“ಎಲ್ಲಾ ಮರಕ್ಕು ಮೈ ತುಂಬಾ ಎಲೆ
ನಂಗೇ ಯಾಕಿಲ್ಲ?
ಮರಕ್ಕೆ ಕಾಯಿ ಹೂವು ಹಣ್ಣು,
ನಂಗೂ ಬೇಕಲ್ಲ”
“ಮರಕ್ಕೆ ಅಪ್ಪ ಅಮ್ಮ ಇಲ್ಲ
ನಿನಗದು ಇದೆಯಲ್ಲ
ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ
ಸ್ನೇಹಿತರೇ ಎಲ್ಲ”
“ಮರಕ್ಕೆ ದಿನವೂ ರಜವೇ-ನನಗೋ
ವಾರಕ್ಕೊಂದೆ ಸಲ.
ಅದಕ್ಕೆ ಬರಿಮೈ – ನಾನೋ ಬಟ್ಟೆ
ತೊಡಲೇ ಬೇಕಲ್ಲ!”
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.