Home / ಕವನ / ಕವಿತೆ / ಪ್ರಾರ್ಥನೆ

ಪ್ರಾರ್ಥನೆ

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ
ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ
ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ
ರೋಮಾಂಚನವ ಚಿಗುರಿಸಿ
ರಂದ್ರರಂದ್ರವ ಬಯಲಗಾಳಿಗೆ ತೆರೆಸೋ
ನೀಲಿಗಟ್ಟಿರುವೀ ಧಮನಿಗಳಲ್ಲಿ
ಕೆಚ್ಚು ರೊಚ್ಚಿನ ಕೆಂಪು ಹರಿಸೋ
ಒಣಗಿ ಬೆಂಡಾಗಿ ಕಳಚಿ ಕುಸಿಯಲನುವಾಗಿರುವಸ್ಥಿ ಪಂಜರದ
ಮೂಲೆ ಮೂಳೆಗಳನ್ನುಕ್ಕುಗೊಳಿಸಿ ಸ್ಥಿರಗೊಳಿಸೋ
ಅಷ್ಟಾವಕ್ರವಾಗಿ ಅಂಕು ಡೊಂಕಾಗಿ ತುಂಡು ತುಂಡಾಗಿ
ಮಬ್ಬು ಮುಚ್ಚಿದೀ ನೋಟಗಳ
ರವಿಕಿರಣದಂತೆ ಸಹಜ ನೇರಗೊಳಿಸಿ ತೇಜಗೊಳಿಸೋ
ಓರೆ ಕೋರೆಗಳನೊಳವೊಗುವಂತೆ ಚೂಪುಗೊಳಿಸೋ
ಜಡತೆ ಜಿದ್ದು ಪಾಚಿಗಟ್ಟಿ
ಕೂಪಸ್ಥ ಬಂಡೆಯಾದ ಈ ಮಂಡೆಗೊಳಗಳ
ತಿಳಿಗೊಳಿಸೂ ಅರಳಿಸೂ ಸಹಸ್ರದಳದರವಿಂದದಂತೆ
ಭಾವದೊರತೆ ಬತ್ತಿ ಬರಡಾದೀ ಹಳ್ಳಗಳಲಿ
ದೇವರಸ ಗಂಗೆಯನುಕ್ಕಿಸಿ
ನಂದನವನವನರಳಿಸಿ ಹಿಗ್ಗಿಸೋ
ಹೊಂಡ ಹೊಂಡಗಳಲ್ಲಿ ಬಿದ್ದು
ತುಂಡು ತುಂಡು ತಿಂಡಿಗೂ ಭಂಟಾಡವಾಡುವೀ
ಕಪ್ಪೆ ಮೀನುಗಳನೆತ್ತೆತ್ತಿ
ವಿಶಾಲಸಾಗರದಲಿಳಿಸಿ ಬಾಳಿಸೊ
ಬೆದರು ಗೊಂಬೆಗಳೀ ಕಿವುಚು ಮೊಗವಾಡಗಳ ಕಳಚಿ
ಸೂರ್ಯ ಬಿಂಬಗಳ ನೈಜ ನಗೆಯ ತುಳುಕಿಸೋ
ಹರಿ ಹರಿದು ಕಚ್ಚಾಡಿ ಹೋರುವೀ ನಾಯಿಹದ್ದುಗಳ
ಉಗುರು ಹಲ್ಲುಗಳ ಕಿತ್ತು
ಸಹಜೀವನಕೆ ಸಾಧುಗೊಳಿಸೋ
ಕೊಳೆತು ನಾರುವೀ ತಿಪ್ಪೆ ಮನಗಳ
ಗುಡಿಸಿ ಸಾರಿಸೀ ಹಸನುಗೊಳಿಸೋ
ತಿಂದು ಮಲಗಿ ಓಡಾಡುವೀ ಬೆಂತರಗಳಲಿ
ಚೇತನದುಸಿರಾಡಿಸೋ
ನೂತನ ಹಸಿರು ಹೂ ಹಣ್ಣು ಕೊಡುವ
ಚಿರಂತನ ಸಿರಿ ಮೂಡಿಸೋ
ಬಿದ್ದವರ ಮಲಗಿರುವವರ
ಮತ್ತೆ ಮತ್ತೆ ಮರೆವಿಗೆ ಸಂದು ಸುಂದಾಗುವವರ
ಕತ್ತಲು ಒತ್ತೆಗೊಂಡವರ ಮಿತ್ತು ತುತ್ತುಗೊಳ್ಳುವವರ
ಎಬ್ಬಿಸೋ ತಂದೆ ಮೇಲೆಬ್ಬಿಸೋ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...