Home / ಕವನ / ಭಾವಗೀತೆ / ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ

ಉದಯಾಚಲದಲಿ ಮೂಡಿದ ಸೂರ್ಯ
ಹಿಡಿದನು ಕನ್ನಡ ಬಾವುಟವ
ಹಾರಿದ ಹಕ್ಕಿಗಳೆಲ್ಲವು ಮೊರೆದವು
ಕನ್ನಡ ನಾಡ ಗೀತವ ||

ಓಡುವ ನದಿಗಳು ಕಲಕಲ ರವದಲಿ
ನಲಿಸಲಿ ಕರುನಾಡ
ಹೆಜ್ಜೆಯ ಹಾಕಿದ ಪಚ್ಚನೆ ಪಯಿರು
ಮೆರೆಸಲಿ ಸಿರಿನಾಡ
ಪಡುವಣ ತೀರದ ಸಹ್ಯಾದ್ರಿಯ ಸಿರಿ
ಸ್ಫೂರ್ತಿಯ ಸೆಲೆಯಾಗಿ
ಉಳಿಸಲಿ ಬೆಳೆಸಲಿ ಕನ್ನಡ ಸತ್ವವ
ಚಿರನೂತನವಾಗಿ

ಸುರಿಯಲಿ ಎಲ್ಲೂ ಕನ್ನಡದಾ ಮಳೆ
ಸ್ವಾತಿಯ ಮುತ್ತಾಗಿ
ತೊನೆಯಲಿ ಎಲ್ಲೆಡೆ ಭ್ರಾತೃತ್ವದ ಬೆಳೆ
ಉಸಿರು ಉಸಿರಾಗಿ
ಮೊಳಗಲಿ ಎಲ್ಲೆಡೆ ಕನ್ನಡ ಸ್ವರಗಳು
ಸರಿಗಮ ಪದವಾಗಿ
ಬೆಳೆಯಲಿ ಸರ್ವರ ಹೃದಯ ತೋಟದಲಿ
ತರು ಲತೆ ಒಂದಾಗಿ

ಏರಲಿ ಮುಗಿಲಿಂದಾಚೆಗೆ ಹಾರಲಿ
ಕನ್ನಡ ಬಾವುಟವು
ಸೂರ್ಯನ ಮೀರಿದ ಗ್ರಹತಾರೆಗಳು
ಸೂಸಲಿ ಸ್ವಾಗತವು
ಕನ್ನಡ ಕನ್ನಡ ಐಸಿರಿಗನ್ನಡ
ಎಂದೂ ಚೇತನವು
ಕನ್ನಡ ನುಡಿಯಲಿ ತೇಲಿದ ಜೀವಿಯ
ಬದುಕು ಪಾವನವು

ಕಸ್ತೂರಿಯಲಿ ಮೈತಳೆದ ಸಿರಿ
ನಮ್ಮೀ ಕನ್ನಡವು
ಬಿಟ್ಟರೆ ಬಾಯಿ ಕವಿತೆಯು ಅಲ್ಲಿ
ಎಂಥಾ ಸೋಜಿಗವು
ಸುಂದರ ಕನ್ನಡ ನಾಡನು ಹೊತ್ತ
ಭೂಮಿ ಸಾರ್ಥಕವು
ಇಂತಹ ನಾಡನು ನೋಡದ ಮಂದಿಯ
ಜನ್ಮ ನಿರರ್ಥಕವು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...