ಮೇರು ಸಾಹಿತಿ ರುಡ್ಯಾರ್ಡ ಕಿಪ್ಲಿಂಗ್ – ಬದುಕಿನ ಏರಿಳಿತಗಳು

ಮೇರು ಸಾಹಿತಿ ರುಡ್ಯಾರ್ಡ ಕಿಪ್ಲಿಂಗ್ – ಬದುಕಿನ ಏರಿಳಿತಗಳು

ಭಾಗ ೧.

ಜಾಗತಿಕ ಮಟ್ಟದಲ್ಲಿ ಇಂದಿಗೂ ಬಹಳ ಬೇಡಿಕೆಯುಳ್ಳ The Jungle Book ಕಾದಂಬರಿ ಹಾಗೂ ಅದರಲ್ಲಿಯ ಮೋಗ್ಲಿ ಪಾತ್ರ ಬಹುಶಃ ಆಬಾಲವೃದ್ಧರಾದಿ ಎಲ್ಲರೂ ಮೆಚ್ಚಿಕೊಳ್ಳುವಂತಹುದು. ಹಾಗಾಗೇ ಸಿನೇಮಾ ಆಗಿಯೂ ಜನಪ್ರಿಯವಾದ ಈ ಕಾದಂಬರಿ ಕೃತಿಕಾರ Rudyard Kipling ಜಗತ್ತಿನ ಮನೆಮಾತಾದ.

ಬಾಲ್ಯದಲ್ಲಿ ಅಂತಹ ಮಧುರ ಅನುಭವಗಳಿಂದ ತುಂಬಿರದಿದ್ದರೂ ಗಟ್ಟಿಯಾದ ಜೀವನಾನುಭವಗಳ ಕಟ್ಟಿಕೊಟ್ಟಿತ್ತು. ಕಿಪ್ಲಿಂಗ್ ೧೮೬೫ ಡಿಸೆಂಬರ ೩೦ರಂದು ಬೊಂಬಾಯಿಯಲ್ಲಿ [ಇಂದಿನ ಮುಂಬಯಿ] ಆಂಗ್ಲೋ ಇಂಡಿಯನ್ ಕುಟುಂಬದಲ್ಲಿ ಜನಿಸಿದ. ಆತ ಹುಟ್ಟಿದ ಸಂದರ್ಭದಲ್ಲಿ ತಂದೆ ತಾಯಿ ಬ್ರಿಟಿಷ್ ಆಡಳಿತದ ಭಾಗವಾಗಿ ಭಾರತಕ್ಕೆ ಆಗ ತಾನೆ ಬಂದಿದ್ದರು. ಕೌಟುಂಬಿಕ ಜೀವನ ಸುಂದರವಾಗಿತ್ತು. ಕಿಪ್ಲಿಂಗ್ ತಾಯಿಯನ್ನು ಬಹುವಾಗಿ ಪ್ರೀತಿಸುತ್ತಿದ್ದ. ಕಿಪ್ಲಿಂಗ್ ತಂದೆ ಜಾನ್ ಲಾಕ್ ವುಡ್ ಕಿಪ್ಲಿಂಗ್ ಮುಂಬೈನ ಭಾರತ ಸರಕಾರದ ಕಲಾವಿದ್ಯಾಲಯ ಜೀಜಾಬಾಯಿ ಸ್ಕೂಲ್ ಆಫ್ ಆರ್ಟ್ಸನ ವಾಸ್ತುಶಿಲ್ಪ ಕಲಾ ವಿಭಾಗದ ಮುಖ್ಯಸ್ಥರಾಗಿದ್ದರು. ಈತನ ಜನನದ ಸಮಯದಲ್ಲಿ ಭಾರತಕ್ಕೆ ಬಂದ ಕುಟುಂಬ ಇಲ್ಲಿಯೇ ನೆಲೆನಿಂತಿತು. ಹಾಗಾಗಿ ೫ ವರ್ಷದವರೆಗೂ ಭಾರತದ ಜನಜೀವನಕ್ಕೆ ಹೊಂದಿಕೊಂಡು ಇಲ್ಲಿಯ ಭಾಷೆ ಆಚಾರ ವಿಚಾರಗಳ ತಳ ಮೂಲದಿಂದಲೇ ಬಲ್ಲವನಾಗಿದ್ದ. ಭಾರತ ಕಿಪ್ಲಿಂಗನನ್ನು ಅಪೂರ್ವವಾಗಿ ಆಕರ್ಷಿಸಿದ ಸ್ಥಳ. ತನ್ನ ಸಹೋದರಿ ಹಾಗೂ ಮನೆಯ ಆಯಾಳ ಕೈಹಿಡಿದು ಬೊಂಬೆಯ ಗಲ್ಲಿಗಲ್ಲಿಗಳಲ್ಲಿ ತಿರುಗಿದ್ದ. ಸಣ್ಣ ಸಣ್ಣ ಅಂಗಡಿ ಮಾರ್ಕೆಟ್ಟುಗಳು ಆತನನ್ನು ಸೆಳೆಯುತ್ತಿದ್ದವು. ಇಲ್ಲಿಯ ಭಾಷೆಯೊಂದಿಗೆ ಆ ನಗರದ ಎಲ್ಲ ಜನಾಂಗದ ಧರ್ಮದ ಹಿಂದೂ, ಮುಸ್ಲಿಂ, ಕ್ರೈಸ್ತ ಯಹೂದಿ ಎಲ್ಲರೂ ಪರಸ್ಪರ ಬೆರೆತು ಬಾಳುವ ರೀತಿ ಇಲ್ಲಿಯ ಸಂಸ್ಕೃತಿ ಎಲ್ಲವು ಆತನಿಗೆ ಅದ್ಭುತವಾಗಿದ್ದವು. ಆದರೆ ಮಗ ಬ್ರೀಟಿಷ್ ಔಪಚಾರಿಕ ಶಿಕ್ಷಣ ಪದ್ಧತಿಯಲ್ಲಿಯೇ ಕಲಿಯಬೇಕೆನ್ನುವ ತಾಯಿ Aliceಯ ಬಯಕೆಯಾಗಿತ್ತು. ಅದಕ್ಕಾಗಿ ಕಿಪ್ಲಿಂಗ್ ೬ನೇ ವಯಸ್ಸಿಗೆ ಇಂಗ್ಲೆಂಡಿಗೆ ಕಳಿಸಲ್ಪಟ್ಟ.

