ಮುತ್ತು ಚೆಲ್ಲಾಪಿಲ್ಲಿ

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ?
ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು?
ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು
ನಿನ್ನ ಸದೃಢ ಕೊರಳು ಬೇಕೇ ಬೇಕು.
ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ
ಬಳಲಿ, ಬಿಳುಪೇರಿ, ಸೂರ್ಯ ಹುಟ್ಟಲೆಂದು ಕಾದಂತೆ ಕಾದಿದ್ದೇನೆ.
ನಾಟಕದ ನಡುವೆ ನಿನ್ನ ಪ್ರವೇಶದ
ಯಾವೊಂದು ಭಾವಭಂಗಿಯೂ ಕಣ್ಣು ತಪ್ಪಬಾರದೆಂದು
ಕಾತರದಿಂದ ಕಾದಿರುವ ಪ್ರೇಕ್ಷಕ ಸಮೂಹ ನನ್ನ ಮುಖ.
ಲೈಟ್ ಹೌಸಿನ ಬೆಳಕಾಡುವ ವಿಶಾಲ ನಗರದ
ಬಯಲ ಬಯಸುವ ಒಳನಾಡ ಕಿರುತೊರೆಯಂತೆ;
ಬೆಟ್ಟದ ಮೇಲೆ ಸುರಿದ ಬಿರುಮಳೆ
ತನ್ನತ್ತ ಹರಿದು ಜೀವ ಉಕ್ಕಿಸಲೆಂದು
ಕಾದ ಮರುಭೂಮಿಯ ನದಿಯ ಪಾತ್ರದಂತೆ;
ಮುಗ್ಧ ಕಿಟಕಿಯಲ್ಲಿ ನಕ್ಷತ್ರವೊಂದು ಕಂಡು
ತನ್ನ ಪ್ರಶ್ನೆಗೆಲ್ಲಾ ಉತ್ತರ ಹೇಳಿತೆಂದು
ಹಂಬಲಿಸುವ ಸೆರೆಯಾಳಿನಂತೆ;
ಕಂಕುಳ ಕೆಳಗಿದ್ದ ಬೆಚ್ಚನೆ ಊರುಗೋಲನ್ನು ದೇವರ ಮುಂದೆಸೆದ,
ಪವಾಡ ಸಂಭವಿಸಿದೆ ಬಿದ್ದಲ್ಲಿಂದ ಮೇಲೇಳಲಾರದ ಹೆಳವನಂತೆ;
ನಾನು ಹಾಗೇ ಬಿದ್ದುಕೊಂಡಿದ್ದು ಕೊನೆಯ ಕಾಣುವವರೆಗೆ
ತೆವಳಬೇಕು ನೀನು ಬಾರದಿದ್ದರೆ.
ನನಗೆ ನೀನಷ್ಟೇ ಬೇಕು.
ಬಿರುಕಲ್ಲಿ ಮೂಡಿದ ಹುಲ್ಲುಗರಿಯ ಸ್ಪರ್ಶ ಪಡೆದು
ಕಾಲು ಹಾದಿಯ ಕಲ್ಲು ಇಡೀ ವಸಂತ ಬೇಕೆಂದು ಹಂಬಲಿಸದೇ?
ಹಳ್ಳಿಯ ಕೆರೆಯಲ್ಲಿ ತನ್ನ ಬಿಂಬ ನೋಡಬಯಸುವ ಚಂದ್ರ
ಮೈದುಂಬಿ ಪೂರ್ಣನಾಗಬೇಡವೆ? ಭವಿಷ್ಯದ ಪೂರ್ಣತೆ
ನಮ್ಮತ್ತ ನಾಲ್ಕು ಹೆಜ್ಜೆಯಾದರೂ ಹಾಕದಿದ್ದರೆ
ಏನಾದರೂ ಪೂರ್ತಿಯಾಗುವುದಾದರೂ ಹೇಗೆ?
ಕೊನೆಗೂ ನೀನು ನಾಟಕದ ಪಾತ್ರವರ್ಗದಲ್ಲಿಲ್ಲವೇ,
ಓ ಹೆಸರು ಹೇಳಬಾರದವಳೇ?
ಉಳಿದಿರುವ ಸಮಯ ಸ್ವಲ್ವ
ನಿನಗೆ ತಕ್ಕವನಾಗಿ ಉಳಿಯೆ;
ವಯಸ್ಸಾಗಿ, ಮುದುಕನಾಗಿ,
ಅಥವ ನನ್ನ ಮಕ್ಕಳು ನನ್ನನ್ನು ಮರವೆಗೆ ದಬ್ಬ…..
ಮುತ್ತು ಚೆಲ್ಲಾಪಿಲ್ಲಿ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನಲ್ಲಿ ನಾನು-ನನ್ನಲ್ಲಿ ನೀನು
Next post ಸಾಂಪ್ರದಾಯಿಕತೆ ಮತ್ತು ರಾಜಕಾರಣ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…