Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ
ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ
ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ
ರೋಮಾಂಚನವ ಚಿಗುರಿಸಿ
ರಂದ್ರರಂದ್ರವ ಬಯಲಗಾಳಿಗೆ ತೆರೆಸೋ
ನೀಲಿಗಟ್ಟಿರುವೀ ಧಮನಿಗಳಲ್ಲಿ
ಕೆಚ್ಚು ರೊಚ್ಚಿನ ಕೆಂಪು ಹರಿಸೋ
ಒಣಗಿ ಬೆಂಡಾಗಿ ಕಳಚಿ ಕುಸಿಯಲನುವಾಗಿರುವಸ್ಥಿ ಪಂಜರದ
ಮೂಲೆ ಮೂಳೆಗಳನ್ನುಕ್ಕುಗೊಳಿಸಿ ಸ್ಥಿರಗೊಳಿಸೋ
ಅಷ್ಟಾವಕ್ರವಾಗಿ ಅಂಕು ಡೊಂಕಾಗಿ ತುಂಡು ತುಂಡಾಗಿ
ಮಬ್ಬು ಮುಚ್ಚಿದೀ ನೋಟಗಳ
ರವಿಕಿರಣದಂತೆ ಸಹಜ ನೇರಗೊಳಿಸಿ ತೇಜಗೊಳಿಸೋ
ಓರೆ ಕೋರೆಗಳನೊಳವೊಗುವಂತೆ ಚೂಪುಗೊಳಿಸೋ
ಜಡತೆ ಜಿದ್ದು ಪಾಚಿಗಟ್ಟಿ
ಕೂಪಸ್ಥ ಬಂಡೆಯಾದ ಈ ಮಂಡೆಗೊಳಗಳ
ತಿಳಿಗೊಳಿಸೂ ಅರಳಿಸೂ ಸಹಸ್ರದಳದರವಿಂದದಂತೆ
ಭಾವದೊರತೆ ಬತ್ತಿ ಬರಡಾದೀ ಹಳ್ಳಗಳಲಿ
ದೇವರಸ ಗಂಗೆಯನುಕ್ಕಿಸಿ
ನಂದನವನವನರಳಿಸಿ ಹಿಗ್ಗಿಸೋ
ಹೊಂಡ ಹೊಂಡಗಳಲ್ಲಿ ಬಿದ್ದು
ತುಂಡು ತುಂಡು ತಿಂಡಿಗೂ ಭಂಟಾಡವಾಡುವೀ
ಕಪ್ಪೆ ಮೀನುಗಳನೆತ್ತೆತ್ತಿ
ವಿಶಾಲಸಾಗರದಲಿಳಿಸಿ ಬಾಳಿಸೊ
ಬೆದರು ಗೊಂಬೆಗಳೀ ಕಿವುಚು ಮೊಗವಾಡಗಳ ಕಳಚಿ
ಸೂರ್ಯ ಬಿಂಬಗಳ ನೈಜ ನಗೆಯ ತುಳುಕಿಸೋ
ಹರಿ ಹರಿದು ಕಚ್ಚಾಡಿ ಹೋರುವೀ ನಾಯಿಹದ್ದುಗಳ
ಉಗುರು ಹಲ್ಲುಗಳ ಕಿತ್ತು
ಸಹಜೀವನಕೆ ಸಾಧುಗೊಳಿಸೋ
ಕೊಳೆತು ನಾರುವೀ ತಿಪ್ಪೆ ಮನಗಳ
ಗುಡಿಸಿ ಸಾರಿಸೀ ಹಸನುಗೊಳಿಸೋ
ತಿಂದು ಮಲಗಿ ಓಡಾಡುವೀ ಬೆಂತರಗಳಲಿ
ಚೇತನದುಸಿರಾಡಿಸೋ
ನೂತನ ಹಸಿರು ಹೂ ಹಣ್ಣು ಕೊಡುವ
ಚಿರಂತನ ಸಿರಿ ಮೂಡಿಸೋ
ಬಿದ್ದವರ ಮಲಗಿರುವವರ
ಮತ್ತೆ ಮತ್ತೆ ಮರೆವಿಗೆ ಸಂದು ಸುಂದಾಗುವವರ
ಕತ್ತಲು ಒತ್ತೆಗೊಂಡವರ ಮಿತ್ತು ತುತ್ತುಗೊಳ್ಳುವವರ
ಎಬ್ಬಿಸೋ ತಂದೆ ಮೇಲೆಬ್ಬಿಸೋ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...