Home / ಕಥೆ / ಜನಪದ / ಮಲವಯ್ಯ ಶೆಟ್ಟಿ

ಮಲವಯ್ಯ ಶೆಟ್ಟಿ

ಶೆಟ್ಟಿ ಅದೇ ಊಟ ಮುಗಿಸಿ, ಎಲೆ ಅಡಿಕೆ ಮೆದ್ದು ಅಣಿಗೊಳಿಸತೊಡಗಿದ್ದಾನೆ. ಪ್ರಯಾಣದ ಸಿದ್ಧತೆಯೆಂದು ತೋರುತ್ತದೆ.

ರುದ್ರಾಕ್ಷಿ ಪೇಟೆಯ ಧೋತರ ಉಟ್ಟಿದ್ದಾನೆ. ಅವೆಂಥವೋ ಚಮ್ಮಳಿಗೆ ಮೆಟ್ಟದ್ದಾನೆ. ಬೆರಳಲ್ಲಿ ಉಂಗುರ. ಎದೆಯ ಮೇಲೆ ಸಜ್ಜೇದ ಚೌಕ, ಕೈಯಲ್ಲಿ ತಂಬುಲದ ಚೀಲು. ಅದೆಲ್ಲ ಘಟ್ಟದ ಸಾರಿಗೆಯ ಸಿಂಗಾರ. ಕರಿಯೆತ್ತಿಗೆ ಕಮಲದ ಹೂ. ಬಿಳಿಯೆತ್ತಿಗೆ ಗೆಜ್ಜಿಸರ. ಸಾರಂಗದೆತ್ತಿಗೆ ಸರಗಂಟಿ ಕಟ್ಟಿದ್ದಾನೆ.

ಬಟ್ಟಲಲ್ಲಿ ಉಂಡು, ತೊಟ್ಟಲಲ್ಲಿ ಆಡುವ ತಂಗಿಯನ್ನು ಬಿಟ್ಟು ಶೆಟ್ಟಿ ಮಲ್ಲಾಡ ದೇಶಕ್ಕೆ ಹೊರಟಿದ್ದಾನೆ. ಅಂಗಳದಲ್ಲಿ ಆಡಿ, ಗಂಗಾಳದಲ್ಲಿ ಉಣ್ಣುವ ತಂಗಿಯನ್ನು ಬಿಟ್ಟು ಶೆಟ್ಟಿ ಘಟ್ಟದ ಸಾರಿಗೆಗೆ ಹೊರಟಿದ್ದಾನೆ.

ಶುಂಠಿ, ಮೆಣಸು, ಯಾಲಕ್ಕಿ, ಲವಂಗ ಇವುಗಳನ್ನಲ್ಲ ಹೇರು ಹೇರು ಖರೀದಿ ಮಾಡಿದ್ದಾನೆ. ಅಡಿಕೆ ಎರಡೆರಡು ಹೇರು ಖರೀದಿ ಮಾಡಿದ್ದಾನೆ. ತನ್ನ ಕರಿ ಎತ್ತು, ಬಿಳಿ ಎತ್ತು, ಸಾರಂಗದ ಎತ್ತುಗಳ ಮೇಲೆ ಆ ಹೇರುಗಳನ್ನೆಲ್ಲ ಹೇರಿಕೊಂಡು ಘಟ್ಟ ಇಳಿದು ಬಯಲುನಾಡಿಗೆ ಬಂದನು. ಬರುವಾಗ ದಾರಿಯಲ್ಲಿ ವಿಜಯನಗರವನ್ನು ದಾಟಿ ಬಾದಾಮಿಗೆ ಬಂದು ಸಂಗನಬಸವನ ಗುಡಿಯ ಮುಂದೆ ತನ್ನ ಹೇರು ಇಳಿಸಿ, ವಿಶ್ರಾಂತಿಗಾಗಿ ತಂಗಿದನು. ಅಲ್ಲಿಯ ಪೇಟೆಯಲ್ಲೆಲ್ಲ ಅಡ್ಡಾಡಿ, ಕೊಂಡುಕೊಳ್ಳಬೇಕಾದುದನ್ನು ಕೊಂಡುಕೊಂಡು ಬರುವಾಗ ಅಲ್ಲೊಬ್ಬ ಥಾಟಗಿತ್ತಿಯನ್ನು ಕಂಡನು. ಆಕೆ ಬಾದಾಮಿಪೇಟೆಯ ಬಸವಿ.

