Home / ಕಥೆ / ಜನಪದ / ಮಲವಯ್ಯ ಶೆಟ್ಟಿ

ಮಲವಯ್ಯ ಶೆಟ್ಟಿ

ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆಂದು ತೋರುತ್ತದೆ.

ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ ತಂಬುಲದ ಚೀಲು. ಅದೆಲ್ಲ ಘಟ್ಟದ ಸಾರಿಗೆಯ ಸಿಂಗಾರ. ಕರಿಯೆತ್ತಿಗೆ ಕಮಲದ ಹೂ. ಬಿಳಿಯೆತ್ತಿಗೆ ಗೆಜ್ಜಿಸರ. ಸಾರಂಗದೆತ್ತಿಗೆ ಸರಗಂಟಿ ಕಟ್ಟಿದ್ದಾನೆ.

ಬಟ್ಟಲಲ್ಲಿ ಉಂಡು, ತೊಟ್ಟಲಲ್ಲಿ ಆಡುವ ತಂಗಿಯನ್ನು ಬಿಟ್ಟು ಶೆಟ್ಟಿ ಮಲ್ಲಾಡ ದೇಶಕ್ಕೆ ಹೊರಟಿದ್ದಾನೆ. ಅಂಗಳದಲ್ಲಿ ಆಡಿ, ಗಂಗಾಳದಲ್ಲಿ ಉಣ್ಣುವ ತಂಗಿಯನ್ನು ಬಿಟ್ಟು ಶೆಟ್ಟಿ ಘಟ್ಟದ ಸಾರಿಗೆಗೆ ಹೊರಟಿದ್ದಾನೆ.

ಶುಂಠಿ, ಮೆಣಸು, ಯಾಲಕ್ಕಿ, ಲವಂಗ ಇವುಗಳನ್ನಲ್ಲ ಹೇರು ಹೇರು ಖರೀದಿ ಮಾಡಿದ್ದಾನೆ. ಅಡಿಕೆ ಎರಡೆರಡು ಹೇರು ಖರೀದಿ ಮಾಡಿದ್ದಾನೆ. ತನ್ನ ಕರಿ ಎತ್ತು, ಬಿಳಿ ಎತ್ತು, ಸಾರಂಗದ ಎತ್ತುಗಳ ಮೇಲೆ ಆ ಹೇರುಗಳನ್ನೆಲ್ಲ ಹೇರಿಕೊಂಡು ಘಟ್ಟ ಇಳಿದು ಬಯಲುನಾಡಿಗೆ ಬಂದನು. ಬರುವಾಗ ದಾರಿಯಲ್ಲಿ ವಿಜಯನಗರವನ್ನು ದಾಟಿ ಬಾದಾಮಿಗೆ ಬಂದು ಸಂಗನಬಸವನ ಗುಡಿಯ ಮುಂದೆ ತನ್ನ ಹೇರು ಇಳಿಸಿ, ವಿಶ್ರಾಂತಿಗಾಗಿ ತಂಗಿದನು. ಅಲ್ಲಿಯ ಪೇಟೆಯಲ್ಲೆಲ್ಲ ಅಡ್ಡಾಡಿ, ಕೊಂಡುಕೊಳ್ಳಬೇಕಾದುದನ್ನು ಕೊಂಡುಕೊಂಡು ಬರುವಾಗ ಅಲ್ಲೊಬ್ಬ ಥಾಟಗಿತ್ತಿಯನ್ನು ಕಂಡನು. ಆಕೆ ಬಾದಾಮಿಪೇಟೆಯ ಬಸವಿ.

ಶೆಟ್ಟಿ ಊರು ಬಿಟ್ಟು ಹನ್ನೆರಡು ವರ್ಷವಾಗಿತ್ತು. ಮನಸ್ಸು ಚಂಚಲವಾಯಿತು, ಶೆಟ್ಟಿ ಆ ಥಾಟಗಿತ್ತಿಗೆ ಹೇಳಿಕಳಿಸಿದನು.

ತು೦ಬಿಸೂಸುವ ಬೆಳದಿಂಗಳಿನಲ್ಲಿ ಇಂಬಾದ ಸೆಳೆಮಂಚ ; ದಿಂಬಿಗೊರಗಿ ಮಲಗಿದ್ದಾಳೆ ಆ ಬಸವಿ. ಶೆಟ್ಟಿಯಾದರೋ ಸಿಂಗಾರವನ್ನೇ ಉಟ್ಟು, ಸಿಂಗಾರವನ್ನೇ ತೊಟ್ಟು ಆ ಬಸವಿಯ ಮನೆಗೆ ಹೋದನು.

ಆದರೆ ವಿಧಿಯು ಅಲ್ಲೊಂದು ಬೇರೆ ಆಟ ಹೂಡಿದೆ.

ಶೆಟ್ಟಿ ಬಸವಿಗೆ ಎಲೆಕೊಡಹೋದನು. ಅಡಿಕೆ ಕೊಡಹೋದನು. ಕೊಡ ಮಾಡಿದ ಎಲೆ ಅಡಿಕೆ ಉಡಿಯಲ್ಲಿ ಬೀಳದೆ ಕಡೆಗೆ ಬಿದ್ದವು.

“ಅತ್ತ ಇತ್ತ ನೋಡುತ್ತೀಯಲ್ಲ ! ಚಿತ್ತ ಎರಡು ಮಾಡುತ್ತಿಯಲ್ಲ !! ಮನಸ್ಸಿಲ್ಲದಿದ್ದರೆ ಮಾತನ್ನೇಕೆ ಕೊಟ್ಟೆ?” ಎಂದು ಕೇಳಿದನು ಶೆಟ್ಟಿ.

