Home / ಕವನ / ಕವಿತೆ / ವೃತ್ತ

ವೃತ್ತ

ನಿಂತ ನೆಲವೆ ದ್ವೀಪವಾಗಿ
ಕೂಪದಾಳದಲ್ಲಿ ತೂಗಿ
ಕಂದಕವನು ಕಾವಲಾಗಿ
ತೋಡಿದಂತೆ ನನ್ನ ಸುತ್ತ
ಒಂದು ಕಲ್ಲ ವೃತ್ತ.
ಹೃದಯ ಮಿದುಳು ಕಣ್ಣು ಕಿವಿ
ಉಂಡ ಸವಿ, ಮನದ ಗವಿಯ
ತಳದಲೆಲ್ಲೊ ಪಿಸುಗುಟ್ಟುವ
ಪಿತಾಮಹರ ಚಿತ್ತ-
ಕೊರೆದುದಂತೆ ಈ ವಲಯ
ಇದೇ ನನ್ನ ಎಲ್ಲ ಕಲೆಯ
ಗರಡಿಮನೆ, ಗಣೆಯ ಕೊನೆ,
ಬಳಸಿ ಕವಿದ ಹುತ್ತ
ಒಳಗೆ ನೆಲದ ಕೆಳಗೆ ತಳವೆ
ಇರದ ಇರುಳ ಕೊಳವಿಯೊಳಗೆ
ಹತ್ತಿಳಿಯುವೆ ಸದಾ ಹಳಸು-
ಗಾಳಿಯ ಹೀರುತ್ತ.

ಒಂದಲ್ಲ ಹತ್ತಲ್ಲ
ಸುತ್ತ ಕಣ್ಣು ಹರಿವಲ್ಲೆಲ್ಲ
ಹುತ್ತದಂತೆ ಎದ್ದುನಿಂತ
ಇಂಥ ಲಕ್ಷ ವೃತ್ತ.
ಕೆಲಕೆಲವಕೆ ಕಿಂಡಿಯುಂಟು
ಕೆಲಕೆಲವಕೆ ಕಿಟಕಿಯುಂಟು
ದೊಡ್ಡ ದೊಡ್ಡ
ಬಾಗಿಲುಂಟು
ಲಕ್ಷದಲ್ಲಿ ನಾಲ್ಕಕೆ.
ಉಳಿದವುಗಳ ತಳದಲೆಲ್ಲೊ
ಸಣ್ಡದೊಂದು ಸಂದಿದಾರಿ
ಆಮದು ರಫ್ತಿಗೆ ಸಾಲದ
ಗಾಳಿ ಬೆಳಕ ವೈರಿ.

ಕಲ್ಲಗೋಡೆ ಹೊರಗೆ ದಿನಾ
ಬಿಲ್ಲು ಹಿಡಿದ ಎಷ್ಟೊ ಜನ
ಗವಿಯ ತಳದ ಸಂದಿಯಿಂದ
ತೆವಳಿ ಹೊರಗೆ ಬರುವರು.
ಬಾಣ ತೂಗಿ ಬೆನ್ನಿನಲ್ಲಿ
ಏನೊ ಉರಿದು ಕಣ್ಣಿನಲ್ಲಿ
ಬಿಸಿಲು ಕೆರಳುತಿದ್ದೆಂತೆಯೆ
ಸಂತೆ ಸೇರಿ ಕುಣಿವರು.
ನಾಯಿಯ ನಾಲಗೆಯಾದರು
ಕಿವಿಯಿಲ್ಲದ ನಾಗರು;
ಕೆನ್ನೆ ಕೆನ್ನೆ ತಿಕ್ಕಿ ಉಬ್ಬಿ
ಬೆನ್ನು ಬೆನ್ನು ಕೊಟ್ಟು ದಬ್ಬಿ
ಬೇತಾಳಕೆ ಕಾಮವರ್ಧಿನೀ ರಾಗವ ಹಬ್ಬಿ
ಸೊಕ್ಕಿ ಕೆರಳುಗೊರಳಿನಲ್ಲಿ
ಭೂತಕುಣಿತ ಕುಣಿವರು;
ಬಿಸಿಲಾರಿತೊ ಎಲ್ಲ ಓಡಿ ಗವಿಯ ತಳಕೆ ಸರಿವರು.