ಶೆಟ್ಟಿ ಊರು ಬಿಟ್ಟು ಹನ್ನೆರಡು ವರ್ಷವಾಗಿತ್ತು. ಮನಸ್ಸು ಚಂಚಲವಾಯಿತು, ಶೆಟ್ಟಿ ಆ ಥಾಟಗಿತ್ತಿಗೆ ಹೇಳಿಕಳಿಸಿದನು.

ತು೦ಬಿಸೂಸುವ ಬೆಳದಿಂಗಳಿನಲ್ಲಿ ಇಂಬಾದ ಸೆಳೆಮಂಚ ; ದಿಂಬಿಗೊರಗಿ ಮಲಗಿದ್ದಾಳೆ ಆ ಬಸವಿ. ಶೆಟ್ಟಿಯಾದರೋ ಸಿಂಗಾರವನ್ನೇ ಉಟ್ಟು, ಸಿಂಗಾರವನ್ನೇ ತೊಟ್ಟು ಆ ಬಸವಿಯ ಮನೆಗೆ ಹೋದನು.

ಆದರೆ ವಿಧಿಯು ಅಲ್ಲೊಂದು ಬೇರೆ ಆಟ ಹೂಡಿದೆ.

ಶೆಟ್ಟಿ ಬಸವಿಗೆ ಎಲೆಕೊಡಹೋದನು. ಅಡಿಕೆ ಕೊಡಹೋದನು. ಕೊಡ ಮಾಡಿದ ಎಲೆ ಅಡಿಕೆ ಉಡಿಯಲ್ಲಿ ಬೀಳದೆ ಕಡೆಗೆ ಬಿದ್ದವು.

“ಅತ್ತ ಇತ್ತ ನೋಡುತ್ತೀಯಲ್ಲ ! ಚಿತ್ತ ಎರಡು ಮಾಡುತ್ತಿಯಲ್ಲ !! ಮನಸ್ಸಿಲ್ಲದಿದ್ದರೆ ಮಾತನ್ನೇಕೆ ಕೊಟ್ಟೆ?” ಎಂದು ಕೇಳಿದನು ಶೆಟ್ಟಿ.

“ಅತ್ತ ಇತ್ತ ನೋಡಿಯೇ ಇಲ್ಲ. ಚಿತ್ತ ಎರಡು ಮಾಡಿಯೇ ಇಲ್ಲ. ಮಲವೈನ ಆಣೆಮಾಡಿ ಹೇಳುತ್ತೇನೆ. ನನ್ನ ಮನಸ್ಸು ಎರಡಿಲ್ಲ” ಎಂದಳಾಕೆ.

“ಮಲವೈನ ಹೆಸರುಗೊಂಡಿ. ಆತನ ಆಣೆ ಮಾಡಿದಿ. ಮಲವೈಶೆಟ್ಟಿ ನಿನಗೇನಾಗಬೇಕು? ನಿನ್ನ ಹುಟ್ಟಿದೂರು ಯಾವುದು ? ಯಾವ ಊರಿಗೆ ನಿನ್ನನ್ನು ಕೊಟ್ಟಿದ್ದು ? ಎಲ್ಲವನ್ನೂ ಸರಿಯಾಗಿ ಹೇಳು- ತಂದೆಯ ಹೆಸರೇನು- ತಾಯಿಯ ಹೆಸರೇನು ? ಒಡಹುಟ್ಟಿದ ಅಣ್ಣನ ಹೆಸರೇನು ?” ಎಂದು ಕೇಳಿದ ಶೆಟ್ಟಿಗೆ ಬಸವಿ ಈ ರೀತಿಯಾಗಿ ಮರುನುಡಿಯುತ್ತಾಳೆ –

