Home / ಕವನ / ಕವಿತೆ / ಮೊಟ್ಟೆ

ಮೊಟ್ಟೆ

ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು
ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ
ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ

ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ
ಒತ್ತಿದರೂ ಒಡೆಯದೆ ಕುಟ್ಟಿದರೂ ಸಿಡಿಯದೆ
ಮಂಕುಬೂದಿಯನೆರಚಿ ಮಿಕನನ್ನಾಗಿಸಿ ಮಣಿಸಿ
ಬೆರಕಿ ಗುಣವ ಕಲಿಸಿ ನಕ್ಕಿತವ್ವಾ ಮೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ಮಾಯಾ ನಗರಿಯ ಮೊಟ್ಟೆ

ಕಣ್ಣಲಿ ಹಳ್ಳವ ಅಗೆದು ಮೂಗಿಗೆ ದಾರವ ಬಿಗಿದು
ಕಿವಿಯಾ ಕಚ್ಚಿ ನಾಲಗೆ ಚುಚ್ಚಿ ಬಾಯ ಮುಚ್ಚಿ
ದೆಯ್ಯ ಮೆಟ್ಟಿದ ಹಾಗೆ ಮೈಯಾ ಮೆಟ್ಟಿಕೊಂಡು
ಬದುಕಾ ನರಕಾ ಮಾಡಿ ಕೊಕ್ಕಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ತಿಳಿವನು ತಿರುಚೊ ಮೊಟ್ಟೆ

ಕೊಡವಿದ್ದಕ್ಕೇ ಹೊರಳಿ ಕೆಡವಿದಕ್ಕೇ ಕೆರಳಿ
ಛಂಗನೆ ಮೇಲೆ ನೆಗೆದು ನೆತ್ತಿಯ ಮೇಲೆ ಕುಣಿದು
ಸರಸರ ಒಳಗೆ ಇಳಿದು ಬತ್ತಿಯ ಹಾಗೆ ಉರಿದು
ಸುಡುಸುಡು ಅಂತು ಮೊಟ್ಟೆ ಸುಟ್ಟಿತವ್ವಾ ಹೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ನಂಜನು ಉಣಿಸೊ ಮೊಟ್ಟೆ

ಮಾಟವ ಮಾಡಿದೆ ಮಂತ್ರವ ಹಾಕಿದೆ
ಹರಕೆಯ ಹೊತ್ತು ಮುಡಿಪನು ಕಟ್ಟಿದೆ
ಹೋದೆ… ಹೋದೆ… ಅಂದು, ಒಮ್ಮೆಗೆ ಒಳಗೇ ಬಂದು
ಮುಳ್ಳಿನ ಹಾಗೆ ಮೊನೆದೂ, ನಟ್ಟಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ಮೂಜಗ ಮುಕ್ಕಿದ ಮೊಟ್ಟೆ

ಕೆಟ್ಟೇ ಅನಿಸಿತು ಬಿಡುಗಡೆ ಬಯಸಿತು
ಹೃದಯವು ಕಲಿಸಿತು ಅರಿವದು ಉಳಿಸಿತು
ಧೂಪಾ ಹಚ್ಚಿ ದೀಪಾ ಬೆಳಗಿ ಹೂಗಳನೇರಿಸಿ
ತಟ್ಟೆಯಲ್ಲಿಟ್ಟು ಶಿವನಿಗೆ ಕೊಟ್ಟೆ
ಗಲ್ಲವ ಬಡಿದು ಬೆಲ್ಲದ ಮಾತಲಿ ಮೊರೆಯನು ಇಟ್ಟೆ

ಎಲ್ಲೇ ಹುಡುಗಿ ಮೊಟ್ಟೆ? ಎಲ್ಲೇ ಹುಡುಗಿ ಮೊಟ್ಟೆ?
ನನಗೆ ನಾನೆ ಕೇಳುವೆ, ನನಗೆ ನಾನೆ ಹೇಳುವೆ
ಮುಕ್ಕಣ್ಣನಿಗೆ ಕೊಟ್ಟು ಕೈಯ ಮುಗಿದು ಬಿಟ್ಟೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...