Home / ಕವನ / ಕವಿತೆ / ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ |
ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ |
ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧||

ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ |
ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ |
ಮುತ್ತಿ ನೊಸ್ತಾ, ತೋರ್‍ಯಾರೇಳಯ್ಯಾ ||೨||

ಆಲಽದ ಮಽರನೇರಿ ಆಲಪರದು ನಾನೆ ಬಂದ |
ನೀಲದೊಸ್ತಾ ತೋರ್‍ಯಾರೇಳಯ್ಯಾ | ಸಿದ್ಧರಾಮಾ |
ನೀಲದೊಸ್ತಾ ತೋರ್‍ಯಾರೇಳಯ್ಯಾ ||೩||

ಅಕ್ಕಿಪೂಜಿ ಬ್ಯಾಳಿಪೂಜಿ ಮ್ಯಾಲ ಎಲಿಯ ಘಟ್ಟಪೂಜಿ |
ನಿತ್ಯಪೂಜಿ ಕಟ್ಟ್ಯಾರೇಳಯ್ಯಾ | ಸಿದ್ಧರಾಮಾ |
ನಿಮಗ ಪೂಜಿ ಕಟ್ಟ್ಯಾರೇಳಯ್ಯಾ ||೪||

ಕೆಂಪ ಗಂಧಾ ಬಿಳಿಯ ಗಂಧಾ ಅಷ್ಟಗಂಧಾ ಸಿರಿಯಗಂಧಾ |
ಛೆಂದದಿಂದ ಏರ್‍ಯಾವೇಳಯ್ಯಾ | ಸಿದ್ಧ ರಾಮಾ |
ಛೆಂದದಿಂದ ಏರ್‍ಯಾವೇಳೆಯ್ಯಾ ||೫||

ಜಾಜಮಲ್ಲಿಗಿ ಜೂಜಮಲ್ಲಿಗಿ ಅರಳಮಲ್ಲಿಗಿ ಶಾವಂತಿಗ್ಹೂವಾ |
ನಿಮ್ಮ ಪೂಜಿಗಿ ಬಂದಾವೇಳಯ್ಯಾ | ಸಿದ್ಧರಾಮಾ |
ನಿಮಗ ಪೂಜಿ ಮಾಡ್ಯಾರೇಳಯ್ಯಾ ||೬||

ಅಚ್ಚದಚ್ಚ ಬೆಲ್ಲದಚ್ಚಾ ಮ್ಯಾಗ ಎಳ್ಳ ಚಿಗಳಿನೆಚ್ಚಾ |
ನಿಮಗ ನೇವುದೀ ಬಂದಾವೇಳಯ್ಯಾ | ಸಿದ್ಧರಾಮಾ |
ನಿಮಗ ನೇವುದೀ ತೋರ್‍ಯಾರೇಳಯ್ಯಾ ||೭||

ಬಾಜಿ ಬಾಜಿ ಬಾಜಿಯಂತರಿ ಬಾಳಿ ಬನದಾಗ್‌ ಹೆಲಗಿ ಖೊಂಬಾ |
ಭೋರಗೆಜ್ಜಿ ಗಿಲ್ಲಂದಾವೇಳಯ್ಯಾ | ಸಿದ್ಧರಾಮಾ |
ಭೋರಗೆಜ್ಜಿ ಗಿಲ್ಲಂದಾನೇಳಯ್ಯಾ ||೮||

ಗಂಗಿಯೊಳಗ ಸ್ನಾನ ಮಾಡಿ ಶಿವನ ಸಿಕರ ಸುತ್ತಿಬಂದು |
ಹರದ್ಯೇರು ಫಲವ ಬೇಡ್ಯಾರೇಳಯ್ಯಾ | ಸಿದ್ಧರಾಮಾ |
ಹೆರದ್ಯೇರು ಫಲವ ಬೇಡ್ಯಾರೇಳಯ್ಯಾ ||೯||

