Home / ಕವನ / ಅನುವಾದ / ಆದಮನ ಶಾಪ

ಆದಮನ ಶಾಪ

ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು :
ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು
ಮಾತಾಡಿದೆವು ಕವಿತೆಯನ್ನು ಕುರಿತು
ನಾನೆಂದೆ : “ಕವಿತ ಸಾಲೊಂದನ್ನು ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು;
ಆದರೂ ಆ ಸಾಲು ಅಲ್ಲೆ, ಆ ಗಳಿಗೆಯೇ
ಚಿಮ್ಮಿ ಬಂದದ್ದೆಂದು ಅನ್ನಿಸದೆ ಇದ್ದಲ್ಲಿ
ಹೊಲಿದು ಬಿಟ್ಟಿದ್ದೆಲ್ಲ ಪೂರ ವ್ಯರ್‍ಥ.
ಬೆನ್ನು ಬಗ್ಗಿಸಿ ಮಂಡಿಯೂರಿ ಕೊಳೆಯಡಿಗೆ ಮನೆ ನೆಲವನ್ನುಜ್ಜುವುದೊ,
ಕಡು ಭಿಕಾರಿಯ ಹಾಗೆ ಬಿಸಿಲು ಚಳಿ ಎನ್ನದೆ ಕಲ್ಲನ್ನೊಡೆಯುವುದೊ
ಇದಕ್ಕಿಂತ ಉತ್ತಮ
ಮಧುರ ನಾದಗಳ ಹದವಾಗಿ ಹೆಣೆಯುವ ಕೆಲಸ
ಎಲ್ಲಕ್ಕೂ ಕಷ್ಟ ಅಷ್ಟೆಲ್ಲ ಮಾಡಿಯೂ ಕೂಡ
ಶಾಲೆ ಮತ ಬ್ಯಾಂಕುಗಳ ಗೊಂದಲದ ಮಂದಿಗೆ
ನಾವು ಕವಿಗಳು ಶುದ್ಧ ಕೆಲಸಗೇಡಿಗಳು”

ನಿನ್ನ ಪ್ರಿಯಗೆಳತಿ ಆ ಚೆಲುವೆ – ಎಂಥ ಪ್ರಶಾಂತೆ,
ಏನು ಸವಿ ಅವಳದನಿ, ಎಷ್ಟು ಮಿದು, ಅದಕಾಗಿ
ಏನೆಲ್ಲ ಹೃದಯವ್ಯಥೆ ಸಹಿಸಲೂ ಸಿದ್ದರು ಎಂಥೆಂಥ ಜನರೂ –
ಹೇಳಿದಳು : “ಕಲಿಸದಿದ್ದರು ಕೂಡ ಯಾವ ಸ್ಕೂಲೂ ಎಲ್ಲೂ,
ಹೆಣ್ಣು ಜೀವಕ್ಕೆಲ್ಲ ಗೊತ್ತಿರುವ ಗುಟ್ಟು ಇದು, ಚೆಲುವೆಯಾಗಿರಲು
ಶ್ರಮಿಸಬೇಕು ಸದಾ”. ನಾನಂದೆ : “ಹೌದು, ನಿಜ
ಆದಮನ ಪತನವಾದಂದಿನಿಂದ
ಕಷ್ಟಪಡದೇ ಗಳಿಸಬಲ್ಲ ಸುಂದರವಸ್ತು ಏನೊಂದೂ ಇಲ್ಲ.
ಪ್ರೇಮವೆಂದರೆ ತೀರ ಸೂಕ್ಷ್ಮ ಸೌಜನ್ಯಗಳ
ಪರಿಪಾಕವೆಂದೆ ಗ್ರಹಿಸಿದ್ದ ಪ್ರೇಮಿಗಳು ಇದ್ದರೆಷ್ಟೋ.
ನಿಟ್ಟುಸಿರ ಚೆಲ್ಲುತ್ತ, ಜ್ಞಾನ ತುಂಬಿದ ದೃಷ್ಟಿ ಹರಿಸಿ ಉದ್ಗರಿಸುತ್ತ.
ಪ್ರಾಚೀನ ಸುಂದರ ಕೃತಿಗಳಿಂದಾಯ್ದ ಸಂಗತಿಯ ಉದ್ದರಿಸುತ್ತ
ತೋಡಿಕೊಳ್ಳುತ್ತಿದ್ದರವರ ಅನುರಾಗ,
ವ್ಯರ್‍ಥವೆನಿಸುತ್ತದೆ ಅಂಥ ಉದ್ಯಮ ಈಗ.”

