Home / ಕವನ / ಕವಿತೆ / ಸ್ಥಿತಿ

ಸ್ಥಿತಿ

ಹೂವಿನ ಗೋಣು ಮುರಿದು
ಹೂದಾನಿಯಲ್ಲಿ ಇರಿಸುತ್ತೇನೆ.

ಗೆದ್ದಲು ಹುಳುಗಳು ಗೋಡೆಯ
ಮೇಲೆ ಶಿಲ್ಪ ಕಡೆದಿದ್ದರೆ
ಭಗ್ನಗೊಳಿಸುತ್ತೇನೆ.

ಸಕ್ಕರೆಯ ಬೆಟ್ಟು ಹೊತ್ತು
ಹರಿವ ಸಾಲು ಇರುವೆಗಳನ್ನು
ಒತ್ತರಿಸಿ ಗುಡಿಸಿಹಾಕುತ್ತೇನೆ.

ಸೂರಿನಡಿ ಗುಬ್ಬಿಗಳು
ಕಾಳು ಕಡ್ಡಿ ಹೆಕ್ಕಿ ಗೂಡು
ಹೆಣೆದಿದ್ದರೆ ಕಿತ್ತು ಬೀದಿಗೆಸೆಯುತ್ತೇನೆ.

ಗುಬ್ಬಿಯ ಸೂರನ್ನು
ಇರುವೆಯ ಅನ್ನವನ್ನೂ
ಹೂವಿನ ಬದುಕನ್ನೂ
ಕಸಿದುಕೊಳ್ಳುವ ಈ
ಕೊಲೆಪಾತಕ ಕೈಗಳಿಗೆ
ಯಾರ ಭಯವೂ ಇಲ್ಲ.

ಜಗತ್ತಿನ ಸಂಕಟಗಳಿಗೆ
ಕಿಟಿಕಿ ಮುಚ್ಚಿ ಕುಳಿತರೆ
ತೆರೆಯಲು ಯಾರೂ ಬರುವುದಿಲ್ಲ.
ನೋವು, ನಿಟ್ಟುಸಿರು
ಅಸಮತೆ, ಅನ್ಯಾಯ
ಈ ಗಾಳಿಯಲ್ಲೇ ಇದೆ.
ನಾನೂ ಅದನ್ನು ನಿರ್‍ಲಜ್ಜೆಯಿಂದ
ಉಸಿರಾಡುತ್ತಿದ್ದೇನೆ.

ಎಲ್ಲರಿಗೆ ಅನಿಸುವಂತೆ
ನನಗೂ ಒಮ್ಮೊಮ್ಮೆ ಅನಿಸುತ್ತದೆ
ನನ್ನೆದೆಯ ಸೂರ್‍ಯ
ಇನ್ನು ಹೆಚ್ಚು ದಿನ ಉರಿಯಲಾರ.

ಹಸಿವು, ದುಃಖ, ಕ್ರೌರ್‍ಯ
ಎಲ್ಲವನ್ನೂ ಇನ್ನಿಲ್ಲದಷ್ಟು
ಸಹಜವಾಗಿ ಚಿತ್ರಿಸಿ
ಜೀವ ತುಂಬಿದ ಕಲಾವಿದ
ಯಾರೋ ಎಂದು
ನನ್ನನ್ನೇ ಕೇಳಿಕೊಳ್ಳುತ್ತೇನೆ.

ಗಂಧವನ್ನೂ ವಿಷವನ್ನೂ
ಒಂದೇ ಎಂದು
ಉಸಿರಾಡುತ್ತಿರುವೆನಾದರೆ
ನನಗಿನ್ನೂ ಆಸೆ ಇದೆ.

ಮುಳ್ಳಿನದೊಂದು ಹೆಜ್ಜೆ
ಮಣ್ಣಿನದೊಂದು ಹೆಜ್ಜೆ
ದಾರಿ ದೂರವಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...