ಆದರೆ ಅಲ್ಲಿಯ ಜೀವನಕ್ಕೆ ಹೊಂದಿಕೊಳ್ಳಲು ಬಹಳೇ ಹೆಣಗಬೇಕಾಯಿತು. ಆತನನ್ನು ನೋಡಿಕೊಳ್ಳುತ್ತಿದ್ದ ಪೋಷಕಳಾಗಿದ್ದ Mrs Holloways ಒಬ್ಬ ಕ್ರೂರಿಯಾಗಿದ್ದಳು. ಚಿಕ್ಕ ಬಾಲಕನ್ನು ತಿಳಿಹೇಳಿ ಕಲಿಸುವ ಬದಲು ಒರಟಾಗಿ ನಡೆದುಕೊಳ್ಳುತ್ತಿದ್ದಳು. ಅಲ್ಲಿಯ ಬದುಕಿಗೂ ಶಾಲೆಯ ವಾತಾವರಣಕ್ಕೂ ಹೊಂದಿಕೊಳ್ಳಲು ಆಗದೇ ತೊಳಲಾಡುತ್ತಿರುವ ಆತನಿಗೆ ಹೊಡೆದು ಬಡಿದು ಹಿಂಸಿಸುತ್ತಿದ್ದಳು. ಅವನ ಆಸಕ್ತಿಯ ಪುಸ್ತಕಗಳ ಓದಲು ಬಿಡುತ್ತಿರಲಿಲ್ಲ. ಆಕೆಯ ಮನೆಯಲ್ಲಿ ಆತನ ಜೀವನ ದುರ್ಗಮ ಹಾಗೂ ಕಷ್ಟಕರವಾಗೇ ಇತ್ತು. ಆದರೂ ಎಮರ್‍ಸನ್, ಡೆನಿಯಲ್ ಢೆಪೋ ಮುಂತಾದವರ ಪುಸ್ತಕಗಳನ್ನು ಕದ್ದು ಓದುತ್ತಿದ್ದ. ಆ ಮನೆಯಲ್ಲಿನ ಕ್ರೌರ್ಯಕ್ಕೆ ನಲುಗಿ ಹೋಗಿದ್ದ ಕಿಪ್ಲಿಂಗ್ ೧೧ರ ವಯಸ್ಸಿನಲ್ಲಿ ನರ ದೌರ್ಬಲ್ಯಕ್ಕೆ ಒಳಗಾದ. ವಿಷಯತಿಳಿದ ತಾಯಿ ಮಗನನ್ನು ಮರಳಿ ಕರೆತಂದರೂ ಸ್ವಲ್ಪ ಕಾಲ ಬಿಟ್ಟು ಮತ್ತೆ ದೆವೊನ್ ನಲ್ಲಿ ಹೊಸ ಶಾಲೆಗೆ ಸೇರಿದ. ಅಲ್ಲಿಯ ಪರಿಸರ ಆತನ ಆಸಕ್ತಿಯನ್ನು ಕೆರಳಿಸಿತು. ಪ್ರತಿಭೆಗೆ ಸವಾಲಾಗುವಂತಹ ವಾತಾವರಣದಲ್ಲಿ ಆತನ ಸುಪ್ತ ಚೇತನ ಜಾಗೃತಗೊಂಡಿತು. ಬರವಣಿಗೆಯ ಆಸಕ್ತಿ ಗರಿಗೆದರಿತು. ಅಲ್ಲಿಯೇ ಮೊದಲ ಬಾರಿ ಶಾಲಾ ನ್ಯೂಸ್ ಪೇಪರಿನ ಎಡಿಟರ್ ಕೂಡಾ ಆಗಿ ನೇಮಕಗೊಂಡ.

