Home / ಲೇಖನ / ಇತರೆ / ಹುಚ್ಚು ಯಾರಿಗೆ?

ಹುಚ್ಚು ಯಾರಿಗೆ?

ಪ್ರಿಯ ಸಖಿ,
ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕಿಯಂತೆ ಜೋರು ಜೋರಾಗಿ ಏನನ್ನೋ ಹೇಳುತ್ತಿರುತ್ತಾಳೆ. ಕೆಲವೊಮ್ಮೆ ಎತ್ತರದ ದನಿಯಲ್ಲಿ ಬಯ್ಯುತ್ತಿರುತ್ತಾಳೆ. ಇಂಗ್ಲೀಷನ್ನು ಅರೆದು ಕುಡಿದವಳೇನೋ! ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಏನೇನೋ ವದರುತ್ತಿರುತ್ತಾಳೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಮನೋರೋಗಿ. ಆಡುಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಹುಚ್ಚಿ!

ನೋಡಲು ಲಕ್ಷಣವಾಗಿರುವ, ಸುಸಂಸ್ಕೃತ ಮನೆತನದವಳೆನಿಸುವ ಮಧ್ಯ ವಯಸ್ಸಿನ ಈ ಹೆಣ್ಣಿಗೆ ಅದ್ಯಾವ ಆಘಾತವಾಗಿರಬಹುದು? ಅವಳ ಬುದ್ದಿ ಕೆಡಲು ಕಾರಣರಾರು? ಸಮಾಜವೇ? ಮನೆಯವರೇ? ಮಿತ್ರರೇ? ಶತ್ರುಗಳೇ? ಹೆದರಿಕೆ ಹುಟ್ಟಿಸುವಂಥಾ, ಅಸಹ್ಯಗೊಳ್ಳುವಂತಾ ವೇಷ ತೊಟ್ಟು, ತಲೆಬಿರಿದುಕೊಂಡು, ಚಂಡಿಚಾಮುಂಡಿಯಂತೆ ಅಟ್ಟಹಾಸದಿ ನಗುತ್ತಾ, ಬೈಯ್ದುಕೊಳ್ಳುತ್ತಾ ತಿರುಗುವ ಇವಳು ಹೀಗೇಕಾದಳು?

ತಿನ್ನಲು ಏನಾದರೂ ಕೊಟ್ಟರೆ Thanks ಎಂದು ಹೇಳುವಷ್ಟು ಬುದ್ಧಿಯೂ, ತನ್ನನ್ನು ಕಲ್ಲಿನಿಂದ ಹೊಡೆಯಬಂದವರಿಗೆ ತಾನೂ ಕಲ್ಲಿನಿಂದ ಹೊಡೆದಟ್ಟಬೇಕೆಂಬ ಮಾನವ ಸಹಜ ತಿಳುವಳಿಕೆ ಇರುವ ಇವಳ ಸರಿಪಡಿಸಲಾಗುವುದಿಲ್ಲವೇ? ಅಥವಾ ಅವಳು ಸರಿಯಾಗುವುದು ಯಾರಿಗೂ ಬೇಕಿಲ್ಲವೇ? ಅವಳನ್ನು ಹುಚ್ಚಿಯಾಗಿಸಿದ ಸಮಾಜಕ್ಕೆ ಅವಳನ್ನು ಸರಿಪಡಿಸುವ ಜವಾಬ್ದಾರಿಯೂ ಇರಬೇಕಲ್ಲವೇ?

ಅವಳನ್ನೊಂದು ಮನರಂಜನೆಯ ವಸ್ತುವನ್ನಾಗಿ ಮಾಡಿಕೊಂಡು ಅವಳನ್ನು ಹಿಂಸಿಸಿ. ಗೋಳು ಗುಟ್ಟಿಸಿ, ಕಲ್ಲಿನಿಂದ ಹೊಡೆದು ತಮ್ಮ ವಿಕೃತ ಮನೋಭಾವವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಕಂಡಾಗ ಯಾರಿಗೆ ಹುಚ್ಚು? ಅವಳಿಗೋ? ಇವರಿಗೋ? ಅನಾಗರೀಕರಂತೆ ವರ್ತಿಸುತ್ತಿರುವ ಇವರು ಮನುಷ್ಯರೋ ಅಥವಾ ಮೃಗಗಳೋ ಎಂಬ ಪ್ರಶ್ನೆ ಕಾಡುತ್ತದೆ. ಬುದ್ಧಿ ಸ್ಥಿಮಿತದಲ್ಲಿಲ್ಲದಿದ್ದರೂ ತನ್ನನ್ನು ಹಿಂಸಿಸದವರಿಗೆ ಏನೂ ಮಾಡದೆ ತನಗೆ ತೊಂದರೆ ಕೊಡುವವರಿಗೆ ಮಾತ್ರ ತಾನೂ ತೊಂದರೆ ಕೊಡುವ ಆ ಹೆಂಗಸು ಬುದ್ಧಿ ಸರಿಯಿದ್ದೂ, ಅಮಾನವೀಯವಾಗಿ ಅವಳನ್ನು ಹಿಂಸಿಸಿ ಕಿರುಕುಳ ನೀಡುವ ಇಂತವರಿಗಿಂತಾ ಎಷ್ಟೋ ಮೇಲು ಎಂದೆನಿಸುತ್ತದೆ.

ಕಲ್ಲುಗಳಂದಾದ ಗಾಯದಿಂದ ಒಸರುವ ರಕ್ತಕ್ಕೆ ಮಣ್ಣು ಮೆತ್ತಿಕೊಳ್ಳುತ್ತಾ, ಕಣ್ಣಿನಲ್ಲಿ ನೀರು ಸುರಿಸುತ್ತಾ ಆ ಹೆಂಗಸು ‘ರಾಕ್ಷಸರು! ರಾಕ್ಷಸರು!’ ಎಂದುಕೊಳ್ಳುತ್ತಾ ಹೋಗುವಾಗ, ಬುದ್ಧಿ ಸರಿಯಿಲ್ಲದವರೂ, ಹಲವು ಬಾರಿ ನಿಜವನ್ನೇ ನುಡಿಯುತ್ತಾರಲ್ಲಾ? ಎಂದೆನಿಸುತ್ತದೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...