Home / ಲೇಖನ / ಇತರೆ / ಹುಚ್ಚು ಯಾರಿಗೆ?

ಹುಚ್ಚು ಯಾರಿಗೆ?

ಪ್ರಿಯ ಸಖಿ,
ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕಿಯಂತೆ ಜೋರು ಜೋರಾಗಿ ಏನನ್ನೋ ಹೇಳುತ್ತಿರುತ್ತಾಳೆ. ಕೆಲವೊಮ್ಮೆ ಎತ್ತರದ ದನಿಯಲ್ಲಿ ಬಯ್ಯುತ್ತಿರುತ್ತಾಳೆ. ಇಂಗ್ಲೀಷನ್ನು ಅರೆದು ಕುಡಿದವಳೇನೋ! ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಏನೇನೋ ವದರುತ್ತಿರುತ್ತಾಳೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಮನೋರೋಗಿ. ಆಡುಭಾಷೆಯಲ್ಲಿ ಹೇಳುವುದಾದರೆ ಅವಳೊಬ್ಬ ಹುಚ್ಚಿ!

ನೋಡಲು ಲಕ್ಷಣವಾಗಿರುವ, ಸುಸಂಸ್ಕೃತ ಮನೆತನದವಳೆನಿಸುವ ಮಧ್ಯ ವಯಸ್ಸಿನ ಈ ಹೆಣ್ಣಿಗೆ ಅದ್ಯಾವ ಆಘಾತವಾಗಿರಬಹುದು? ಅವಳ ಬುದ್ದಿ ಕೆಡಲು ಕಾರಣರಾರು? ಸಮಾಜವೇ? ಮನೆಯವರೇ? ಮಿತ್ರರೇ? ಶತ್ರುಗಳೇ? ಹೆದರಿಕೆ ಹುಟ್ಟಿಸುವಂಥಾ, ಅಸಹ್ಯಗೊಳ್ಳುವಂತಾ ವೇಷ ತೊಟ್ಟು, ತಲೆಬಿರಿದುಕೊಂಡು, ಚಂಡಿಚಾಮುಂಡಿಯಂತೆ ಅಟ್ಟಹಾಸದಿ ನಗುತ್ತಾ, ಬೈಯ್ದುಕೊಳ್ಳುತ್ತಾ ತಿರುಗುವ ಇವಳು ಹೀಗೇಕಾದಳು?

ತಿನ್ನಲು ಏನಾದರೂ ಕೊಟ್ಟರೆ Thanks ಎಂದು ಹೇಳುವಷ್ಟು ಬುದ್ಧಿಯೂ, ತನ್ನನ್ನು ಕಲ್ಲಿನಿಂದ ಹೊಡೆಯಬಂದವರಿಗೆ ತಾನೂ ಕಲ್ಲಿನಿಂದ ಹೊಡೆದಟ್ಟಬೇಕೆಂಬ ಮಾನವ ಸಹಜ ತಿಳುವಳಿಕೆ ಇರುವ ಇವಳ ಸರಿಪಡಿಸಲಾಗುವುದಿಲ್ಲವೇ? ಅಥವಾ ಅವಳು ಸರಿಯಾಗುವುದು ಯಾರಿಗೂ ಬೇಕಿಲ್ಲವೇ? ಅವಳನ್ನು ಹುಚ್ಚಿಯಾಗಿಸಿದ ಸಮಾಜಕ್ಕೆ ಅವಳನ್ನು ಸರಿಪಡಿಸುವ ಜವಾಬ್ದಾರಿಯೂ ಇರಬೇಕಲ್ಲವೇ?

ಅವಳನ್ನೊಂದು ಮನರಂಜನೆಯ ವಸ್ತುವನ್ನಾಗಿ ಮಾಡಿಕೊಂಡು ಅವಳನ್ನು ಹಿಂಸಿಸಿ. ಗೋಳು ಗುಟ್ಟಿಸಿ, ಕಲ್ಲಿನಿಂದ ಹೊಡೆದು ತಮ್ಮ ವಿಕೃತ ಮನೋಭಾವವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಕಂಡಾಗ ಯಾರಿಗೆ ಹುಚ್ಚು? ಅವಳಿಗೋ? ಇವರಿಗೋ? ಅನಾಗರೀಕರಂತೆ ವರ್ತಿಸುತ್ತಿರುವ ಇವರು ಮನುಷ್ಯರೋ ಅಥವಾ ಮೃಗಗಳೋ ಎಂಬ ಪ್ರಶ್ನೆ ಕಾಡುತ್ತದೆ. ಬುದ್ಧಿ ಸ್ಥಿಮಿತದಲ್ಲಿಲ್ಲದಿದ್ದರೂ ತನ್ನನ್ನು ಹಿಂಸಿಸದವರಿಗೆ ಏನೂ ಮಾಡದೆ ತನಗೆ ತೊಂದರೆ ಕೊಡುವವರಿಗೆ ಮಾತ್ರ ತಾನೂ ತೊಂದರೆ ಕೊಡುವ ಆ ಹೆಂಗಸು ಬುದ್ಧಿ ಸರಿಯಿದ್ದೂ, ಅಮಾನವೀಯವಾಗಿ ಅವಳನ್ನು ಹಿಂಸಿಸಿ ಕಿರುಕುಳ ನೀಡುವ ಇಂತವರಿಗಿಂತಾ ಎಷ್ಟೋ ಮೇಲು ಎಂದೆನಿಸುತ್ತದೆ.

ಕಲ್ಲುಗಳಂದಾದ ಗಾಯದಿಂದ ಒಸರುವ ರಕ್ತಕ್ಕೆ ಮಣ್ಣು ಮೆತ್ತಿಕೊಳ್ಳುತ್ತಾ, ಕಣ್ಣಿನಲ್ಲಿ ನೀರು ಸುರಿಸುತ್ತಾ ಆ ಹೆಂಗಸು ‘ರಾಕ್ಷಸರು! ರಾಕ್ಷಸರು!’ ಎಂದುಕೊಳ್ಳುತ್ತಾ ಹೋಗುವಾಗ, ಬುದ್ಧಿ ಸರಿಯಿಲ್ಲದವರೂ, ಹಲವು ಬಾರಿ ನಿಜವನ್ನೇ ನುಡಿಯುತ್ತಾರಲ್ಲಾ? ಎಂದೆನಿಸುತ್ತದೆ ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...