ತಪ್ಪಿದರೆಂದು
ಧೀರರವರರಿದೂ?
ಹೇಳುವುದಕವರಲ್ಲ,
ಕೇಳುವುದಕವರಲ್ಲ,
ಮಾಡಿ ಮಡಿವುದಕವರು-
ಆರ್ನೂರು ರಾವುತರು
ಮೃತ್ಯುವಿನ ಪಂಜರಕೆ
ನುಗ್ಗಿದರು ಹರಿದು.
ಅವರ ಬಲಗಡೆ ಗುಂಡು,
ಅವರ ಎಡಗಡೆ ಗುಂಡು,
ಅವರ ಮುಂಗಡೆ ಗುಂಡು
ಕಾರಿದುವು ಚೀರಿ.
ಸಿಡಿಮದ್ದು ಚೆರೆ ಬಿದ್ದು ,
ಜಗ್ಗದೆಯೆ ನುಗ್ಗಿದರು.
ಮೃತ್ಯುವಿನ ದಾಡೆಯಲಿ,
ನರಕದುರಿಬಾಯಿಯಲ್ಲಿ,
ಆರ್ನೂರು ರಾವುತರು
ನುಗ್ಗಿದರು ತೂರಿ.
ಬೀಸಿ, ಝಳಪಿಸಿ ಕತ್ತಿ,
ನೆಗೆದು, ಕೈ ಮೇಗೆತ್ತಿ,
ಗುಂಡಿನವರನು ಕೆತ್ತಿ,
ಕೊತ್ತಿದರು ಪಡೆಯೊತ್ತಿ-
ಲೋಕ ಬೆರಗಾಯ್ತು!
ಮದ್ದು ಹೊಗೆಯಲಿ ಮುಳುಗಿ,
ಸಾಲು ಮುರಿದರು ನುಗ್ಗಿ;
ಕಾಸಕರು, ರಷ್ಯನರು,
ಕತ್ತಿಹೊಯ್ಲಿಗೆ ಹೊರಳಿ,
ಬೆದರಿ ಧೂಳಾಯ್ತು.
ಆಗ, ಹಿಂದಿರುಗಿದರ-
ಇಲ್ಲ, ಆರ್ನೂರಿಲ್ಲ,
ಹಿಂದಿರುಗಿದವರು!
ಅವರ ಬಲಗಡೆ ಗುಂಡು,
ಅವರ ಎಡಗಡೆ ಗುಂಡು,
ಅವರ ಹಿಂಗಡೆ ಗುಂಡು,
ಕಾರಿದುವು ಚೀರಿ.
ಸಿಡಿಮದ್ದು ಚೆರೆ ಬಿದ್ದು,
ಆಳು ಕುದುರೆಗಳುರುಳಿ,
ನುಗ್ಗಿದಾ ಧೀರರಲಿ,
ಮೃತ್ಯುವಿನ ಬಸಿರಿಂದ,
ನರಕದುರಿಬಾಯಿಂದ,
ಮರಳಿ ಬಂದರು ಕೆಲರು,
ಆರ್ನೂರು ರಾವುತರು
ಅಳಿದುಳಿದ ಕೆಲರು.
ಮಾಸದವರದು ಹೆಸರು!
ಬೀಸಿ, ಏನ್ನುಗ್ಗಿದರು!
ಲೋಕ ಬೆರಗಾಯ್ತು!
ನುಗ್ಗಿ ಹೊಯ್ದುದ ಹೊಗಳು!
ಜಗ್ಗದೆದೆಗಳ ಹೊಗಳು!
ಆರ್ನೂರು ರಾವುತರ ಶೌರ್ಯ ಹೊಗಳು!
*****
TENNYSON (1809 -1892) : Charge of the Light Brigade
Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...