Home / ಕವನ / ಕವಿತೆ / ಬುಗುರಿಹುಳದ ಧ್ಯಾನ

ಬುಗುರಿಹುಳದ ಧ್ಯಾನ

ನಡೆವುದೆಂದರೆ ಹೀಗೆ….
ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ
ಗಿರಗಿರನೆ ಗುಂಡಗೆ
ಬುಗುರಿಹುಳದ
ಇಡೀ ದೇಹವೇ
ವೃತ್ತಾಕಾರ ತಿರುಗುತ್ತಾ
ಗಾಳಿಯಿಲ್ಲದೆಯೂ ಗಿರಗಟ್ಟೆ.

ತಿರುಗುತ್ತಲೇ ಒಂದಿಷ್ಟು ಮುಂದೆ
ಯಾರಿಗೆ ಗೊತ್ತು?
ಹಿಂದಕ್ಕೂ ಆಗಿರಬಹುದು ಆ ನಡಿಗೆ!

ಅದರ ದಾರಿಯುದ್ದಕ್ಕೂ
ಕಲ್ಲು ಮುಳ್ಳು.
ಗುಡುಗುಡಿಸುತ್ತಾ
ಅದನೇರಿ ಇಳಿದು
ತನ್ನ ಸುತ್ತಲೇ ತಾನು
ಗಿರಿಗಿಟ್ಟಲೆ ಆಡಿ
ಖುಷಿಯ ಚಪ್ಪಾಳೆ.

ಬೆನ್ನು ಕೆಳಗಾಗಿ
ಬಿದ್ದು ಕೊಂಡು
ತೊಪ್ಪೆಯ ಗುಪ್ಪೆಯಿಂದ
ಜೊಯ್ಯನೆ ಜಾರಾಟ
ದೇಹವೇ ಪಾದವಾಗಿ
ಬೆನ್ನು ಸವೆಸಿ ಗಿರ್ರನೆ
ಸುತ್ತುತ್ತಾ ಸುತ್ತುತ್ತಾ
ಅಷ್ಟ ದಿಕ್ಕಿಗೂ ನಮಸ್ಕಾರ.

ತೇವದ ಮೆದು
ಮಣ್ಣು ಸ್ಪರ್ಶಿಸಿದೊಡನೇ
ಇಡೀ ದೇಹ ತನ್ನ
ಹೊರ ಕವಚದೊಳಗೆ
ಎಳೆದು ಮುದುರಿಸಿ
ಇಡಿಕಿರಿದು ತುರುಕಿ
ಒಮ್ಮೆ ದೇಹ
ಠರ್ರನೆ ಗುಂಡಗೆ ತಿರುಗಿಸಿ
ಹದ ಮಾಡಿಕೊಂಡು
ದೇಹವೇ ತಾನಾಗಿ
ಸೊಯ್ಯನೊಮ್ಮೆ ಸುತ್ತಿ
ಮಣ್ಣು ಕುಳಿ ಮಾಡಿ
ಅದರೊಳಗೆ ಕಣ್ಣು ಕಿವಿಮುಚ್ಚಿ
ಕಿರ್ರೋ ಧ್ವನಿ ಕೆಲ ಕ್ಷಣ
ಮತ್ತೆ ಗಾಢ ನಿಶ್ಯಬ್ಧ
ದೇಹ ಉರುಟುವ
ಸದ್ದೂ ಇಲ್ಲ!
ಸತ್ತೇ ಹೋಯ್ಯ್ತೋ ಏನೋ?

ಎಷ್ಟು ಕಾಲ ಕಳೆಯಿತೋ ಹೀಗೇ…
ಕೊನೆಗೊಮ್ಮೆ
ಬುಗುರಿಹುಳು
ಮಲ್ಲೊಳಗಿಂದೆದ್ದು
ಹಾರಿತು ಪುರ್ರನೆ
ತನ್ನ ಹೊಸ ರೆಕ್ಕೆ ಬಡಿಯುತ್ತಾ….

ಹೊಸ ಧ್ಯಾನಕ್ಕೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...