“ಅತ್ತ ಇತ್ತ ನೋಡಿಯೇ ಇಲ್ಲ. ಚಿತ್ತ ಎರಡು ಮಾಡಿಯೇ ಇಲ್ಲ. ಮಲವೈನ ಆಣೆಮಾಡಿ ಹೇಳುತ್ತೇನೆ. ನನ್ನ ಮನಸ್ಸು ಎರಡಿಲ್ಲ” ಎಂದಳಾಕೆ.

“ಮಲವೈನ ಹೆಸರುಗೊಂಡಿ. ಆತನ ಆಣೆ ಮಾಡಿದಿ. ಮಲವೈಶೆಟ್ಟಿ ನಿನಗೇನಾಗಬೇಕು? ನಿನ್ನ ಹುಟ್ಟಿದೂರು ಯಾವುದು ? ಯಾವ ಊರಿಗೆ ನಿನ್ನನ್ನು ಕೊಟ್ಟಿದ್ದು ? ಎಲ್ಲವನ್ನೂ ಸರಿಯಾಗಿ ಹೇಳು- ತಂದೆಯ ಹೆಸರೇನು- ತಾಯಿಯ ಹೆಸರೇನು ? ಒಡಹುಟ್ಟಿದ ಅಣ್ಣನ ಹೆಸರೇನು ?” ಎಂದು ಕೇಳಿದ ಶೆಟ್ಟಿಗೆ ಬಸವಿ ಈ ರೀತಿಯಾಗಿ ಮರುನುಡಿಯುತ್ತಾಳೆ –

“ತಂದೆ ಸುಂಕುಬಾಳ, ತಾಯಿ ಗಂಗಾಬಾಳ. ಒಡಹುಟ್ಟಿದ ತಂಗಿಯ ಹೆಸರು ಮಾಸುಂದರಿ. ಅಣ್ಣ ಮಲವೈಶೆಟ್ಟಿ” ಬಸವಿ ಮರುನುಡಿಯುವಾಗ ಶೆಟ್ಟಿಯು ಆಕೆಯ ಮುಖನೋಡಿ, ಹಣೆಯ ಮೇಲಿರುವ ಕಲೆ ಕಂಡು ದಿಗ್ಭ್ರಮೆಗೊಂಡನು. ತೊಟ್ಟಿಲಲ್ಲಿ ಆಡುವಾಗ ಬಟ್ಟಲಲ್ಲಿ ಕುಡಿಯುವಾಗ ಕಟ್ಟೆಯ ಕೆಳಗೆ ಬಿದ್ದ ಕಚ್ಚು ಕಂಡನು ಆ ಶೆಟ್ಟಿ. “ಹುಟ್ಟುದಟ್ಟಿ ಯುಟ್ಟು ಬಟ್ಟಲದನ್ನ ಉಣ್ಣುವಾಗ ನನ್ನ ಮಲವಯ್ಯ ಶೆಟ್ಟಿ ಬಿಟ್ಟು ಹೋಗಿದ್ದಾನೆ – ದುರ್ದೈವದಿಂದ ದಿಕ್ಕುಗೇಡಿಯಾದೆ. ಬಾಳಾಸಾನಿ ಎತ್ತಿಕೊಂಡಳು. ಬಾದಾಮಿ ಪೇಟೆಗೆ ನನ್ನನ್ನು ಬಸವಿ ಬಿಟ್ಟಳು.”

“ನನ್ನನ್ನು ನಾನು ಕಡಿದುಕೊಳ್ಳಲಾ, ತಂಗೀ, ಇರಿದು ಕೊಳ್ಳಲಾ ? ಅಲಗು ಕಟ್ಟಿ ಅದಕ್ಕೆ ಹಾಯಲೇನೇ ತಂಗೀ” ಎಂದು ಹಲುಬಿದನು ಶೆಟ್ಟಿ.

“ಕಡಿದುಕೊಳ್ಳುವುದೂ ಬೇಡ ; ಅಣ್ಣಯ್ಯ, ಇರಿದು ಕೊಳ್ಳುವುದೂ ಬೇಡ. ಅಲಗು ಕಟ್ಟಿ ಅದನ್ನು ಹಾಯುವುದೂ ಬೇಡ- ಅಣ್ಣಯ್ಯ. ಅಣ್ಣಯ್ಯ. ಊರ ಕೋಟೆಯನ್ನು ದಾಟಿದರೆ ಮೂಡಣದ ಕೊಳ್ಳದಲ್ಲಿ ಕೋಟಿಲಿಂಗಗಳು ನೆನೆದಿವೆ. ಅಂಗವನ್ನೇ ವಸ್ತ್ರಮಾಡಿ ಲಿಂಗವನ್ನು ಪೂಜಿಸಿ ನಿನಗೆ ತಟ್ಟಿದ ಇಂದಿನ ಪಾಪವನ್ನು ಹಿಂಗಿಸಣ್ಣ. ಗೋಕಾವಿ ನಾಡಿಗೆ ಹೋಗಿ ಒಂದು ಹಿಂಡು ಆಕಳು ತೆಗೆದುಕೊಂಡು ಬಂದು, ಕೊಳಗೆ ಮೆಟ್ಟಿ ಕೊಂಬ ನೀ ದಾನ ಮಾಡಣ್ಣ. ಆವಾಗ ನಿನ್ನ ಪಾಪ ಪರಿಹಾರ ಅಣ್ಣಯ್ಯ”, ಎಂದು ಉಸುರಿದಳು ಆ ತಂಗಿ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

 

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...