ವೃತ್ತ

ನಿಂತ ನೆಲವೆ ದ್ವೀಪವಾಗಿ
ಕೂಪದಾಳದಲ್ಲಿ ತೂಗಿ
ಕಂದಕವನು ಕಾವಲಾಗಿ
ತೋಡಿದಂತೆ ನನ್ನ ಸುತ್ತ
ಒಂದು ಕಲ್ಲ ವೃತ್ತ.
ಹೃದಯ ಮಿದುಳು ಕಣ್ಣು ಕಿವಿ
ಉಂಡ ಸವಿ, ಮನದ ಗವಿಯ
ತಳದಲೆಲ್ಲೊ ಪಿಸುಗುಟ್ಟುವ
ಪಿತಾಮಹರ ಚಿತ್ತ-
ಕೊರೆದುದಂತೆ ಈ ವಲಯ
ಇದೇ ನನ್ನ ಎಲ್ಲ ಕಲೆಯ
ಗರಡಿಮನೆ, ಗಣೆಯ ಕೊನೆ,
ಬಳಸಿ ಕವಿದ ಹುತ್ತ
ಒಳಗೆ ನೆಲದ ಕೆಳಗೆ ತಳವೆ
ಇರದ ಇರುಳ ಕೊಳವಿಯೊಳಗೆ
ಹತ್ತಿಳಿಯುವೆ ಸದಾ ಹಳಸು-
ಗಾಳಿಯ ಹೀರುತ್ತ.

ಒಂದಲ್ಲ ಹತ್ತಲ್ಲ
ಸುತ್ತ ಕಣ್ಣು ಹರಿವಲ್ಲೆಲ್ಲ
ಹುತ್ತದಂತೆ ಎದ್ದುನಿಂತ
ಇಂಥ ಲಕ್ಷ ವೃತ್ತ.
ಕೆಲಕೆಲವಕೆ ಕಿಂಡಿಯುಂಟು
ಕೆಲಕೆಲವಕೆ ಕಿಟಕಿಯುಂಟು
ದೊಡ್ಡ ದೊಡ್ಡ
ಬಾಗಿಲುಂಟು
ಲಕ್ಷದಲ್ಲಿ ನಾಲ್ಕಕೆ.
ಉಳಿದವುಗಳ ತಳದಲೆಲ್ಲೊ
ಸಣ್ಡದೊಂದು ಸಂದಿದಾರಿ
ಆಮದು ರಫ್ತಿಗೆ ಸಾಲದ
ಗಾಳಿ ಬೆಳಕ ವೈರಿ.

ಕಲ್ಲಗೋಡೆ ಹೊರಗೆ ದಿನಾ
ಬಿಲ್ಲು ಹಿಡಿದ ಎಷ್ಟೊ ಜನ
ಗವಿಯ ತಳದ ಸಂದಿಯಿಂದ
ತೆವಳಿ ಹೊರಗೆ ಬರುವರು.
ಬಾಣ ತೂಗಿ ಬೆನ್ನಿನಲ್ಲಿ
ಏನೊ ಉರಿದು ಕಣ್ಣಿನಲ್ಲಿ
ಬಿಸಿಲು ಕೆರಳುತಿದ್ದೆಂತೆಯೆ
ಸಂತೆ ಸೇರಿ ಕುಣಿವರು.
ನಾಯಿಯ ನಾಲಗೆಯಾದರು
ಕಿವಿಯಿಲ್ಲದ ನಾಗರು;
ಕೆನ್ನೆ ಕೆನ್ನೆ ತಿಕ್ಕಿ ಉಬ್ಬಿ
ಬೆನ್ನು ಬೆನ್ನು ಕೊಟ್ಟು ದಬ್ಬಿ
ಬೇತಾಳಕೆ ಕಾಮವರ್ಧಿನೀ ರಾಗವ ಹಬ್ಬಿ
ಸೊಕ್ಕಿ ಕೆರಳುಗೊರಳಿನಲ್ಲಿ
ಭೂತಕುಣಿತ ಕುಣಿವರು;
ಬಿಸಿಲಾರಿತೊ ಎಲ್ಲ ಓಡಿ ಗವಿಯ ತಳಕೆ ಸರಿವರು.

