Home / ಕವನ / ಕವಿತೆ / ಮೌನ ಮಾತಾಗುವ ಹೊತ್ತು

ಮೌನ ಮಾತಾಗುವ ಹೊತ್ತು

ಹೂಗಳ ಮೌನ ಮಾತಾಗುವ ಹೊತ್ತು
ನಾನು ಅರಳಬೇಕಷ್ಟೇ…
ವಿಷಾದದ ಹಗಲು
ಹಳತಾದ ರಾತ್ರಿಗಳು
ಹಳೆಯ ಕಾಗದದ ಪುಟದಂತೆ
ಅಟ್ಟಸೇರಿ ಎಷ್ಟೋದಿನ ಮೌನದಿ‌ ಮಲಗಿದಂತೆ
ರಾತ್ರಿಗಳಿಗೂ ವಯಸ್ಸಾಗುತ್ತದೆ
ಮುಪ್ಪಾಗುತ್ತದೆ ; ಚರ್ಮ ಸುಕ್ಕುಗಟ್ಟುತ್ತದೆ ಗೆಳೆಯಾ

ಬಯಲು ಬಿಕ್ಕಳಿಸುವ ಸಮಯ
ನಿನ್ನೆಗಳು ಮುಗ್ಗರಿಸಿ ಬಿದ್ದಿವೆ
ನಿನ್ನೆಗೆ ಕಂದನ ಪಾದವಾಗಿ
ವರ್ತಮಾನದ ಎದೆಗೆ ಒದೆಯುವ ಬಯಕೆ

ನಗರ ವಿಷಾದ ಹೊದ್ದು ಮಲಗುವ ಸಮಯ
ನಿನ್ನೆಗಳು ನಮ್ಮವಾಗಿದ್ದವು
ವರ್ತಮಾನ ನಮ್ಮದಲ್ಲ
ನಾಳೆಯೂ ಗೊತ್ತಿಲ್ಲ
ಗೊಂದಲದ ಬದುಕಿನಲಿ ಹಂಬಲ
ಮೊಳಕೆಗೆ ಮುನ್ನ ಸೋಲುತಿದೆ
ವರ್ತಮಾನಕೆ ಕಳೆದುದರ ಚಿಂತೆ ಹಳಹಳಿಕೆ

ನದಿ ದುಃಖಿಸುವ ಸಮಯ
ಹಾಗಿತ್ತು ಹೀಗಾಗಬೇಕಿತ್ತು ಏನಾಗಿಹೋಯಿತು ಹೀಗೆ ಬದಲಾಗಬಹುದು
ಕಷ್ಟ ; ಈ ಹಾಳು ಮನಸು ಬಂಧನಗಳ ಈ ಬಂಧನದಲ್ಲಿ
ಆ ಅದು ಸಾಧ್ಯವಿಲ್ಲ ಬಿಡು
ಕನಸು ಕಾಣಬೇಡ , ಮಾತು ಕೊಡಲಾರೆ ….

ಹಕ್ಕಿಗಳು ಗೂಡು ಸೇರುವ ಸಮಯ
ಈ ಮನುಷ್ಯರ ಗೊಣಗಾಟಗಳಲ್ಲಿ ವರ್ತಮಾನವೂ ಮುಪ್ಪಾಗಿ
ನಿನ್ನೆಯ ಹಳೆಯ ಪುಟಕ್ಕೆ ಸೇರುವ ಮುನ್ನ

ಎಲ್ಲವೂ ಶೃಂಗಾರ, ನಾನು ನೀನು
ಬೆತ್ತಲೆಯ ನದಿ ಬೆಟ್ಟ ಬಯಲು ಚಂದ್ರ ಹೂ ತಾರೆ

ನಿನ್ನೆ ಇವತ್ತು ನಾಳೆ ನಾಡಿದ್ದು
ನಾಲಿಗೆಗಳು ಶಬ್ದವಿಲ್ಲದ ಯುದ್ಧ ಮಾಡುವ ಸಮಯ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...