Home / ಕವನ / ಕವಿತೆ / ಅವರು ತಾಯಂದಿರು

ಅವರು ತಾಯಂದಿರು

ಅವರು ತಾಯಂದಿರು ಮತ್ತೆ
ಕತ್ತಲ ರಾತ್ರಿಯ ಬಿಕ್ಕುಗಳ
ನಕ್ಷತ್ರಗಳ ತಂಪು ಆಗಸಕೆ ಒಡ್ಡಿ
ಒಡಲ ಸೆರಗತುಂಬ ಬೆಳದಿಂಗಳು
ತುಂಬಿಕೊಂಡವರು.

ಹಾರುವ ಹಕ್ಕಿ ತೇಲುವ ಮೋಡಗಳು
ಎಳೆಯುವ ತೇರಿನ ನಕ್ಷೆಗಳ
ಕಸೂತಿ ಅರಳಿಸಿಕೊಂಡು ಮತ್ತೆ
ಅಂಗಳದ ತುಂಬ ಸಡಗರದ
ದೀಪಾವಳಿ ದೀಪಗಳ ಹಚ್ಚಿದವರು.

ಹರಿಯುವ ನದಿಯ ನೀರು.
ಥಳಥಳ ಹೊಳೆಯುವ ಕೊಡಪಾನ
ಗಳಲಿ ತುಂಬಿ ಹೊಗೆ ಹಾರುವ
ಒಲೆಯ ಮೇಲೆ ಕಾಯಿಸಿ ಎಣ್ಣೇಹಚ್ಚಿ
ಬಿಸಿನೀರು ಅಭ್ಯಂಜನ ಸ್ನಾನ ಪುಳಕ ಹುಟ್ಟಿಸಿದವರು.

ಎಲ್ಲಾ ದಾರಿಗಳ ಕಲ್ಲು ಕಣಿವೆಯ
ದಾಟಿಸಿ ಕೈ ಹಿಡಿದು ಹಾಲು ಕುಡಿಸಿ
ಮೆಲ್ಲಗೆ ಬಯಲ ಹಸಿರು ನದಿಗುಡ್ಡ
ಹಸಿರ ಹೊಳಪಿಗೆ ಬಿಸಿಲಿಗೊಡ್ಡಿ ತಂದು
ಗುಬ್ಬಚ್ಚಿ ಗೂಡು ಕಟ್ಟಿಸಿದವರು.

ಬಿರುಬಿಸಿಲ ಕೆಂಡದಲಿ ಬೇಯುವಾಗ
ಅದೃಷ್ಟದ ಮಳೆ ಮೋಡ ಹರಿಸಿದ ಪ್ರೀತಿ
ಭೋರೆಂದು ಸುರಿದ ಮಳೆಯಲಿ
ತಬ್ಬಿ ಅಂಗಳದ ಮಲ್ಲಿಗೆ ಮುಡಿಗೇರಿಸಿ –
ಬಯಲಗಾಳಿಯಲಿ ಹೂವಹಕ್ಕಿ ಹಾಡು ಕೇಳಿಸಿದವರು.

ಜಾತ್ರೆಯಲಿ ಬಣ್ಣದ ಬಲೂನ ಬಳೆ
ಜರಿಲಂಗ ತೊಡಿಸಿ ಜಡೆತುಂಬ ಕೇದಿಗೆ
ಅರಸಿನ ಚಂದನ ಆರತಿ ಬೆಳಗಿ ಒಡಲಲಿ
ನೂಲನೇಯ್ದು ಬಟ್ಟೆ ಬಯಲ ದಾರಿ
ನಮಗೂ ನಿಮಗೂ ಅರಳಿಸಿ ತೋರಿಸಿದವರು.

ಅವರು ತಾಯಂದಿರು ಮಾತಿನ
ಮಂತ್ರ ಪುಷ್ಪ ಎದೆಗೆ ಅವಚಿಕೊಂಡ
ಗಾಳಿಗಂಧ ಸೇರಿಸಿ ಬೆರಗಿಗೆ ಉತ್ತರಿಸಿ
ಚರಿತೆ ಹುಟ್ಟಿಸಿ ಬತ್ತದ ಒರತ
ಎಲ್ಲರ ಒಡಲಲಿ ಜೀವಜಲವಾಗಿ ಹರಿದವರು.

ಅವರು ಜಗದ ತಾಯಂದಿರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...