ಇವರ ನಡುವೆ ಬೆರೆಯದೆ
ಕಂಡವರನು ಕರೆಯದೆ
ಎಲ್ಲೊ ನಾಲ್ಕು ಜನರು ಅಲ್ಲೆ ದೂರದಲ್ಲಿ ನಿಲುವರು.
ಬಾವಿಗಣ್ಣು ಈಟಿಮೂಗು
ಬಡಕಲು ಮೈಯವರು.
ಗುಂಡಿಗೆನ್ನೆ ಬಟ್ಟತಲೆ
ಹೆಚ್ಚು ಹೊದೆಯದವರು.
ಶಾಂತರಾಗಿ ದೂರ ನಿಂತು
ಚಿಂತೆ ತುಡಿವ ಕಣ್ಣಿನಿಂದ
ಸಂತೆಯತ್ತ ನೋಡಿ ಖಿನ್ನರಾಗಿ ಹಿಂದೆ ಸರಿವರು.

ಸದಾ ಹೊರಗೆ ನಿಲುವ ಇವರು
ಅಪ್ಪಿತಪ್ಪಿ ಎಲ್ಲೊ ಒಮ್ಮೆ
ವೃತ್ತದಲ್ಲಿ ಸರಿವರು,
ಕಿಟಕಿ ಬಾಗಿಲನ್ನು ಮಾತ್ರ ಸದಾ ತೆರೆದೆ ಇರುವರು.
ಯಾರಿವರು, ಯಾರಿವರು?
ಎಷ್ಟು ಅಳೆದು ಸುರಿದರೂ
ಇಷ್ಟು ವರುಷ ಕಂಡರೂ
ತಿಳಿಯದೆ ಹೋದವರು?

ಬಿಸಿಲಿನಲ್ಲಿ ನೆರೆದ ಸಂತೆ
ಸಂಜೆಯಿಳಿದು ಕರಗುತಿದೆ,
ಸೊಕ್ಕಿ ಕುಣಿದ ಬೇಡರ ಪಡೆ
ಮತ್ತೆ ಗವಿಗೆ ತೆರಳುತಿದೆ,
ಜೊತೆಗಿದ್ದರು ಅವರು ಮಬ್ಬು ರೂಪವಷ್ಟೆ ಕಾಣುತಿದೆ.
ಕೇಳುತಿದೆಯ ಮಾತು? ಇಲ್ಲ.
ತುಂಬುತ್ತಿದೆ ಕಿವಿಯ ನನ್ನ ಕೂಗೆ ಗಿರಣಿ ಸಿಳ್ಳಿನಂತೆ.
ಬರೆಯುತ್ತಿರುವೆ ಸ್ವಂತ ಭಾಷ್ಯ
ಸುತ್ತಲಿರುವ ಜನರ ನಡೆಗೆ,
ಕಿರಿಚುತ್ತಿರುವೆ ‘ಉಳಿದುದೆಲ್ಲ ಸುಳ್ಳು
ಇಷ್ಟು ಮಾತ್ರ ಸತ್ಯ:
ನನ್ನ ಒಲೆಗೆ ಇಟ್ಟ ಸೌದೆ
ಗಡಿಗೆ ಮತ್ತು ಆದ ನಡಿಗೆ’

ಕಣ್ಣ ಮುಚ್ಚಿ ಕಿರಿಚುವಾಗ ಸರಕ್ಕನೆ ಏನೊ ನೆನಪು;
ದೂರ ನಿಲುವ ಸ್ವಲ್ಪ ಜನರ ಕಣ್ಣಲ್ಲಿದ್ದ ತಂಪು ಬೆಳಕು,
ಕುಣಿಯುತಿರುವ ಮಂದೆ ಕಡೆಗೆ ನೋವಿನಿಂದ, ಕರುಣೆಯಿಂದ
ನೋಡಿದಾಗ ಮೂಡುತಿದ್ದ ಬಿಚ್ಚಲಾಗದಂಥ ಒಡಪು
ಕಿರಿಚುಗೊರಳಿಗಡ್ಡವಾಗಿ
ಕಿವುಡು ಕಿವಿಯ ಶೂಲವಾಗಿ
ಇರಿಯುತಿರಲು
ವೃತ್ತದಲ್ಲಿ
ಎಲ್ಲೂ ಗಾಳಿ ಬೆಳಕು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...