Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ
ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ
ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ
ರೋಮಾಂಚನವ ಚಿಗುರಿಸಿ
ರಂದ್ರರಂದ್ರವ ಬಯಲಗಾಳಿಗೆ ತೆರೆಸೋ
ನೀಲಿಗಟ್ಟಿರುವೀ ಧಮನಿಗಳಲ್ಲಿ
ಕೆಚ್ಚು ರೊಚ್ಚಿನ ಕೆಂಪು ಹರಿಸೋ
ಒಣಗಿ ಬೆಂಡಾಗಿ ಕಳಚಿ ಕುಸಿಯಲನುವಾಗಿರುವಸ್ಥಿ ಪಂಜರದ
ಮೂಲೆ ಮೂಳೆಗಳನ್ನುಕ್ಕುಗೊಳಿಸಿ ಸ್ಥಿರಗೊಳಿಸೋ
ಅಷ್ಟಾವಕ್ರವಾಗಿ ಅಂಕು ಡೊಂಕಾಗಿ ತುಂಡು ತುಂಡಾಗಿ
ಮಬ್ಬು ಮುಚ್ಚಿದೀ ನೋಟಗಳ
ರವಿಕಿರಣದಂತೆ ಸಹಜ ನೇರಗೊಳಿಸಿ ತೇಜಗೊಳಿಸೋ
ಓರೆ ಕೋರೆಗಳನೊಳವೊಗುವಂತೆ ಚೂಪುಗೊಳಿಸೋ
ಜಡತೆ ಜಿದ್ದು ಪಾಚಿಗಟ್ಟಿ
ಕೂಪಸ್ಥ ಬಂಡೆಯಾದ ಈ ಮಂಡೆಗೊಳಗಳ
ತಿಳಿಗೊಳಿಸೂ ಅರಳಿಸೂ ಸಹಸ್ರದಳದರವಿಂದದಂತೆ
ಭಾವದೊರತೆ ಬತ್ತಿ ಬರಡಾದೀ ಹಳ್ಳಗಳಲಿ
ದೇವರಸ ಗಂಗೆಯನುಕ್ಕಿಸಿ
ನಂದನವನವನರಳಿಸಿ ಹಿಗ್ಗಿಸೋ
ಹೊಂಡ ಹೊಂಡಗಳಲ್ಲಿ ಬಿದ್ದು
ತುಂಡು ತುಂಡು ತಿಂಡಿಗೂ ಭಂಟಾಡವಾಡುವೀ
ಕಪ್ಪೆ ಮೀನುಗಳನೆತ್ತೆತ್ತಿ
ವಿಶಾಲಸಾಗರದಲಿಳಿಸಿ ಬಾಳಿಸೊ
ಬೆದರು ಗೊಂಬೆಗಳೀ ಕಿವುಚು ಮೊಗವಾಡಗಳ ಕಳಚಿ
ಸೂರ್ಯ ಬಿಂಬಗಳ ನೈಜ ನಗೆಯ ತುಳುಕಿಸೋ
ಹರಿ ಹರಿದು ಕಚ್ಚಾಡಿ ಹೋರುವೀ ನಾಯಿಹದ್ದುಗಳ
ಉಗುರು ಹಲ್ಲುಗಳ ಕಿತ್ತು
ಸಹಜೀವನಕೆ ಸಾಧುಗೊಳಿಸೋ
ಕೊಳೆತು ನಾರುವೀ ತಿಪ್ಪೆ ಮನಗಳ
ಗುಡಿಸಿ ಸಾರಿಸೀ ಹಸನುಗೊಳಿಸೋ
ತಿಂದು ಮಲಗಿ ಓಡಾಡುವೀ ಬೆಂತರಗಳಲಿ
ಚೇತನದುಸಿರಾಡಿಸೋ
ನೂತನ ಹಸಿರು ಹೂ ಹಣ್ಣು ಕೊಡುವ
ಚಿರಂತನ ಸಿರಿ ಮೂಡಿಸೋ
ಬಿದ್ದವರ ಮಲಗಿರುವವರ
ಮತ್ತೆ ಮತ್ತೆ ಮರೆವಿಗೆ ಸಂದು ಸುಂದಾಗುವವರ
ಕತ್ತಲು ಒತ್ತೆಗೊಂಡವರ ಮಿತ್ತು ತುತ್ತುಗೊಳ್ಳುವವರ
ಎಬ್ಬಿಸೋ ತಂದೆ ಮೇಲೆಬ್ಬಿಸೋ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...