೧೭ ನೇ ವಯಸ್ಸಿಗೆ ೧೮೮೨ರಲ್ಲಿ ಪುನಃ ಭಾರತಕ್ಕೆ ಬಂದ ಕಿಪ್ಲಿಂಗ್ ತಂದೆತಾಯಿಯೊಂದಿಗೆ ಲಾಹೋರಿನಲ್ಲಿ ವಾಸಿಸತೊಡಗಿದ. ತಂದೆಯ ಸಹಾಯದಿಂದ ಲೋಕಲ್ ನ್ಯೂಸ್ ಪತ್ರಿಕೆಯಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು. ಸುಮಾರು ಏಳು ವರ್ಷಗಳು ವೃತ್ತಪತ್ರಿಕೆಗಳಲ್ಲಿ ಕೆಲಸ ಮಾಡುತ್ತ ವಿಷಯ ಸಂಗ್ರಹಣೆಗೋಸ್ಕರ ಭಾರತದ ಮೂಲೆಮೂಲೆಗಳನ್ನು ಸುತ್ತಿದ. ಈ ಸಮಯವನ್ನು ಆತ “ಸೆವೆನ್ ಇಯರ್‍ಸ ಹಾರ್ಡ” ಎಂದು ಕರೆದಿದ್ದಾನೆ. ಹುಟ್ಟು ಮತ್ತು ಬಾಲ್ಯಗಳು ಇಲ್ಲಿಯ ನೆಲದ ಸೊಗಡಲ್ಲೆ ಕಳೆದಿದ್ದು ಮತ್ತು ಪತ್ರಿಕೆ ಕೆಲಸದ ನಿಮಿತ್ತ ನಡೆಸಿದ ಕ್ಷೇತ್ರಕಾರ್ಯಗಳು ಭಾರತದ ಜನಜೀವನ ಸಂಸ್ಕೃತಿ ನೈಸರ್ಗಿಕತೆಯ ಸಕಲ ಜ್ಞಾನವನ್ನು ಸುಲಭದಲ್ಲಿ ಪಡೆಯಲು ಸಾಧ್ಯವಾಯಿತು. ಆ ಮೂಲಕ ಆತನ ಜಗತ್ತು ಹಾಗೂ ಬರವಣಿಗೆಯ ಜಗತ್ತು ಎರಡು ಮುಖಗಳಲ್ಲಿ ತೆರೆದುಕೊಂಡವು. ಒಂದು ಇಂಗ್ಲೆಂಡಿನ ಬದುಕಿನ ಅನುಭವಗಳು ಹಾಗೂ ಭಾರತದ ಜನಜೀವನದ ರೀತಿನೀತಿಗಳು. ಮುಂಬೈಯ ಗದ್ದಲದ ರಾತ್ರಿಗಳಲ್ಲಿ ನಿದ್ದೆ ಬರದೇ ಗಲ್ಲಿಗಲ್ಲಿಗಳಲ್ಲಿ ತಿರುಗಿದ, ಸಾಮಾನ್ಯವಾಗಿ ಬ್ರಿಟಿಷರಿಗೆ ಅಪರೂಪವಾಗಿ ತೆರೆದುಕೊಳ್ಳುತ್ತಿದ್ದ ವೈಶ್ಯಾವಾಟಿಕೆ ಹಾಗೂ ಆಫೀಮು ಅಡ್ಡೆಗಳಲ್ಲಿ ನುಸುಳಿದ. ಇವುಗಳು ಆತನ ಜೀವನಾನುಭದ ಸಾರವನ್ನು ಹೆಚ್ಚಿಸಿದವು. ಬರವಣಿಗೆಗೆ ವಸ್ತುವೈವಿಧ್ಯಗಳನ್ನು ಸಂಗ್ರಹಿಸಿಕೊಟ್ಟವು. ಆ ಸಮಯದಲ್ಲಿಯೇ ಆತ Plain Tales from the Hills ಬರೆದ. ಅದು ಇಂಗ್ಲೆಂಡಿನಲ್ಲಿ ಬಹು ಜನಪ್ರಿಯತೆ ಪಡೆಯಿತು.

