Home / ಕವನ / ಕವಿತೆ / ವೃತ್ತ

ವೃತ್ತ

ನಿಂತ ನೆಲವೆ ದ್ವೀಪವಾಗಿ
ಕೂಪದಾಳದಲ್ಲಿ ತೂಗಿ
ಕಂದಕವನು ಕಾವಲಾಗಿ
ತೋಡಿದಂತೆ ನನ್ನ ಸುತ್ತ
ಒಂದು ಕಲ್ಲ ವೃತ್ತ.
ಹೃದಯ ಮಿದುಳು ಕಣ್ಣು ಕಿವಿ
ಉಂಡ ಸವಿ, ಮನದ ಗವಿಯ
ತಳದಲೆಲ್ಲೊ ಪಿಸುಗುಟ್ಟುವ
ಪಿತಾಮಹರ ಚಿತ್ತ-
ಕೊರೆದುದಂತೆ ಈ ವಲಯ
ಇದೇ ನನ್ನ ಎಲ್ಲ ಕಲೆಯ
ಗರಡಿಮನೆ, ಗಣೆಯ ಕೊನೆ,
ಬಳಸಿ ಕವಿದ ಹುತ್ತ
ಒಳಗೆ ನೆಲದ ಕೆಳಗೆ ತಳವೆ
ಇರದ ಇರುಳ ಕೊಳವಿಯೊಳಗೆ
ಹತ್ತಿಳಿಯುವೆ ಸದಾ ಹಳಸು-
ಗಾಳಿಯ ಹೀರುತ್ತ.

ಒಂದಲ್ಲ ಹತ್ತಲ್ಲ
ಸುತ್ತ ಕಣ್ಣು ಹರಿವಲ್ಲೆಲ್ಲ
ಹುತ್ತದಂತೆ ಎದ್ದುನಿಂತ
ಇಂಥ ಲಕ್ಷ ವೃತ್ತ.
ಕೆಲಕೆಲವಕೆ ಕಿಂಡಿಯುಂಟು
ಕೆಲಕೆಲವಕೆ ಕಿಟಕಿಯುಂಟು
ದೊಡ್ಡ ದೊಡ್ಡ
ಬಾಗಿಲುಂಟು
ಲಕ್ಷದಲ್ಲಿ ನಾಲ್ಕಕೆ.
ಉಳಿದವುಗಳ ತಳದಲೆಲ್ಲೊ
ಸಣ್ಡದೊಂದು ಸಂದಿದಾರಿ
ಆಮದು ರಫ್ತಿಗೆ ಸಾಲದ
ಗಾಳಿ ಬೆಳಕ ವೈರಿ.

ಕಲ್ಲಗೋಡೆ ಹೊರಗೆ ದಿನಾ
ಬಿಲ್ಲು ಹಿಡಿದ ಎಷ್ಟೊ ಜನ
ಗವಿಯ ತಳದ ಸಂದಿಯಿಂದ
ತೆವಳಿ ಹೊರಗೆ ಬರುವರು.
ಬಾಣ ತೂಗಿ ಬೆನ್ನಿನಲ್ಲಿ
ಏನೊ ಉರಿದು ಕಣ್ಣಿನಲ್ಲಿ
ಬಿಸಿಲು ಕೆರಳುತಿದ್ದೆಂತೆಯೆ
ಸಂತೆ ಸೇರಿ ಕುಣಿವರು.
ನಾಯಿಯ ನಾಲಗೆಯಾದರು
ಕಿವಿಯಿಲ್ಲದ ನಾಗರು;
ಕೆನ್ನೆ ಕೆನ್ನೆ ತಿಕ್ಕಿ ಉಬ್ಬಿ
ಬೆನ್ನು ಬೆನ್ನು ಕೊಟ್ಟು ದಬ್ಬಿ
ಬೇತಾಳಕೆ ಕಾಮವರ್ಧಿನೀ ರಾಗವ ಹಬ್ಬಿ
ಸೊಕ್ಕಿ ಕೆರಳುಗೊರಳಿನಲ್ಲಿ
ಭೂತಕುಣಿತ ಕುಣಿವರು;
ಬಿಸಿಲಾರಿತೊ ಎಲ್ಲ ಓಡಿ ಗವಿಯ ತಳಕೆ ಸರಿವರು.

