Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ
ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ
ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ
ರೋಮಾಂಚನವ ಚಿಗುರಿಸಿ
ರಂದ್ರರಂದ್ರವ ಬಯಲಗಾಳಿಗೆ ತೆರೆಸೋ
ನೀಲಿಗಟ್ಟಿರುವೀ ಧಮನಿಗಳಲ್ಲಿ
ಕೆಚ್ಚು ರೊಚ್ಚಿನ ಕೆಂಪು ಹರಿಸೋ
ಒಣಗಿ ಬೆಂಡಾಗಿ ಕಳಚಿ ಕುಸಿಯಲನುವಾಗಿರುವಸ್ಥಿ ಪಂಜರದ
ಮೂಲೆ ಮೂಳೆಗಳನ್ನುಕ್ಕುಗೊಳಿಸಿ ಸ್ಥಿರಗೊಳಿಸೋ
ಅಷ್ಟಾವಕ್ರವಾಗಿ ಅಂಕು ಡೊಂಕಾಗಿ ತುಂಡು ತುಂಡಾಗಿ
ಮಬ್ಬು ಮುಚ್ಚಿದೀ ನೋಟಗಳ
ರವಿಕಿರಣದಂತೆ ಸಹಜ ನೇರಗೊಳಿಸಿ ತೇಜಗೊಳಿಸೋ
ಓರೆ ಕೋರೆಗಳನೊಳವೊಗುವಂತೆ ಚೂಪುಗೊಳಿಸೋ
ಜಡತೆ ಜಿದ್ದು ಪಾಚಿಗಟ್ಟಿ
ಕೂಪಸ್ಥ ಬಂಡೆಯಾದ ಈ ಮಂಡೆಗೊಳಗಳ
ತಿಳಿಗೊಳಿಸೂ ಅರಳಿಸೂ ಸಹಸ್ರದಳದರವಿಂದದಂತೆ
ಭಾವದೊರತೆ ಬತ್ತಿ ಬರಡಾದೀ ಹಳ್ಳಗಳಲಿ
ದೇವರಸ ಗಂಗೆಯನುಕ್ಕಿಸಿ
ನಂದನವನವನರಳಿಸಿ ಹಿಗ್ಗಿಸೋ
ಹೊಂಡ ಹೊಂಡಗಳಲ್ಲಿ ಬಿದ್ದು
ತುಂಡು ತುಂಡು ತಿಂಡಿಗೂ ಭಂಟಾಡವಾಡುವೀ
ಕಪ್ಪೆ ಮೀನುಗಳನೆತ್ತೆತ್ತಿ
ವಿಶಾಲಸಾಗರದಲಿಳಿಸಿ ಬಾಳಿಸೊ
ಬೆದರು ಗೊಂಬೆಗಳೀ ಕಿವುಚು ಮೊಗವಾಡಗಳ ಕಳಚಿ
ಸೂರ್ಯ ಬಿಂಬಗಳ ನೈಜ ನಗೆಯ ತುಳುಕಿಸೋ
ಹರಿ ಹರಿದು ಕಚ್ಚಾಡಿ ಹೋರುವೀ ನಾಯಿಹದ್ದುಗಳ
ಉಗುರು ಹಲ್ಲುಗಳ ಕಿತ್ತು
ಸಹಜೀವನಕೆ ಸಾಧುಗೊಳಿಸೋ
ಕೊಳೆತು ನಾರುವೀ ತಿಪ್ಪೆ ಮನಗಳ
ಗುಡಿಸಿ ಸಾರಿಸೀ ಹಸನುಗೊಳಿಸೋ
ತಿಂದು ಮಲಗಿ ಓಡಾಡುವೀ ಬೆಂತರಗಳಲಿ
ಚೇತನದುಸಿರಾಡಿಸೋ
ನೂತನ ಹಸಿರು ಹೂ ಹಣ್ಣು ಕೊಡುವ
ಚಿರಂತನ ಸಿರಿ ಮೂಡಿಸೋ
ಬಿದ್ದವರ ಮಲಗಿರುವವರ
ಮತ್ತೆ ಮತ್ತೆ ಮರೆವಿಗೆ ಸಂದು ಸುಂದಾಗುವವರ
ಕತ್ತಲು ಒತ್ತೆಗೊಂಡವರ ಮಿತ್ತು ತುತ್ತುಗೊಳ್ಳುವವರ
ಎಬ್ಬಿಸೋ ತಂದೆ ಮೇಲೆಬ್ಬಿಸೋ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...