Home / ಕವನ / ಕವಿತೆ / ಮೋಜ ನೋಡಿರಿ ಗಾಂಜಿಯಮಕಿನ

ಮೋಜ ನೋಡಿರಿ ಗಾಂಜಿಯಮಕಿನ

ಮೋಜ ನೋಡಿರಿ ಗಾಂಜಿಯಮಕಿನ
ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ
ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು
ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು
ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು
ಸೋಜಿಗೆನಿಪ ಶುಭವಾದ ವೃಕ್ಷದಲಿ
ಜನಿಸಿದ ಈ ಮುಗುಳು ಚಿಗಿತು ಬೆಳದಿಹುದು ತೇಜಸು ಪುಷ್ಪಗೊಂಚಲ
ಗೊನಿ ಕೆಂಜಾಗಿನ ವರ್ಣದಲಿ ರಾಜಿಸುವದರಿಂದ ಕುಸುಮಾರ್ಗದ ಫಲ
ಕಾಮಿಸಿ ವ್ಯಾಳ್ಯಗಳು ರಾಜಯೋಗಿಗಳು

ನೈಜಾಮದ ಗೋದಾವರಿ ತೀರದ ಜಲದೊಳು ಮರ್ದಿಸಲು
ಶೋಭಿಪ ಸತ್ವ ರಜೋಗುಣ ತತ್ವದ
ತಪ್ಪಲ ಕೂಡಿರಲು ಗುಳಿಗಿಯಾಗಿರಲು
ಸಾಧುಸಂತರನಾದರಿಸುತ ನಿಜಬೋಧದಿ ಮುಳಗಿರಲು ||೧||

ಬೋಧಾಮೃತ ಸಾನಂದದಿ
ಸಾಧಕರು ಕೂಡಿ ಮೋದದಲಿ ನೋಡಿ
ಮೇದಿನಿ ಸ್ಥಲದಂತೆ ಆ ಕೃತಿಯನು ದಂಡಿಸಿದರು ತಿಂಡಿ
ಶೋಭಿಸಿ ಶರೀರ ಬುರುಡಿಗೆ ತನುವಿನ ಮೀರು
ಇದಕೆ ಜೋಡಿ ಜಲದಿ ಒಡಗೂಡಿ
ಶ್ರೀಧರ ಬ್ರಹ್ಮ ಸದಾಶಿವ ಮೂವರು ಆಧಾರವ ಮಾಡಿ
ಕ್ರೋಧಾದಿಗಳನ್ನು ಛೇದಿಸಿ ಜ್ಞಾನದ ಚಿಲುಮೆ-
ಯೊಳಗೆ ನೀಡಿ ಅಗ್ನಿಯನು ತೋಡಿ
ಈ ದಶವಾಯು ಬಿಗಿದು ಸುಷುಮ್ನನಾಳದೊಳಗೆ ಹೂಡಿ
ಆದಿ ಸದ್ಗುರುವಿನ ಕೈಯೊಳಗೊಪ್ಪುವ ನಾದಿನ
ಗುಡಗುಡಿ ಸೇದಿ ನಲಿದಾಡಿ
ಬಾಧಿ ದುರಿತ ಬಹು ಬಂಧನದ ಕರ್ಮವು ಶೋಧಿಸಿ ಈಡ್ಯಾಡಿ ||೨||

ಈ ಪರಿ ಮಹಿಮದ ರೂಪ ನಿರಾಲ
ಪರಂಜ್ಯೋತಿ ನಿರ್ಮಿಸಿದ ರೀತಿ
ಸ್ಥಾಪಿಸಿದನು ಶಿವನಾವ ಪರಲೋಕದ ಕಲ್ಪದ್ರುಮದ ಜಾತಿ
ಕಾಪುರುಷರು ಕುಹಕರಿಗೆ ಸಲ್ಲರು ತಾಪಸಿಯರಿಗೆ ಪ್ರೀತಿ
ತತ್ವದ ನಡತೆ ಸೋಹಂ ಪದಕೇರಿಸಿ ತಾಂ
ಪರವಸ್ತುವ ತೋರಿಕೊಡುವ ರೀತಿ
ಶಾಸ್ತ್ರ ನುಡಿತೈತಿ ಪಾಪರಹಿತ ಪಂಚಾಕ್ಷರಿ ಪಠಿಸುತ
ಜೀವ ಪವನ ಒತ್ತಿ ತ್ರಿಕೂಟದಲ್ಹತ್ತಿ
ತಾ ಚರಿಸ್ಯಾಡುತ ನೋಡಲು ಪಶ್ಚಿಮ ಚಕ್ರದೊಳಗೆ ಸುತ್ತಿ
ಭೂಪತಿ ರಾಜಗೋವಿಂದನ ಅರಮನಿ
ಹೊಳೆವ ಚಂದ್ರಕಾಂತಿ ಮೂಲ ಸಿದ್ಧಾಂತಿ
ಭಾಪುರೆ ಶಿಶುನಾಳಧೀಶನ ವರವಿಲೆ ನಾ ಪಡೆದೆನು ಮುಕ್ತಿ ||೩||

*****

 

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...