ಇವರ ನಡುವೆ ಬೆರೆಯದೆ
ಕಂಡವರನು ಕರೆಯದೆ
ಎಲ್ಲೊ ನಾಲ್ಕು ಜನರು ಅಲ್ಲೆ ದೂರದಲ್ಲಿ ನಿಲುವರು.
ಬಾವಿಗಣ್ಣು ಈಟಿಮೂಗು
ಬಡಕಲು ಮೈಯವರು.
ಗುಂಡಿಗೆನ್ನೆ ಬಟ್ಟತಲೆ
ಹೆಚ್ಚು ಹೊದೆಯದವರು.
ಶಾಂತರಾಗಿ ದೂರ ನಿಂತು
ಚಿಂತೆ ತುಡಿವ ಕಣ್ಣಿನಿಂದ
ಸಂತೆಯತ್ತ ನೋಡಿ ಖಿನ್ನರಾಗಿ ಹಿಂದೆ ಸರಿವರು.

ಸದಾ ಹೊರಗೆ ನಿಲುವ ಇವರು
ಅಪ್ಪಿತಪ್ಪಿ ಎಲ್ಲೊ ಒಮ್ಮೆ
ವೃತ್ತದಲ್ಲಿ ಸರಿವರು,
ಕಿಟಕಿ ಬಾಗಿಲನ್ನು ಮಾತ್ರ ಸದಾ ತೆರೆದೆ ಇರುವರು.
ಯಾರಿವರು, ಯಾರಿವರು?
ಎಷ್ಟು ಅಳೆದು ಸುರಿದರೂ
ಇಷ್ಟು ವರುಷ ಕಂಡರೂ
ತಿಳಿಯದೆ ಹೋದವರು?

ಬಿಸಿಲಿನಲ್ಲಿ ನೆರೆದ ಸಂತೆ
ಸಂಜೆಯಿಳಿದು ಕರಗುತಿದೆ,
ಸೊಕ್ಕಿ ಕುಣಿದ ಬೇಡರ ಪಡೆ
ಮತ್ತೆ ಗವಿಗೆ ತೆರಳುತಿದೆ,
ಜೊತೆಗಿದ್ದರು ಅವರು ಮಬ್ಬು ರೂಪವಷ್ಟೆ ಕಾಣುತಿದೆ.
ಕೇಳುತಿದೆಯ ಮಾತು? ಇಲ್ಲ.
ತುಂಬುತ್ತಿದೆ ಕಿವಿಯ ನನ್ನ ಕೂಗೆ ಗಿರಣಿ ಸಿಳ್ಳಿನಂತೆ.
ಬರೆಯುತ್ತಿರುವೆ ಸ್ವಂತ ಭಾಷ್ಯ
ಸುತ್ತಲಿರುವ ಜನರ ನಡೆಗೆ,
ಕಿರಿಚುತ್ತಿರುವೆ ‘ಉಳಿದುದೆಲ್ಲ ಸುಳ್ಳು
ಇಷ್ಟು ಮಾತ್ರ ಸತ್ಯ:
ನನ್ನ ಒಲೆಗೆ ಇಟ್ಟ ಸೌದೆ
ಗಡಿಗೆ ಮತ್ತು ಆದ ನಡಿಗೆ’

ಕಣ್ಣ ಮುಚ್ಚಿ ಕಿರಿಚುವಾಗ ಸರಕ್ಕನೆ ಏನೊ ನೆನಪು;
ದೂರ ನಿಲುವ ಸ್ವಲ್ಪ ಜನರ ಕಣ್ಣಲ್ಲಿದ್ದ ತಂಪು ಬೆಳಕು,
ಕುಣಿಯುತಿರುವ ಮಂದೆ ಕಡೆಗೆ ನೋವಿನಿಂದ, ಕರುಣೆಯಿಂದ
ನೋಡಿದಾಗ ಮೂಡುತಿದ್ದ ಬಿಚ್ಚಲಾಗದಂಥ ಒಡಪು
ಕಿರಿಚುಗೊರಳಿಗಡ್ಡವಾಗಿ
ಕಿವುಡು ಕಿವಿಯ ಶೂಲವಾಗಿ
ಇರಿಯುತಿರಲು
ವೃತ್ತದಲ್ಲಿ
ಎಲ್ಲೂ ಗಾಳಿ ಬೆಳಕು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...