ಸಂಕರಾತರಿ ಭೋಗಿ ದಿನಾ ಮಲ್ಲಿನಾಧನ ಗುಡಿಯ ಒಳಗ |
ನಾಚನಾದವ ಛೆಂದದಿಂದ | ಸಿದ್ಧರಾಮಯ್ಯ |
ನಾಚನಾದವ ಛೆಂದಛೆಂದ ಸಿದ್ಧರಾಮಯ್ಯ ||೧೦||

ಸಂಕರಾತರಿ ಸಮತಿ ದಿನಾ ನಂದಿಕೋಲಾ ಮೆರೆವ ದಿಽನಾ |
ಟಿಂಗಕೈ ಸೂರ್‍ಯಾದವೇಳಯ್ಯಾ | ಸಿದ್ಧರಾಮಾ |
ಖಾರೀಕಕೈ ಸೂರ್‍ಯಾದವೇಳೆಯ್ಯಾ ||೧೧||

ಸಂಕರಾತರಿ ಕರಿಯ ದಿಽನಾ ಮಿತ್ರೆರೆಲ್ಲಾ ಮಡಿಗಳುಟ್ಟು |
ಮುತ್ತಿನಾರುತಿ ಎತ್ತ್ಯಾರೇಳಯ್ಯಾ | ಸಿದ್ಧರಾಮಾ |
ಮುತ್ತಿನಾರುತಿ ಎತ್ತ್ಯಾರೇಳಯ್ಯಾ ||೧೨||

ಸಿಂಗರಾದ ಸೊಲ್ಲಪೂರಽ ಭಂಗರಾದ ಸಿದ್ಧರಾಮಾ |
ಸಿಕರ ಕಟ್ಟ್ಯಾರು ರೈತರೆಲ್ಲಾರು | ಸಿದ್ಧರಾಮಾ |
ಸಿಕರ ಕಟ್ಟ್ಯಾರು ರೈತರೆಲ್ಲಾರು ||೧೩||

ಕಮರ ತಽಳಿ ರೇವಣಸಿದ್ಧಾ ಗಂಗಿಯೊಳಗ ಸಿದ್ಧರಾಮಾ |
ನಡುವ ಕುಂತಾರ ಮಲ್ಲಿಕಾರ್ಜುಽನ | ಸಿದ್ಧರಾಮಾ |
ಊರಾಗ್ಹಾರ ಮಲ್ಲಿಕಾರ್ಜುಽನ ||೧೪||
*****

ಮೊದಲನೆಯ ನುಡಿಯಲ್ಲಿ ಭಕ್ತಳು ಬೆಳಗಿನ ಕುರುಹುಗಳನ್ನು ಕಾಣುತ್ತಾಳೆ. ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಅವಳು ಪೂಜೆಗಾಗಿ ಅತ್ತಿಯ ಹಣ್ಣುಗಳನ್ನೂ ಆಲದ ಎಲೆಗಳನ್ನೂ ದೊರಕಿಸುವುದಕ್ಕೆ ತಾನು ಪಟ್ಟ ಶ್ರಮವನ್ನು ಬಣ್ಣಿ ಸಿರುವಳಲ್ಲದೆ ದೇವರ ಅಲಂಕಾರಗಳನ್ನೂ ಸೂಚಿಸಿದ್ದಾಳೆ. ನಾಲ್ಕನೆಯ ನುಡಿಯಲ್ಲಿ ವಿಧವಿಧದ ಪೂಜೆ, ಐದನೆಯದರಲ್ಲಿ ಗಂಧದ ಶೃಂಗಾರ ಆರನೆಯದರಲ್ಲಿ ಹೂವಿನ ಶೃಂಗಾರ, ಏಳನೆಯದರಲ್ಲಿ ಕೈನೇದ್ಯ ಇವುಗಳ ವರ್ಣನೆಯಿದೆ. ಎಂಟನೆಯದರಲ್ಲಿ ವಾದ್ಯಘೋಷ, ಒಂಬತ್ತನೆಯದರಲ್ಲಿ ಭಕ್ತೆಯೆರ ಗಡಣ ಮುಂತಾದ ವಿಷಯಗಳಿವೆ. ಮುಂದಿನ ಮೂರು ನುಡಿಗಳಲ್ಲಿ ಸೊಲ್ಲಾಪುರ ಜಾತ್ರೆಯ ಕಾಲದ ಮೂರು ದಿನಗಳ ವಿವಿಧ ಉತ್ಸವಗಳ ವರ್ಣನೆಯಿದೆ. ಕೊನೆಯ ಎರಡು ನುಡಿಗಳಲ್ಲಿ ಸಿದ್ಧರಾಮೇಶ್ವರನ ಹಾಗೂ ಅವನ ಅರಾಧ್ಯದೈವತೆಗಳ ಬೇರೆ ಬೇರೆ ಗುಡಿಗಳ ಉಲ್ಲೇಖವಿದೆ.