ಏಳು ವರ್ಷಗಳ ನಂತರ ಪುನಃ ಕಿಪ್ಲಿಂಗ್ ಇಂಗ್ಲೆಂಡಿಗೆ ಹೋದ. ಅಲ್ಲಿ Wolcott Balestierಎಂಬ ಅಮೆರಿಕನ್ ಏಜಂಟ್ ಹಾಗೂ ಪ್ರಕಾಶಕನೊಬ್ಬನ ಪರಿಚಯ ಗಾಡ ಸ್ನೇಹವಾಗಿ ಆತನೊಂದಿಗೆ ಕಿಪ್ಲಿಂಗ್ ಅಮೇರಿಕಾಕ್ಕೆ ಪಯಣಿಸುತ್ತಾನೆ. ವೊಲ್ಕಾಟ್ ಆತನಿಗೆ ಹಲವು ಸಾಹಿತಿಗಳ ಸ್ನೇಹ ದೊರಕಿಸಿಕೊಟ್ಟ. ಕಿಪ್ಲಿಂಗನ ಎರಡನೇಯ ಸಣ್ಣ ಕಥಾಸಂಗ್ರಹ Wee Willie Winkie ಪ್ರಕಟವಾದವು. ೧೮೯೨ರಲ್ಲಿ ಬ್ರೀಟಿಷ್ ಸೈನಿಕರ ಕರುಣಾಜನಕ ಕಥೆಯನ್ನು ವಿಸ್ತರಿಸುವ Barrack-Room ballads ಕೃತಿಯನ್ನು ಪ್ರಕಟಿಸಿದ. ಯುದ್ಧಕಾಲದ ಹೊರತಾಗಿ ಸೈನಿಕರ ದಮನಕ್ಕೊಳಪಟ್ಟ ಸಾಮಾಜಿಕ ಬದುಕಿನ ಬಗ್ಗೆ ಜನಸಾಮನ್ಯರ ಗಮನವನ್ನು ಆತ ಕಟ್ಟಿಕೊಟ್ಟ ಟೊಮಿ ಪಾತ್ರ ಸೆಳೆಯಿತು. Wolcott ಸ್ನೇಹದೊಂದಿಗೆ ಆತನ ಸಹೋದರಿ Caroline Balestier ಕೂಡಾ ಆತನಿಗೆ ಹತ್ತಿರವಾದಳು. ಆದರೆ ಸಹೋದರ Wolcott ಆಕಸ್ಮಿಕ ದುರ್ಮರಣದಿಂದ ಕಂಗೆಟ್ಟ ಕ್ಯಾರಿಗೆ ಕಿಪ್ಲಿಂಗ್ ಆಪ್ತನಾಗಿದ್ದು ನಿಜಕ್ಕೂ ಅನಿವಾರ್ಯವಾಗಿದ್ದ. ಪರಸ್ಪರ ಒಪ್ಪಿಗೆಯಿಂದ ವಿವಾಹವಾದ ಜೋಡಿ ಮಧುಚಂದ್ರವನ್ನು ಕೆನಡಾ ಮತ್ತು ಜಪಾನಗಳಲ್ಲಿ ಜೋರಾಗಿಯೇ ಆಚರಿಸಿಕೊಂಡಿತು. ಸ್ವಲ್ಪ ಸಮಯ ಹಣಕಾಸಿನ ಮುಗ್ಗಟ್ಟಿಗೂ ಎದುರಾದರೂ ಸುಧಾರಿಸಿಕೊಂಡು ದಂಪತಿಗಳು ಅಮೇರಿಕಾದ Brattleboro ನೆಲೆನಿಂತರು. ಅಲ್ಲಿ ಕ್ಯಾರಿಯ ಸಹೋದರ Beatty ಯಿಂದ ತುಂಡು ಜಾಗೆ ಖರೀದಿಸಿ ದೊಡ್ಡ ಮನೆಯನ್ನು ಕಟ್ಟಿದ ಕಿಪ್ಲಿಂಗ್. ಅದೇ ಸಮಯಕ್ಕೆ ಮೊದಲ ಮಗಳು Josephine ಎರಡನೇಯ Elsie ಹಾಗೂ ಕೊನೆಯ ಮಗ John ಜನಿಸಿದರು. ಬದುಕು ಸುಂದರವಾಗಿತ್ತು. ಸಾಹಿತ್ಯ ರಚನೆಯೂ ಉಚ್ಛ್ರಾಯ ಹಂತದಲ್ಲಿತ್ತು. ಕಿಪ್ಲಿಂಗನ್ ಜಂಗಲ್ ಬುಕ್ ಬಿಡುಗಡೆಯಾಗಿ ಜಗತ್ಪ್ರಸಿದ್ಧವಾಯಿತು.

