Home / ಕವನ / ಅನುವಾದ / ನಾಲ್ಕು ಪುಟ್ಟ ಪದ್ಯಗಳು

ನಾಲ್ಕು ಪುಟ್ಟ ಪದ್ಯಗಳು

ನಡು ಹಗಲಲ್ಲಿ ಹಚ್ಚಿಟ್ಟ ದೀಪ-
ಬೆಳಕಿನಲ್ಲಿ ಕಳೆದುಹೋದ ಬೆಳಕು.
ಬೆಳಕಿನ ಸಿದ್ಧಾಂತ ಮುರಿದು ಬಿತ್ತು :
ದೊಡ್ಡ ಬೆಳಕು ಹಿಮ್ಮೆಟ್ಟಿದೆ
ಹಣ್ಣಿನಿಂದ ಮರ ಬಿದ್ದ ಹಾಗೆ.

ಗಂಟೆಯ ತುಂಬ ಗಾಳಿ,
ಬಾರಿಸದಿದ್ದರೂ.
ಹಕ್ಕಿಯ ಮೈಯ ತುಂಬ ಹಾರಾಟ,
ನಿಶ್ಚಲವಾಗಿದ್ದರೂ.
ಆಕಾಶದ ತುಂಬ ಮೋಡ,
ಒಂಟಿಯಾಗಿದ್ದರೂ,
ಶಬ್ದದ ತುಂಬ ಧ್ವನಿ,
ಯಾರೂ ಮಾತಾಡದಿದ್ದರೂ.
ಎಲ್ಲರ ಎಲ್ಲದರ ತುಂಬ ಓಟ,
ರಸ್ತೆಗಳಿಲ್ಲದಿದ್ದರೂ.
ಎಲ್ಲ ಧಾವಿಸುತ್ತಿವೆ
ಆಗುವುದಕ್ಕೆ.

ನನ್ನ ನೆರಳು ನನಗೆ ವಿಧೇಯತೆ ಕಲಿಸಿದೆ.
ರೈಲಿನ ಮುರುಕು ಸೀಟು
ಸ್ಮಶಾನದ ಗೋಡೆ
ನಗರದ ಕಳ್ಳ ಗಲ್ಲಿ ಎಲ್ಲೆಡೆ
ನನ್ನ ಬೆಂಬಿಡದೆ ಬಂದಿದೆ.
ಮೈ ಹೇಗೇ ಇದ್ದರೂ
ನರಳು ಹೆಜ್ಜೆ ಹೆಜ್ಜೆ ಅನುಕರಿಸಿದೆ.
ಮೂಲೆ ಮುಡುಕುಗಳಿಗೆ ನಡೆದಿದೆ.
ಪ್ರಶ್ನೆಗಳಿಗೆ ಉತ್ತರಿಸದೆ ಸುಮ್ಮನಿದೆ.
ನನ್ನ ನೆರಳು ಇತರ ನೆರಳುಗಳನ್ನು
ಅಳವಡಿಸಿಕೊಳ್ಳಲು ಕಲಿಸಿದೆ.
ನನ್ನ ಮಟ್ಟ ನನಗೆ ತೋರಿಸಿದೆ.

ಪ್ರತಿ ಪದವೂ ಒಂದೊಂದು ಅನುಮಾನ
ಪ್ರತಿ ಮೌನವೂ ಒಂದೊಂದು ಸಂಶಯ.
ಆದರೂ ಇವುಗಳ ಹೆಣಿಗೆಯಲ್ಲಿ ಉಸಿರಾಡೋಣ.
ನಿದ್ದೆಯೆಂದರೆ ಮುಳುಗುವುದು.
ಎಚ್ಚರವೆಂದರೆ ಮತ್ತೆ ಮುಳುಗುವುದು.
ಆದರೂ ಇವುಗಳ ಹೆಣಿಗೆಯಲ್ಲಿ ಎಚ್ಚರಾಗೋಣ.
ಬದುಕೆಂದರೆ ಮಾಯವಾಗುವುದು
ಸಾವೆಂದರೆ ರೂಪಾಂತರವಾಗುವುದು
ಆದರೂ ಇವುಗಳ ಹೆಣಿಗೆಯಲ್ಲಿ
ಶೂನ್ಯದಲ್ಲೊಂದು ರುಜು ಹಾಕೋಣ.
*****
ಮೂಲ: ರಾಬರ್ಟೋ ಜು‌ಅರೋಝ್

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...