Home / ಕವನ / ಕವಿತೆ / ಒಂದು ಸಲ ಹೀಗಾಯಿತು

ಒಂದು ಸಲ ಹೀಗಾಯಿತು

ಕಲ್ಲಿನಂತಿದ್ದ ಹಲ್ಲನ್ನು
ಕಾಣದ ಕ್ರಿಮಿಗಳು ತಿಂದು
ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು.
ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ
ನಿಂತರೆ ನೋವು, ಕೂತರೆ ನೋವು
ಮುಖ ಬಾತು ಮೂತಿ ಕುಂಬಳಕಾಯಾಯಿತು.
ಕಂಡ ಸ್ನೇಹಿತರೆಲ್ಲ ಕಷ್ಟಪಟ್ಟು ಗುರುತಿಸಿ
“ಏನೋ ಹನುಮಂತರಾಯ
ಹೆಸರು ನಿಜಮಾಡಿಕೊಂಡೆಯಲ್ಲೋ
ಯಾರ ಪ್ರಸಾದವಪ್ಪಾ” ಎಂದು ಕಿಚಾಯಿಸಿದರು!
ವಿಚಾರವೆಲ್ಲ ತಿಳಿದು –
“ಹಲ್ಲಿನ ಹಳ್ಳ ಮುಚ್ಚಿಸಿಬಿಡು ಅಥವಾ
ಹಾಳು ಹಲ್ಲೇ ಕಿತ್ತಿಸಿಬಿಡು
ಜೊತೆಗೇ ವಕ್ರ ಹಲ್ಲೆಲ್ಲ ಎತ್ತಿಸಿಬಿಡು!”
ಡೆಂಟಿಸ್ಟ್ ಜವರಪ್ಪ ಗೊತ್ತಲ್ಲ
ಮಹಾಪ್ರಚಂಡ
ಪಿಯುಸಿಲಿದ್ದಾಗಲೇ ಮೆಡಿಕಲ್ ಸೀಟು ಗಿಟ್ಟಿಸಿ
ತೊಂಬತ್ನಾಲ್ಕು ಪರ್ಸೆಂಟಿಗೇ ಟಾಂಗು ಕೊಟ್ಟ ಪಿಂಡ!
ಬಹಳ ವರ್ಷ ಓದಿದ್ದಾರೆ
ಬಹಳ ಪರೀಕ್ಷೆ ಬರೆದಿದ್ದಾರೆ
ಬಂದ ಕೇಸು ಎಂಥದೇ ಇರಲಿ
ಚೂರೂ ಉಳಿಯದಂತೆ ಕೀಳುತ್ತಾರೆ
ಹೋಗು, ಇಡಿಯ ಬಾಯೇ ಸರಿ ಮಾಡುತ್ತಾರೆ”
ಅಂತ ನಗುತ್ತ ಸಲಹೆ ಕೊಟ್ಟು
ಟಾಟಾ ಗುಡ್‌ಬೈ ಫೇರ್‌ವೆಲ್ ಎಲ್ಲ ಕಿರಿಚಿ ಹೋದರು.
ಬೆಳಿಗ್ಗೆ ಎದ್ದವನೇ ಡಾಕ್ಟರಲ್ಲಿಗೆ ಓಡಿದೆ.
ಸೋಡಾ ಸೀಸೆ ಕನ್ನಡಕದ
ಸೇಡಿನ ಛಾಯೆ ಮುಖದ
ಆರಡಿ ಸೈಂಧವ ಡಾಕ್ಟರನ್ನು ನೋಡಿ
ಒಳಗೇ ಜೀವ ನಡುಗಿತು.
ಬ್ಯಾಸ್ಕೆಟ್‌ಬಾಲ್‌ ಕ್ಯಾಪ್ಟನ್ನಿನಂತಿದ್ದ ಡಾಕ್ಟರು
ಕುರ್ಚಿಗೆ ನನ್ನನ್ನು ತಳ್ಳಿ
ಕಣ್ಣೆತ್ತರಕ್ಕೇರಿಸಿಕೊಂಡರು
ಮರದ ಸಣ್ಣ ಸುತ್ತಿಗೆ ಎತ್ತಿಕೊಂಡು
ತಲೆಗೆ ಸರ್ಚ್‍ಲೈಟ್ ಬಿಟ್ಟರು.
ಸುತ್ತಿಗೆಯಿಂದ ಮೆತ್ತಗೆ ನೆತ್ತಿ ಮೇಲೆ ಬಡಿದರು
ಕತ್ತಿನ ಕೆಳಗೆ ಬಡಿದರು
ಕುತ್ತಿಗೆ ಪಕ್ಕ ಬಡಿದರು.
ಗಾಬರಿಯಾಗಿ ‘ಡಾಕ್ಟರೇ!’ ಎಂದೆ.
‘ಯೋಚನೆ ಬೇಡಿ ಎಲ್ಲ ನಿರ್ನಾಮ ಮಾಡಿಬಿಡುತ್ತೇನೆ’ ಎಂದರು
‘ಅಲ್ಲಲ್ಲ ಡಾಕ್ಟರೇ, ಇಲ್ಲಿ ಹಲ್ಲು’ ಎಂದೆ.
‘ಹಯ್ಯೋ ಅಜ್ಞಾನವೆ!
ಅಲ್ಲಿಗೆ ಇಲ್ಲಿಗೆ ಹಲ್ಲಿಗೆ
ನಡುನೆತ್ತಿಯಿಂದ ಎಲ್ಲೆಂದರಲ್ಲಿಗೆ
ಎಲ್ಲದಕ್ಕೂ ಸಂಬಂಧವಿದೆ ಇವರೆ
ಇಲ್ಲಿ ತಟ್ಟಿದರೆ ಅಲ್ಲಿ ಅಲುಗಬೇಕು, ಕೇಳಿಲ್ಲವಾ
You cannot stir a stone
without disturbing a star’ ಎಂದರು!
ಒಳ್ಳೆ ಗ್ರಹಚಾರವಾಯಿತಲ್ಲ ಎನ್ನಿಸಿತು.
ಚಾಕು ಸೂಜಿ ಕತ್ತರಿ ಎಲ್ಲ
ನನ್ನೆದುರೇ ಕುದಿಸಲು ಹಾಕಿ
ಕೂತಿರಿ ಹೊರಗೆ ಮತ್ತೆ ಕರೆಯುತ್ತೇನೆ ಒಳಗೆ
ಎಂದರು ಡಾಕ್ಟರು.
ಅದುರುವ ಎದೆ ಹಿಡಿದು ಕೂತು
ಎದುರಿಗಿದ್ದ ಪೇಪರ್ ಎತ್ತಿಕೊಂಡರೆ
ಮುಖಪುಟದಲ್ಲೇ ವೈದ್ಯರ ಚಳುವಳಿ
ಕ್ಯಾಪಿಟೇಷನ್ ರದ್ದು ಮಾಡಿ ಕತ್ತೆಗಳನ್ನು ಹೊರದೂಡಿ
ಎಂಬ ದಪ್ಪಕ್ಷರದ ಕಳಕಳಿ!

ಪರಿಸ್ಥಿತಿ ಅರ್ಥವಾಯಿತು.
ಕುದಿಯುವ ಪದಾರ್ಥಗಳನ್ನು ಬದಿಯಲ್ಲಿದ್ದವರಿಗೆ ಬಿಟ್ಟು
ಹೇಳದೆ ಕೇಳದೆ ಡಾಕ್ಟರಿಗೆ
ಹಾರಿ ಹೊರಬಂದೆ ಬೀದಿಗೆ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...