“ತಂದೆ ಸುಂಕುಬಾಳ, ತಾಯಿ ಗಂಗಾಬಾಳ. ಒಡಹುಟ್ಟಿದ ತಂಗಿಯ ಹೆಸರು ಮಾಸುಂದರಿ. ಅಣ್ಣ ಮಲವೈಶೆಟ್ಟಿ” ಬಸವಿ ಮರುನುಡಿಯುವಾಗ ಶೆಟ್ಟಿಯು ಆಕೆಯ ಮುಖನೋಡಿ, ಹಣೆಯ ಮೇಲಿರುವ ಕಲೆ ಕಂಡು ದಿಗ್ಭ್ರಮೆಗೊಂಡನು. ತೊಟ್ಟಿಲಲ್ಲಿ ಆಡುವಾಗ ಬಟ್ಟಲಲ್ಲಿ ಕುಡಿಯುವಾಗ ಕಟ್ಟೆಯ ಕೆಳಗೆ ಬಿದ್ದ ಕಚ್ಚು ಕಂಡನು ಆ ಶೆಟ್ಟಿ. “ಹುಟ್ಟುದಟ್ಟಿ ಯುಟ್ಟು ಬಟ್ಟಲದನ್ನ ಉಣ್ಣುವಾಗ ನನ್ನ ಮಲವಯ್ಯ ಶೆಟ್ಟಿ ಬಿಟ್ಟು ಹೋಗಿದ್ದಾನೆ – ದುರ್ದೈವದಿಂದ ದಿಕ್ಕುಗೇಡಿಯಾದೆ. ಬಾಳಾಸಾನಿ ಎತ್ತಿಕೊಂಡಳು. ಬಾದಾಮಿ ಪೇಟೆಗೆ ನನ್ನನ್ನು ಬಸವಿ ಬಿಟ್ಟಳು.”

“ನನ್ನನ್ನು ನಾನು ಕಡಿದುಕೊಳ್ಳಲಾ, ತಂಗೀ, ಇರಿದು ಕೊಳ್ಳಲಾ ? ಅಲಗು ಕಟ್ಟಿ ಅದಕ್ಕೆ ಹಾಯಲೇನೇ ತಂಗೀ” ಎಂದು ಹಲುಬಿದನು ಶೆಟ್ಟಿ.

“ಕಡಿದುಕೊಳ್ಳುವುದೂ ಬೇಡ ; ಅಣ್ಣಯ್ಯ, ಇರಿದು ಕೊಳ್ಳುವುದೂ ಬೇಡ. ಅಲಗು ಕಟ್ಟಿ ಅದನ್ನು ಹಾಯುವುದೂ ಬೇಡ- ಅಣ್ಣಯ್ಯ. ಅಣ್ಣಯ್ಯ. ಊರ ಕೋಟೆಯನ್ನು ದಾಟಿದರೆ ಮೂಡಣದ ಕೊಳ್ಳದಲ್ಲಿ ಕೋಟಿಲಿಂಗಗಳು ನೆನೆದಿವೆ. ಅಂಗವನ್ನೇ ವಸ್ತ್ರಮಾಡಿ ಲಿಂಗವನ್ನು ಪೂಜಿಸಿ ನಿನಗೆ ತಟ್ಟಿದ ಇಂದಿನ ಪಾಪವನ್ನು ಹಿಂಗಿಸಣ್ಣ. ಗೋಕಾವಿ ನಾಡಿಗೆ ಹೋಗಿ ಒಂದು ಹಿಂಡು ಆಕಳು ತೆಗೆದುಕೊಂಡು ಬಂದು, ಕೊಳಗೆ ಮೆಟ್ಟಿ ಕೊಂಬ ನೀ ದಾನ ಮಾಡಣ್ಣ. ಆವಾಗ ನಿನ್ನ ಪಾಪ ಪರಿಹಾರ ಅಣ್ಣಯ್ಯ”, ಎಂದು ಉಸುರಿದಳು ಆ ತಂಗಿ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...