Home / ಕವನ / ಅನುವಾದ / ಆದಮನ ಶಾಪ

ಆದಮನ ಶಾಪ

ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು :
ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು
ಮಾತಾಡಿದೆವು ಕವಿತೆಯನ್ನು ಕುರಿತು
ನಾನೆಂದೆ : “ಕವಿತ ಸಾಲೊಂದನ್ನು ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲಿದು ಬಿಟ್ಟಿದ್ದೆಲ್ಲ ಪೂರ ವ್ಯರ್‍ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆ ಮನೆ ನೆಲವನ್ನುಜ್ಜುವುದೊ,
ಕಡು ಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೊ
ಇದಕ್ಕಿಂತ ಉತ್ತಮ
ಮಧುರ ನಾದಗಳ ಹದವಾಗಿ ಹೆಣೆಯುವ ಕೆಲಸ
ಎಲ್ಲಕ್ಕೂ ಕಷ್ಟ ಅಷ್ಟೆಲ್ಲ ಮಾಡಿಯೂ ಕೂಡ
ಶಾಲೆ ಮತ ಬ್ಯಾಂಕುಗಳ ಗೊಂದಲದ ಮಂದಿಗೆ
ನಾವು ಕವಿಗಳು ಶುದ್ಧ ಕೆಲಸಗೇಡಿಗಳು”

ನಿನ್ನ ಪ್ರಿಯಗೆಳತಿ ಆ ಚೆಲುವೆ – ಎಂಥ ಪ್ರಶಾಂತೆ,
ಏನು ಸವಿ ಅವಳದನಿ, ಎಷ್ಟು ಮಿದು, ಅದಕಾಗಿ
ಏನೆಲ್ಲ ಹೃದಯವ್ಯಥೆ ಸಹಿಸಲೂ ಸಿದ್ದರು ಎಂಥೆಂಥ ಜನರೂ –
ಹೇಳಿದಳು : “ಕಲಿಸದಿದ್ದರು ಕೂಡ ಯಾವ ಸ್ಕೂಲೂ ಎಲ್ಲೂ,
ಹೆಣ್ಣು ಜೀವಕ್ಕೆಲ್ಲ ಗೊತ್ತಿರುವ ಗುಟ್ಟು ಇದು, ಚೆಲುವೆಯಾಗಿರಲು
ಶ್ರಮಿಸಬೇಕು ಸದಾ”. ನಾನಂದೆ : “ಹೌದು, ನಿಜ
ಆದಮನ ಪತನವಾದಂದಿನಿಂದ
ಕಷ್ಟಪಡದೇ ಗಳಿಸಬಲ್ಲ ಸುಂದರವಸ್ತು ಏನೊಂದೂ ಇಲ್ಲ.
ಪ್ರೇಮವೆಂದರೆ ತೀರ ಸೂಕ್ಷ್ಮ ಸೌಜನ್ಯಗಳ
ಪರಿಪಾಕವೆಂದೆ ಗ್ರಹಿಸಿದ್ದ ಪ್ರೇಮಿಗಳು ಇದ್ದರೆಷ್ಟೋ.
ನಿಟ್ಟುಸಿರ ಚೆಲ್ಲುತ್ತ, ಜ್ಞಾನ ತುಂಬಿದ ದೃಷ್ಟಿ ಹರಿಸಿ ಉದ್ಗರಿಸುತ್ತ.
ಪ್ರಾಚೀನ ಸುಂದರ ಕೃತಿಗಳಿಂದಾಯ್ದ ಸಂಗತಿಯ ಉದ್ದರಿಸುತ್ತ
ತೋಡಿಕೊಳ್ಳುತ್ತಿದ್ದರವರ ಅನುರಾಗ,
ವ್ಯರ್‍ಥವೆನಿಸುತ್ತದೆ ಅಂಥ ಉದ್ಯಮ ಈಗ.”

ಪ್ರೇಮವೆಂದದ್ದೆ ತಡ, ಮೌನ ನೆಲೆಸಿತು ಸುತ್ತ
ಹಗಲ ಬೆಳಕಿನ ಕಡೆಯ ಕಿಡಿಗಳೂ ಆರುತ್ತ
ಪಚ್ಚಿನೀಲಿಗಳು ಕಂಪಿಸುವ ನಭದೆದೆಯಲ್ಲಿ ಕಂಡ ಚಿತ್ರ :
ಅಲೆಯೆದ್ದು ಬಿದ್ದು ಸಾಗುತ್ತಿರುವ ಕಾಲಜಲ
ದಿನ ವತ್ಸರಗಳಾಗಿ ಒಡೆಯುತ್ತ, ಕಡೆಯುತ್ತ,
ಚಿಕ್ಕೆಗಳ ನಡುವೆ ತಳದಲ್ಲೆಲ್ಲೊ ತೊಳೆಯುತ್ತ
ಸವೆದಿದ್ದ ಚಿಪ್ಪಿನಂತಿದ್ದ ಚಂದ್ರ.
ನಿನ್ನ ಕಿವಿಯೊಳಗಷ್ಟೆ ಉಸಿರಬಹುದಾದೊಂದು ವಿಚಾರ ಬಂತು
ನೀ ಚೆಲುವೆಯಾಗಿದ್ದೆ,
ಹಿಂದಿನವರು ಪ್ರೇಮದ ಉಚ್ಚ ನೆಲೆಯಲ್ಲಿ
ನಿನ್ನನ್ನೊಲಿಸಲು ನಾನು ಹೆಣಗಿದ್ದೆ, ಆಗೆಲ್ಲ
ಸುಖವಾಗಿಯೇ ಇತ್ತು. ಆದರೆ ಈಗ
ಅನಿಸುವುದು ನಮ್ಮ ಎದೆ ಬಳಲಿದಂತೆ
ಸಮೆದು ತೆಳುವಾದ ಆ ಚಂದ್ರನಂತೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನ ಆವರೆಗಿನ ಕವನಗಳಲ್ಲೆಲ್ಲ ಮುಖ್ಯವಾದದ್ದು ಎಲಿಯಟ್ ಇದನ್ನು ಮೆಚ್ಚಿ ಮಾತಾಡಿದ್ದಾನೆ.

ದೇವರು ತನ್ನ ಅಪ್ಪಣೆಗೆ ವಿರುದ್ಧವಾಗಿ ನಡೆದ ಆದಮನನ್ನು ಈಡನ್ ತೋಟದಿಂದ ಹೊರಕಳಿಸಿದ. ಮುಂದೆ ಶ್ರಮದ ದುಡಿಮೆಯಿಂದ ಜೀವಿಸುವಂತೆ ಶಾಪವಿತ್ತ.

ಕವನದಲ್ಲಿ ಕವಿಯ ಜೊತೆ ಮಾತಿಗೆ ಕುಳಿತಿರುವವರು ಮಾಡಗಾನ್ ಮತ್ತು ಅವಳ ತಂಗಿ ಕ್ಯಾಥಲೀನ್.

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...