Home / ಕವನ / ಅನುವಾದ / ನೂರು ವರ್ಷದ ನಂತರ

ನೂರು ವರ್ಷದ ನಂತರ

ಇಂದಿನಿಂದ ನೂರು ವರ್ಷದ ನಂತರ
ನನ್ನ ಕವಿತೆಯನ್ನು ಓದುವಾತ
ನೀನು ಯಾರು..
ಹೃದಯದ ಒಲವಿನ ಲತೆಯಲ್ಲಿ
ಚಿಗುರಿರುವ ವಸಂತದ ಬೆಳಗಿನ
ಸರಳವಾದ ಸಖ್ಯವನ್ನು
ನಿನಗೆ ಮುಟ್ಟಿಸಲು ಅನುವಾದದಲ್ಲಿ
ಹೂವಿನ ಗಂಧ
ಹಕ್ಕಿಯ ಹಾಡಿನ ಛಂದ
ಇಂದಿನ ಬಣ್ಣದ ಹೊಳಪು
ನೂರು ವರ್ಷದ ನಂತರ
ನಿನಗೆ ತಲಪ ಬಹುದೆ….
ಒಮ್ಮೆ ನಿನ್ನ ಬಾಲ್ಕನಿಯ
ದಕ್ಷಿಣ ಭಾಗದ ಕಿಟಕಿಯನು ತೆರೆದು
ಉದ್ದಕ್ಕೆ ಹರಡಿರುವ
ಬಯಲನು ನಿರುಕಿಸು
ದೀರ್ಘ ಖಯಾಲಿನಲ್ಲಿ ಮುಳುಗಿ
ಜಗದ ಹೃದಯ ತಂತುವನ್ನು ಮೀಂಟಲು
ದೂರದ ಯಾವುದೋ ಸಗ್ಗದಿಂದ
ತೇಲಿ ಬರುವ ಪರಮ ಸುಖದ
ಕುರಿತು ಯೋಚಿಸು,
ನೂರು ವರ್ಷದ ನಂತರ
ತರುಣ ವಸಂತದ ದಿನದ
ಸ್ವಚ್ಛಂದ ಉತ್ಸಾಹ, ಗಲಭೆ
ಮತ್ತು
ಅರಳಿದ ಹೂವಿನ ಮತ್ತ ಕಂಪನ್ನು
ರೆಕ್ಕೆಗಳಲ್ಲಿ ಹೊತ್ತು
ಭೂಮಿಯನ್ನು ಬಣ್ಣಗೊಳಿಸಲು
ಮುನ್ನುಗ್ಗುವ ಮಲಯಾನಿಲದ
ಸುಕುಮಾರ ಸ್ಪಂದನವನ್ನು
ನೂರು ವರ್ಷದ ಮೊದಲು
ಇಂದೆ ಯೋಚಿಸು.

ಜ್ವಲಂತ ಹೃದಯದ ಹಾಡಿನಲ್ಲಿ
ತನ್ನನ್ನು ಸಂಪೂರ್ಣ ಹುದುಗಿಸಿ
ಹೂವು ಅರಳುವಂತೆ
ಕವಿ
ತನ್ನ ಮಧುರ ಪ್ರೇಮದ ಸೊತ್ತನ್ನು
ನೂರು ವರ್ಷದ ಮೊದಲ
ಒಂದು ಮುಂಜಾವಿನಲಿ
ಹಾಡಿದಂತೆ ಭ್ರಮಿಸು,
ಅದನ್ನೆ ನೂರು ವರ್ಷದ ನಂತರ
ಒಲವಿನಿಂದ ಹಾಡುವ
ಹೊಸ ಕವಿ ಯಾರು
ಅವನಿಗೆ ಹೊಸ ವಸಂತದ
ಶುಭ ಸಂದೇಶವನ್ನು
ನನ್ನ ಪರವಾಗಿ ಮುಟ್ಟಿಸು
ಎಲೆ ಕವಿಯೆ, ನನ್ನ ಹಾಡು
ನಿನ್ನ ಎದೆಯ ಬಡಿತದ ಜೊತೆಗೆ
ತುಂಬಿಯ ಗುಂಜನದಲ್ಲಿ
ಎಲೆಗಳ ಕಲರವದಲ್ಲಿ
ಅನುರಣಿಸಲಿ……
ನೂರು ವರ್ಷದ ನಂತರ!
*****
ಮೂಲ: ರವಿಂದ್ರನಾಥ ಠಾಗೋರ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...