Home / ಕವನ / ಅನುವಾದ / ಪುನರಾವತಾರ

ಪುನರಾವತಾರ

ಹಿಗ್ಗುತ್ತಿರುವ ವೃತ್ತದಾಕಾರದಲ್ಲಿ, ಸುತ್ತುತ್ತ ಸುತ್ತುತ್ತ,
ಕೇಳಿಸದು ಡೇಗೆಗೆ ಡೇಗೆಗಾರನ ಕೂಗು;
ಕಳಚಿಕೊಳ್ಳುತ್ತಲಿದೆ ಅಂಗಾಂಗ, ಒಟ್ಟಾಗಿ ಹಿಡಿಯಲಾರದ ಕೇಂದ್ರ,
ಛೂಬಿಟ್ಟ ಹಾಗಿದೆ ಅನಾಯಕತೆಯನ್ನೇ ಇಡಿಯ ಲೋಕದ ತುಂಬ;
ರಕ್ತಮಂದ ಪ್ರವಾಹ ಕಟ್ಟೊಡೆದು ನುಗ್ಗಿದೆ
ಮುಗ್ಧತೆಯ ಉತ್ಸವ ಮುಳುಗಿ ತಳ ಸೇರಿದೆ,
ಉತ್ತಮರಿಗಿಲ್ಲ ದೃಢನಂಬಿಕೆ, ನಿಕೃಷ್ಟರಿಗೆ
ತೀವ್ರ ಭಾವೋನ್ಮಾದಪರತೆ.

ಯಾವುದೋ ದರ್‍ಶನಕ್ಕಿದು ಕಾಲ ಖಂಡಿತ,
ಪುನರಾವತಾರಕ್ಕೆ ಕಾಲ ಇದು ಖಂಡಿತ.
ಪುನರಾವತಾರ! ಪದದುಚ್ಚಾರ ಆಯಿತೋ
ಕಣ್ಣಕುಕ್ಕುತ್ತಿದೆ ಪುರಾಣಸ್ಮೃತಿಯಿಂದೆದ್ದ ಘೋರ ಬೃಹದಾಕಾರ,
ದೂರ ಮರುಭೂಮಿಯಲ್ಲೆಲ್ಲೊ ನರಶಿರವನ್ನು ಹೊತ್ತ ಸಿಂಹಶರೀರ;
ಶೂನ್ಯಕಾರುವ ನೋಟ, ಸೂರ್‍ಯನಂತೇ, ಕ್ರೂರ,
ಭಾರ ತೊಡೆಯೆತ್ತೆತ್ತಿ ನಿಧಾನ ಚಲಿಸುತ್ತಿದೆ,
ಕೆರಳಿರುವ ಮರುಭೂಮಿಹಕ್ಕಿಗಳ ನೆರಳುಗಳು ಅದರ ಸುತ್ತ.
ಕತ್ತಲಿಳಿಯುತ್ತಿದೆ ಮತ್ತೆ ಕೆಳಗೆ. ಈಗ
ಗೊತ್ತಾಗುತ್ತಿದೆ ನನಗೆ ತೂಗುತೊಟ್ಟಿಲದೊಂದು
ಇಪ್ಪತ್ತು ಶತಕಗಳ ಗಾಢನಿದ್ದೆಯ ಕಾಡಿ ದುಃಸಪ್ನ ಬಡಿಸಿದ್ದು.
ತನ್ನ ಜನನದ ಗಳಿಗೆ ಇನ್ನೇನು ಬಂತೆಂದು
ತೂಗಿ ಚಲಿಸುತ್ತಿದೆಯೊ ಹೇಗೆ ಈ ಘೋರಮೃಗ
ಬೆತ್ಲಹಮ್ಮಿನ ಕಡೆಗೆ?
*****
ಎರಡು ಸಾವಿರ ವರ್‍ಷಗಳಿಗೊಮ್ಮೆ ಯುಗ ಬದಲುತ್ತದೆ; ಹೊಸ ಅವತಾರದಿಂದ ಅದರ ಆರಂಭವಾಗುತ್ತದೆ ಎಂದು ಏಟ್ಸ್ ನಂಬಿದ್ದ. ಕ್ರಿಸ್ತ ಜನಿಸಿ ಎರಡು ಸಹಸ್ರ ವರ್‍ಷಗಳಾಗುತ್ತಿವೆ. ಯುಗಜೀವನ ತುಂಬ ಕಲುಷಿತವಾಗಿದೆ. ಆಗಲಿರುವ ಅವತಾರದ ಕಲ್ಪನೆ ಕವನದಲ್ಲಿ ಮೂಡಿದೆ.

ಪುರಾಣ ಸ್ಮೃತಿ: ಮನುಷ್ಯ ಜನಾಂಗಕ್ಕೆಲ್ಲ ಸಾಮಾನ್ಯವಾದ ಸ್ಮೃತಿ, ಪುರಾಣ ಐತಿಹ್ಯಗಳಲ್ಲಿ ಮತ್ತೆಮತ್ತೆ ಪುನರಾವರ್‍ತಿಸುವ ಪ್ರತಿಮೆಗಳ ಸಂಗ್ರಹ. ಇಲ್ಲಿ ಬರುವ ‘ನರಶಿರವನ್ನು ಹೊತ್ತ ಸಿಂಹಶರೀರ’ ಅಂಥ ಒಂದು ಪ್ರತಿಮೆ.

ಬೆತ್ಲೆಹೆಮ್ : ಕ್ರಿಸ್ತನ ಜನ್ಮಸ್ಥಳ.

ಮೂಲ: ವಿಲಿಯಂ ಬಟ್ಲರ್ ಏಟ್ಸ್

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...