ಪ್ರೇಮವೆಂದದ್ದೆ ತಡ, ಮೌನ ನೆಲೆಸಿತು ಸುತ್ತ
ಹಗಲ ಬೆಳಕಿನ ಕಡೆಯ ಕಿಡಿಗಳೂ ಆರುತ್ತ
ಪಚ್ಚಿನೀಲಿಗಳು ಕಂಪಿಸುವ ನಭದೆದೆಯಲ್ಲಿ ಕಂಡ ಚಿತ್ರ :
ಅಲೆಯೆದ್ದು ಬಿದ್ದು ಸಾಗುತ್ತಿರುವ ಕಾಲಜಲ
ದಿನ ವತ್ಸರಗಳಾಗಿ ಒಡೆಯುತ್ತ, ಕಡೆಯುತ್ತ,
ಚಿಕ್ಕೆಗಳ ನಡುವೆ ತಳದಲ್ಲೆಲ್ಲೊ ತೊಳೆಯುತ್ತ
ಸವೆದಿದ್ದ ಚಿಪ್ಪಿನಂತಿದ್ದ ಚಂದ್ರ.
ನಿನ್ನ ಕಿವಿಯೊಳಗಷ್ಟೆ ಉಸಿರಬಹುದಾದೊಂದು ವಿಚಾರ ಬಂತು
ನೀ ಚೆಲುವೆಯಾಗಿದ್ದೆ,
ಹಿಂದಿನವರು ಪ್ರೇಮದ ಉಚ್ಚ ನೆಲೆಯಲ್ಲಿ
ನಿನ್ನನ್ನೊಲಿಸಲು ನಾನು ಹೆಣಗಿದ್ದೆ, ಆಗೆಲ್ಲ
ಸುಖವಾಗಿಯೇ ಇತ್ತು. ಆದರೆ ಈಗ
ಅನಿಸುವುದು ನಮ್ಮ ಎದೆ ಬಳಲಿದಂತೆ
ಸಮೆದು ತೆಳುವಾದ ಆ ಚಂದ್ರನಂತೆ.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಏಟ್ಸನ ಆವರೆಗಿನ ಕವನಗಳಲ್ಲೆಲ್ಲ ಮುಖ್ಯವಾದದ್ದು ಎಲಿಯಟ್ ಇದನ್ನು ಮೆಚ್ಚಿ ಮಾತಾಡಿದ್ದಾನೆ.

ದೇವರು ತನ್ನ ಅಪ್ಪಣೆಗೆ ವಿರುದ್ಧವಾಗಿ ನಡೆದ ಆದಮನನ್ನು ಈಡನ್ ತೋಟದಿಂದ ಹೊರಕಳಿಸಿದ. ಮುಂದೆ ಶ್ರಮದ ದುಡಿಮೆಯಿಂದ ಜೀವಿಸುವಂತೆ ಶಾಪವಿತ್ತ.

ಕವನದಲ್ಲಿ ಕವಿಯ ಜೊತೆ ಮಾತಿಗೆ ಕುಳಿತಿರುವವರು ಮಾಡಗಾನ್ ಮತ್ತು ಅವಳ ತಂಗಿ ಕ್ಯಾಥಲೀನ್.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...