ಆದರೆಲ್ಲವೂ ಅಂದುಕೊಂಡಂತೆ ಆಗದು. ಕ್ಯಾರಿಯ ಸಹೋದರ Beatty ಆಸ್ತಿ ವಿಷಯವಾಗಿ ತಗಾದೆ ತೆಗೆದ. ಕೇಸು ಕೋರ್ಟು ಮೆಟ್ಟಿಲೇರಿತು. ಪತ್ರಿಕೆಗಳ ಮುಖಪುಟಗಳಲ್ಲಿ ಈ ಮೇರು ಸಾಹಿತಿಯ ಮನೆ ವಿಷಯ ರಾರಾಜಿಸಲಾರಂಭಿಸಿದವು. ಕೆಲವು ಪತ್ರಿಕೆಗಳು ಕಿಪ್ಲಿಂಗ್ ತೇಜೋವಧೆಗೂ ಶುರುವಿಟ್ಟುಕೊಂಡವು. ಇವೆಲ್ಲ ಸ್ವಭಾವತಃ ಸಜ್ಜನನಾದ ಕಿಪ್ಲಿಂಗಗೆ ಸಹನೆಯಾಗಲಿಲ್ಲ. ಅಲ್ಲಿಂದ ತೊರೆದು ಕುಟುಂಬ ಇಂಗ್ಲೆಂಡಿಗೆ ವಾಪಸಾಯಿತು. ಆದರೆ ಕೆಲವು ಸಮಯದ ನಂತರ ಕ್ಯಾರಿ ತವರಿನ ನೆನಪು ಕಾಡತೊಡಗಲು ಚಳಿಗಾಳದಲ್ಲಿ ಕುಟುಂಬ ಮತ್ತೆ ಅಮೇರಿಕಾಕಕ್ಕೆ ಪ್ರಯಾಣಿಸುತ್ತಲೇ ಕೊರೆಯುವ ಚಳಿಯ ಭಾರಕ್ಕೆ ಕಿಪ್ಲಿಂಗ್ ಮತ್ತು ಮಗಳು Josephine ನ್ಯೂಮೋನಿಯಾಕ್ಕೆ ಒಳಗಾದರು. ಕಿಪ್ಲಿಂಗ ಚೇತರಿಸಿಕೊಂಡರೆ ಎಳೆಯ ಬಾಲೆ ಇಹಲೋಕವನ್ನೇ ತ್ಯಜಿಸಿದಳು. ಆಕೆಯ ಸಾವು ಆತನ ಬದುಕಿನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿತು.

ಮುಂದೆ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ತಾನಾಗಿಯೇ ಒತ್ತಾಯಪೂರ್ವಕವಾಗಿ ಮಗನನ್ನು ಸೈನ್ಯಕ್ಕೆ ಸೇರಿಸಿದ. ಆದರೆ ದುರಾದೃಷ್ಟ ಲೆಪ್ಟನೆಂಟ್ ಜಾನ್ ಯುದ್ಧಕ್ಕೆ ತೆರಳಿದವ ಮತ್ತೆ ಮರಳಿ ಬರಲೇ ಇಲ್ಲ. ಹೀಗೇ ಸಾಂಸಾರಿಕ ಬದುಕಿನ ಏರಿಳಿತಗಳಿಂದ ಮುಪ್ಪಿನ ಪ್ರಾಯದ ಸಹಜ ದೌರ್ಬಲ್ಯಗಳಿಂದ ಬಸವಳಿದ. ಆದರೆ ಸಾಹಿತ್ಯ ಆತನ ಬದುಕಿಸಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹ್ಯಾಗೆ ಕಾಣುವೆ
Next post ಹಗಲುಗನಸುಗಾರ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…