ಕನಸು

ಫಕ್ಕನೆ ಪುಕ್ಕ ಬಿಚ್ಚುತ್ತೆ; ಕೊಕ್ಕು ಕಚ್ಚುತ್ತೆ;
ಕಚ್ಚಿದ ಜಾಗದಲ್ಲಿ ಚಿಮ್ಮಿದ ಕೆಚ್ಚು
ನಿರಿನಿರಿ ಹೊಳೆಯುವ ಗರಿಗರಿಯಲ್ಲಿ ಹುಚ್ಚು
ಹೊಳೆಯಾಗಿ ಹೋಗುತ್ತೆ.
ಅವ್ಯಕ್ತ ನೋವು ರಸಪುರಿ ಮಾವಾಗಿ ಮಾಗಲು ತುಡಿಯುತ್ತೆ.

ಆಕಾಶದಗಲ ರೆಕ್ಕೆಯಲ್ಲಿ ಅದರ ತೆಕ್ಕೆಯಲ್ಲಿ
ಆಸೆಚಿಕ್ಕಿಗಳ ಚದುರಂಗ.

ಇಲ್ಲಿ ನಿಂತ ನೆಲದಲ್ಲಿ
ಹಾವು ಕಾವು ಅದರ ಮೈನುಣುಪು ಅಲೆಯಲೆಯಾಗಿ
ನಾನು ದೋಣಿಯಾಗಿ ಖುಷಿ ಹುಟ್ಟು ಹಾಕುವುದು;
ಸುಖಸುಂದರಿಗೆ ಕಟ್ಟು ಹಾಕುವುದು;
ಇಕ್ಕಳಗಣ್ಣಲ್ಲಿ ಹೊಕ್ಕುಳ ಹಿಡಿದು ನಡುವಿಗೆ ದೋಣಿ ಹೊಡೆದು
ಮತ್ತ ಮಾರುತದಲ್ಲಿ ಚಿತ್ತ ಮೊಳೆಯೊಡೆದು
ಹೆಪ್ಪು ಹಾಕದ ಹಾಲು ಕಡೆಯುವುದು;
ಒಳಗೆ ಹೊಡೆಯುವ ಸೆಖೆಗೆ ಸೆರಗು ಬೀಸಣಿಗೆ ಹಾಯೆನಿಸಿ
ಹೂವು ಮೈ ತೇಲುವುದು;
ಇವೆಲ್ಲ ಎಂಥ ಖುಷಿ ಗೊತ್ತ?

ವಾಸ್ತವದ ಉದ್ಘಾಟನೆಗೆ ಟೇಪು ಕತ್ತರಿಸಿದಾಗ
ತೆರೆದ ಕಣ್ಣಿನ ಮುಂದೆ:
ಖುಷಿ ಫಾಸಿಯಾಗಿ ಹಲ್ಗಿರಿವ ಹಗ್ಗದ ಅಣಕು
ಪ್ರಶ್ನೆ ಬದುಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಿಂದೂಮುಸಲ್ಮಾನರ ಐಕ್ಯ – ೭
Next post ಜೋಕಾಲಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…