ಅವರ ‘ಸರ್ವಿಸು’

ಅವರ ‘ಸರ್ವಿಸು’

“ಜಿ. ಬಿ.” ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ಪ್ರಶ್ನೆ, “ಯೋಶ್ವ” ಎಂದನೊಬ್ಬ; “ಹೈಮನ್ಸ್” ಎಂದನು ಮತ್ತೊಬ್ಬ; “ಫೋನ್ಸ್” ಎಂದನು ಮಗದೊಬ್ಬ; “ಕಪಾಲರಾಯರು” ಎಂದನು ಇನ್ನೊಬ್ಬ. ಚರ್ಚೆ ನಡೆದು ವೋಟು ತೆಗೆಯಲಾಗಿ… ನಿಮಗೆ ಆಶ್ಚರ್ಯವೆನಿಸಬಹುದು-… ಆ ನಾಲ್ವರಲ್ಲಿ ಯಾರನ್ನೂ ಆರಿಸದೆ, ಆಕಸ್ಮಿಕವಾಗಿ ಸಿ. ವಿ ಕೋಮಟಿಯವರ ಕಡೆಗೆ ಬಹುಮತವು ಮಾಲಿತು! ಮಂಗಳೂರಿಗೆ ಬಂದ ಮೊದಲನೇ ಕೆಮರವನ್ನು ಕೊಂಡುಕೊಂಡವರೇ ಇವರಂತೆ! “ಸರ್ವಿಸು” ಹೆಚ್ಚಾದ ಇವರೇ ಒಳ್ಳೆಯ ಫೋಟೋ ಎತ್ತಬಲ್ಲರೆಂದು ಬಹುಮತವು ನಿರ್ಧರಿಸಿತ್ತು.

ಮರುದಿನ ಬೆಳಿಗ್ಯೆ ಏಳು ಘಂಟೆಯೊಳಗೆ ಸದಸ್ಯರೆಲ್ಲ ಸಾಲಂಕೃತರಾಗಿ ಹಾಜರಾದರು. ಮೀಸೆಗಳು ಕಾಣಬಾರದೆಂದು ಬೋಳಿಸಿ ಕೊಂಡವನೊಬ್ಬ; ಕ್ರಾಪ್ ಹೊಳೆಯ ಬೇಕೆಂದು ಅರ್ಧ ಬಾಟಲಿ ವೆಸಲೀನ್ ಹಚ್ಚಿದವನೊಬ್ಬ; ಗಡ್ಡವೇನೂ ತೋರಬಾರದೆಂದು, ಮುಂಜಾನೆ ೪ ರಿಂದ ೬ ರ ತನಕ ಪ್ರಯತ್ನ ಪೂರ್ವದ ಕ್ಷೌರ ತೆಗೆಸಿದವನೊಬ್ಬ; ಅಳುಮೊಗವು ತೋರಬಾರದೆಂದು, ಕಳೆದ ರಾತ್ರೆಯ ಹೆಂಡತಿಯ ತೀಕ್ಷ್ಣ ನುಡಿಗಳನ್ನು ಮರೆಯಲೆತ್ನಿಸಿ, ನಗಲು ಸಾಹಸ ಗೊಂಡವನೊಬ್ಬ.

ಫೋಟೋಗ್ರಾಫರ ಕೋಮಟಿಯವರು, ಕೈಝರನ ಗಾಂಭೀರ್‍ಯವನ್ನು ಜತೆಯಲ್ಲಿ ಕರಕೊಂಡು ಬಂದು, ಕೆಮರವಿಟ್ಟರು, ಕ್ಲಬ್ ಮೆಂಬರರೆಲ್ಲ ಒಂದು ಮಾವಿನ ಮರದ ಕೆಳಗೆ ಕುಳಿತುಕೊಂಡರು. ಕೋಮಟಿಯವರು ಶಾಲಾ ಆಧ್ಯಾಪಕನಂತೆ, ಅವರೆಲ್ಲರನ್ನೂ ಕ್ರಮವಾಗಿ ಕುಳ್ಳಿರಿಸಿದರು. ಎಂಟರ ತನಕ ಹೀಗೆ ಅವರನ್ನು ದಣಿಸಿ, ಕೊನೆಗೆ “ನಗುತ್ತಿರ್ರಿ!” ಎಂದರು. ಮೆಂಬರರೆಲ್ಲ ಏಕಕಾಲದಲ್ಲಿ, ತಂತಮ್ಮ ಸಂಸಾರ ತಾಪತ್ರಯಗಳನ್ನೆಲ್ಲ ಆ ಒಂದು ಕ್ಷಣಕ್ಕೆ ಮರೆತು, ಕಿಸಕ್ಕೆಂದು ನಕ್ಕರು. ಕೋಮಟಿಯವರು “ಇನ್ನು ನೀವು ಏಳಬಹುದು” ಎಂದು ಅನುಜ್ಞೆಯಿತ್ತು, ಫೋಟೋ ಪ್ರತಿಯೊಂದೊಂದನ್ನು ಒದಗಿಸುವ ಬಗ್ಗೆ ಮೂವತ್ತು ಸದಸ್ಯರಿಂದ ಮೂವತ್ತು ರೂಪಾಯಿಗಳನ್ನು ಪಡಕೊಂಡು, ಗಾಡಿಯಲ್ಲಿ ಕುಳಿತು, ತಮ್ಮ ಮನೆಗೆ ತೆರಳಿದರು.

ವಸಂತ‌ಋತುವಿನ ಮೇಲೆ ಎರಡು ಋತುಗಳು ಕಳೆದುವು; ಛಳಿಗಾಲ ಬಂತು. ಕೋಮಟಿಗಳು ಫೋಟೋ ಪ್ರತಿಗಳನ್ನು ಇನ್ನೂ ತಯಾರಿಸುತ್ತಲೇ ಇದ್ದರು. ಬೇಸರ ಹುಟ್ಟಿ ನಾನು….

ಹಣ ಕೊಟ್ಟವರಲ್ಲಿ ನಾನೂ ಒಬ್ಬನು!

….ನಾನು ಅವರ ಮನೆ ತನಕವೂ ಪ್ರಯಾಣ ಬೆಳೆಸಿ ಕೇಳಿದೆ:- “ಕೋಮಟಿಯವರೇ, ಹೇಗೆ ಬಂದಿದೆ ಫೋಟೋ? ಪ್ರತಿಗಳು ಸಿದ್ಧವಾಗಿವೆಯೇ?”

ಕೋಮಟಿಯವರು ತಮ್ಮ ದೀರ್ಘಕಾಲದ ಸರ್ವಿಸಿನ ಮುಖವನ್ನು ಅವರೇ ಕಾಳಿನಷ್ಟು ಸಣ್ಣದು ಮಾಡಿ ಒಂದು ಪಂಕ್ತಿಯನ್ನು ಪ್ರಯತ್ನಪೂರ್ವಕವಾಗಿ ಉಸಿರಿದರು:- “ಸ್ವಾಮಿ, ಕ್ಷಮಿಸಿರಿ; ಆ ದಿನ ನಾನು ಕೆಮರದೊಳಗೆ ಪ್ಲೇಟನ್ನಿಡಲು ಮರೆತಿದ್ದೆನು, ಇನ್ನೊಮ್ಮೆ ಅತ್ತ ಬರಲು ನಾಚಿಕೆಯಾಯಿತು! ನಿಮ್ಮ ಫೋಟೋವನ್ನು ತೆಗೆಯಲೇ ಇಲ್ಲ!!”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಾಟರಿ
Next post ಮನುಷ್ಯರೆಲ್ಲರು

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…