ಇವರ ನಡುವೆ ಬೆರೆಯದೆ
ಕಂಡವರನು ಕರೆಯದೆ
ಎಲ್ಲೊ ನಾಲ್ಕು ಜನರು ಅಲ್ಲೆ ದೂರದಲ್ಲಿ ನಿಲುವರು.
ಬಾವಿಗಣ್ಣು ಈಟಿಮೂಗು
ಬಡಕಲು ಮೈಯವರು.
ಗುಂಡಿಗೆನ್ನೆ ಬಟ್ಟತಲೆ
ಹೆಚ್ಚು ಹೊದೆಯದವರು.
ಶಾಂತರಾಗಿ ದೂರ ನಿಂತು
ಚಿಂತೆ ತುಡಿವ ಕಣ್ಣಿನಿಂದ
ಸಂತೆಯತ್ತ ನೋಡಿ ಖಿನ್ನರಾಗಿ ಹಿಂದೆ ಸರಿವರು.

ಸದಾ ಹೊರಗೆ ನಿಲುವ ಇವರು
ಅಪ್ಪಿತಪ್ಪಿ ಎಲ್ಲೊ ಒಮ್ಮೆ
ವೃತ್ತದಲ್ಲಿ ಸರಿವರು,
ಕಿಟಕಿ ಬಾಗಿಲನ್ನು ಮಾತ್ರ ಸದಾ ತೆರೆದೆ ಇರುವರು.
ಯಾರಿವರು, ಯಾರಿವರು?
ಎಷ್ಟು ಅಳೆದು ಸುರಿದರೂ
ಇಷ್ಟು ವರುಷ ಕಂಡರೂ
ತಿಳಿಯದೆ ಹೋದವರು?

ಬಿಸಿಲಿನಲ್ಲಿ ನೆರೆದ ಸಂತೆ
ಸಂಜೆಯಿಳಿದು ಕರಗುತಿದೆ,
ಸೊಕ್ಕಿ ಕುಣಿದ ಬೇಡರ ಪಡೆ
ಮತ್ತೆ ಗವಿಗೆ ತೆರಳುತಿದೆ,
ಜೊತೆಗಿದ್ದರು ಅವರು ಮಬ್ಬು ರೂಪವಷ್ಟೆ ಕಾಣುತಿದೆ.
ಕೇಳುತಿದೆಯ ಮಾತು? ಇಲ್ಲ.
ತುಂಬುತ್ತಿದೆ ಕಿವಿಯ ನನ್ನ ಕೂಗೆ ಗಿರಣಿ ಸಿಳ್ಳಿನಂತೆ.
ಬರೆಯುತ್ತಿರುವೆ ಸ್ವಂತ ಭಾಷ್ಯ
ಸುತ್ತಲಿರುವ ಜನರ ನಡೆಗೆ,
ಕಿರಿಚುತ್ತಿರುವೆ ‘ಉಳಿದುದೆಲ್ಲ ಸುಳ್ಳು
ಇಷ್ಟು ಮಾತ್ರ ಸತ್ಯ:
ನನ್ನ ಒಲೆಗೆ ಇಟ್ಟ ಸೌದೆ
ಗಡಿಗೆ ಮತ್ತು ಆದ ನಡಿಗೆ’

ಕಣ್ಣ ಮುಚ್ಚಿ ಕಿರಿಚುವಾಗ ಸರಕ್ಕನೆ ಏನೊ ನೆನಪು;
ದೂರ ನಿಲುವ ಸ್ವಲ್ಪ ಜನರ ಕಣ್ಣಲ್ಲಿದ್ದ ತಂಪು ಬೆಳಕು,
ಕುಣಿಯುತಿರುವ ಮಂದೆ ಕಡೆಗೆ ನೋವಿನಿಂದ, ಕರುಣೆಯಿಂದ
ನೋಡಿದಾಗ ಮೂಡುತಿದ್ದ ಬಿಚ್ಚಲಾಗದಂಥ ಒಡಪು
ಕಿರಿಚುಗೊರಳಿಗಡ್ಡವಾಗಿ
ಕಿವುಡು ಕಿವಿಯ ಶೂಲವಾಗಿ
ಇರಿಯುತಿರಲು
ವೃತ್ತದಲ್ಲಿ
ಎಲ್ಲೂ ಗಾಳಿ ಬೆಳಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಸ್ವರ
Next post ಸಾಕು ಯುದ್ಧದ ಯೋಜನಂ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys