ಆ ಒಡೆಯನ ಹೊಲದಾಗ
ಮೂಳೆ ಮುರಿಯೋತನಕ,
ಪುಡಿಪುಡಿಯಾಗೋ ತನಕ ನಾ ದುಡದೀನಿ.
ಹರಕ ಮುರಕ ಝೋಪಡ್ಯಾಗ
ನಾ ದಿನಾ ಕಳದೀನಿ,
ಆದರೂ ನನಗಿಲ್ಲ ಒಪ್ಪೋತ್ತಿನ ಕೂಳ,
ಹಸೀದ ನನ್ನ ಹೊಟ್ಟಿ ಚುರುಚುರು ಅನ್ತಾದ,
ಹೊಟ್ಟಿ ಹೋಗಿ ಬೆನ್ನಿಗಿ ಹತ್ತ್ಯಾದ
ಅಂದಾಗ್ಯೂ ಆ ಮಾಲೀಕ ಬೆಳೆಸ್ಯಾನ
ದೊಡ್ಡ ಗುಡಾಣದಂಥ ಹೊಟ್ಟೇನ,
ಆ ಗುಡಾಣದೊಳಗೇ ಅಡಗಿಸ್ಯಾನ
ನನ್ನ ಶ್ರಮದ ಪ್ರತಿಫಲಾನ,
ನನ್ಮೆಲೆ ಆಗ್ತಿರೋ ಅನ್ಯಾಯ
ಸಹಿಸಿ ಸಹಿಸಿ ನಾ ಸಣ್ಣಾಗಿ ಹೋಗಿನಿ,
ನನ್ನ ತಾಳ್ಮೇನ ನೀ ನೋಡಬ್ಯಾಡ ಪರೀಕ್ಷಿಸಿ,
ನ್ಯಾಯಕ್ಕಾಗಿ ನಾ ಹೋರಾಡಲೇಬೇಕು,
ತೆಪ್ಪಗ ಮುಖ ಸೊಪ್ಪು
ಹಾಕೋದಿಲ್ಲ ನಾನೀಗ
ಸಿಡಿದೇಳತೀನಿ ನಾನು
ಭಂಡರ ಕ್ರೂರ ಮುಷ್ಟಿಯಿಂದ
ಶತಮಾನಗಳ ದಾಸ್ಯ, ಗುಲಾಮಗಿರಿ
ಶೋಷಣೆಯಿಂದ ನಾನು ಎಚ್ಚೆತ್ತಾಗ,
ಕತಕತ ಕುದಿತಾದ ನನರಕ್ತ
ಬಚ್ಚಲು ರೊಜ್ಜಿನ
ಹೊಲಸು ತುಂಬಿದ ಸಮಾಜದ
ಅವ್ಯವಸ್ಥೆಯ ವಿರುದ್ಧ ಹೋರಾಡಲು,
ಶೋಧಿಸಿ ತೆಗದ್ರ ನನ್ನ ದೇಹದಾಗಿಲ್ಲ ಸಿಂಪಿ ರಕ್ತ,
ಆದರೂ ಅದು ಕುದಿತಾದ ಕತಕತ,
ಕ್ರಾಂತಿ ಅದಾ ಈಗ ಬೂದಿ ಮುಚ್ಚಿದ ಕೆಂಡದಾಂಗ
ಶೋಷಣಿಗೊಳಗಾದ ನನ್ನ
ಪ್ರತಿಯೊಂದು ಮೂಳೆಯೂ
ಅಕ್ರೋಶದಿಂದ ಕೂಗತಾವ,
ತನ್ನ ಶ್ರಮದ ಪ್ರತಿಫಲವನ್ನ ಕೇಳತಾವ.
*****