ಛಂದಸ್ಸು:- ಮೂರು ಮೂರು ಮಾತ್ರಿಯ ಗಣಗಳಿವೆ. ಆದರೆ ಪ್ರತಿಯೊಂದು ಭಂಡ ಸಮಸ್ಥಾನದ ಗಣಗಳನ್ನು ನಾಲ್ಕು ಮಾತ್ರೆಗಳಾಗಿ ಉಚ್ಚರಿಸುವಂತೆ ತೋರುತ್ತದೆ.

ಶಬ್ದ ಪ್ರಯೋಗಗಳು:- ಹೆಡಿಯಂಗ=ಹೆಡೆಯಂತೆ. ಆಡ್ಯಾವ-ಆಡಿದವು. ವಸ್ತ=ಅಭರಣ ಆಲಪರದು=ಆತುರಪಟ್ಟು. ಕಟ್ಟ್ಯಾರ=ಕಟ್ಟಿಹರು. ಏರ್‍ಯಾವ=ಏರಿಹವು. ನೇವುದಿ=ನೈವೇದ್ಯ. ಚಿಗಳಿ=ಎಳ್ಳು ಬೆಲ್ಲದ ಮುದ್ದೆ. ಬಾಜಿ=ವಾದ್ಯ ಹರದ್ಯಾರು=ನಾರಿಯರು. ಆದರೆ ಹರದಿ ಎಂಬ ಶಬ್ದಕ್ಕೆ ವಾಸ್ತವಿಕವಾಗಿ ವ್ಯಾಪಾರಗಿತ್ತಿ ಎಂದು ಅರ್ಥವಾಗುತ್ತದೆ. ನಾವು ಈ ಶಬ್ದಕ್ಕೆ ಸುಂದರಿ ಇಲ್ಲವೆ ಮನ್ನಣೆಯವಳು ಎಂದು ಅರ್‍ಥಮಾಡಿಕೊಳ್ಳ ಬಹುದು. ಸಮತಿ=ಪುರುಣ ಹೇಳುವ ಸಮಿತಿ. ಸಂಕರಾತರಿ=ಮಕರ ಸಂಕ್ರಾಂತಿ. ಭೋಗಿ=ಸಂಕ್ರಾಂತಿಯ ಮುನ್ನಾದಿನ. ಕರಿ=ಸಂಕ್ರಾಂತಿಯ ಮರುದಿನ. ನಾಚ=ನೃತ್ಯ. ಟೆಂಗ=ತೆಂಗು ಖಾರೀಕ=ಉತ್ತತ್ತಿ. ಕಮರತಳಿ= ಸೊಲ್ಲಾಪುರದ ಒಂದು ಕೆರೆ. ಗಂಗಿ=ಸಿದ್ದರಾಮೇಶ್ವರನ ಗುಡಿಯ ಸುತ್ತು ಮುತ್ತಲಿನ ಕೊಳ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...