Home / ಕವನ / ಅನುವಾದ / ನೂರು ವರ್ಷದ ನಂತರ

ನೂರು ವರ್ಷದ ನಂತರ

ಇಂದಿನಿಂದ ನೂರು ವರ್ಷದ ನಂತರ
ನನ್ನ ಕವಿತೆಯನ್ನು ಓದುವಾತ
ನೀನು ಯಾರು..
ಹೃದಯದ ಒಲವಿನ ಲತೆಯಲ್ಲಿ
ಚಿಗುರಿರುವ ವಸಂತದ ಬೆಳಗಿನ
ಸರಳವಾದ ಸಖ್ಯವನ್ನು
ನಿನಗೆ ಮುಟ್ಟಿಸಲು ಅನುವಾದದಲ್ಲಿ
ಹೂವಿನ ಗಂಧ
ಹಕ್ಕಿಯ ಹಾಡಿನ ಛಂದ
ಇಂದಿನ ಬಣ್ಣದ ಹೊಳಪು
ನೂರು ವರ್ಷದ ನಂತರ
ನಿನಗೆ ತಲಪ ಬಹುದೆ….
ಒಮ್ಮೆ ನಿನ್ನ ಬಾಲ್ಕನಿಯ
ದಕ್ಷಿಣ ಭಾಗದ ಕಿಟಕಿಯನು ತೆರೆದು
ಉದ್ದಕ್ಕೆ ಹರಡಿರುವ
ಬಯಲನು ನಿರುಕಿಸು
ದೀರ್ಘ ಖಯಾಲಿನಲ್ಲಿ ಮುಳುಗಿ
ಜಗದ ಹೃದಯ ತಂತುವನ್ನು ಮೀಂಟಲು
ದೂರದ ಯಾವುದೋ ಸಗ್ಗದಿಂದ
ತೇಲಿ ಬರುವ ಪರಮ ಸುಖದ
ಕುರಿತು ಯೋಚಿಸು,
ನೂರು ವರ್ಷದ ನಂತರ
ತರುಣ ವಸಂತದ ದಿನದ
ಸ್ವಚ್ಛಂದ ಉತ್ಸಾಹ, ಗಲಭೆ
ಮತ್ತು
ಅರಳಿದ ಹೂವಿನ ಮತ್ತ ಕಂಪನ್ನು
ರೆಕ್ಕೆಗಳಲ್ಲಿ ಹೊತ್ತು
ಭೂಮಿಯನ್ನು ಬಣ್ಣಗೊಳಿಸಲು
ಮುನ್ನುಗ್ಗುವ ಮಲಯಾನಿಲದ
ಸುಕುಮಾರ ಸ್ಪಂದನವನ್ನು
ನೂರು ವರ್ಷದ ಮೊದಲು
ಇಂದೆ ಯೋಚಿಸು.

ಜ್ವಲಂತ ಹೃದಯದ ಹಾಡಿನಲ್ಲಿ
ತನ್ನನ್ನು ಸಂಪೂರ್ಣ ಹುದುಗಿಸಿ
ಹೂವು ಅರಳುವಂತೆ
ಕವಿ
ತನ್ನ ಮಧುರ ಪ್ರೇಮದ ಸೊತ್ತನ್ನು
ನೂರು ವರ್ಷದ ಮೊದಲ
ಒಂದು ಮುಂಜಾವಿನಲಿ
ಹಾಡಿದಂತೆ ಭ್ರಮಿಸು,
ಅದನ್ನೆ ನೂರು ವರ್ಷದ ನಂತರ
ಒಲವಿನಿಂದ ಹಾಡುವ
ಹೊಸ ಕವಿ ಯಾರು
ಅವನಿಗೆ ಹೊಸ ವಸಂತದ
ಶುಭ ಸಂದೇಶವನ್ನು
ನನ್ನ ಪರವಾಗಿ ಮುಟ್ಟಿಸು
ಎಲೆ ಕವಿಯೆ, ನನ್ನ ಹಾಡು
ನಿನ್ನ ಎದೆಯ ಬಡಿತದ ಜೊತೆಗೆ
ತುಂಬಿಯ ಗುಂಜನದಲ್ಲಿ
ಎಲೆಗಳ ಕಲರವದಲ್ಲಿ
ಅನುರಣಿಸಲಿ……
ನೂರು ವರ್ಷದ ನಂತರ!
*****
ಮೂಲ: ರವಿಂದ್ರನಾಥ ಠಾಗೋರ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...