Home / ಕವನ / ಅನುವಾದ / ಸಾವು ಬಂದಾಗ

ಸಾವು ಬಂದಾಗ

ಸಾವು ಬಂದಾಗ ನಾನು ನಿನ್ನೊಡನೆ ಇರಲಿಲ್ಲ.
ಮುನಿಸಿಪಲ್ ಆಸ್ಪತ್ರೆ ನೀನಿದ್ದಕೊನೆಯ ಮನೆ :
ಬಿಳಿಯ ಬಣ್ಣದ ರೂಮು, ಮೂಲೆಯಲ್ಲಿ ಜೇಡರಬಲೆ,
ಚಕ್ಕೆ ಎದ್ದ ಗೋಡೆಯ ಬಣ್ಣ, ಉಪ್ಪಿನ ಕಾಯಿ ಬಾಟಲು,
ನಾಲ್ಕು ತಿಂಗಳು ಹಳೆಯ ವಾರಪತ್ರಿಕೆ, ಕಾಫಿ ಗಸಿ ಇದ್ದ ಎರಡು ಲೋಟ.
ಪಕ್ಕದ ಬೆಡ್ಡಿನಲ್ಲಿ ಕ್ಯಾನ್ಸರ್ ಬಂದ ಟೈಲರು.
ನಿನಗೆಷ್ಟು ವಯಸ್ಸೆಂದರೆ
ಸಾವೂ ಲೆಕ್ಕ ಇಡುವುದು ಮರೆತಿದೆ
ಎಂದು ಡಾಕ್ಬರು ಹೇಳುತಿದ್ದರು.
ನಿನಗೆಷ್ಟು ವಯಸ್ಸೆಂದರೆ
ನಿನ್ನ ಬೀದಿಯ ಮಕ್ಕಳು,
ಹಳ್ಳ ಬಿದ್ದ ಫುಟ್ ಪಾತಿನಲ್ಲಿ
ಕುಗ್ಗಿಕುಸಿದು ಬಿದ್ದ ಸಾಮ್ರಾಜ್ಯದ ಹಾಗೆ,
ನೀನು ಕಳೆದ ಶತಮಾನವೆನ್ನುತ್ತಿದ್ದರು.

ಸಾವು ಬಂದಾಗ ನಿನಗೆ ಯೌವನವೂ ಬಂತು :
ಇದ್ದಕ್ಕಿದ್ದಂತೆ ಬಾಲಭಾಷೆಯಲ್ಲಿ ಮಾತನಾಡಿದೆ,
ನಿನಗೂ ಬದುಕಿದ್ದವರಿಗೂ ನಡುವೆ ಇದ್ದ
ಬಿಳಿಯ ತೆರೆ ಗ್ಲೈಡರಿನ ರೆಕ್ಕೆಯಂತಿತ್ತು.
ನಿನ್ನ ನರಕ್ಕೆ ಚುಚ್ಚಿದ್ದ ಗ್ಲೊಕೋಸು ನಳಿಗೆ
ತೊದಲಿತು, ಚೆಜ್ಜಾದ ಮೇಲೆ ಕುಳಿತ ಪಾರಿವಾಳ
ಪತರ ಗುಟ್ಟಿತು. ನಿನ್ನ ಬಗ್ಗೆಯೇ ನೀನೇ
ಮಾತಾಡಿಕೊಳ್ಳುತ್ತಾ ಈ ಬೇಸತ್ತ ಜಾಗದಿಂದ
ಸಾವಿನ ನಾಡಿಗೆ ನಡೆದಿದ್ದೆ : ಹದಿನೆಂಟರ ಹರೆಯದ
ಹುಮ್ಮಸ್ಸಿನ ಯುವಕ, ವಿದ್ಯಾರ್ಥಿಗಳ ತಲೆಹರಟೆ
ಸಹಿಸದ ಮೂವತ್ತರ ಪ್ರಬುದ್ಧ ಜರ್‍ಮನ್ ಮೇಷ್ಟ್ರು,
ದಿನವೂ ಬೆಳಗ್ಗೆ ಒಂಟಿ ವಾಕಿಂಗ್ ಹೋಗುವ
ಪಿಂಚಣಿದಾರ, ನೀನು ಒಟ್ಟು ನಡೆದ ದೂರ ಲೆಕ್ಕ ಇಟ್ಟಿದ್ದರೆ
ಈ ಭೂಮಿಯಿಂದ ಸ್ವರ್‍ಗವನ್ನೆ ತಲುಪುತ್ತಿದ್ದಯೋ ಏನೋ.
ಸಾವನ್ನು ಸ್ವಾಗತಿಸಲು ನಿನ್ನ ನೀನೇ
ಮತ್ತೆಮೊದಲಿಂದ ಹೊಸಬನಾಗಿ ಮಾಡಿಕೊಂಡೆ.
ಹಾಲ್‍ನಲ್ಲಿ ಕಿಸಕ್ಕನೆ ಯಾತಕ್ಕೋ ನಕ್ಕು
ನಗು ಅದುಮಿಟ್ಟುಕೊಂಡ ನರ್ಸುಗಳು.
ಕಿಟಕಿ ಅಂಚಿನಲ್ಲಿ ಅನ್ನದ ಅಗುಳಿಗೆ
ಜಗಳವಾಡುವ ಗುಬ್ಬಚ್ಚಿಗಳು.
*****
ಮೂಲ: ಆಡಂ ಝಗಯೇವ್ಸ್‍ಕಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...